ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು: ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಪ್ರಶ್ನಿಸಿದರೆ ಕೊಲ್ಲುತ್ತೇವೆ ಎನ್ನುತ್ತಾರೆ, ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ, ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಮಂಗಳವಾರ ಹೇಳಿದರು. ಅವರು ಗೌರಿ ಮೆಮೋರಿಯಲ್ ಟ್ರಸ್ಟ್‌ ಆಯೋಜಿಸಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಸ್ಮರಣಾರ್ಥ ನಗರದ ಟೌನ್‌ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾರದ ಕಾಲದಲ್ಲಿ ಭಾರತವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಕಾಶ್ ರಾಜ್, “ನಾವು ತಪ್ಪನ್ನು ಪ್ರಶ್ನಿಸಲೇಬೇಕಿದ್ದು, ಪ್ರಶ್ನೆ ಕೇಳುತ್ತಲೇ ಇರಬೇಕು. ಆಗ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ. ನಾನು ಬರುವುದಕ್ಕೂ ಮುನ್ನ ಒಂದು ಮಾಧ್ಯಮದವರು ನನ್ನನ್ನ ಸಂದರ್ಶನಕ್ಕೆ ಕರೆದಿದ್ರು. ಅಲ್ಲಿ ಅದಾಲತ್ ನಡೆಸುತ್ತೇವೆ ಅಂತ ಹೇಳಿದ್ದರು. ಅಲ್ಲಿ ಸುಮಾರು 30 ಜನರಿದ್ದರು. ಅವರೆಲ್ಲರೂ ಕಾವಿ ಧರಿಸಿದ್ದರು. ಅವರಲ್ಲೊಬ್ಬ ನೀವು ಕಾಂಗ್ರೆಸ್ಸಾ ಎಂದು ಕೇಳಿದ. ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ನಾವು ಒಡೆದು ಹಾಳುವವರನ್ನು ವಿರೋಧಿಸಲೇಬೇಕು” ಎಂದು ಹೇಳಿದರು.

ಇದನ್ನೂ ಓದಿ: ಅಸಹಿಷ್ಣುತೆ ದೇಶವನ್ನು ಆಳುತ್ತಿದೆ: ಗೌರಿ ಲಂಕೇಶ್ ನೆನೆಪು ಕಾರ್ಯಕ್ರಮದಲ್ಲಿ ಕೇರಳ ಮಾಜಿ ಮಂತ್ರಿ ಶೈಲಜಾ ಟೀಚರ್

“ನಾವು ಗೌರಿಯನ್ನ ಹೂಳಲಿಲ್ಲ, ಬಿತ್ತಿದ್ದೇವೆ. ಒಂದು ಧ್ವನಿಯನ್ನು ಅಡಗಿಸಿದ್ದಕ್ಕೆ, ನೂರಾರು ಗೌರಿಯರು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ, ನಾವು ಮೌನವಾಗಿದ್ದರೆ ಅದು ಇಡೀ ದೇಶವನ್ನೇ ಸುಡುತ್ತದೆ. ನಾವು ಧ್ವನಿ ಎತ್ತಬೇಕು, ಪ್ರಶ್ನೆ ಮಾಡಬೇಕು. ಪ್ರಶ್ನಿಸಿದರೆ ಕೊಲ್ಲುತ್ತೇವೆ ಎನ್ನುತ್ತಾರೆ. ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಆಯುಧ ಹಿಡಿದು ಬರುವವರು ಧೀರರಲ್ಲ, ಹೇಡಿಗಳು. ತಪ್ಪನ್ನು ನಾವು ಪ್ರಶ್ನಿಸಲೇಬೇಕಿದೆ. ಆಗ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರುತ್ತದೆ” ಎಂದು ಪ್ರಕಾಶ್‌ ರಾಜ್ ಹೇಳಿದರು.

ರೈತ ಹೋರಾಟಗಾರ ರಾಕೇಶ್‌ ಟಿಕಾಯತ್ ಮಾತನಾಡಿ, “ದೇಶದಲ್ಲಿ ಹಿಂಸೆಯ ವಾತಾವರಣ ರೂಪುಗೊಂಡಿದೆ. ಗೌರಿ ಲಂಕೇಶ್‌ ಕೂಡಾ ಇದಕ್ಕೆ ಬಲಿಯಾದರು. ಈ ರೀತಿಯ ಕೃತ್ಯಗಳು ಹಲವು ವರ್ಷಗಳಿಂದಲೇ ನಡೆಯುತ್ತಿವೆ. 2015ರಲ್ಲಿ ಉತ್ತರ ಪ್ರದೇಶದ ಮುಜಫರ್‌ ನಗರದಲ್ಲಿ ಗಲಭೆಯಾಯಿತು. 2017ರಲ್ಲಿ ಗೌರಿ ಬಲಿಯಾದರು. ಇದು ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಕಬ್ಬು ಬೆಳೆವ ರೈತರಿಂದ ದಾಳಿ ಮಾಡಿಸಿದರು. ಕರ್ನಾಟಕದಲ್ಲೂ ಇದನ್ನೇ ಮಾಡಲು ಪ್ರಯತ್ನ ಮಾಡಿದರು. ಇಲ್ಲಿ ರಾಮನ ಹೆಸರು ನಡೆಯದಿದ್ದಾಗ ಹನುಮಂತನ ಹೆಸರು ಹೇಳಿದರು. ಆದರೆ, ಅದೂ ಕೆಲಸ ಮಾಡಲಿಲ್ಲ” ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.

“ಯಾವ ದೇವರು, ಯಾವತ್ತು ಎಲ್ಲಿಗೆ ಹೋಗಬೇಕು ಎಂದು ಆರೆಸ್ಸೆಸ್‌ನ ನಾಗಪುರದ ಕಚೇರಿಯಲ್ಲಿ ತೀರ್ಮಾನ ಮಾಡುತ್ತದೆ. ಯಾರ ಪಾಲಿನ ಊಟ ಎಲ್ಲಿ ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಇಂದು ನಾನು ಈ ಮಾತಾಡಿದ್ದಕ್ಕೆ ಅವರ ಬೆಂಬಲಿಗರು ನನ್ನ ವಿರುದ್ಧವೂ ಮಾತನಾಡುತ್ತಾರೆ. ನಾವೂ ಹಿಂದುಗಳೇ, ಅವರಿಗಿಂತಲೂ ಉತ್ತಮ ಹಿಂದುಗಳು. ನಮ್ಮ ಧರ್ಮ ಪಾಲಿಸಲು ನಮಗೆ ಸಂವಿಧಾನ ಅವಕಾಶ ನೀಡಿದೆ. ನಾವು ಹಿಂದೂ ಎಂದು ಹೇಳಿಕೊಳ್ಳಲು ನಮಗೇನೂ ಭಯವಿಲ್ಲ. ಆದರೆ, ನಾವು ಭಾರತೀಯ ಹಿಂದೂಗಳೂ, ಭಾರತೀಯ ಮುಸಲ್ಮಾನರೂ ಆಗಿದ್ದೇವೆ. ನಾಗಪುರದವರಿಗೆ ಹೆದರಬೇಕಾದ ಅಗತ್ಯವಿಲ್ಲ” ಎಂದು ಟಿಕಾಯತ್ ಹೇಳಿದರು.

ಇದನ್ನೂ ಓದಿ: ಸನಾತನ ಧರ್ಮ ಹೇಳಿಕೆ ಉದಯನಿಧಿ ಸ್ಟಾಲಿನ್‌, ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರಕರಣ ದಾಖಲು

“ಕರ್ನಾಟಕದ ಜನರು ದೇಶಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ, ಅಭಿನಂದನೆಗಳು. ಈಗ ಬೇರೆ ರಾಜ್ಯಗಳಲ್ಲೂ ಇದೇ ಪುನರಾವರ್ತನೆಯಾಗಬೇಕು. ನಮ್ಮನ್ನು ಆಳುತ್ತಿರುವವರು ಹೊರದೇಶಗಳಲ್ಲಿ ಗಾಂಧಿಯ ಹೆಸರು ಹೇಳಿತ್ತಾರೆ. ಆದರೆ, ಅವರನ್ನು ಕೊಂದವರು ಯಾರು? ಗೌರಿಯನ್ನು ಹತ್ಯೆ ಮಾಡಿದವರು ಯಾರು? ದೆಹಲಿಯಲ್ಲಿ‌ 770 ರೈತರು ಸತ್ತಾಗ ಆಧಿಕಾರ ಯಾರದಿತ್ತು. ರೈತರನ್ನು 13 ತಿಂಗಳು ಬೀದಿಯಲ್ಲಿ ಇಟ್ಟವರು ಯಾರು? ಇದೆಲ್ಲವನ್ನೂ ಮಾಡಿದ್ದು ಯಾರೆಂದು ಆಳುವವರು ಹೇಳಬೇಕು. ಸಂಘರ್ಷ ಇನ್ನೂ ಜಾರಿಯಲ್ಲಿದೆ. ರೈತರ ಹೋರಾಟ, ಆದಿವಾಸಿಗಳ ಹೋರಾಟ, ಯುವಜನರ ಹೋರಾಟ ಹೀಗೆ ಅನೇಕ ದಿಕ್ಕುಗಳಲ್ಲಿ ವೇದಿಕೆಗಳಲ್ಲಿ ಸಂಘರ್ಷ ನಡೆಯುತ್ತಿದೆ” ಎಂದು ಅವರು ಹೇಳಿದರು.

“ಮಣಿಪುರದಲ್ಲಿ ಪರಸ್ಪರ ಗಲಭೆ ಮಾಡಿಸುತ್ತಾರೆ. ಅಲ್ಲಿ, ಇಡೀ ಜಗಳ ಗಣಿಗಾರಿಕೆಗಾಗಿ ನಡೆಸಲ್ಪಡುತ್ತಿದೆ. ಅದನ್ನು ಅದಾನಿಗೆ ಕೊಡಲು ಯತ್ನಿಸುತ್ತಿದ್ದಾರೆ. ಕಾಶ್ಮೀರದ ಪ್ರವಾಸೋದ್ಯಮ ನಷ್ಟದಲ್ಲಿದೆ. 50,000 ಲಾಭ ಗಳಿಸುತ್ತಿದ್ದವರು ಇಂದು 2,000ಕ್ಕೆ ಇಳಿದಿದೆ. ಅದಾನಿಗೆ ಇದರ ಲಾಭವೂ ಸಿಗುತ್ತದೆ” ಎಂದು ಟಿಕಾಯತ್ ಆರೋಪಿಸಿದರು.

ಪತ್ರಕರ್ತೆ ಸುಪ್ರಿಯಾ ಶ್ರಿನಟೆ ಮಾತನಾಡಿ, “ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದ್ದು, ಇದನ್ನು ಇಂದು ಭಾರತ್ ಎಂದು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20 ಸಮಾವೇಶದಲ್ಲೂ ದ್ರೌಪದಿ ಮುರ್ಮು ಅವರು ಅದನ್ನೇ ಪುನರುಚ್ಛರಿಸಿದ್ದಾರೆ. ಇದನ್ನು ಒಪ್ಪಲಾಗದು. ವಿ ದ ಪೀಪಲ್‌ ಆಫ್‌ ಇಂಡಿಯಾ, ಹಮ್‌ ಭಾರತ್‌ ಕೆ ಲೋಗ್‌ ಎಂಬುದು ಸಂವಿಧಾನದ ಕೊಡುಗೆ. ಇದನ್ನು ಒಬ್ಬ ಮನುಷ್ಯ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾವು ತೆಗೆದುಹಾಕಲಾಗದು. ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಕ್ಕೆ ವಿರುದ್ಧ ಇರುವವರನ್ನು ಸಹಿಸುವುದಿಲ್ಲ ಎಂದರೆ, ಆತನಿಗೆ ಈ ದೇಶದ ಜೊತಗೆ ಏನೋ ಸಮಸ್ಯೆ ಇದೆ ಎಂದರ್ಥ” ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರಿ ವಕೀಲರ ಮದುವೆಯಲ್ಲಿ ಲಲಿತ್‌ ಮೋದಿ ಭಾಗಿ!

“ಭಾರತ ಎಂಬುದು ಸಾವಿರಾರು ವರ್ಷಗಳ ಇರಿಹಾಸವಿರುವ ಉಜ್ವಲವಾದ ದೇಶ. ಇಲ್ಲಿ ನದಿಗಳಿವೆ, ನಾಲೆಗಳಿವೆ, ಜನರಿದ್ದಾರೆ, ರಾಜ್ಯಗಳಿವೆ. ಇವೆಲ್ಲವೂ ಸೇರಿ ಭಾರತ. ಈ ದೇಶ ಕಾರ್ಮಿಕರಿಗೆ ಸೇರಿದ್ದು, ರೈತರಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ಸೇರಿದ್ದು, ಮಹಿಳೆಯರಿಗೆ ಸೇರಿದ್ದು. ಒಬ್ಬ ವ್ಯಕ್ತಿ ಅದನ್ನು ತನ್ನಿಷ್ಟದಂತೆ ನಡೆಸಲು ಸಾಧ್ಯವಿಲ್ಲ. ನಾನು ಈ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ, ಹಿಂದಿಯ ಅಡಿಯಾಳಾಗಬೇಕಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ. ಮಣಿಪುರದ ಮಹಿಳೆಯರು ಬೆತ್ತಲೆ ಮೆರವಣಿಗೆಯಂತ ಕೃತ್ಯದ ಬಗ್ಗೆ ಕೇವಲ 26 ಸೆಕೆಂಡ್‌ ಮಾತಾಡುವ ಆಳುವವರಿಲ್ಲದ ದೇಶವನ್ನು ಬಯಸುತ್ತೇನೆ. ಒಳ್ಳೆಯ ಆಡಳಿತವಿರುವ, ದೇಶದ ಬಗ್ಗೆ ಚಿಂತಿಸುವ ನಾಯಕರಿರುವ ದೇಶವನ್ನು ಊಹಿಸಿಕೊಳ್ಳುತ್ತೇನೆ” ಎಂದು ಹೇಳಿದರು.

“ದೇಶದ ಹೆಸರನ್ನು ಬದಲಿಸಲು ಯತ್ನಿಸುತ್ತಿರುವವರ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ದೇಶ ಕಟ್ಟಲು ಶ್ರಮಿಸಲಿಲ್ಲ. ಅವರಿಗೆ ಭಾರತವೇನು ಗೊತ್ತಿದೆ, ಇಂಡಿಯಾ ಬಗ್ಗೆ ಏನು ಗೊತ್ತಿದೆ?. ನಾನು ನೀವು ಎಲ್ಲರೂ ಸೇರಿ ನಮ್ಮ ಪೂರ್ವಜರು ಕನಸು ಕಂಡ ದೇಶ ಕಟ್ಟಲು ಪ್ರಯತ್ನಿಸಬೇಕು. ಭರವಸೆ ತರಬೇಕು. ನಾವು ಹಲವು ಧರ್ಮಗಳನ್ನು ಪಾಲಿಸುತ್ತೇವೆ. ಆದರೆ ಅದಕ್ಕಿಂತ ಪವಿತ್ರವಾದದ್ದು, ಸಂವಿಧಾನ. ಯಾವುದೇ ಭೇಧಭಾವವಿಲ್ಲದೆ, ರಕ್ಷಣೆಯನ್ನು, ಘನತೆಯನ್ನು, ಸ್ವಾತಂತ್ರ್ಯವನ್ನು, ಓಟು ಮಾಡುವ ಅಧಿಕಾರವನ್ನೂ ಖಾತ್ರಿಪಡಿಸುವ ಏಕೈಕ ಗ್ರಂಥ ಸಂವಿಧಾನ. ಅಂತಹ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ಮಾಡೋಣ” ಎಂದು ಸುಪ್ರಿಯಾ ಶ್ರಿನಟೆ ಕರೆಕೊಟ್ಟರು.

ಮಣಿಪುರದ ರಾಜಕೀಯ ಹೋರಾಟಗಾರ್ತಿ ಏಂಜೆಲಾ ಅಂಗದ್ ಮಾತನಾಡಿ, “ನಾನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು.ನಾನು ದನ ತಿನ್ನುತ್ತೇನೆ, ಹಂದಿ ತಿನ್ನುತ್ತೇನೆ. ನಾನು ನನ್ನಿಷ್ಟದ್ದನ್ನು ತಿನ್ನುತ್ತೇನೆ, ಉಡುತ್ತೇನೆ. ನನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗದು. ಮುಸ್ಲಿಮ್‌ ಸಹೋದರ, ಸಹೋದರಿಯರ ಮೇಲೆ ದಮನ ನಡೆದಾಗ ಸುಮ್ಮನೆ ನೋಡಿ ಕೂರಲಾಗುವುದಿಲ್ಲ. ಈಶಾನ್ಯ ಭಾರತದಲ್ಲಿ ಶೋಷಿತರನ್ನು ಮತ್ತಷ್ಟು ದಮನ ಮಾಡಲಾಗುತ್ತಿದೆ. ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರದ ಭ್ರಷ್ಟಾಚಾರ ರಕ್ಷಣೆಯ ಗೋಡೆಯಲ್ಲಿ ಬಿರುಕು

“ಪ್ರಧಾನಮಂತ್ರಿ ನಮ್ಮ ಸಮುದಾಯಗಳ ಕೆಲವು ಸಂಕೇತಗಳನ್ನು ತಮ್ಮ‌ಉಡುಗೆಯಲ್ಲಿ ಬಳಸುತ್ತಾರೆ. ಕತ್ತಿಗೆ, ತಲೆಗೆ ನಮ್ಮ ಬಟ್ಟೆ ಕಟ್ಟಿಕೊಂಡೇ ನಮ್ಮ ಮೇಲಿನ ದಮನದ ನೀತಿ ಮುಂದುವರೆಸುತ್ತಿದ್ದಾರೆ. ಕೆಲವು ನಕಲಿ ಆದರ್ಶಗಳನ್ನು ತೋರಿಸಿಕೊಂಡು ನಮ್ಮನ್ನು ತುಳಿಯುತ್ತಿದ್ದಾರೆ. ದೇಶದಲ್ಲಿ ಮಾನವೀಯತೆಯನ್ನು ಒಡೆದುಹಾಕಲಾಗುತ್ತಿರುವಾಗ, ಅದನ್ನು ಮರುಜೋಡಿಸುವುದು ನಮ್ಮ ಕೆಲಸವಾಗುತ್ತದೆ. ನಮ್ಮ ಆತ್ಮಸಾಕ್ಷಿಗಿಂತ ಕರುಣೆ ಮತ್ತು ಸಹನೆಗಿಂತ ದೊಡ್ಡ ಗುರುವಿರಲು ಸಾಧ್ಯವಿಲ್ಲ. ಖಾಸಗಿ ಬಂಡವಾಳ, ಭ್ರಷ್ಟಾಚಾರಗಳೇ ಆಡಳಿತವಾಗಿರುವಾಗ ಈ ಮಾರ್ಗದರ್ಶಿ ಸೂತ್ರಗಳು ನಮ್ಮನ್ನು ಮುನ್ನಡೆಸಬೇಕು” ಎಂದು ಏಂಜೆಲಾ ಹೇಳಿದರು.  

“ಇವತ್ತಿನ ಭಾರತ ನಮ್ಮ ಹಣೆಬರಹವಲ್ಲ. ನಾವು ನಮ್ಮ ಹೆಗಲುಗಳನ್ನು ನೋಡಿಕೊಳ್ಳಬೇಕು. ನಾವು ಹೇಗೆ ಎಲ್ಲರೂ ಕೂಡಿ ಕೊಂಡಿದ್ದೆವೆಂಬುದನ್ನು ನಮ್ಮ ಆಹಾರಗಳನ್ನು ಹಂಚಿಕೊಂಡು ತಿಂದು ಬದುಕಿದ್ದೆವುದು ಎಂಬುದನ್ನು ನೆನಪಿಸಿಕೊಳ್ಳಬೇಕು. ರೈತರ ದೆಹಲಿಯ ಗಡಿಗಳಲ್ಲಿ ಸಾಧಿಸಿದ್ದನ್ನು, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ತಮ್ಮತನವನ್ನು ಉಳಿಸಿಕೊಂಡಿರುವುದನ್ನು ನೋಡಬೇಕು. ಕಾಶ್ಮೀರದ ಜನರಿಂದ ಧೈರ್ಯವನ್ನು ಕಲಿಯಬೇಕು. ನದಿಯ ಹರಿಯುವಿಕೆಯನ್ನು ನೆನಪಿಟ್ಟುಕೊಳ್ಳಬೇಕು, ಅದೇ ಸಮಯದಲ್ಲಿ ನಾವು ಸೇರಬೇಕಿರುವ ಮಹಾಸಾಗರದ ಕಾಣ್ಕೆಯನ್ನೂ ಕಾಪಾಡಿಕೊಳ್ಳಬೇಕು” ಎಂದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಕೇರಳದ ಮಾಜಿ ಮಂತ್ರಿ, ಶಾಸಕಿ ಶೈಲಜಾ, ಮುಸ್ಲಿಂ ಒಕ್ಕೂಟದ ಯಾಸಿನ್ ಮಲ್ಪೆ, ಮಾಜಿ ಸಚಿವ ಹೆಚ್‌. ಆಂಜನೇಯ, ಸಿನಿಮಾ ನಿರ್ಮಾಪಕಿ ಕವಿತಾ ಲಂಕೇಶ್, ಗೌರಿ ಟ್ರಸ್ಟ್‌ನ ದೀಪು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಡಿಯೊ ನೋಡಿ: ಗೌರಿ ಲಂಕೇಶ್ ನೆನಪು : ಗೌರಿ ನೆನಪಿನಲ್ಲಿ ಒಂದು ಸಂವಾದ | Gauri Lankesh

Donate Janashakthi Media

Leave a Reply

Your email address will not be published. Required fields are marked *