ಷೇರು ಮಾರುಕಟ್ಟೆ ಚಂಚಲತೆ: ಎಕ್ಸಿಟ್ ಪೋಲ್ ನ ‘ಬಿಜೆಪಿ ಸುನಾಮಿ’ ನಂಬಿ ಒಂದೇ ದಿನದಲ್ಲಿ 12 ಲಕ್ಷ ಕೋಟಿ ಸಂಪತ್ತಿನ ಹೆಚ್ಚಳ:

ಪಲಿತಾಂಶ ಬರುತ್ತಿದ್ದಂತೆ ಮರುದಿನವೇ  ಕರಗಿದ 25 ಲಕ್ಷ ಕೋಟಿ ಸಂಪತ್ತು:

– ಸಿ.ಸಿದ್ದಯ್ಯ  

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿನ ಚುನಾವಣಾ ಪ್ರಚಾರ ಭಾಷಣದಲ್ಲಿ ’10 ವರ್ಷಗಳ ಹಿಂದೆ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 25,000 ಇತ್ತು, ಇಂದು 75,000 ಕ್ಕೆ ಏರಿದೆ.” ಎನ್ನುತ್ತ, ತಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ಏರಿಕೆಯಾಗುತ್ತದೆ ಎಂಬ ಭ್ರಮೆಯನ್ನು ಹೂಡಿಕೆದಾರರಲ್ಲಿ ಸೃಷ್ಟಿಸಲು ಇಂತಹ ಮಾತುಗಳನ್ನು ಮೋದಿ ಆಡಿದ್ದಾರೆ. ನಂತರ, ಚುನಾವಣೋತ್ತರ ಸಮೀಕ್ಷೆಗಳು ‘ಬಿಜೆಪಿ 400 ಸೀಟುಗಳನ್ನು ಪಡೆಯುತ್ತದೆ ಎಂದು ಸೃಷ್ಟಿಸಿದ ಸುಳ್ಳು ಗ್ರಹಿಕೆಗಳನ್ನು ನಂಬಿ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬಾರೀ ಏರಿಕೆ ಕಂಡು ಒಂದೇ ದಿನದಲ್ಲಿ ರೂ. 12 ಲಕ್ಷ ಕೋಟಿ ಸಂಪತ್ತಿನ ಬೆಳವಣಿಗೆಗೆ ಸಾಕ್ಷಿಯಾಯಿತು. ಚುನಾವಣಾ ಪಲಿತಾಂಶ ಹೊರಬರುತ್ತಿದ್ದಂತೆ, ಬಿಜೆಪಿ ಸೋಲುವ ಸೂಚನೆ ಸಿಗುತ್ತಿದ್ದಂತೆ ಸೆನ್ಸೆಕ್ಸ್ ಬಾರೀ ಕುಸಿತ ಕಂಡು 25 ಲಕ್ಷ ಕೋಟಿ ರೂ. ಕಳೆದುಕೊಂಡಿತು. ಬಿಜೆಪಿ ಮಾತ್ರ ಉತ್ತಮ ಎಂಬ ಭ್ರಮೆ ಇವರಿಗೇಕೆ?

18ನೇ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಜೂನ್ ಒಂದರಂದು ಮುಗಿಯುತ್ತಿದ್ದಂತೆ ಸುದ್ದಿ ಮಾಧ್ಯಮಗಳು ಮತದಾನೋತ್ತರ ಸಮೀಕ್ಷೆ ಬಿಡುಗಡೆ ಮಾಡಿದವು. ಈ ಸಮಯಕ್ಕಾಗಿಯೇ ಮಾಧ್ಯಮ ಸಂಸ್ಥೆಗಳು ಕೆಲವು ದಿನಗಳಿಂದ ಕಾಯುತ್ತಿದ್ದವು. ಇವುಗಳಿಗೆ ಟಿಆರ್ ಪಿ ಗಳಿಕೆಯೂ ಮುಖ್ಯವಾಗಿತ್ತು. (ಹೂಡಿಕೆದಾರರನ್ನು ಪ್ರತಿನಿಧಿಸುವ ದೊಡ್ಡ ಶ್ರೀಮಂತ ಲಾಬಿ ಈ ಸಮಯಕ್ಕಾಗಿ ಕಾಯುತ್ತಿತ್ತು ಎಂದರೆ ತಪ್ಪಾಗಲಾರದು) ದೇಶದ ಜನರಷ್ಟೇ ಅಲ್ಲದೆ ವಿದೇಶಗಳಲ್ಲೂ ಈ ಸಮೀಕ್ಷಾ ವರದಿಯನ್ನು ತಿಳಿಯಲು ಕಾತುರದಿಂದ ಕಾಯುತ್ತಿದ್ದರು. ಮುಂದಿನ ಸರ್ಕಾರ ಯಾರದಾಗಿರುತ್ತದೆ ಎಂಬುದನ್ನು ಚುಣಾವಣಾ ಪಲಿತಾಂಶಕ್ಕೂ ಮುಂಚಿತವಾಗಿ ತಿಳಿಯುವ ಕಾತುರ ಅವರದು. ಎಕ್ಸಿಟ್ ಪೋಲ್‌ಗಳು ಹೊರಬಂದಾಗ, ಭಾರತೀಯ ಜನತಾ ಪಕ್ಷ (ಬಿಜೆಪಿ) 400 ಸೀಟುಗಳನ್ನು ಪಡೆಯುತ್ತದೆ ಎಂದು ಅಂದಾಜಿಸಿದವು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿ 350 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಹೇಳಿದವು. ಅಂದು ಶನಿವಾರವಾದ್ದರಿಂದ ಷೇರು ಮಾರುಕಟ್ಟೆಗೆ ರಜೆ. ಮರುದಿನ ಭಾನುವಾರ. ಭಾನುವಾರ ಕಳೆದು ಸೋಮವಾರ ಷೇರು ಮಾರುಕಟ್ಟೆ ತೆರೆಯುತ್ತಿದ್ದಂತೆ ಖರೀದಿದಾರರಲ್ಲಿ ಸಂಭ್ರಮವೋ ಸಂಭ್ರಮ! ಭಾರತದ ದೊಡ್ಡ ಸ್ಟಾಕ್-ಮಾರುಕಟ್ಟೆ ಹೂಡಿಕೆದಾರರು, ಮ್ಯೂಚುವಲ್ ಫಂಡ್‌ಗಳು, ಊಹಾಪೋಹಗಾರರು ಇತ್ಯಾದಿಗಳ ನಡುವೆ ಸೋಮವಾರದಂದು ಒಂದೇ ದಿನ ರೂ. 12 ಲಕ್ಷ ಕೋಟಿ ಸಂಪತ್ತಿನ ಬೆಳವಣಿಗೆಗೆ ಸಾಕ್ಷಿಯಾಯಿತು.

ಮರುದಿನ (ಜೂನ್ 4) ಚುನಾವಣಾ ಪಲಿತಾಂಶ ಹೊರಬಂದು, ಬಿಜೆಪಿ ಸ್ವಂತ ಬಲದೊಂದಿಗೆ ಸರ್ಕಾರ ರಚಿಸಲಾಗದು ಎಂಬುದನ್ನು ತಿಳಿದ ನಂತರ ಸೆನ್ಸೆಕ್ ಬಾರಿ ಕುಸಿತ ಕಂಡು ಒಂದೇ ದಿನದಲ್ಲಿ ರೂ. 25 ಲಕ್ಷ ಕೋಟಿ ಕಣ್ಮರೆಯಾಯ್ತು. ಹೂಡಿಕೆದಾರರನ್ನು ಪ್ರತಿನಿಧಿಸುವ ದೊಡ್ಡ ಶ್ರೀಮಂತ ಲಾಬಿಯ ‘ಸಮೀಪದೃಷ್ಟಿ’ ಪ್ರಚಾರ ಯಂತ್ರಗಳು ಸೃಷ್ಟಿಸಿದ ಸುಳ್ಳು ಗ್ರಹಿಕೆಗಳ ಉತ್ಪನ್ನದಿಂದಾಗಿ ಆ ಎರಡು ದಿನಗಳ ವಹಿವಾಟುಗಳಲ್ಲಿ ತಮ್ಮ ಹೂಡಿಕೆಯ ದೊಡ್ಡ ಪಾಲನ್ನು ಕಳೆದುಕೊಂಡವರೆಷ್ಟೊ? ಅದರ ಲಾಭ ಪಡೆದುಕೊಂಡವರೆಷ್ಟೊ?  ಆ ನಂತರದ ದಿನದಿಂದ ಮೋದಿ ನೇತೃತ್ವದಲ್ಲಿ ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ರಚಿಸುತ್ತದೆ ಎಂಬ ಭರವಸೆಯೊಂದಿಗೆ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ. ಈ ಚೇತರಿಕೆಯೂ ಎನ್ ಡಿ ಎ ಸರ್ಕಾರದ ಭದ್ರತೆ ಮತ್ತು ಅದು ತೆಗೆದುಕೊಳ್ಳುವ ನೀತಿ ನಿಲುವುಗಳನ್ನು ಅವಲಂಭಿಸಿ ಏರಿಳಿತ ಕಾಣುವ ಸಾಧ್ಯತೆಗಳಿವೆ.  ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಗಳಲ್ಲಿ ದೊಡ್ಡ ಊಹಾತ್ಮಕ ಹೂಡಿಕೆಗಳನ್ನು ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಬಿಜೆಪಿ ಮಾತ್ರ ಒಳ್ಳೆಯದು ಎಂಬ ಭ್ರಮೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿನ ಚುನಾವಣಾ ಪ್ರಚಾರ ಭಾಷಣದಲ್ಲಿ “10 ವರ್ಷಗಳ ಹಿಂದೆ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 25,000 ಇತ್ತು, ಇಂದು 75,000 ಕ್ಕೆ ಏರಿದೆ.” ಎನ್ನುತ್ತ, ಇದು ತಮ್ಮ ಆಡಳಿತದ ಸಾಧನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ನಾವು ನೋಡಿದ್ದೇವೆ. ಇವರ ಈ ಹೇಳಿಕೆಯು ತಮ್ಮ ಆಡಳಿತದಿಂದ ಮಾತ್ರ ಇದು ಸಾಧ್ಯ ಎಂಬಂತಿದೆ. ಇದು ಬಿಜೆಪಿ ಮಾತ್ರ ಷೇರು ಮಾರುಕಟ್ಟೆಗೆ ಒಳ್ಳೆಯದು ಎಂಬ ದೋಷಪೂರಿತ ಊಹೆಯನ್ನು ಆಧರಿಸಿದೆ. ಇಲ್ಲಿನ ಹೂಡಿಕೆದಾರರು ಷೇರು ಮಾರುಕಟ್ಟೆಯ ಬೆಳವಣಿಗೆಯ ಕುರಿತು ತಪ್ಪಾಗಿ ಗ್ರಹಿಸಿದ್ದಾರೆ: 10 ವರ್ಷಗಳ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಶೇ. 260 ರ ಆದಾಯಕ್ಕೆ ಹೋಲಿಸಿದರೆ, ಯುಪಿಎ ಶೇ. 400 ಆದಾಯವನ್ನು ನೀಡಿದೆ. ಎರಡನೆಯದಾಗಿ, ಷೇರು ಮಾರುಕಟ್ಟೆಯಲ್ಲಿನ ಗಳಿಕೆಯ ಅತ್ಯಂತ ನಿರ್ಣಾಯಕ ಸೂಚಕವೆಂದರೆ ಆರ್ಥಿಕ ಬೆಳವಣಿಗೆ. ಯುಪಿಎ 10 ವರ್ಷಗಳಲ್ಲಿ ಶೇ. 7.8 ಅನ್ನು ನೀಡಿತು, ಎನ್.ಡಿ.ಎ.  ಯ ಶೇ. 5.9 ಕ್ಕೆ ಹೋಲಿಸಿದರೆ ಯುಪಿಎ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚು. ಹಾಗಾದರೆ ಇವರಲ್ಲಿ ಕೆಲವರು ನ್ಯೂಯಾರ್ಕ್ ಮತ್ತು ಲಂಡನ್ ಇತ್ಯಾದಿಗಳಲ್ಲಿನ ಐಶಾರಾಮಿ ಹವಾನಿಯಂತ್ರಿತ ಕಛೇರಿಗಳಲ್ಲಿ ಕುಳಿತು ಭಾರತದ ಈಕ್ವಿಟಿ ಮಾರುಕಟ್ಟೆಗಳ ಮೇಲೆ ವ್ಯವಹರಿಸುತ್ತ, ಉದ್ದೇಶಪೂರ್ವಕವಾಗಿ ವಾಸ್ತವ ಸ್ಥಿತಿಯನ್ನು ಕಾಣದಷ್ಟು ಕುರುಡಾಗಿದ್ದಾರೆಯೇ? ಇವರಲ್ಲಿ ಹೆಚ್ಚಿನವರು “ಉದ್ಯೋಗಗಳು” ಮತ್ತು “ಹಣದುಬ್ಬರ” ವನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ದೊಡ್ಡ ಸಮಸ್ಯೆಗಳಾಗಿ ಉಲ್ಲೇಖಿಸುತ್ತಾರೆ. ಭಾರತದ ಗಂಭೀರ ನಿರುದ್ಯೋಗ ಬಿಕ್ಕಟ್ಟನ್ನು (ಉತ್ತರಪ್ರದೇಶದಲ್ಲಿ 60,000 ಪೊಲೀಸ್ ಕಾನ್ಸ್ ಟೇಬಲ್ ಉದ್ಯೋಗಗಳಿಗೆ ಎಂಬಿಎ, ಪಿ.ಎಚ್.ಡಿ., ಎಂಜಿನಿಯರಿಂಗ್ ಪದವಿ ಇತ್ಯಾದಿ ಹೊಂದಿರುವ 48 ಲಕ್ಷ ಯುವಕರು ಅರ್ಜಿ ಸಲ್ಲಿಸುತ್ತಿದ್ದಾರೆ), ಆಹಾರ ಹಣದುಬ್ಬರವನ್ನು ಇವರು ನಿರ್ಲಕ್ಷಿಸುತ್ತಿದ್ದಾರೆ.

ಹಿಂಡೆನ್‌ಬರ್ಗ್ ವರದಿ…

ಅದಾನಿ ಗ್ರೂಪ್ ಕುರಿತ ಹಿಂಡೆನ್‌ಬರ್ಗ್ ವರದಿಯ ಬಗ್ಗೆ ಇವರಿಗೆ ತಿಳಿದಿಲ್ಲವೇ? ಇದು ರಾಜಕೀಯ ಪ್ರೇರಿತ ಎಂದು ಇವರು ಭಾವಿಸುತ್ತಾರೆಯೇ? ನಿಯಂತ್ರಕ ಪ್ರಕ್ರಿಯೆಗಳ ಅಸ್ಪಷ್ಟ ಕುಶಲತೆಯಿಂದ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಕೂಡ ಎಚ್ಚೆತ್ತುಕೊಂಡಿದೆ. ಇದು ರಾಜಕೀಯ ಆಶ್ರಯವಿಲ್ಲದೆ ನಡೆದಿದೆ ಎಂದು ಇವರು ಭಾವಿಸುತ್ತಾರೆಯೇ?

ಇದನ್ನು ಓದಿ : ಕೆಳಮನೆಯಿಂದ ಮೇಲ್ಮನೆಗೆ 11ಮಂದಿ ಅವಿರೋಧ ಆಯ್ಕೆ

ಚುನಾವಣಾ ಬಾಂಡ್

ಎಲೆಕ್ಟೋರಲ್ ಬಾಂಡ್‌ಗಳ ಹಗರಣದ ಬಗ್ಗೆ ಇವರು ಏನು ಹೇಳುತ್ತಾರೆ? ಡೊನಾಲ್ಡ್ ಟ್ರಂಪ್ ಅಥವಾ ಜೋ ಬಿಡೆನ್ ಸುಲಿಗೆ, ಬಂಧನದ ಬೆದರಿಕೆ, ರಾಜ್ಯ ಅಧಿಕಾರದ ದುರುಪಯೋಗ ಮತ್ತು ಮೂಲಸೌಕರ್ಯ ಯೋಜನೆಗಳನ್ನು ದತ್ತಿಯಾಗಿ ಬಿಟ್ಟುಕೊಡುವ ಮೂಲಕ ಪ್ರಚಾರದ ಹಣವನ್ನು ಸಂಗ್ರಹಿಸಲು ಇವರು ಅನುಮತಿಸುತ್ತಾರೆಯೇ? ಭಾರತದಲ್ಲಿ ದುರಾಶೆ, ಕ್ರೋನಿ ಕ್ಯಾಪಿಟಲಿಸಂ ಮತ್ತು ಭ್ರಷ್ಟಾಚಾರವು ಇವರಿಗೆ ನ್ಯಾಯಸಮ್ಮತವೇ?

ಮುಳುಗಿದ ಎನ್ರಾನ್ ಕಂಪನಿ

1996 ರಲ್ಲಿ, ಎನ್ರಾನ್ ಕಂಪನಿಯು ವಿದ್ಯುತ್ ಉತ್ಪಾದಿಸಲು ಸರ್ಕಾರಿ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿತು, ಆಗಿನ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿತು, ಅಂತಿಮವಾಗಿ ವಿದ್ಯುತ್ ಉತ್ಪಾದಿಸದೆ ನಮ್ಮ ದೇಶದಿಂದ ಹಾರಿತು. ಅದಕ್ಕೆ ಸಾಲ ನೀಡಿದ ಬ್ಯಾಂಕುಗಳು ದಿವಾಳಿಯಾದವು. ಆ ಕಂಪನಿಯಲ್ಲಿ ಷೇರುಗಳನ್ನು ಖರೀದಿಸಿದ ಸಾಮಾನ್ಯ ಹೂಡಿಕೆದಾರರು ಮುಳುಗಿದರು. ಕೊನೆಗೆ ಆ ಕಂಪನಿಯ ಉದ್ಯೋಗಿಗಳೂ ನೀರಿನಲ್ಲಿ ಮುಳುಗಿದರು. ಎನ್ರಾನ್ ಉದ್ಯೋಗಿಗಳಿಗೆ ಸ್ಟಾಕ್ ಆಯ್ಕೆಗಳ ಹೆಸರಿನಲ್ಲಿ ನೀಡಲಾದ ಷೇರುಗಳು ಸ್ಕ್ರ್ಯಾಪ್ ಪೇಪರ್‌ಗಳಾಗಿ ಉಳಿದಿವೆ.  ಕಿಂಗ್ ಫಿಶರ್ ಮತ್ತು ನೀರವ್ ಮೋದಿಯ ಕಥೆಗಳು ಇದೇ ಅಲ್ಲವೇ?

ಎಫ್ ಡಿಐ

2021-22 ರಲ್ಲಿ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ರೂಪದಲ್ಲಿ ರೂ. 4.37 ಲಕ್ಷ ಕೋಟಿಗಳು ನಮ್ಮ ದೇಶದ ಆರ್ಥಿಕತೆಯನ್ನು ಪ್ರವೇಶಿಸಿವೆಯಾದರೂ, 2022-23 ರಲ್ಲಿ ಇದು ರೂ. 3.67 ಲಕ್ಷ ಕೋಟಿಗಳಿಗೆ ತೀವ್ರವಾಗಿ ಇಳಿಯುತ್ತವೆ. ನಮ್ಮ ದೇಶಕ್ಕೆ ಬಂದಿರುವ ಎಫ್ ಡಿಐ ಸೇವಾ ವಲಯ ಮತ್ತು ಸಾಫ್ಟ್ ವೇರ್ ಕ್ಷೇತ್ರಕ್ಕೂ ಬಂದಿದೆ. ಉತ್ಪಾದನಾ ವಲಯ, ನಿರ್ಮಾಣ ಕ್ಷೇತ್ರ ಮತ್ತು ಕೌಶಲ್ಯ ಸುಧಾರಣೆ ವಲಯದಲ್ಲಿ ಎಫ್‌ಡಿಐ ನಾಮಮಾತ್ರಕ್ಕೆ ಬಂದಿದೆ. ಇದು ದೇಶದ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡುತ್ತದೆ?  ಅಸ್ಥಿರವಾದ ವಿದೇಶಿ ಬಂಡವಾಳ ಹೂಡಿಕೆಗಳು ದೇಶದ ಆರ್ಥಿಕತೆಯನ್ನು ಹೇಗೆ ಹಾನಿಗೊಳಿಸುತ್ತವೆ ಎಂಬುದನ್ನು 80 ಮತ್ತು 90 ರ ದಶಕಗಳಲ್ಲಿ ದಕ್ಷಿಣ ಏಷ್ಯಾದ ದೇಶಗಳ ಆರ್ಥಿಕತೆಯ ಕುಸಿತದಿಂದ ನೋಡಬಹುದಾಗಿದೆ.

ತಳಮಟ್ಟದಲ್ಲಿ ನೋಡಬೇಕಿದೆ

ಭಾರತವು ಮಧ್ಯಮ-ಆದಾಯದ ರಾಷ್ಟ್ರದ ಕೆಳ ಹಂತದಲ್ಲಿದೆ. ನಮ್ಮ ತಲಾ ಆದಾಯ, ಮಾನವ ಅಭಿವೃದ್ಧಿ ಸೂಚ್ಯಂಕ, ಬಡತನ ಮಟ್ಟ, ಆದಾಯದ ಅಸಮಾನತೆ ಇತ್ಯಾದಿಗಳು ಗಂಭೀರ ಸವಾಲುಗಳಾಗಿವೆ. ಪಿರಮಿಡ್‌ನ ತಳಭಾಗದ ಕಲ್ಯಾಣ ಅಗತ್ಯಗಳನ್ನು ತಿಳಿಸದೆ ಯಾವುದೇ ಸರ್ಕಾರವು ಮುಕ್ತ-ಮಾರುಕಟ್ಟೆಗಳು ಮತ್ತು ಅನಿಯಂತ್ರಿತ ಉದಾರೀಕರಣದ ಕುರಿತು ಉಪನ್ಯಾಸಗಳನ್ನು ನೀಡಲು ಸಾಧ್ಯವಿಲ್ಲ. ಇದು ನಿಜವಾಗಿಯೂ ಜವಾಬ್ದಾರಿಯುತ ಮತ್ತು ಸಹಾನುಭೂತಿಯ ಬಂಡವಾಳಶಾಹಿಯ ಯುಗವಾಗಿದೆ. ವಾಸ್ತವವಾಗಿ, ಇವರ ಬಲಪಂಥೀಯ ನೆಚ್ಚಿನ ಮೋದಿ ಅವರು ಮನರೇಗಾ (MNREGA), ಆಹಾರ ಭದ್ರತೆ (ಐದು ವರ್ಷಗಳವರೆಗೆ ಶೇ. 60 ಭಾರತೀಯರಿಗೆ ಐದು ಕೆಜಿ ಆಹಾರ ಧಾನ್ಯಗಳು) ಇತ್ಯಾದಿಗಳ ಯುಪಿಎ ಸರ್ಕಾರದ ಯೋಜನೆಗಳನ್ನು ಮೋದಿ ಸರ್ಕಾರ ಅನುಸರಿಸಿದೆ. ಹಾರ್ವರ್ಡ್ ಮತ್ತು ಸ್ಟ್ಯಾನ್‌ ಫೋರ್ಡ್‌ನಲ್ಲಿರುವಾಗ ಟ್ರಿಕಲ್-ಡೌನ್ ಅರ್ಥಶಾಸ್ತ್ರವು ಉತ್ತಮ ಬೌದ್ಧಿಕ ಸಿದ್ಧಾಂತವಾಗಿದೆ, ಆದರೆ ಇವರು ಭಾರತೀಯ ರೈತರು, ಗ್ರಾಮೀಣ ಮತ್ತು ನಗರ ಬಡವರು ಮತ್ತು ಭೂರಹಿತ ಕಾರ್ಮಿಕರನ್ನು ಕೇಳಿ ತಿಳಿಯಬೇಕಿದೆ.

ಲಕ್ಷಾಂತರ ಕೋಟಿ ಸಾಲ ಮನ್ನಾ… ಕಾ‍ರ್ಪೊರೇಟ್  ತೆರಿಗೆ ಕಡಿತ…

ಕಳೆದ 10 ವರ್ಷಗಳಲ್ಲಿ ದೊಡ್ಡ ಸುಧಾರಣೆಗಳು ಯಾವುವು? ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಕಾರ್ಪೊರೇಟ್ ಕಂಪನಿಗಳು ಬೃಹತ್ ಪ್ರಮಾಣದ ಸಾಲ ಪಡೆಯುತ್ತಿವೆ. 16 ಲಕ್ಷ ಕೋಟಿಯ ವಸೂಲಾಗದ ಸಾಲ ಮನ್ನಾ(ಎನ್‌ಪಿಎ) ಮನ್ನಾ ಮಾಡಿರುವುದೇ? ಅಥವಾ ಕಾರ್ಪೊರೇಟ್ ಗಳು ಮೋದಿ ಸರ್ಕಾರದಿಂದ ವಾರ್ಷಿಕವಾಗಿ 1,45,000 ಕೋಟಿ ರೂಪಾಯಿಗಳ ವಾರ್ಷಿಕ ಕಾರ್ಪೊರೇಟ್ ತೆರಿಗೆ ಕಡಿತವನ್ನು ಪಡೆದುಕೊಂಡಿರುವುದೇ? ಇದಕ್ಕಾಗಿ, ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವವರು ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ರೋಮಾಂಚನಗೊಂಡಿದ್ದಾರೆಯೇ?

ಒಟ್ಟು ಸ್ಥಿರ ಬಂಡವಾಳ (ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್) ರಚನೆಯು ಜಿಡಿಪಿಯ ಶೇ. 30 ಕ್ಕಿಂತ ಕಡಿಮೆ ಏಕೆ? (ಯುಪಿಎ ಅವಧಿಯಲ್ಲಿ ಅದು ಶೇ. 35 ಮುಟ್ಟಿತ್ತು). ಭಾರತದ GDP ಯಲ್ಲಿ ಉತ್ಪಾದನಾ ಪಾಲು GDP ಯ ಶೇ. 14ಕ್ಕೆ ಏಕೆ ಕುಸಿದಿದೆ? ಮೇಕ್ ಇನ್ ಇಂಡಿಯಾದಲ್ಲಿಇವರ ಪಾಲು ಕಡಿಮೆ.

ಜನರ ಹಣದಲ್ಲಿ ಜೂಜು

ಇವರು ಜನರ ಹಣದಲ್ಲಿ ವ್ಯವಹಾರ ಮಾಡಿ ಸಾವಿರಾರು ಕೋಟಿ ಗಳಿಸುವುದು, ಸಾಲ ಮಾಡಿ ಬ್ಯಾಂಕುಗಳನ್ನು ಮುಳುಗಿಸುವುದು, ಬ್ಯಾಂಕುಗಳನ್ನು ಉಳಿಸಲು ಸರ್ಕಾರ ಸಾರ್ವಜನಿಕ ಹಣವನ್ನು ಬ್ಯಾಂಕುಗಳಿಗೆ ಬಂಡವಾಳವಾಗಿ ಮತ್ತೆ ನೀಡುವುದು ಸಾಮಾನ್ಯವಾಗಿದೆ. ಕಾರ್ಪೊರೇಟ್ ಕಂಪನಿಗಳ ಬಾಕಿಯನ್ನು ಮನ್ನಾ ಮಾಡುತ್ತಿರುವುದೇಕೆ? ಅವರ ಸಾಲವನ್ನು ಏಕೆ ವಸೂಲಿ ಮಾಡಬಾರದು? ಬ್ಯಾಂಕುಗಳನ್ನು ಏಕೆ ಖಾಸಗೀಕರಣಗೊಳಿಸಲಾಗುತ್ತಿದೆ? ಜನರು ಪ್ರಜ್ಞಾಪೂರ್ವಕವಾಗಿ ಈ ಪ್ರಶ್ನೆಗಳನ್ನು ಕೇಳಿ, ಇದನ್ನು ನಿಲ್ಲಿಸುವಂತೆ ಸರ್ಕಾರಗಳ ಮೇಲೆ ಒತ್ತಡ ತರುವವರೆಗೆ, ಈ ವಂಚನೆಯು ವಿಪರೀತವಾಗಿ ನಡೆಯುತ್ತಲೇ ಇರುತ್ತದೆ!!  ಪ್ರಜೆಗಳ ಹಣದಿಂದ ಕೆಲವೇ ಮಂದಿ ‘ದೊಡ್ಡವರು’ ಷೇರುಪೇಟೆಯಲ್ಲಿ ಜೂಜಾಡುತ್ತಲೇ ಇರುತ್ತಾರೆ!! ಷೇರುಪೇಟೆಯ ಅಬ್ಬರವನ್ನು ಕಂಡು ನಿಜವಾದ ಆರ್ಥಿಕತೆ ಬೆಳೆಯುತ್ತಿದೆ ಎಂಬ ಭ್ರಮೆಯಲ್ಲಿರುವವರು ಈ ಸತ್ಯಗಳನ್ನು ಅರಿತುಕೊಳ್ಳಬೇಕು.

ಸೆನ್ಸೆಕ್ಸ್‌ನ ಏರಿಕೆ ಮತ್ತು ಕುಸಿತವು ಆರು ಕಂಪನಿಗಳ ಮೇಲೆ ಆಧಾರಿತವಾಗಿದ್ದರೆ, ಅದು ಆರ್ಥಿಕತೆಯ ಪ್ರವೃತ್ತಿಯನ್ನು ಹೇಗೆ ಪ್ರತಿಬಿಂಬಿಸುತ್ತದೆ? ದೇಶದ ಆರ್ಥಿಕತೆಯು ಅತ್ಯುತ್ತಮವಾಗಿದ್ದರೆ, ನಮ್ಮ ದೇಶವು ಎಲ್ಲಾ ಅಭಿವೃದ್ಧಿ ಸೂಚಕಗಳಲ್ಲಿ ಏಕೆ ಹಿಂದುಳಿದಿದೆ? 80 ಕೋಟಿ ಜನರು ತಿಂಗಳಿಗೆ ಸರ್ಕಾರ ನೀಡುವ ಐದು ಕೆಜಿ ಆಹಾರಧಾನ್ಯದ ಮೇಲೆ ಏಕೆ ಅವಲಂಬಿತರಾಗಿದ್ದಾರೆ? ಜನರ ಆದಾಯ ಮತ್ತು ಜೀವನ ಮಟ್ಟ ಏಕೆ ಕುಸಿಯುತ್ತಿದೆ ಮತ್ತು ಕುಟುಂಬದ ಸಾಲ ಏಕೆ ಹೆಚ್ಚುತ್ತಿದೆ? ಹಾಗಾಗಿ ಆರ್ಥಿಕತೆಯ ಕಾರ್ಯಕ್ಷಮತೆ ಮತ್ತು ಸೆನ್ಸೆಕ್ಸ್‌ನ ಓಟದ ನಡುವೆ ಯಾವುದೇ ಸಂಬಂಧವಿಲ್ಲ.

ಇದನ್ನು ನೋಡಿ : ಬಂಡವಾಳಶಾಹಿ ಬೆಳೆದಷ್ಟು ಪ್ರತಿರೋಧ ಹೆಚ್ಚಾಗುತ್ತಲೆ ಇರುತ್ತದೆ – ರಾಜೇಂದ್ರ ಚೆನ್ನಿJanashakthi Media

Donate Janashakthi Media

Leave a Reply

Your email address will not be published. Required fields are marked *