ಮಂಗಳೂರು: ನಗರದ ಚೇಳ್ಯಾರು ಗ್ರಾಮ ಪಂಚಾಯತ್ ತೀರಾ ಅಮಾನವೀಯವಾಗಿ ವರ್ತಿಸುತ್ತಿದೆ. ಬಿಲ್ ಪಾವತಿಸಲಿಲ್ಲ ಎಂದು ಆರ್ಥಿಕವಾಗಿ ತೀರಾ ದುರ್ಬಲವಾದ ಆರು ಕೊರಗ ಬುಡಕಟ್ಟು ಕುಟುಂಬಗಳ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾಮ ಪಂಚಾಯತ್ ನಿನ್ನೆ ಕಡಿತಗೊಳಿಸಿ ಅಮಾನವೀಯವಾಗಿ ವರ್ತಿಸಿತ್ತು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲೆ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಈ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದ್ದೆವು. ಈಗ ನೋಡಿದರೆ ಗ್ರಾಮ ಪಂಚಾಯತ್ ಸೇಡು ತೀರಿಸುವಂತೆ ನಿರ್ದಯವಾಗಿ ವರ್ತಿಸಿದೆ. ಮನೆಗೆ ನೀರಿನ ಸಂಪರ್ಕ ಕಡಿತಗೊಂಡ ತರುವಾಯ ಕೊರಗ ಕುಟುಂಬಗಳು ಕಾಲೋನಿಯಲ್ಲಿದ್ದ ಗ್ರಾಮ ಪಂಚಾಯತ್ ನ ನೀರಿನ ಕೊಳವೆಯಿಂದ ನೀರು ತುಂಬಿಸಿ ಹೊತ್ತು ತರುತ್ತಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಆರ್.ಎನ್. ರವಿ ಪ್ರಮಾಣ ವಚನ ಸ್ವೀಕಾರ
ಇದನ್ನು ಗಮನಿಸಿದ ಪಂಚಾಯತ್ ಆಡಳಿತವು ಕೊರಗ ಕುಟುಂಬಗಳಿಗೆ ಹನಿ ನೀರು ಸಿಗಬಾರದು ಎಂಬಂತೆ ವರ್ತಿಸಿದೆ. ಪಂಚಾಯತ್ ಕೊಳವೆಯ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದೆ. ಈಗ ಆರು ಕುಟುಂಬಗಳಿಗೆ ಮನೆಯ ನಳ್ಳಿಯಲ್ಲೂ ನೀರಿಲ್ಲ, ಪಂಚಾಯತ್ ನ ಸಾರ್ವಜನಿಕ ಕೊಳವೆಯಿಂದಲೂ ನೀರಿಲ್ಲ. ದುಡ್ಡಿಲ್ಲದಿದ್ದರೆ ಕುಡಿಯಲು ಹನಿ ನೀರು ಪಡೆಯುವ ಹಕ್ಕೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.
ಅಳಿವಿನಂಚಿನ ಬುಡಕಟ್ಟು ಸಮುದಾಯದೊಂದಿಗಿನ ಈ ಅಮಾನವೀಯ ವರ್ತನೆ ಖಂಡನೀಯ. ಜಿಲ್ಲಾಡಳಿತದ ಈ ಕುರಿತಾದ ಮೌನ ಅಸಹನೀಯ. ತಕ್ಷಣವೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು. ಸೂಕ್ತ ಕ್ರಮಗಳನ್ನು ಜರುಗಿಸಬೇಕು, ಇಲ್ಲದಿದ್ದಲ್ಲಿ ತೀವ್ರ ರೀತಿಯ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ಪಿಚ್ಚರ್ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media
