ಏಕರೂಪ ನಾಗರಿಕ ಸಂಹಿತೆ- ದ್ವಿಪತ್ನಿತ್ವದ ಸವಾಲುಗಳು

ಮೂಲ : ತಾಹಿರ್‌ ಮಹಮೂದ್‌

ಅನುವಾದ : ನಾ ದಿವಾಕರ

 ಹಿಂದೂ ವಿವಾಹ ಕಾಯ್ದೆ ಜಾರಿಗೆ ಬಂದ 40 ವರ್ಷಗಳ ಕಾಲ, ಅನೇಕ ನಿರ್ಲಜ್ಜ ಪುರುಷರು ಇಸ್ಲಾಂಗೆ ಮತಾಂತರಗೊಂಡಂತೆ ನಟಿಸುವ ಮೂಲಕ ದ್ವಿಪತ್ನಿತ್ವ ವಿವಾಹಕ್ಕೆ ಒಳಗಾಗಿದ್ದಾರೆ.  ಇಸ್ಲಾಂ ಧರ್ಮದ  ಕಾನೂನು ತನ್ನ ಪುರುಷ ಅನುಯಾಯಿಗಳಿಗೆ ಒಬ್ಬರಿಗಿಂತಲೂ ಹೆಚ್ಚು ಹೆಂಡತಿಯರನ್ನು ಹೊಂದಲು ಬೇಷರತ್ತಾಗಿ ಅನುಮತಿಸುತ್ತದೆ ಎಂದು ತಪ್ಪಾಗಿ ನಂಬಿದ್ದುದೂ ಈ ಬೆಳವಣಿಗೆಗೆ ಕಾರಣವಾಗಿತ್ತು

ಏಕರೂಪ ನಾಗರಿಕ ಸಂಹಿತೆಯ (ಏನಾಸಂ) ಸಾಂವಿಧಾನಿಕ ಆದೇಶ ಮತ್ತೆ ಚರ್ಚೆಗೊಳಗಾಗಿದೆ.  ಇತ್ತೀಚೆಗೆ ಕೆಲವು ರಾಜ್ಯ ಸರ್ಕಾರಗಳು ಇದನ್ನು ಜಾರಿಗೆ ತರಲು ನಿರ್ಧರಿಸಿದವು. ಆದಾಗ್ಯೂ, ಸಂವಿಧಾನದ ಅಡಿಯಲ್ಲಿ ಅದರ ನಿಬಂಧನೆಗಳ ಪ್ರಕಾರ, ಏನಾಸಂ ಮೂಲತಃ ಭಾರತದ ಭೂಪ್ರದೇಶದಾದ್ಯಂತ  ಅನ್ವಯಿಸುವಂತಹ ಕೇಂದ್ರ ಕಾನೂನೂ ಆಗಿರಬೇಕು ಎಂದು ಸಂವಿಧಾನದ ಅನುಚ್ಚೇದ 44ರಲ್ಲಿ ಹೇಳಲಾಗಿದೆ. 2018 ರಲ್ಲಿ ಏನಾಸಂ ಜಾರಿಗೊಳಿಸುವುದರ ವಿರುದ್ಧ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ನಂತರ, ಭಾರತದ ಕಾನೂನು ಆಯೋಗವು ಈಗ ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಾರ್ವಜನಿಕ ಅಭಿಪ್ರಾಯವನ್ನು ಕೋರಿದೆ. ಈ ವರ್ಷದ ಮೇ ತಿಂಗಳಲ್ಲಿ, ಅಸ್ಸಾಂ ಸರ್ಕಾರವು ದ್ವಿಪತ್ನಿತ್ವವನ್ನು ನಿಷೇಧಿಸುವ ಕಾನೂನನ್ನು ರೂಪಿಸಲು ಸಮಿತಿಯನ್ನು ರಚಿಸಿದ್ದು ಇದು ಉದ್ದೇಶಿತ ಏನಾಸಂ ಅಡಿಯಲ್ಲಿ ನಿಭಾಯಿಸಬೇಕಾದ ಪ್ರಮುಖ ವಿಷಯವಾಗಿದೆ.

ದೇಶದಲ್ಲಿ ದ್ವಿಪತ್ನಿತ್ವದ ಕಾನೂನಾತ್ಮಕ ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. 1860ರಲ್ಲಿ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆಯು ದ್ವಿಪತ್ನಿತ್ವವನ್ನು ಅಪರಾಧವೆಂದು ಘೋಷಿಸಿತು. ಈ ಕಾಯ್ದೆಯ ಸೆಕ್ಷನ್‌ 494ರ ಅನ್ವಯ ದ್ವಿಪತ್ನಿತ್ವವು ನಿರ್ದಿಷ್ಟ ಅವಧಿಯ ಜೈಲು ಶಿಕ್ಷೆ ಮತ್ತು ದಂಡದೊಂದಿಗೆ ಶಿಕ್ಷಾರ್ಹವಾಗಿದೆ. ಇದೇ ಕಾಯ್ದೆಯ ಸೆಕ್ಷನ್ 495ರ ಅನ್ವಯ ಮೊದಲ ಮದುವೆಯ ಸಂಬಂಧವು ಅಸ್ತಿತ್ವದಲ್ಲಿರುವುದನ್ನು ಮರೆಮಾಚುವ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗುವುದು ಹೆಚ್ಚಿನ ಶಿಕ್ಷೆಗೆ ಕಾರಣವಾಗುತ್ತದೆ.  ಈ ಕಾಯ್ದೆಯಲ್ಲಿನ ಕೆಲವು ಗೊಂದಲಮಯ ವ್ಯಾಖ್ಯಾನಗಳ ಪರಿಣಾಮ ಈ ನಿಬಂಧನೆಗಳು ನಿರ್ದಿಷ್ಟವಾಗಿ ಯಾವುದೇ ಸಮುದಾಯಕ್ಕೆ ತಮ್ಮ ವ್ಯಾಪ್ತಿಯಿಂದ ವಿನಾಯಿತಿ ನೀಡಲಿಲ್ಲ, ಆದರೆ ಒಂದು ನಿರ್ದಿಷ್ಟ ಪ್ರಕರಣಕ್ಕೆ ಅನ್ವಯವಾಗುವ ವಿವಾಹ ಕಾನೂನು ದ್ವಿಪತ್ನಿತ್ವವನ್ನು ನಿಷೇಧಿಸಿದರೆ ಮತ್ತು ದ್ವಿಪತ್ನಿತ್ವ ವಿವಾಹವನ್ನು ಅನೂರ್ಜಿತವೆಂದು ಪರಿಗಣಿಸಿದರೆ ಮಾತ್ರ ಅವು ಅನ್ವಯವಾಗುತ್ತವೆ ಎಂದು ನಿಗದಿಪಡಿಸಿದವು. ಆದ್ದರಿಂದ ಈ ನಿಬಂಧನೆ ಮುಖ್ಯವಾಗಿ ಕ್ರೈಸ್ತರಿಗೆ ಮೀಸಲಾಗಿತ್ತು. ಏಕೆಂದರೆ ಆಗ ಇತರ ಸಮುದಾಯಗಳನ್ನು ನಿಯಂತ್ರಿಸುವ ವಿವಾಹ ಕಾನೂನುಗಳು ದ್ವಿಪತ್ನಿತ್ವ ವಿವಾಹಗಳನ್ನು ನಿಷೇಧಿತ ಮತ್ತು ಅನೂರ್ಜಿತವೆಂದು ಪರಿಗಣಿಸುತ್ತಿರಲಿಲ್ಲ.

ಭಾರತೀಯ ದಂಡ ಸಂಹಿತೆ ನಿಬಂಧನೆಯನ್ನು ಜಾರಿಗೆ ತಂದ ಏಳು ದಶಕಗಳ ನಂತರ, ಬರೋಡಾ ಮತ್ತು ಮೈಸೂರು ಸಂಸ್ಥಾನಗಳು ಸ್ಥಳೀಯ ಹಿಂದೂಗಳಿಗಾಗಿ ಹೊಸ ಕುಟುಂಬ ಕಾನೂನುಗಳನ್ನು ಘೋಷಿಸಿದವು, ಇದರ ಅಡಿಯಲ್ಲಿ ದ್ವಿಪತ್ನಿತ್ವದ ಸಾಂಪ್ರದಾಯಿಕ ಆಚರಣೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು. ಆನಂತರ 1946-47ರ ಅವಧಿಯಲ್ಲಿ ಬಾಂಬೆ ಮತ್ತು ಮದ್ರಾಸ್‌ ಪ್ರಾಂತೀಯ ಶಾಸಕಾಂಗಗಳು ತಮ್ಮ ತಮ್ಮ ನ್ಯಾಯವ್ಯಾಪ್ತಿಯಲ್ಲಿ ಹಿಂದೂ ಕಾನೂನಿನಿಂದ ನಿಯಂತ್ರಿಸಲ್ಪಡುವ ಎಲ್ಲಾ ಸಮುದಾಯಗಳಲ್ಲಿ ದ್ವಿಪತ್ನಿತ್ವ ನಿಷೇಧಿಸಲು ವಿಶೇಷ ಕಾನೂನುಗಳನ್ನು ಜಾರಿಗೆ ತಂದವು. ಅಂತಿಮವಾಗಿ ಕೇಂದ್ರ ಹಿಂದೂ ವಿವಾಹ ಕಾಯ್ದೆ 1955 ಜಾರಿಯಾಗಿತ್ತು. ಈ ಕಾಯ್ದೆಯಡಿ ದ್ವಿಪತ್ನಿತ್ವ ವಿವಾಹಗಳನ್ನು ಅನೂರ್ಜಿತವೆಂದು ಪರಿಗಣಿಸಲಾಗಿತ್ತು ಹಾಗೂ ನಿರ್ದಿಷ್ಟವಾಗಿ ಅವುಗಳನ್ನು ಭಾರತೀಯ ದಂಡ ಸಂಹಿತೆಯ ದ್ವಿಪತ್ನಿತ್ವ ವಿರೋಧಿ ನಿಬಂಧನೆಗಳ ವ್ಯಾಪ್ತಿಗೆ ಒಳಪಡಿಸಿತ್ತು. ಬಾಂಬೆ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಮತ್ತು ಕೇಂದ್ರ ಕಾಯಿದೆಯಡಿ ಸಂಬಂಧಿತ ನಿಬಂಧನೆಗಳನ್ನು ಕ್ರಮವಾಗಿ ಬಾಂಬೆ ಮತ್ತು ಅಲಹಾಬಾದ್ ಹೈಕೋರ್ಟ್ಗಳಲ್ಲಿ ಪ್ರಶ್ನಿಸಲಾಯಿತಾದರೂ, ಎರಡೂ ನ್ಯಾಯಾಲಯಗಳು ನಿಬಂಧನೆಗಳನ್ನು ದೃಢಪಡಿಸಿದ್ದವು.

ಹಳೆಯ ಚಾಳಿಗಳು ಸುಲಭವಾಗಿ ಮರೆಯಾಗುವುದಿಲ್ಲ. ಹಾಗಾಗಿ ಈ ಕಾನೂನು ಕ್ರಮಗಳು ಸಮುದಾಯಗಳಲ್ಲಿನ ದ್ವಿಪತ್ನಿತ್ವ ವಿವಾಹಗಳನ್ನು ಸಂಪೂರ್ಣವಾಗಿ ತೊಡೆದುಹಾಕಲಿಲ್ಲ. ಕೆಲವು ಸಂದರ್ಭಗಳಲ್ಲಿ, ದ್ವಿಪತ್ನಿತ್ವದಲ್ಲಿ ತೊಡಗಿರುವ ವಿವಾಹಿತ ಪುರುಷರು ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆಶ್ರಯ ಪಡೆದರು. ಹಿಂದೂ ಕಾಯ್ದೆಗಳ ಅನ್ವಯ, ಎರಡೂ ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ವಿವಾಹ ವಿಧಿ ವಿಧಾನಗಳನ್ನು ಆಚರಿಸಬೇಕು ಹೇಳಲಾಗುತ್ತದೆ.  ಸಪ್ತಪದಿಯನ್ನು ಆಚರಿಸುವ ಮೂಲಕ ವಿವಾಹಗಳು ನಡೆದ ಸಂದರ್ಭಗಳಲ್ಲಿ ವಿವಾಹಿತ ಗಂಡು-ಹೆಣ್ಣು ಸಪ್ತಪದಿಯ ಏಳನೇ ಸುತ್ತನ್ನು ಪೂರೈಸಿದ ನಂತರ ವಿವಾಹವು ಸಂಪನ್ನವಾಗಿ ಸಂಪೂರ್ಣ ಮತ್ತು ಬದ್ಧವಾಗಿರುತ್ತದೆ . ಇತರ ಯಾವುದೇ ವಿಧಿವಿಧಾನಗಳನ್ನು ಅನುಸರಿಸಿದಲ್ಲಿ ವಿವಾಹವು ಯಾವಾಗ ಸಂಪನ್ನವಾಗುತ್ತದೆ, ಪೂರ್ಣತೆ ಪಡೆದು ಬದ್ಧವಾಗಿರುತ್ತದೆ ಎಂಬ ಜಟಿಲ ಪ್ರಶ್ನೆಗೆ ಈ ಕಾಯ್ದೆಯಲ್ಲಿ ಸ್ಪಷ್ಟ ಉತ್ತರ ದೊರೆಯುವುದಿಲ್ಲ. ದ್ವಿಪತ್ನಿತ್ವದ ಶಿಕ್ಷೆಯಿಂದ ಪಾರಾಗಲು ಎರಡನೆ ವಿವಾಹವಾಗುವವರು ತಮ್ಮ ಮೊದಲ ಅಥವಾ ಎರಡನೆಯ ವಿವಾಹವು ಔಪಚಾರಿಕವಾಗಿ ಅಪೂರ್ಣವಾಗಿದೆ ಹಾಗಾಗಿ ಕಾನೂನನಾತ್ಮಕವಾಗಿ ಗುರುತಿಸಲಾಗುವುದಿಲ್ಲ ಎಂದು ಘೋಷಿಸುವ ಮೂಲಕ ತಪ್ಪಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಪ್ರಕರಣಗಳಲ್ಲಿ ದ್ವಿಪತ್ನಿತ್ವದ ಆರೋಪವನ್ನು ಒಪ್ಪಿಕೊಳ್ಳಳಾಗುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯವು 1965ರ ಭಾವುರಾವ್‌ ಮೊಕದ್ದಮೆಯಲ್ಲಿ ಹೇಳಿದೆ.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

 ಹಿಂದೂ ವಿವಾಹ ಕಾಯ್ದೆ ಜಾರಿಗೆ ಬಂದ 40 ವರ್ಷಗಳ ಕಾಲ, ಅನೇಕ ನಿರ್ಲಜ್ಜ ಪುರುಷರು ಇಸ್ಲಾಂಗೆ ಮತಾಂತರಗೊಂಡಂತೆ ನಟಿಸುವ ಮೂಲಕ ದ್ವಿಪತ್ನಿತ್ವ ವಿವಾಹಕ್ಕೆ ಒಳಗಾಗಿದ್ದಾರೆ.  ಇಸ್ಲಾಂ ಧರ್ಮದ  ಕಾನೂನು ತನ್ನ ಪುರುಷ ಅನುಯಾಯಿಗಳಿಗೆ ಒಬ್ಬರಿಗಿಂತಲೂ ಹೆಚ್ಚು ಹೆಂಡತಿಯರನ್ನು ಹೊಂದಲು ಬೇಷರತ್ತಾಗಿ ಅನುಮತಿಸುತ್ತದೆ ಎಂದು ತಪ್ಪಾಗಿ ನಂಬಿದ್ದುದೂ ಈ ಬೆಳವಣಿಗೆಗೆ ಕಾರಣವಾಗಿತ್ತು. ಈ ಕಾಯ್ದೆಯಿಂದ ನಿಯಂತ್ರಿಸಲ್ಪಡುವ ವಿವಾಹಿತ ಪುರುಷನು ನೈಜವಾಗಿ ಆಗಲೀ ವಂಚನೆಯಿಂದಾಗಲೀ, ಇಸ್ಲಾಂಗೆ ಮತಾಂತರಗೊಂಡ ನಂತರವೂ ತನ್ನ ಮೊದಲ ವಿವಾಹ ಸಂಬಂಧವನ್ನು ಸರಿಯಾಗಿ ವಿಸರ್ಜಿಸದೆಯೇ ಮರು ವಿವಾಹವಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ವೋಚ್ಛ ನ್ಯಾಯಾಲಯವು ಅಂತಿಮವಾಗಿ ಈ ಅಸಹ್ಯಕರ ಅಭ್ಯಾಸಕ್ಕೆ ತಡೆಯೊಡ್ಡಿತ್ತು. ಹಾಗೊಮ್ಮೆ ವಿವಾಹವಾಗಿದ್ದರೂ ಸಹ ಅಂಥವರ ಎರಡನೇ ವಿವಾಹವು ಅನೂರ್ಜಿತವಾಗುತ್ತದೆ ಮತ್ತು ಅವರು ಭಾರತೀಯ ದಂಡ ಸಂಹಿತೆಯ ಕಾಯ್ದೆಗಳ ಅನ್ವಯ ಅಪರಾಧಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ ಎಂದು ನ್ಯಾಯಾಲಯವು 1995ರ ಸರಳಾ ಮುದ್ಗಲ್ ಮೊಕದ್ದಮೆಯಲ್ಲಿ ತೀರ್ಪು ನೀಡಿತ್ತು.

ನ್ಯಾಯಾಲಯವು ಹಾಗೆ ಸ್ಪಷ್ಟವಾಗಿ ಹೇಳದೆ ಹೋದರೂ, ಒಂದು ಸಾವಿರ ವರ್ಷಗಳ ಹಿಂದೆ, ದ್ವಿಪತ್ನಿತ್ವವನ್ನು ಅನುಮತಿಸಿದ್ದ ಮೂಲ ಇಸ್ಲಾಮಿಕ್ ಕಾನೂನಿಗೆ ಈ ತೀರ್ಪು ಸ್ಪಷ್ಟವಾಗಿ ಹೊಂದಾಣಿಕೆಯಾಗುವಂತಿತ್ತು. ಇಸ್ಲಾಮಿಕ್‌ ಕಾನೂನಿನಲ್ಲಿ ದ್ವಿಪತ್ನಿತ್ವ ಬಯಸುವವರು ತಮ್ಮ ಸಹಪತ್ನಿಯರನ್ನು ಸಂಪೂರ್ಣವಾಗಿ ಸಮಾನವಾಗಿ ಪರಿಗಣಿಸಬೇಕು ಎಂಬ ಕಠಿಣ ನಿಯಮ ಇರುವುದನ್ನು ಇಲ್ಲಿ ಗಮನಿಸಬೇಕಿದೆ. ಕಾನೂನುಬದ್ಧವಾಗಿ ವಿವಾಹವಾದ ಹೆಂಡತಿಯನ್ನು ವಿಚ್ಛೇದನವಿಲ್ಲದೆ ತ್ಯಜಿಸುವುದು, ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುವುದು ಮತ್ತು ಅವಳೊಂದಿಗೆ ಆರಾಮವಾಗಿ ಜೀವನ ನಡೆಸುವ ಅಭ್ಯಾಸವು ಇಸ್ಲಾಮಿಕ್‌ ಕಾನೂನುಗಳಲ್ಲಿರುವ ದ್ವಿಪತ್ನಿತ್ವದ ನಿಯಮಗಳಿಗೆ ವ್ಯತಿರಿಕ್ತವಾಗುತ್ತದೆ. ವಿಶೇಷವಾಗಿ ಇಸ್ಲಾಂಗೆ ಮತಾಂತರಗೊಂಡ ನೆಪದಲ್ಲಿ ಈ ಮಾರ್ಗ ಅನುಸರಿಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿರುತ್ತದೆ. ಯಾವುದೇ ದೃಷ್ಟಿಯಿಂದ ನೋಡಿದರೂ ದ್ವಿಪತ್ನಿತ್ವವನ್ನು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗುವುದಿಲ್ಲ. ಇದು ಸಂವಿಧಾನದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಜನರ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸರ್ವೋಚ್ಛ ನ್ಯಾಯಾಲಯದ ಪ್ರತಿಪಾದನೆಯು ದ್ವಿಪತ್ನಿತ್ವದ ಬಗ್ಗೆ ಇಸ್ಲಾಮಿಕ್ ಗ್ರಂಥಗಳಲ್ಲಿರುವ ನಿಬಂಧನೆಗಳ ಸರಿಯಾದ ವ್ಯಾಖ್ಯಾನವೇ ಆಗಿದೆ.

ಇತ್ತೀಚಿನ ಕೆಲವು ಪ್ರಕರಣಗಳಲ್ಲಿ, ಮುಸ್ಲಿಂ ಪುರುಷರು ಎಲ್ಲರಿಗೂ ಅನ್ವಯವಾಗುವ ಕೆಲವು ಸಾಮಾನ್ಯ ಕಾನೂನುಗಳ ಅಡಿಯಲ್ಲಿ ದ್ವಿಪತ್ನಿತ್ವ ವಿರೋಧಿ ನಿಬಂಧನೆಗಳಿಂದ ತಪ್ಪಿಸಿಕೊಳ್ಳಲು ಸಂವಿಧಾನವನ್ನು ಬಳಸಿದ್ದಾರೆ. ಅಂತಹ ಒಂದು ಪ್ರಕರಣದಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರನ್ನು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸುವ ಹರಿಯಾಣ ಸರ್ಕಾರದ ಕುಟುಂಬ ಯೋಜನೆ ಕ್ರಮದಿಂದ ವ್ಯಕ್ತಿಯೊಬ್ಬರು ವಿನಾಯಿತಿ ನೀಡುವಂತೆ ಕೋರಿದ್ದರು. ಮುಸ್ಲಿಂ ಕಾನೂನುಗಳಿಂದ ಅನುಮೋದಿಸಲಾಗುತ್ತದೆ ಎಂದು ಹೇಳಲಾಗುವ ದ್ವಿಪತ್ನಿತ್ವ ನಿಬಂಧನೆಗಳನ್ವಯ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರಬಹುದು ಎಂದು ಇವರು ವಾದ ಮಂಡಿಸಿದ್ದರು. ಆದರೆ ಈ ಅಪ್ರಬುದ್ಧ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು. ಮುಸ್ಲಿಂ ಕಾನೂನು ನಾಲ್ಕು ಮದುವೆಯಾಗುವುದನ್ನು ಕರ್ತವ್ಯವೆಂದು ಎಲ್ಲಿಯೂ ನಿರ್ದೇಶಿಸುವುದಿಲ್ಲ ಅಥವಾ ಕಡ್ಡಾಯಗೊಳಿಸುವುದೂ ಇಲ್ಲ ಹಾಗೆಯೇ ಒಂದು ಧರ್ಮವು ಅನುಮತಿಸುವುದರಿಂದ ಅಥವಾ  ನಿಷೇಧಿಸದಿರುವುದರಿಂದ ಯಾವುದೇ ಆಚರಣೆಯು ಆ ಧರ್ಮದ ವಿದ್ಯುಕ್ತ ಆಚರಣೆ ಅಥವಾ ಸಕಾರಾತ್ಮಕ ಸಿದ್ಧಾಂತವಾಗುವುದಿಲ್ಲ ಎಂದು  ಸರ್ವೋಚ್ಛ ನ್ಯಾಯಾಲಯವು 2003ರ ಜಾವೇದ್‌  ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ.

ಸರ್ಕಾರದ ಪೂರ್ವಾನುಮತಿಯಿಲ್ಲದೆ ಮರುವಿವಾಹವಾಗುವ ವಿವಾಹಿತ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸುವ ಆಡಳಿತ ಸೇವಾ ನಿಯಮಗಳ ಅನ್ವಯದಿಂದ ವಿನಾಯಿತಿ ಕೋರಿ ಮುಸ್ಲಿಂ ಸರ್ಕಾರಿ ಉದ್ಯೋಗಿಯೊಬ್ಬರು ಅರ್ಜಿ ಸಲ್ಲಿಸಿದಾಗ ನ್ಯಾಯಾಲಯವು, 2015ರ ಖುರ್ಷಿದ್‌ ಮೊಕದ್ದಮೆಯಲ್ಲಿ ಇದೇ ನಿಲುವನ್ನು ತೆಗೆದುಕೊಂಡಿತ್ತು. ಪ್ರಸಿದ್ಧ ಶಯಾರಾ ಬಾನೋ ಪ್ರಕರಣದಲ್ಲಿ (2017) ತ್ರಿವಳಿ ತಲಾಖ್ ಜೊತೆಗೆ ದ್ವಿಪತ್ನಿತ್ವ ಪದ್ಧತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಆದರೆ ನ್ಯಾಯಾಲಯವು ಅದನ್ನು ತನ್ನ ಚರ್ಚೆಗಳಿಂದ ಹೊರಗಿಟ್ಟಿತ್ತು. ತದನಂತರ ಈ ವಿಷಯವನ್ನು ಮತ್ತೆ ಮತ್ತೆ ನ್ಯಾಯಾಲಯಕ್ಕೆ ತರಲಾಗಿದ್ದು ಅಂತಿಮವಾಗಿ ಕಳೆದ ವರ್ಷ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಗೆ ಪ್ರಸ್ತುತಪಡಿಸಲಾಯಿತು. ಇಬ್ಬರು ನ್ಯಾಯಾಧೀಶರ ನಿವೃತ್ತಿಯಿಂದಾಗಿ ಸಾಂವಿಧಾನಿಕ ಪೀಠದ ವಿಸರ್ಜನೆಯಾಗುವವರೆಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ಈ ವರ್ಷದ ಜನವರಿಯಲ್ಲಿ ನ್ಯಾಯಾಲಯವು ಹೊಸ ಪೀಠವನ್ನು ಸ್ಥಾಪಿಸುವ ಭರವಸೆ ನೀಡಿದೆ.

ಪ್ರಸ್ತಾವಿತ ಏನಾಸಂನಲ್ಲಿ  ಮುಸ್ಲಿಮರನ್ನು ಹೊರತುಪಡಿಸಿ ಎಲ್ಲಾ ವೈಯುಕ್ತಿಕ ಕಾನೂನುಗಳ ಅಡಿಯಲ್ಲಿ ಈಗಾಗಲೇ ನಿಷೇಧಿಸಲ್ಪಟ್ಟಿರುವ ದ್ವಿಪತ್ನಿತ್ವಕ್ಕೆ ನಿಸ್ಸಂಶಯವಾಗಿ ಜಾಗ ಇರುವುದಿಲ್ಲ. ಏಕರೂಪ ನಾಗರಿಕ ಸಂಹಿತೆಗಾಗಿ ಕಾಯದೆ ಮೇಲೆ ಉಲ್ಲೇಖಿಸಲಾದ ಭಾರತೀಯ ದಂಡ ಸಂಹಿತೆಯ ದ್ವಿಪತ್ನಿತ್ವ ವಿರೋಧಿ ನಿಬಂಧನೆಗಳನ್ನು ಮುಸ್ಲಿಮರು ಸೇರಿದಂತೆ ಎಲ್ಲಾ ಧಾರ್ಮಿಕ ಗುಂಪುಗಳಿಗೆ ಅನ್ವಯವಾಗುವಂತೆ ತಿದ್ದುಪಡಿ ಮಾಡಬಹುದು. ಈ ವಿಷಯದಲ್ಲಿ ನಿಜವಾದ ಸಮಸ್ಯೆಯನ್ನು ಪರಿಶಿಷ್ಟ ಪಂಗಡಗಳು ಒಡ್ಡುತ್ತವೆ, ಅವರಲ್ಲಿ ಅನೇಕ ಸಮುದಾಯಗಳ ನಡುವೆ ದ್ವಿಪತ್ನಿತ್ವ ಪದ್ಧತಿಯು ಪ್ರಚಲಿತವಾಗಿದೆ. ಆದರೆ ಈ ಸಮುದಾಯಗಳನ್ನು ಹಿಂದೂ ವಿವಾಹ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಏನಾಸಂ ಪ್ರತಿಪಾದಕರು ಈ ಕ್ಲಿಷ್ಟಕರ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *