ಹಾವೇರಿ| ಇಬ್ಬರು ಪೌರಕಾರ್ಮಿಕರ ಮೇಲೆ ಹಲ್ಲೆ; ಆರೋಪಿ ಬಂಧನಕ್ಕೆ ಆಗ್ರಹ

ಹಾವೇರಿ: ಜೂನ್‌ 5 ಗುರುವಾರದಂದು ಬ್ಯಾನರ್ ತೆರವುಗೊಳಿಸುವ ವಿಚಾರ ಸಂಬಂಧ ನಗರಸಭೆಯ ಎದುರೇ ಇಬ್ಬರು ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಪೌರಕಾರ್ಮಿಕ ಪೀರಪ್ಪ ಶಾಂತವ್ವ ಶಿರಬಡಗಿ ಅವರು ದೂರು ನೀಡಿದ್ದು, ಆರೋಪಿಗಳಾದ ಕೆ.ಸಿ.ಅಕ್ಷತಾ, ಶಾಂತು, ಸುಬ್ಬು, ಅರ್ಜುನ, ಪ್ರಥಮ, ಶಿವು ಕನಕಾಪುರ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

‘ಕೊರವರ ಓಣಿಯ ವೃತ್ತದಲ್ಲಿ ಅಕ್ರಮವಾಗಿ ಆರೋಪಿ ಶಾಂತು ಜನ್ಮದಿನದ ಶುಭಾಷಯ ಕೋರುವ ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೌರಾಯುಕ್ತ ಗಂಗಾಧರ ಬೆಲ್ಲದ ಅವರು ಬ್ಯಾನರ್ ತೆರವುಗೊಳಿಸಲು ಸಿಬ್ಬಂದಿ ರಂಗಪ್ಪ ಹೆರ್ಕಲ್ ಅವರಿಗೆ ಸೂಚಿಸಿದ್ದರು. ಬ್ಯಾನರ್ ತೆರವುಗೊಳಿಸಲು ರಂಗಪ್ಪ ಅವರು ಸ್ಥಳಕ್ಕೆ ಹೋದಾಗ ಆರೋಪಿ ಕೆ.ಸಿ.ಅಕ್ಷತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ, ರಂಗಪ್ಪ ಸ್ಥಳದಿಂದ ಹೊರಟು ನಗರಸಭೆಗೆ ಬಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತುಳುನಾಡಿನ ಕೋಮುಸಾಮರಸ್ಯ ಪರಂಪರೆ

‘ಕ್ರಿಕೆಟ್‌ ಆಟವಾಡುತ್ತಿದ್ದ ಕೆಲ ಆರೋಪಿಗಳು, ಇತರೆ ಆರೋಪಿಗಳ ಜೊತೆ ಸೇರಿ ಬ್ಯಾಟ್‌ಗಳ ಸಮೇತ ನಗರಸಭೆ ಆವರಣಕ್ಕೆ ನುಗ್ಗಿದ್ದರು. ಸ್ಥಳದಲ್ಲಿದ್ದ ಪೌರಕಾರ್ಮಿಕರ ಜೊತೆ ಜಗಳ ತೆಗೆದಿದ್ದರು. ಗುತ್ತಿಗೆ ಪೌರಕಾರ್ಮಿಕರಾದ ಪೀರಪ್ಪ ಹಾಗೂ ಕಾಂತೇಶ್ ಅವರಿಗೆ ವೈರ್‌ನಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆಂದು ದೂರುದಾರರು ಹೇಳುತ್ತಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಭಟನೆ :

‘ನಗರಸಭೆಗೆ ನುಗ್ಗಿ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನ ಬಂಧಿಸಬೇಕು’ ಎಂದು ಒತ್ತಾಯಿಸಿ ನಗರಸಭೆಯ ಪೌರಕಾರ್ಮಿಕರು ಹಾವೇರಿ ಶಹರ ಠಾಣೆ ಎದುರು ಜೂನ್‌ 8 ಶನಿವಾರದಂದು ಪ್ರತಿಭಟನೆ ನಡೆಸಿದ್ದರು.

‘ನಗರಸಭೆ ಎದುರು ನಡೆದ ಗಲಾಟೆ ಸಂಬಂಧ ತಮ್ಮ ವಿರುದ್ಧ ದೂರು ನೀಡಿದರೆಂಬ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಶನಿವಾರ ಪುನಃ ಹಲ್ಲೆ ಮಾಡಲಾಗಿದ್ದು ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media

Donate Janashakthi Media

Leave a Reply

Your email address will not be published. Required fields are marked *