ಬೆಂಗಳೂರು: ಸೋಮವಾರ ವಿಧಾನಸೌಧದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ 1766 ಪುಟಗಳ ವರದಿಯನ್ನು ನೀಡಿದ್ದಾರೆ. ಇದರಲ್ಲಿ ಒಟ್ಟು ಆರು ಶಿಫಾರಸ್ಸುಗಳು ಒಳಗೊಂಡಿವೆ. ಒಳ ಮೀಸಲಾತಿ
ಒಳ ಮೀಸಲಾತಿ ವರದಿ ರಾಜ್ಯದಲ್ಲಿ ಭಾರೀ ಹೋರಾಟಕ್ಕೆ ಸಂಚಲನವಾಗಿದ್ದ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ದಲಿತ ಸಮುದಾಯದ ಒಳ ಪಂಗಡಗಳಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಈ ವರದಿ ಮಹತ್ವದ ಪಾತ್ರ ನಿರ್ವಹಣೆ ಮಾಡಲಿದೆ.
ಜನವರಿ 2025 ರಂದು ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತು. ರಾಜ್ಯದಲ್ಲಿ ನಿಖರವಾದ ದತ್ತಾಂಶ ಇಲ್ಲದ ಕಾರಣ ಹೊಸದಾದ ಸಮೀಕ್ಷೆ ನಡೆಸಬೇಕೆಂದು ದಿನಾಂಕ 27-3-2025 ರಂದು ಆಯೋಗವು ಮಧ್ಯಂತರ ವರದಿ ಸಲ್ಲಿಸಿತು.
ಅದೇ ದಿನವೇ ಸಚಿವ ಸಂಪುಟ ಮಧ್ಯಂತರ ವರದಿನ್ನು ಒಪ್ಪಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ನಿರ್ಣಯಿಸಿತು. 2025 ಮೇ 5 ರಿಂದ ಜುಲೈ 6 ರವರೆಗೆ ಸಮಗ್ರ ಸಮೀಕ್ಷೆ ನಡೆಸಲಾಯಿತು. ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಒಳ ಮೀಸಲಾತಿ ಹೈಲೈಟ್ಸ್ ಏನೇನು?
- ಒಳಮೀಸಲಾತಿ ಬೇಕೆಂದು ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ 30 ವರ್ಷಗಳ ಹೋರಾಟ.
- ಸರ್ವೋಚ್ಚ ನ್ಯಾಯಾಲಯ ದಿನಾಂಕ 01-08-2024 ರಂದು ದವಿಂದರ್ಸಿಂಗ್ ಪ್ರಕರಣದ ತೀರ್ಪಿನಲ್ಲಿ ಸ್ಪಷ್ಟನೆ.
- ಉಪವರ್ಗೀಕರಣ ಮಾಡುವುದಕ್ಕೆ ಸಂವಿಧಾನದ ಅನುಚ್ಛೇದ 14 ರಲ್ಲಿ ಅವಕಾಶವಿದೆ.
- ಉಪವರ್ಗೀಕರಣ ಸಾಮಾಜಿಕ ನ್ಯಾಯದ ವಿಸ್ತರಣೆ . ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದೆ.
- ಉಪವರ್ಗೀಕರಣ ಮಾಡಿದರೆ ಮೀಸಲಾತಿ ಅನುಭವಿಸುತ್ತಿರುವ ಯಾರನ್ನೂ ಹೊರಗಿಡುವುದಿಲ್ಲ.
- ಅಗತ್ಯ ದತ್ತಾಂಶ ಸಂಗ್ರಹಿಸಿ ಒಳಜಾತಿಗಳ ವರ್ಗೀಕರಣ ಮಾಡಬೇಕು ಎಂದು ಉಲ್ಲೇಖ.
ಇದನ್ನೂ ಓದಿ: ಭೂಸಂತ್ರಸ್ತ ರೈತರಿಗೆ ಪರಿಹಾರ ವಿಳಂಬ: ಆಗಸ್ಟ್ 7ರಂದು ಸಂಸದ ಮನೆಯವೆರೆಗೆ ಪಾದಯಾತ್ರೆ ಒಳ ಮೀಸಲಾತಿ
ಏನೆಲ್ಲಾ ಅಂಶಗಳು?
*ಶೈಕ್ಷಣಿಕ ಹಿಂದುಳಿದಿರುವಿಕೆ.
*ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ.
*ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ಹಂಚಲಾಗಿದೆ.
*ವರದಿ, ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ ಸುಮಾರು 1766 ಪುಟಗಳು ಮತ್ತು ಆರು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ನೀಡಿದೆ.
*ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ರವರು ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿಲ್ಲ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ” ಬಿಜೆಪಿಯವರು ಆರೋಪ ಮಾಡ್ತಾರೆ.ಅವರು ಏನು ಮಾಡಿದ್ರು ಗೊತ್ತಿದೆಯಲ್ಲ. ಮಾಧುಸ್ವಾಮಿ ಮೂಲಕ ಏನು ಮಾಡಿಸಿದ್ರು.ರಾಮನಿಗೊಂದು ಲೆಕ್ಕ ಕೃಷ್ಣನಿಗೊಂದು ಲೆಕ್ಕ ಮಾಡಿದ್ರು. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ ನಾವು ಆ ರೀತಿ ಮಾಡಲ್ಲ. ಎಲ್ಲವನ್ನು ಕಾನೂನು ಬದ್ಧವಾಗಿಯೇ ಮಾಡ್ತೇವೆ. ವರದಿಯಲ್ಲಿ ಏನಿದೆ ಎಂಬುದನ್ನು ನೋಡಿ ಜಾರಿಗೆ ತರುತ್ತೇವೆ” ಎಂದರು.
ಮಾಜಿ ಸಚಿವ ಎಸ್ ಆಂಜನೇಯ ಮಾತನಾಡಿ, “ಎಸ್ ಸಿ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ವರದಿಯನ್ನು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸುವರ್ಣಾವಕಾಶ. ಶೀಘ್ರವಾಗಿ ಒಳ ಮೀಸಲಾತಿ ಜಾರಿಗೆ ತರಬೇಕು. ಸಂಪುಟಕ್ಕೆ ತಂದು ಬಿಲ್ ಪಾಸ್ ಮಾಡಬೇಕು. ಆಗಸ್ಟ್ ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ ಬಂದರೆ ಮಾದಿಗರಿಗೆ ಸ್ವಾತಂತ್ರ್ಯ ಬಂದಂತೆ. ಇದಕ್ಕೆ ಸಾಕಷ್ಟು ಹೋರಾಟ ನಡೆದಿದೆ. ಇದೀಗ ಅಂತಿಮವಾಗಿ ಒಳಮೀಸಲಾತಿ ಜಾರಿಗೆ ಅವಕಾಶ ಕೂಡಿಬಂದಿದೆ” ಎಂದರು.
ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ, “ಸುಮಾರು 35 ವರ್ಷಗಳ ಸಿಎಂ, ಡಿಸಿಎಂ ಕಮಿಷನ್ ನೇಮಕ ಮಾಡಿದ್ದರು. ನ್ಯಾ. ನಾಗಮೋಹನ್ ದಾಸ್ ಇವತ್ತು ವರದಿ ಒಪ್ಪಿಸಿದ್ದಾರೆ.ಸಿಎಂ ವರದಿ ಸ್ವೀಕಾರ ಮಾಡಿದ್ದಾರೆ. ಮುಂದಿನ ನಡೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಅಗುತ್ತೆ. ನಾವೆಲ್ಲಾ ಒಗ್ಗಟ್ಟಾಗಿ ತೀರ್ಮಾನ ಮಾಡ್ತಿವಿ.ವರದಿ ಜಾರಿ ಆಗುತ್ತೆ ಎಂಬ ವಿಶ್ವಾಸ ನನಗೆ ಇದೆ” ಎಂದರು.
ಇದನ್ನೂ ನೋಡಿ : ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media ಒಳ ಮೀಸಲಾತಿ
