ತುಳುನಾಡಿನ ಕೋಮುಸಾಮರಸ್ಯ ಪರಂಪರೆ

ಎಲ್ಲರೂ ಒಟ್ಟಾಗಿ, ಎಲ್ಲರೊಳಗೊಂದಾಗಿ ಬದುಕಿದರೆ ಅದು ಸಾರ್ಥಕ ಬದುಕು ಎಂಬುದನ್ನು ಬರೆದು, ಓದಿ ನೆನಪು ಮಾಡಿಕೊಳ್ಳಬೇಕಾದ ಸ್ಥಿತಿಗೆ ನಾವಿಂದು ತಲುಪಿರುವುದರಿಂದ, ಈ ನಿಟ್ಟಿನಲ್ಲಿ ನೆನಪು ಮಾಡಿಕೊಡುವ ಪ್ರತೀ ಪ್ರಯತ್ನವೂ ಅಮೂಲ್ಯವಾದುದು. ಅದರಲ್ಲೂ ಹೊಸ ತಲೆಮಾರಿನ ಎಳೆಯರು ಈ ಬಗ್ಗೆ ಅಕಾಡೆಮಿಕ್ ಆಸಕ್ತಿಯ ಜೊತೆಗೆ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿದರೆ, ಅದನ್ನು ಶ್ಲಾಘಿಸದೇ ಬೇರೆ ಹಾದಿ ಇಲ್ಲ. ಕೋಮು

-ರಾಜರಾಮ್ ತಲ್ಲೂರು

ನನ್ನ ಸ್ನೇಹಿತರಾದ ಪ್ರೊ| ಸುರೇಶ್ ರೈ ಅವರ ಶಿಷ್ಯ ಮುಹಮ್ಮದ್ ರಿಯಾಝ್ ಕಾರ್ಕಳ, ಯಾವುದೇ ಅಕಾಡೆಮಿಕ್ ಹಿತಾಸಕ್ತಿಗಳಿಲ್ಲದೇ, ತನ್ನದೇ ಆಸಕ್ತಿಯ ಕಾರಣಕ್ಕೆ ಇಷ್ಟೊಂದು ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂಬುದು ಈ ಪುಸ್ತಕದ ಹೆಚ್ಚುಗಾರಿಕೆ. ಸೌಹಾರ್ದಯುತ ತುಳುನಾಡನ್ನು ಮರಳಿ ಕಟ್ಟುವ ಆಶಯ ತನ್ನ ಈ ಅಧ್ಯಯನದ ಉದ್ದೇಶ ಎಂದು ರಿಯಾಝ್ ಹೇಳಿಕೊಂಡಿದ್ದಾರೆ.

ಕರಾವಳಿಗೆ ಸಂಬಂಧಿಸಿದ ವಿವಿಧ ಚರಿತ್ರೆಯ ಪುಸ್ತಕಗಳಲ್ಲಿ ಅಲ್ಲಲ್ಲಿ ಓದಿದ್ದ ತುಣುಕುಗಳು ಇಲ್ಲಿ ಒಂದೆಡೆ ಸಿಗುತ್ತವೆ. ಕರಾವಳಿಯ ಚರಿತ್ರೆಯನ್ನು ಹೊಸದಾಗಿ ಪರಿಚಯಿಸಿಕೊಳ್ಳಬಯಸುವವರು, ಒಂದು ಪ್ರಾಥಮಿಕ ಪಕ್ಷಿನೋಟಕ್ಕಾಗಿ ಈ ಪುಸ್ತಕವನ್ನು ಬಳಸಿಕೊಳ್ಳಬಹುದು. ಕರಾವಳಿಯ ಶಾಸನಗಳು, ರಾಜಕೀಯ-ಧಾರ್ಮಿಕ ಪಲ್ಲಟಗಳು, ದೈವಾರಾಧನೆಯಲ್ಲಿ ಧರ್ಮಗಳ ನಡುವೆ ಸಾಮರಸ್ಯದ ಉದಾಹರಣೆಗಳು ಇಲ್ಲಿ ಉದ್ದಕ್ಕೂ ಸಿಗುತ್ತವೆ.

ಇದನ್ನೂ ಓದಿ: ಚಿತ್ರದುರ್ಗ| ತನ್ನ ಬಾಲ್ಯವಿವಾಹ ತಡೆದ 13 ವರ್ಷದ ಬಾಲಕಿ

ಪುಸ್ತಕದಲ್ಲಿ ಒಂದು ಒಳನೋಟ ನನ್ನ ಗಮನ ಸೆಳೆಯಿತು. 70ರ ದಶಕದ ಭೂಮಸೂದೆಯ ಕಾರಣಕ್ಕೆ ಇಲ್ಲಿ ಪ್ರಬಲ ಜಾತಿಗಳು ನಷ್ಟ ಅನುಭವಿಸಿದರು, ಅದೇ ವೇಳೆಗೆ ಮುಸ್ಲಿಂ ಸಮುದಾಯದವರು ಗಲ್ಫ್ ದೇಶಗಳಲ್ಲಿ ಅಪಾರವಾಗಿ ದುಡಿದು ಲಾಭಗಳಿಸಿ, ಬಲಿಷ್ಠಗೊಳ್ಳುತ್ತಾ ಹೋದರು. ತುಳುವದಲ್ಲಾದ ಈ ಬೆಳವಣಿಗೆಯಿಂದ ಕೋಮು ಪ್ರೇರಕ ಶಕ್ತಿಗಳಿಗೆ ಒಡಕು ಹುಟ್ಟಿಸಲು ಸುಲಭ ಸಾಧನ-ಕಾರಣ ದೊರೆತಿತು ಎಂಬ ವಾದ ಅದು.

ಇದು ಒಟ್ಟು ಸನ್ನಿವೇಶದ ಸರಳೀಕರಣ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಉಂಟಾದ ಸ್ಥಿತಿಗೆ ಈ ಕಾರಣವೂ ಪೂರಕವಾಗಿರಬಹುದು ಎಂಬುದರಲ್ಲಿ ಅನುಮಾನ ಇಲ್ಲ. ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಅವರ ಬೆನ್ನುಡಿ ಇದೆ. ತೀವ್ರವಾಗಿ ಹಬ್ಬುತ್ತಿರುವ ಕೋಮುವಾದಕ್ಕೆ ಉತ್ತರವೋ ಎಂಬಂತೆ ಈ ಪುಸ್ತಕ ಪ್ರಕಟವಾಗಿದೆ ಎಂಬ ಅವರ ಹೇಳಿಕೆಗೆ ನನ್ನ ಸಹಮತಿ ಇದೆ. ಇಂತಹ ಹನಿಗಳು ಸೇರಿಯೇ ಸಾಮರಸ್ಯದ ಸರೋವರ ರೂಪುಗೊಳ್ಳಬೇಕು.

ಸಾಮಾನ್ಯವಾಗಿ, ಪುಸ್ತಕ ಓದಿ ನನ್ನ ಪ್ರತಿಕ್ರಿಯೆ ದಾಖಲಿಸುವಾಗ ಪುಸ್ತಕದ ಜೊತೆ ನನ್ನ ಮುಖ ತೋರಿಸುವುದಿಲ್ಲ. ಆದರೆ, ರಿಯಾಝ್ ಪುಸ್ತಕ ಓದಿ ಪ್ರತಿಕ್ರಿಯಿಸಬೇಕು ಮತ್ತು ಪುಸ್ತಕದ ಜೊತೆ ನಿಮ್ಮ ಫೋಟೋ ಬೇಕು ಎಂದು ಹೇಳಿದ ಕಾರಣಕ್ಕೆ ಈ ಫೋಟೋ ಇಲ್ಲಿ ಹಾಕುತ್ತಿರುವೆ. ಪುಸ್ತಕಕ್ಕಾಗಿ ಥ್ಯಾಂಕ್ಸ್ ಮುಹಮ್ಮದ್ ರಿಯಾಝ್ ಕಾರ್ಕಳ!

ಪುಸ್ತಕವನ್ನು ಪ್ರಕಟಿಸುವ ಮುನ್ನ ಅದನ್ನು ಒಬ್ಬರು ನುರಿತ ಎಡಿಟರ್ ಒಬ್ಬರಿಗೆ ನೀಡಿ, ಅಗತ್ಯ ಎಡಿಟಿಂಗ್ ಮಾಡಿಸಬಹುದಿತ್ತು ಎಂಬುದು ಮುಂದಿನ ಬೆಳವಣಿಗೆಯ ನಿಟ್ಟಿನಲ್ಲಿ ರಿಯಾಝ್ ಅವರಿಗೆ ನನ್ನ ಆಪ್ತ ಸಲಹೆ. ರಿಯಾಝ್ ಅವರಿಂದ ಇಂತಹ ಆರೋಗ್ಯಕರ ಅಕಾಡೆಮಿಕ್ ಕೆಲಸಗಳು ಇನ್ನಷ್ಟು ನಡೆಯಲಿ ಎಂದು ಹಾರೈಕೆ.

ಈ ಪುಸ್ತಕವನ್ನು ಮೈಸೂರಿನ ಜ್ಯೋತಿ ಪ್ರಕಾಶನ ಪ್ರಕಟಿಸಿದೆ. ಬೆಲೆ 230. ಆಸಕ್ತರು ದಯವಿಟ್ಟು ಲೇಖಕರನ್ನು ಸಂಪರ್ಕಿಸಿ…..

ಇದನ್ನೂ ನೋಡಿ: ಜುಲೈ 9 ರಂದು ಅಂಗನವಾಡಿ ನೌಕರರ ಮುಷ್ಕರ Janashakthi Media

Donate Janashakthi Media

Leave a Reply

Your email address will not be published. Required fields are marked *