ಜೂನ್ 17 – ಗಾಜಾದಲ್ಲಿ ಇಸ್ರೇಲಿ ನರಮೇಧವನ್ನು ಖಂಡಿಸಿ ರಾಷ್ಟ್ರೀಯ ಪ್ಯಾಲೆಸ್ಟೈನ್ ಸೌಹಾರ್ದ ದಿನ

ಐದು ಎಡಪಕ್ಷಗಳ ಕರೆ -ಭಾರತ ಸರಕಾರದ ನಿಲುವಿನಲ್ಲಿ ಬದಲಾವಣೆಗೆ ಆಗ್ರಹ
ನವದೆಹಲಿ :  ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ ಜನತೆಯ ವಿರುದ್ಧ ಇಸ್ರೇಲ್ ಸರ್ಕಾರ ನಡೆಸುತ್ತಿರುವ ನರಮೇಧಕಾರೀ ಯುದ್ಧವನ್ನು ದೇಶದ ಐದು  ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಇಪ್ಪತ್ತು ತಿಂಗಳಿಗೂ ಹೆಚ್ಚು ಸಮಯದಿಂದ ಇಸ್ರೇಲಿನ ಅವಿರತ ಬಾಂಬ್ ದಾಳಿ ಮತ್ತು ಮಿಲಿಟರಿ ಆಕ್ರಮಣವು 55,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರ ಹತ್ಯೆ ಮಾಡಿದೆ – ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಅಗತ್ಯ ಮೂಲರಚನೆಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತರ ಆಸರೆಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಗಾಜಾದ ಜನರನ್ನು ಅಭೂತಪೂರ್ವ ಮಾನವ ಅನಾಹುತಕ್ಕೆ ತಳ್ಳಲಾಗಿದೆ. ಇದು ನರಮೇಧಕ್ಕಿಂತ ಕಡಿಮೆಯಿಲ್ಲದ ಕೃತ್ಯ. ಅತ್ಯಂತ ಅಮಾನವೀಯ ಸಂಗತಿಯೆಂದರೆ, ಇಸ್ರೇಲ್ ಗಾಜಾಗೆ ಸಹಾಯ ಪ್ರವೇಶಿಸುವುದನ್ನು ಕೂಡ ನಿರಾಕರಿಸುತ್ತಿದೆ ಎಂದು ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ಒಂದು ಜಂಟಿ ಹೇಳಿಕೆಯಲ್ಲಿ ಖೇದ ವ್ಯಕ್ತ ಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜೂನ್ 17, 2025 ರಂದು ದೇಶಾದ್ಯಂತ ರಾಷ್ಟ್ರೀಯ ಪ್ಯಾಲೆಸ್ಟೈನ್‍ ಸೌಹಾರ್ದ ದಿನಾಚರಣೆ ನಡೆಸೋಣ  ಎಂದು ಡಿ. ರಾಜ, ಪ್ರಧಾನ ಕಾರ್ಯದರ್ಶಿ, ಸಿಪಿಐ, ಎಂ.ಎ. ಬೇಬಿ, ಪ್ರಧಾನ ಕಾರ್ಯದರ್ಶಿ,  ಸಿಪಿಐ(ಎಂ), ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂಎಲ್)-ಲಿಬರೇಷನ್, ಜಿ. ದೇವರಾಜನ್, ಪ್ರಧಾನ ಕಾರ್ಯದರ್ಶಿ, ಎಐಎಫ್‌ಬಿ  ಮತ್ತು ಮನೋಜ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಪಿ ಇವರುಗಳು ಸಹಿ ಹಾಕಿರುವ ಜಂಟಿ ಹೇಳಿಕೆ ಎಲ್ಲಾ ಶಾಂತಿಪ್ರಿಯ, ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳಿಗೆ ಕರೆ ನೀಡಿದೆ.

ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ‘ಫ್ರೀಡಂ ಫ್ಲೋಟಿಲ್ಲಾ ಗಾಜಾ’ದ ಮ್ಯಾಡ್ಲೀನ್ ಎಂಬ ಮಾನವೀಯ ನೆರವುಗಳನ್ನು ಹೊತ್ತ ಹಡಗಿನ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸುತ್ತ, ಗಾಜಾಗೆ ಅಡೆತಡೆಯಿಲ್ಲದೆ ಮಾನವೀಯ ನೆರವು ತಲುಪುವುದನ್ನು ಖಚಿತಗೊಳಿಸಲು,  ಬಂಧಿತರಾಗಿರುವ ಎಲ್ಲಾ ಅಂತರರಾಷ್ಟ್ರೀಯ ಸ್ವಯಂಸೇವಕರನ್ನು ಬಿಡುಗಡೆ ಮಾಡುವಂತೆ ಭಾರತ ಸರಕಾರ ಒತ್ತಾಯಿಸಬೇಕು ಮತ್ತು ಅಮಾನವೀಯ ಮುತ್ತಿಗೆಯನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಬೇಕು ಎಂದು ಎಡಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಜಿಡಿಪಿ ಕೇಕೆಯೂ ಮತ್ತು ನಿಜವಾದ ಪ್ರಗತಿಯೂ

ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯ ಸೇರಿದಂತೆ ಜಾಗತಿಕ ಆಕ್ರೋಶ ಹೆಚ್ಚುತ್ತಿದ್ದರೂ ಕೂಡ ನೆತನ್ಯಾಹು ಸರ್ಕಾರ ಯುಎಸ್  ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ನಿರ್ಭಿಡೆಯಿಂದ ತನ್ನ ಪಾಶವೀ ಅಭಿಯಾನವನ್ನು ಮುಂದುವರೆಸಿದೆ. ಅದಾಗಲೇ ನೆಲೆ ಕಳಕೊಂಡ  ಲಕ್ಷಾಂತರ ಪ್ಯಾಲೆಸ್ಟೀನಿಯನ್ನರನ್ನು ಮತ್ತೊಮ್ಮೆ ನೆಲೆ ಕಳಕೊಳ್ಳುವಂತೆ ಮಾಡಿರುವ ರಫಾ ಮೇಲಿನ ಇತ್ತೀಚಿನ ದಾಳಿ,  ಅಂತರರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳು ಮತ್ತು ಮೂಲಭೂತ ಮಾನವೀಯತೆಯ ಬಗ್ಗೆ ಇಸ್ರೇಲ್ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿರುವ ಜಂಟಿ ಹೇಳಿಕೆ, ಫ್ರೀಡಂ ಫ್ಲೋಟಿಲ್ಲಾವನ್ನು ಅಂತರರಾಷ್ಟ್ರೀಯ ಜಲಪ್ರದೇಶದಿಂದ ಅಪಹರಿಸಲಾದ ಇತ್ತೀಚಿನ ಉದಾಹರಣೆಯು ವ್ಯಾಪಕ ಪ್ರತಿಭಟನೆಯನ್ನು ಎಬ್ಬಿಸಿದೆ ಎಂದು ಹೇಳಿದೆ.

ಭಾರತ ಸರಕಾರ,  ಐತಿಹಾಸಿಕವಾಗಿ ಭಾರತವು ಬೆಂಬಲಿಸಿಕೊಂಡು ಬಂದಿರುವ ಪ್ಯಾಲೆಸ್ಟೀನಿಯನ್ ಧ್ಯೇಯಸಾಧನೆಯೊಂದಿಗೆ ದೃಢವಾಗಿ ನಿಲ್ಲುವ ಬದಲು, ಇಸ್ರೇಲಿ ಆಕ್ರಮಣಕಾರರನ್ನು ಕುರಿತಂತೆ ಹೆಚ್ಚೆಚ್ಚು ಇಬ್ಬಂದಿತನದ ಮತ್ತು ತುಷ್ಟೀಕರಿಸುವ ನಿಲುವನ್ನು  ಅಂಗೀಕರಿಸಿರುವುದು ಅತ್ಯಂತ ಕಳವಳಕಾರಿಯಾಗಿದೆ. ಇದು ವಸಾಹತುಶಾಹಿ-ವಿರೋಧಿ ಸೌಹಾರ್ದ  ಮತ್ತು ರಾಷ್ಟ್ರೀಯ ವಿಮೋಚನಾ ಚಳುವಳಿಗಳಿಗೆ ಬೆಂಬಲದಲ್ಲಿ  ಬೇರೂರಿರುವ ಭಾರತದ ದೀರ್ಘಕಾಲೀನ ವಿದೇಶಾಂಗ ಧೋರಣೆಯಲ್ಲಿ ನಾಚಿಕೆಗೇಡಿ ಮಾರ್ಗಚ್ಯುತಿ ಆಗಿರುವುದನ್ನು ಸೂಚಿಸುತ್ತದೆ ಎಂದು ಎಡಪಕ್ಷಗಳು ಹೇಳಿವೆ.

ಈ ನೆಲೆಯಲ್ಲಿ ಜೂನ್ 17, 2025 ರಂದು ದೇಶಾದ್ಯಂತ ರಾಷ್ಟ್ರೀಯ ಪ್ಯಾಲೆಸ್ಟೈನ್‍ ಸೌಹಾರ್ದ ದಿನವಾಗಿ ಆಚರಿಸಲು  ಎಲ್ಲಾ ಶಾಂತಿಪ್ರಿಯ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳಿಗೆ ಕರೆ ನೀಡುತ್ತ, ಅಂದು ದಿಲ್ಲಿಯಲ್ಲಿ ಬೆಳಿಗ್ಗೆ 11.00 ಗಂಟೆಗೆ ಜಂತರ್ ಮಂತರ್‌ನಲ್ಲಿ  ಈ ಮುಂದಿನ ಆಗ್ರಹಗಳೊಂದಿಗೆ ಮತಪ್ರದರ್ಶನ ನಡೆಯಲಿದೆ ಎಂದು ಈ ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ:

  • ಇಸ್ರೇಲ್ ಸರ್ಕಾರ ಎಸಗಿರುವ ನರಮೇಧ ಮತ್ತು ಯುದ್ಧ ಅಪರಾಧಗಳಿಗೆ ಖಂಡನೆ
  • ರಾಷ್ಟ್ರ, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಪ್ಯಾಲೆಸ್ಟೈನ್ ಜನತೆಯ ನ್ಯಾಯಯುತ ಹೋರಾಟಕ್ಕೆ ಸೌಹಾರ್ದತೆ
  • ಪ್ಯಾಲೆಸ್ಟೈನ್ ಧ್ಯೇಯಕ್ಕೆ ನಮ್ಮ ಐತಿಹಾಸಿಕ ಬೆಂಬಲಕ್ಕೆ ಅನುಗುಣವಾಗಿ ಭಾರತ ಸರ್ಕಾರವು ಒಂದು ತತ್ವಬದ್ಧ ನಿಲುವನ್ನು ತಳೆಯಲು ಮತ್ತು ಇಸ್ರೇಲ್‌ನೊಂದಿಗಿನ ಎಲ್ಲಾ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಲು ಆಗ್ರಹ.

ನರಮೇಧ, ಜನಾಂಗಭೇದ ನೀತಿ ಮತ್ತು ಆಕ್ರಮಣದ ವಿರುದ್ಧ ಭಾರತದ ಜನರ ಧ್ವನಿಯನ್ನು ಎತ್ತಲು ಸೌಹಾರ್ದ ಮತಪ್ರದರ್ಶನದಲ್ಲಿ ವ್ಯಾಪಕವಾಗಿ  ಭಾಗವಹಿಸಬೇಕು ಎಂದು ಎಡಪಕ್ಷಗಳ  ಜಂಟಿ ಹೇಳಿಕೆ ಕೋರಿದೆ.

 

ಇದನ್ನು ನೋಡಿ : ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ ಸವಾಲುಗಳು ಮತ್ತು ಸಾಧ್ಯತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *