ಕುಮಾರ್ ಶಾ ಎಂಬ ಈ ಜೋಗಿ

ಅವನಿಗೆ ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟ. ಒಂದೇ ಕಡೆ ಇರುವಂಥವನಲ್ಲ, ಊರೂರು ಅಲೆದಾಡುತ್ತಿರುತ್ತಾನೆ,ಆಗಾಗ ಕೆಲಸಕ್ಕೆ ಸೇರಿಕೊಂಡು ಸಂಪಾದಿಸ್ತಾನೆ, ಆಮೇಲೆ ಆ ಹಣ ಮುಗಿಯೋ ತನಕ ಸುತ್ತಾಡ್ತಾನೆ.ನಮ್ಮ ದೇಶದ ಹದಿನಾರು ರಾಜ್ಯಗಳ ಮಕ್ಕಳ ನೂರು ಕಥೆಗಳನ್ನು ಒಟ್ಟು ಹಾಕಿ ಪುಸ್ತಕ ಬಿಡುಗಡೆ ಮಾಡುವ ಉದ್ದೇಶವಿದೆ ಎನ್ನುತ್ತಾನೆ. ಶಾ

 -ಚಂಪ ಜೈಪ್ರಕಾಶ್

ನಮ್ಮ ಎದುರು ಮನೆಯ ಹುಡುಗ, ನನ್ನನ್ನು ಕರೆದು “ನನ್ನ ಗೆಳೆಯನೊಬ್ಬ ನಿಮ್ಮ ವಿಶೇಷ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಬೆಟ್ಟಿಯಾಗಲು ಇಷ್ಟ ಪಡುತ್ತಿದ್ದಾನೆ, ಅವನು ನಾಳೆ ಬರಬಹುದೆ?” ಎಂದು ಕೇಳಿದ. ಶಾ

ನಾನು,“ಸರಿ ಬರಲಿ.”ಎಂದು ಹೇಳಿ ನಂತರ ಅವರಬಗ್ಗೆ ವಿಚಾರಿಸಿದೆ. “ಅವನ ಹೆಸರು ಕುಮಾರ, ಅವನು ನನ್ನ ಬಾಲ್ಯದ ಗೆಳೆಯ, ಅವನಿಗೆ ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟ. ಅವನು ಒಂದೇ ಕಡೆ ಇರುವಂಥವನಲ್ಲ, ಊರೂರು ಅಲೆದಾಡುತ್ತಿರುತ್ತಾನೆ, ಮ್ಯುಸಿಕ್ನಲ್ಲಿ ಆಸಕ್ತಿ, ಚಿತ್ರ, ಕಥೆ ಹೀಗೆ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡುತ್ತಾನೆ. ಅವನಿಗೆ ಮಕ್ಕಳು ಇಷ್ಟವಾಗುವುದು ಒಂದುಕಡೆಯಾದರೆ, ಮಕ್ಕಳಿಗೂ ಅವನನ್ನು ಕಂಡರೆ ತುಂಬ ಪ್ರೀತಿ. ಅಂಥ ವ್ಯಕ್ತಿತ್ವ ಉಳ್ಳವನು.”  ಶಾ

ಒಬ್ಬ ಕಲಾವಿದ ನಮ್ಮ ಶಾಲೆಗೆ ಬೇಟಿ ನೀಡುತ್ತಿರುವುದು ನನಗೆ ಖುಷಿಯಾಯಿತು. ನಮ್ಮ ಎದುರು ಮನೆಯವನು ಕುಮಾರನನ್ನು ನಮ್ಮ ಶಾಲೆಗೆ ಕರೆತಂದು, ನಮಗೆ ಪರಿಚಯಿಸಿ ಹೊರಟುಬಿಟ್ಟ. ಅವನು ಪರಿಚಯಸ್ತನಂತೆ ಮಾತಾಡ ತೊಡಗಿದ. ಅವನ ಬಗ್ಗೆ ಕೇಳಿದೆ. ಶಾ

“ನನ್ನ ಹೆಸರು ಕುಮಾರ್ ಶಾ, ನನಗೆ ಮಕ್ಕಳೊಂದಿಗೆ ಕೆಲಸ ಮಾಡುವುದೆಂದರೆ ತುಂಬ ಇಷ್ಟ.” ಎಂದ. ಅವನು ನೋಡಲು ತಮಿಳನಂತೆ ಕಾಣುತ್ತಿದ್ದ, ತಲೆಕೂದಲು ಮತ್ತು ಅವನ ದಾಡಿ ಎರಡೂ ಉದ್ದವಾಗಿ, ಗುಂಗುರಾಗಿ ಇತ್ತು. ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಿದ್ದ, ಅವನ ಕಣ್ಣುಗಳಲ್ಲಿ ಜೀವನ ಪ್ರೀತಿ ಹೊಮ್ಮುತ್ತಿತ್ತು. ನೋಡಿದೊಡನೆ ಅವನು ಲವಲವಿಕೆಯ ಮನುಷ್ಯ ಎನಿಸುತ್ತಿತ್ತು. ಶಾ

ಇದನ್ನೂ ಓದಿ: ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೆ ಕೌನ್ಸೆಲಿಂಗ್‌ – ಡಾ.ಎಂ.ಸಿ.ಸುಧಾಕರ್‌

ನಾನು ಕೇಳಿದೆ, “ನೀವು ಉತ್ತರ ಭಾರತದವರ?”

“ಇಲ್ಲ ನಾನು ಅಚ್ಚ ತಮಿಳ.”

“ಹೌದ? ಮತ್ತೆ ನಿಮ್ಮ ಹೆಸರಲ್ಲಿ ಶಾ ಇದೆಯಲ್ಲ?”

“ಅದು ನಾನೇ ಇಟ್ಟುಕೊಂಡ ಹೆಸರು, ನನ್ನ ಹೆತ್ತವರು ನನಗೆ ಕುಮಾರ ಅಂತ ಹೆಸರಿಟ್ಟಿದ್ದರು. ನನಗೆ ಬರ್ನಾಡ್ ಶಾ ಬರವಣಿಗೆ ಅಂದ್ರೆ ತುಂಬ ಇಷ್ಟ, ಅದಕ್ಕೇ ಅವರ ಹೆಸರನ್ನು ನನ್ನದರ ಜೊತೆ ಸೇರಿಸಿಕೊಂಡೆ.” ಶಾ

“ಇಂಟ್ರೆಸ್ಟಿಂಗ್!ನಿಮ್ಮ ಬಗ್ಗೆ ಹೇಳಿ.”

“ನಾನು ನನ್ನ ತಂದೆ ತಾಯಿ ಜೊತೆ ಜಾಸ್ತಿ ದಿನ ಇರಲಿಲ್ಲ, ಬೇಗ ಹೊರಗೆ ಬಂದು ನನ್ನ ಸ್ವಾವಲಂಬಿತನವನ್ನು ಸಾಬೀತು ಮಾಡಬೇಕು ಅಂತ ಕೆಲಸ ಮಾಡಿಕೊಂಡೇ ಓದಿದೆ. ನನಗೆ ಜಾನಪದ ಸಂಗೀತ ಅಂದರೆ ಪ್ರೀತಿ. ಅವರ ಬಗ್ಗೆ ತಿಳಿದುಕೊಳ್ಳೋಕೆ ಅಂತ ಅವರುಗಳ ಹಿಂದೆ ಊರೂರು ಅಲೆದಾಡಿದೆ. ಕನ್ಯಾಕುಮಾರಿಯಿಂದ ಉತ್ತರ ಭಾರತದ ತನಕ ಜಾನಪದ ಸಂಗೀತವನ್ನು ಕೇಳುವ, ಕಲಿಯುವ ಸಲುವಾಗಿ ಸಂಚಾರ ಮಾಡಿದ್ದೇನೆ. ಆಹಾ! ನಮ್ಮ ದೇಶದಲ್ಲಿ ಎಂಥೆಂಥ ಅದ್ಬುತವಾದ ಜನಪದ ಸಂಗೀತಗಾರರಿದ್ದಾರೆ!ನಮ್ಮ ದೇಶದ ನಿಜವಾದ ಚರಿತ್ರೆ ತಿಳಿಯಬೇಕೆಂದರೆ ಜನಪದ ಸಾಹಿತ್ಯ ತಿಳ್ಕೊಬೇಕು ಮೇಡಮ್, ಪ್ರಿಂಟಾಗಿರೊ ಚರಿತ್ರೆ ಪುಸ್ತಕದಲ್ಲಿ ಸತ್ಯಾಂಶ ಎಲ್ಲ ಎಲ್ಲೆಲ್ಲೋ ಹೋಗಿರುತ್ತೆ. ರಾಜರುಗಳ ಕಾಲದಲ್ಲಿ, ಅವರೇ ಸಂಭಾವನೆ ಕೊಟ್ಟು, ಅವರ ಬಗ್ಗೆ ಹೊಗಳಿಸಿಕೊಂಡು ಬರೆಸುತ್ತಿದ್ದರು.

ಇನ್ನು ರಾಜಕಾರಣಿಗಳ ಕಾಲಕ್ಕೆ ಒಬ್ಬರ ವಿರುದ್ದ ಒಬ್ಬರು ಬರೆಸ ತೊಡಗಿದರು. ಜನಪದ ಸಾಹಿತ್ಯ ಯಾರು ರಚಿಸಿದ್ದಾರೆ ಅನ್ನೋ ಅಂಶವೇ ಇರೋಲ್ಲವಲ್ಲ, ಅದರೊಳಗೆ ಅಪಾರವಾದ ಪ್ರಾದೇಶಿಕ ಘಟನೆಗಳನ್ನಾಧರಿಸಿದ ಸತ್ಯ ಸಂಗತಿಗಳು ವಿರಾಜಿಸುತ್ತಿರುತ್ತವೆ. ಅವರ ಹಾಡುಗಳಿಗೆ ಸ್ವಲ್ಪ ಅರ್ಥವನ್ನು ಕೆದಕಿದರೆ ಸಾಕು ಜನ ಬದುಕಿದ ರೀತಿ, ಆಯಾಕಾಲದ ಆಳ್ವಿಕೆ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗುತ್ತೆ. ಅದನ್ನ ಹಾಡೋರೂ ಅಷ್ಟೆ, ಎಷ್ಟು ಸ್ಪಷ್ಟವಾಗಿ, ಗಂಟಲು ಬಿಚ್ಹಿ ಹಾಡುತ್ತಾರೆ! ಯಾವ ರಾಗ ಅಂತ ಇಲ್ಲ, ಆಲಾಪ ಇಲ್ಲ, ಸ್ವರವರಸೆ ಇಲ್ಲ.  ಜನರ ಮನಮುಟ್ಟುವಂತೆ ಮನಸ್ಸು ತುಂಬಿ ಹಾಡುತ್ತಾರೆ. ಒಂದೊಂದು ಊರಲ್ಲಿ ಒಂದೊಂದು ಭಾಷೆ, ಒಂದೊಂದು ರಾಗ.”

ನಾನು ಮಧ್ಯದಲ್ಲಿ ಕೇಳಿದೆ, “ನೀವು ಹಾಡ್ತೀರ?”

“ನನ್ನ ಹತ್ತಿರ ಸಾವಿರಾರು ಹಾಡಿನ ಸ್ಯಾಂಪಲ್ ಇವೆ. ಆಯಾಪ್ರದೇಶದ ಮಕ್ಕಳಿಗೆ ಅವರಿಗೆ ತಕ್ಕ ರಾಗದಲ್ಲಿ ಸಂಗೀತ ಕಲಿಸೋದು, ಮಕ್ಕಳ ಹತ್ತಿರ ಹಾಡಿಸೋದು, ಅದನ್ನು ರೆಕಾರ್ಡ್ ಮಾಡಿಕೊಳ್ಳೋದು ನನ್ನ ಈಗಿನ ಹವ್ಯಾಸ.” ಶಾ

“ಓ! ಹವ್ಯಾಸದ ಹಿಂದೆ ಹೀಗೆ ಓಡ್ತಾ ಇದ್ದರೆ ನಿಮ್ಮ ಜೀವನ ಹೇಗೆ ಸಂಬಾಳಿಸ್ತೀರ?”

“ಅವಾಗ ಅವಾಗ ಕೆಲಸಕ್ಕೆ ಸೇರಿಕೊಂಡು ಸಂಪಾದಿಸ್ತೀನಿ, ಆಮೇಲೆ ಆ ಹಣ ಮುಗಿಯೋ ತನಕ ಸುತ್ತಾಡ್ತೀನಿ, ನನಗೇನು ಜಾಸ್ತಿ ಹಣ ಕೂಡಿಡ ಬೇಕಾಗಿಲ್ಲ, ಸಾಧಾರಣ ಸರ್ಕಾರಿ ಬಸ್ಸು, ರೈಲುಗಳಲ್ಲಿ ಪ್ರಯಾಣ ಮಾಡ್ತೀನಿ, ಯಾರು ಎಲ್ಲಿ ಊಟ ಕೊಟ್ಟರೂ ಅದನ್ನು ರುಚಿಸಿಕೊಂಡು ತಿನ್ನುತ್ತೇನೆ, ಎಲ್ಲಿ ಬೇಕಾದರೂ ಮಲಗಿ ಕೊಳ್ಳುತ್ತೇನೆ, ಸಾಕಷ್ಟು ಕಾಲು ನಡಿಗೆ ಇರುತ್ತೆ ಆದ್ದರಿಂದ ನಿದ್ದೆ ಅಂತು ಚೆನ್ನಾಗಿ ಬರುತ್ತೆ,”

“ನೀವು ನಿಜವಾದ ಜೋಗಿ!”

ಅದಕ್ಕೆ ಅವನು ನಗುತ್ತ “ನಿಮ್ಮ ಮಕ್ಕಳನ್ನು ಕರಿರಿ ಮೇಡಮ್.”ಎಂದ.

ಮಕ್ಕಳನ್ನು ಅವನ ಸುತ್ತಲೂ ಕೂರಿಸಿಕೊಂಡು, ಅವನ ಬಳಿ ಇದ್ದ ಒಂದು ತಟ್ಟುವ ಚರ್ಮವಾದ್ಯ, ಒಂದು ಊದುವ ಮರದ ವಾದ್ಯ ಬಳಸಿಕೊಂಡು, ನಮ್ಮ ಶಾಲೆಗೆ ಜಾನಪದ ಸಂಗೀತದ ಕಂಪನ ಉಂಟಾಗುವಂತೆ ಮಾಡಿದ. ಮಕ್ಕಳ ಕೈಗೆ ತನ್ನ ವಾದ್ಯಗಳನ್ನು ಕೊಟ್ಟು ಅವರ ಕೈಯಲ್ಲಿ ಬಾರಿಸಿಸಿ, ಊದಿಸಿ ಎಲ್ಲ ಮಾಡಿದ. ನಂತರ ವಾದ್ಯಗಳನ್ನು ತನ್ನ ಕೈಗೆ ತೆಗೆದುಕೊಂಡು, ಮಕ್ಕಳ ಬಾಯಲ್ಲಿ ಹಾಡು ಹೇಳಿಸಿದ, “ತಂದಾನನ ತಾನನನಾ ತಾನನ ತಂದಾನ”. ಇಷ್ಟನ್ನು ಮಾತ್ರ ನಿದಾನ ವಾಗಿ ಹೇಳಿಕೊಟ್ಟು, ಎಲ್ಲರೂ ಸುಮಾರಷ್ಟು ಲಯಬದ್ದವಾಗಿ ಹಾಡ ತೊಡಗಿದ ನಂತರ ಅದೇ ರಾಗದಲ್ಲಿ ತಮಿಳು ಜನಪದ ಗೀತೆಯೊಂದನ್ನು ಹೇಳಿಕೊಟ್ಟು ಮಕ್ಕಳ ಬಾಯಲ್ಲೂ ಹಾಡಿಸಿದ. ನಾನು ಅವಾಕ್ಕಾದೆ! ಮಕ್ಕಳಂತು ಅವನನ್ನು ಮುತ್ತಿಕೊಂಡು ಅಂಕಲ್ ಸಾರ್ ಎಂದು ಕರೆಯುತ್ತಾ ಅವನೊಂದಿಗೆ ಆತ್ಮೀಯವಾಗಿದ್ದರು.

ನಮ್ಮ ಸಿಬ್ಬಂದಿಯವರು ತಂದಿದ್ದ ಅವರವರ ಊಟವನ್ನು ಒಂದು ತಟ್ಟೆಗೆ ಬಡಿಸಿ ಕೊಟ್ಟೆವು, ಪ್ರೀತಿಯಿಂದ ತಿಂದು ಮುಂದೆ ಬೇರೊಂದು ಊರಲ್ಲಿ ಬೇರೊಂದು ಶಾಲಾ ಮಕ್ಕಳ ಬೇಟಿಯಾಗಲು ಹೊರಟೆ ಬಿಟ್ಟ. ಮಕ್ಕಳು ಆತ್ಮೀಯವಾಗಿ ಅವನನ್ನು ಬೀಳ್ಕೊಟ್ಟರು. ಅವನು ಹೇಳಿಕೊಟ್ಟಿದ್ದ ಹಾಡನ್ನು ಈಗಲೂ ನೆನೆಪಲ್ಲಿಟ್ಟುಕೊಂಡು ಹಾಡುತ್ತಾರೆ.

ಕೆಲವು ತಿಂಗಳುಗಳು ಕಳೆದ ನಂತರ ಅವನು ಮತ್ತೆ ನಮ್ಮೂರಿಗೆ ಬಂದಿರುವುದಾಗಿ ತಿಳಿಯಿತು ಮತ್ತೆ ನಮ್ಮ ಶಾಲೆಗೆ ಬರಲು ಅನುಮತಿ ಕೇಳಿದ್ದ.

ಈ ಬಾರಿ ಹೊಸ ವಿಷಯ. ಅವನ ಬೆನ್ನಿಗೆ ಹೊತ್ತಿದ್ದ ಚೀಲದಲ್ಲಿ ಅವನ ವಾದ್ಯಗಳಿದ್ದವು. ಮತ್ತೆ ಹೊಸ ಹಾಡು ಹಾಡಿಸುತ್ತಾನೆ ಎಂದುಕೊಂಡಿದ್ದೆ. ಆದರೆ ಈಬಾರಿ ಹಾಡಲ್ಲ,ಕಥೆ!

ಅವನು ಹೇಳಿದ, “ಮೇಡಮ್, ನಿಮಗೆ ಗೊತ್ತಲ್ಲವ? ಸ್ತ್ರೀಯರ ಬಗ್ಗೆ ಪುರುಷರು ಏನು ಬರೆದಾರು? ದಲಿತರ ಬಗ್ಗೆ ಉತ್ತಮ ಜಾತಿಯವರು ಏನು ಬರೆದಾರು? ಅದನ್ನೆಲ್ಲ ಹೋಗಲಾಡಿಸಿ, ಹೆಂಗಸರು ಅವರಬಗೆಗಿನ ಸಾಹಿತ್ಯ ಅವರೇ ಸೃಷ್ಟಿ ಮಾಡತೊಡಗಿದ್ದಾರೆ, ದಲಿತರ ಬಗ್ಗೆ ದಲಿತರೇ ಬರೆಯ ತೊಡಗಿದ್ದಾರೆ. ಆದರೆ ನೋಡಿ, ಮಕ್ಕಳ ಸಾಹಿತ್ಯವನ್ನು ದೊಡ್ಡವರು ಬರೆದು, ಮಕ್ಕಳಿಗೆ ಇದೇ ಬೇಕು, ಕಥೆಯಲ್ಲಿ ನೈತಿಕ ವಿಚಾರ ಇರಲೇ ಬೇಕು ಎಂದು ಹೇಳಿ ದೊಡ್ಡವರೇ ಮಕ್ಕಳ ಕಥೆ ಬರೆಯುತ್ತಾರೆ. ಈಗ ಪ್ರಸ್ತುತ ನನ್ನ ಅನ್ವೇಷಣೆ ಏನೆಂದರೆ, ಮಕ್ಕಳ ಕೈಯಲ್ಲೇ ಕಥೆ ಹೇಳಿಸಿ, ಅವರೇ ಅದನ್ನು ಬರೆಯುವಂತೆ ಮಾಡ ಬೇಕು. ಅವರ ಮನಸ್ಸಿನಲ್ಲಿ ಏನಿರುತ್ತೋ ಅದು ಮಕ್ಕಳ ಸಾಹಿತ್ಯ. ದೊಡ್ಡವರು ಬರೆಯುವುದು ಹಿರಿಯರ ಸಾಹಿತ್ಯ. ನೀವೇನು ಹೇಳುತ್ತೀರಿ?”

ನಾನು ವಿಸ್ಮಯದಿಂದ ಅವನನ್ನೇ ನೋಡುತ್ತಿದ್ದೆ. ನಂತರ ಹೇಳಿದೆ, “ನಮ್ಮ ಮಕ್ಕಳಲ್ಲಿ ಬುದ್ದಿಮಾಂದ್ಯತೆ ಇರುವವರೇ ಹೆಚ್ಹು ಮಂದಿ, ಅವರೇನು ಕಥೆ ಬರೆದಾರು?”

ನಿಮ್ಮಲ್ಲಿ ಇರೋದ್ರಲ್ಲಿ ಜಾಣರು ಅನ್ನಿಸಿಕೊಳ್ಳುವವರನ್ನು ಕರಿರಿ, ನಾನು ಅವರನ್ನು ಸಾಹಿತಿಯನ್ನಾಗಿ ಮಾಡಿ ತೋರಿಸುತ್ತೇನೆ.” ಎಂದ.

ಇಬ್ಬರು ಮಕ್ಕಳನ್ನು ಆಯ್ಕೆ ಮಾಡಿ ಅವರುಗಳೊಂದಿಗೆ ನಾನೂ ಕುಳಿತೆ. ಮೊದಲಿಗೆ ಅವನು ಒಂದು ಕಥೆಯನ್ನು ಬಣ್ಣಿಸಿ ಹೇಳಲು ಶುರು ಮಾಡಿದ, ನಂತರ ಅದರಲ್ಲಿ ಪಾತ್ರಗಳನ್ನು ಮಕ್ಕಳೇ ಆರಿಸುವಂತೆ ಮಾಡಿದ, ನಂತರ ಆ ಪಾತ್ರಗಳ ಚಿತ್ರಣವನ್ನು ಮತ್ತು ಅದರಲ್ಲಿ ನಡೆಯುವ ವಿಷಯಗಳನ್ನು ಅವರುಗಳೇ ಹಣೆಯುವಂತೆ ಮಾಡಿದ. ಕಥೆ ಕೊನೆಗೊಂಡ ನಂತರ ಅವನೆಂದ. “ಇದು ನಾನು ನೀವು ಸೇರಿ ತಯಾರಿಸಿದ ಕಥೆ, ಈಗ ನೀವೇ ಹೊಸಾ ಕಥೆ ಹೇಳಬೇಕು, ಅದು ಬೇರೆ ಯಾರಿಗೂ ಗೊತ್ತಿರಬಾರದು, ನಿಮ್ಮದೇ ಸ್ವಂತ ಕಥೆ. ಮುಂಚೆ ಯಾರೂ ಕೇಳಿರಬಾರದು, ನೀವೂ ಎಲ್ಲೂ ಕೇಳಿರಬಾರದು ಅಂಥ ಕಥೆ ಹೇಳಬೇಕು. ಒಕೆನಾ?”

ಕನಿಶ್ಕ ತನಗೆ ಗೊತ್ತಿದ್ದ ಒಂದು ಕಥೆ ಹೇಳಿದಳು,

“ಇದು ಯಾರು ಹೇಳಿದ ಕಥೆ?”

“ನಮ್ಮ ಮೇಡಮ್ ಹೇಳಿದ ಕಥೆ”

“ಅದೆಲ್ಲ ಬೇಡ ನೀನೇ ಹೊಸಕಥೆ ಹೇಳಬೇಕು.”

ಸ್ವಲ್ಪಹೊತ್ತು ಯೋಚಿಸಿ, ಅವಳು ಶುರು ಮಾಡಿದಳು, “ ಒಂದು ದೊಡ್ಡ ಮರ ಇತ್ತಂತೆ, ಅದರಲ್ಲಿ ಒಂದು ಗೂಬೆ ತನ್ನ ಗೂಡಲ್ಲಿ ಕೂತಿತ್ತಂತೆ, ಅದು ಮೊಟ್ಟೆ ಇಟ್ಟಿತ್ತಂತೆ, ಅದರ ಜೊತೆ ಇನ್ನೊಂದು ಗೂಬೆ ಬಂದು ಊಟ ತಂದು ಕೊಡ್ತಾ ಇತ್ತಂತೆ, ಅವಾಗ ಅಲ್ಲಿಗೆ ಒಬ್ಬ ಬೇಟೆ ಗಾರ ಬಂದನಂತೆ, ಅವನ ಹತ್ತಿರ ಪಿಸ್ತೂಲ್ ಇತ್ತಂತೆ, ಅವನು ಆ ಎರಡೂ ಹಕ್ಕಿಗಳನ್ನು ಪಿಸ್ತೂಲಲ್ಲಿ ಡಂ ಡಂ ಅಂತ ಶೂಟ್ ಮಾಡಿ ಸಾಯಿಸಿ ಬಿಟ್ಟನಂತೆ. ಎರಡೂ ಗೂಬೆಗಳು ಕೆಳಗೆ ಬಿತ್ತಂತೆ, ಒಂದು ಗೂಬೆ ಎದ್ದೇಳೊಣ ಅಂತ ಟ್ರೈ ಮಾಡ್ತಂತೆ ಆಗಲೇ ಇಲ್ಲವಂತೆ ಇನ್ನೊಂದು ಗೂಬೆ ಸತ್ತೇ ಹೋಯ್ತಂತೆ, ಆ ಬೇಟೆಗಾರ ಗೂಬೆನ ತೊಗೊಂಡು ಹೋಗಿ ಮಾರಿ ಬಿಟ್ಟನಂತೆ ಅದರಲ್ಲಿ ಬಂದ ದುಡ್ಡಲ್ಲಿ ಮನೆ ಕಟ್ಟಿಸಿಕೊಂಡು ಸುಖವಾಗಿದ್ದನಂತೆ. ಪಾಪ ಗೂಬೆಗಳು!”

“ಆಮೇಲೆ?”

“ಅಷ್ಟೆ ಕಥೆ.” ಅವಳು ನಿಟ್ಟುಸಿರು ಬಿಡುತ್ತ ಹೇಳಿದಳು.

ಅವನು ಅವಳು ಹೇಳಿದ್ದನ್ನು ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಈಗ ಅವಳಿಗೆ ಹೇಳಿದ, “ನೀನು ಹೇಳಿದ ಕಥೆ ತುಂಭ ಚೆನ್ನಾಗಿದೆ, ಅದಕ್ಕೆ ತಕ್ಕ ಹಾಗೆ ಬೇರೆ ಮಕ್ಕಳಿಗೂ ಅರ್ಥ ಆಗೋ ಹಾಗೆ ಚಿತ್ರಗಳು ಬರಿತಿಯ?”

ಒಂದು ಬಿಳಿಹಾಳೆಯನ್ನು ಮಡಿಸಿ ಮಡಿಸಿ ಒಂದು ಚಿಕ್ಕ ಪುಸ್ತಕದ ಹಾಗೆ ಮಾಡಿದ. ನಂತರ ಬಣ್ಣದ ಪೆನ್ಸಿಲ್ಗಳನ್ನು ಕೊಟ್ಟು ಅವಳಿಗೆ ಚಿತ್ರ ಬರೆದು ಅದಕ್ಕೆ ಬಣ್ಣ ತುಂಬಲು ಹೇಳಿದ. ಕನಿಶ್ಕ ಸ್ವಲ್ಪ ಯೋಚಿಸಿ ನಂತರ ಚಿತ್ರ ಬಿಡಿಸಲಾರಂಬಿಸಿದಳು. ಮರ, ಎರಡು ಗೂಬೆಗಳು, ಅದರ ಗೂಡು, ಒಂದು ಚಿತ್ರ, ನಂತರ ಒಂದು ಗೂಬೆ ಕೊಕ್ಕಲ್ಲಿ ಊಟ ತಂದು ಕೊಡುವ ಚಿತ್ರ, ಇನ್ನೊಂದರಲ್ಲಿ, ಬೇಟೆಗಾರ ಪಿಸ್ತೂಲಿನಲ್ಲಿ ಹೊಡೆಯುವ ಚಿತ್ರ, ನಂತರ ಅದನ್ನು ಮಾರುವ ಚಿತ್ರ, ನಂತರ ಒಂದು ಮನೆಯ ಚಿತ್ರ ಬರೆದಳು. ಅವನು ಅವಳು ಹೇಳಿದ ಕಥೆಯನ್ನು ಚಿತ್ರದ ಪಕ್ಕದಲ್ಲಿ ಚಿಕ್ಕದಾಗಿ ತಮಿಳಿನಲ್ಲಿ ಬರೆದನು.

“ಮೇಡಮ್, ನೋಡಿ, ಕಥೆ ಹೇಳಿ ಇಲ್ಲಸ್ಟ್ರೇಶನ್ಸೂ ಅವಳೇ ಮಾಡಿದ್ದಾಳೆ. ಹೆಂಗೆ?” ಅಂದ.ಅವಳನ್ನು ಯಾವುದಾದರು ಚಿತ್ರಕಲಾ ಸ್ಪರ್ಧೆಗೆ ಕಳಿಸ ಬೇಕಾದರೆ ನಾವು ಅವಳಿಗೆ ತಯಾರಿ ಕೊಡುತ್ತಿದ್ದೆವು, ಆದರೂ ಸುಮಾರಾಗಿ ಬಿಡಿಸುತ್ತಿದ್ದಳು. ಇವತ್ತು ಅವಳುಬರೆದ ಗೂಬೆಗಳಾಗಲಿ, ಬೇಟೆಗಾರನಾಗಲಿ, ಸಂತೆಯಲ್ಲಿ ಜನಗಳಾಗಲಿ ಮನೆಯಾಗಲಿ, ಎಲ್ಲವೂ ನೋಡಿದೊಡನೆ ಅರ್ಥವಾಗುವಂತಿತ್ತು. ನಾನು ಬೆರಗಾಗಿ ಹೋದೆ.

ಅವನು ನಮ್ಮ ದೇಶದ ಹದಿನಾರು ರಾಜ್ಯಗಳ ಮಕ್ಕಳ ನೂರು ಕಥೆಗಳನ್ನು ಒಟ್ಟು ಹಾಕಿ ಪುಸ್ತಕ ಬಿಡುಗಡೆ ಮಾಡುವ ಉದ್ದೇಶವಿದೆ, ಅವುಗಳಲ್ಲಿ ಕನಿಶ್ಕಳ ಕಥೆ ಖಂಡಿತ ಅಚ್ಚಾಗುತ್ತದೆ ಎಂದು ಹೇಳಿ ಹೊರಟ. ಕನಿಶ್ಕಳಿಗೆ, ಶ್ರವಣ, ದೃಷ್ಟಿ, ಮತ್ತು ಕಾಲುಗಳ ಶಕ್ತಿ ಕುಂಠಿತವಾಗಿದ್ದು, ಕಲಿಕೆಯಲ್ಲೂ ಹಿಂದಿರುವ ಮಗು. ಅವಳು ಮೂರುತಿಂಗಳ ಮಗುವಾಗಿದ್ದಾಗ ಯಾರೋ ಹುಚ್ಚ, ಸುತ್ತಿಗೆಯಿಂದ ಅವಳ ತಲೆಗೆ ಹೊಡೆದಿದ್ದ,

ಅವಳ ಇಂದಿನ ಪ್ರತಿಭೆ ನೋಡಿ ನನ್ನ ಕಣ್ಣಲ್ಲಿ ಆನಂದ ಬಾಷ್ಪ ತುಂಬಿಕೊಂಡಿತು.

[ ಲೇಖಕಿ, ಚಂಪ ಜೈಪ್ರಕಾಶ್, ವಿಶೇಷ ಮಕ್ಕಳ ಶಿಕ್ಷಣದ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಕೆಲಸ ಮಾಡುತ್ತಿರುವವರು. ಈಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿಶೇಷ ಮಕ್ಕಳಿಗೆ ಒಂದು ಶಾಲೆಯನ್ನು ನಡೆಸುತ್ತಿದ್ದಾರೆ. ಅವರ ವೈಯಕ್ತಿಕ ಅನುಭವಗಳಿಂದ ಹೊಮ್ಮಿರುವ ಮೂರು ಕೃತಿಗಳು- 24ನೇ ಕ್ರೋಮೋಸೋಮ್ ಮತ್ತುಇತರ ಕಥನಗಳು, ಸುಬ್ಬರಾಯನ ಕುಂಟೆ ಮತ್ತು ಇತ್ತೀಚೆಗೆ ‘ಅಂಟಿ ಅಂಟದ ನಂಟು’ (ಪ್ರಕಾಶಕರು-ಚಿಂತನ ಪುಸ್ತಕ) ಇದುವರೆಗೆ ಪ್ರಕಟವಾಗಿವೆ. ಚಿತ್ರಕೃಪೆ: ಆರವ್‍ ಜೈನ್]

ಇದನ್ನೂ ನೋಡಿ: ಗಾಂಧೀ ಸೆಂಟರ್ ಅಫ್ ಸೈನ್ಸ್‌ಗೆ ಆಹ್ವಾನ ನೀಡಿದ್ದೇ ಡಾ. ಎಸ್.‌ ಬಾಲಚಂದ್ರನ್‌ – ಪಾಲಹಳ್ಳಿ ವಿಶ್ವನಾಥ್‌

Donate Janashakthi Media

Leave a Reply

Your email address will not be published. Required fields are marked *