ನೀರಾವರಿ ಯೋಜನೆಗಳಿಗೆ ಹಿನ್ನಡೆ | ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ, ಸುಪ್ರೀಂ ಕೋರ್ಟ್ ಆದೇಶವಾಗಿ 6 ವರ್ಷಗಳು ಕಳೆದರೂ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾಗಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳ್ಳದಿರುವುದು ಬೇಸರದ ಸಂಗತಿ. ಆರೋಪ-ಪ್ರತ್ಯಾರೋಪ ಮಾಡುತ್ತ ಕಾಲಹರಣ ಮಾಡದೆ ಆದಷ್ಟು ಶೀಘ್ರವಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವ ಮೂಲಕ ಈ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ

ಭದ್ರಾ ಮೇಲ್ದಂಡೆ ಯೋಜನೆಯ ಹಣಕಾಸಿನ ನವೀಕೃತ ಮಾಹಿತಿಯನ್ನು ತಕ್ಷಣ ಕೇಂದ್ರಕ್ಕೆ ಕಳುಹಿಸಿ, ಅದರ ಪಾಲಿನ ₹5,300 ಕೋಟಿ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಡ ಹೇರಬೇಕು ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ

ಮಹದಾಯಿ ನ್ಯಾಯಾಧೀಕರಣದಿಂದ 2018ರ ಆಗಸ್ಟ್ 14 ರಂದು ತೀರ್ಪು ಪ್ರಕಟವಾಗಿದ್ದು, ತೀರ್ಪಿನಲ್ಲಿ 13.42 ಟಿಎಂಸಿ ನೀರು ರಾಜ್ಯಕ್ಕೆ ಹಂಚಿಕೆಯಾಗಿದ್ದು, ಕಳಸಾ- 1.72 ಟಿಎಂಸಿ, ಬಂಡೂರಿ ನಾಲಾದಿಂದ 2.18 ಟಿಎಂಸಿ ನೀರು ಹಂಚಿಕೆ ಆಗಿದೆ. ಕಳಸಾ ನಾಲಾಗೆ ಕಣಕುಂಬಿ ಬಳಿ ಈಗಾಗಲೇ 5 ಕಿ.ಮೀ. ಟನಲ್ ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ ಕಳಸಾ ನೀರು ಬಳಕೆಗೆ ಕಳಸಾ, ಹಲತಾರ ಡ್ಯಾಂ ನಿರ್ಮಾಣದ ಅವಶ್ಯಕತೆ ಇದೆ. ಡ್ಯಾಂ ನಿರ್ಮಾಣದ ಜಮೀನು ಅರಣ್ಯ ‌ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ಕೇಂದ್ರ ‌ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಸಿಕ್ಕಿಲ್ಲ. ಜತೆಗೆ ಗೋವಾ ಸರ್ಕಾರ ಪರಿಸರದ ನೆಪವೊಡ್ಡಿ ಪದೆ ಪದೇ ಅಡ್ಡಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ

ಇದನ್ನೂ ಓದಿ: ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು

ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಮೋದಿ ಸರ್ಕಾರವಿದೆ. ಗೋವಾದಲ್ಲಿಯೂ ಬಿಜೆಪಿ ಸರ್ಕಾರವಿದೆ. ಕಳೆದ ಬಾರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರು. ಈ ಬಾರಿಯೂ 16 ಸಂಸದರಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಇಷ್ಟೆಲ್ಲಾ ಇದ್ದರೂ ಮಹದಾಯಿ ಯೋಜನೆ ಅನುಷ್ಠಾನಗೊಳ್ಳದಿರುವುದು ಬಿಜೆಪಿ ಪಕ್ಷದ ಬದ್ಧತೆಯನ್ನು ಹೇಳುತ್ತದೆ. ಆದರೆ ಈಗ ರಾಜಕೀಯ ಕೆಸರೆರಚಾಟ ಮಾಡುತ್ತ ಕೂರುವ ಸಮಯವಲ್ಲ. ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರದ ಮುಂದೆ ರಾಜ್ಯದ ಶಕ್ತಿ ಪ್ರದರ್ಶನವಾಗಬೇಕಿದೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

2022ರ ಡಿಸೆಂಬರ್ 29 ರಂದು ಕೇಂದ್ರ ಜಲ ಆಯೋಗ ಮಹದಾಯಿ ಯೋಜನೆ ಡಿಪಿಆರ್​ಗೆ ಅನುಮೋದನೆ ನೀಡಿದೆ. ಅನುಮೋದನೆ ನೀಡಿದರು ಮಹದಾಯಿ ಕಾಮಗಾರಿಗೆ ಟೈಗರ್ ಕಾರಿಡಾರ್ ಅನುಮತಿ ಸಿಕ್ಕಿಲ್ಲ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ ಕೆಲವು ಭಾಗ ಮಹದಾಯಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರಲಿದೆ. ಇದೇ ಭಾಗದಲ್ಲಿ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ನಡೆಯುತ್ತಿದೆ. ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ್ರೆ ಯೋಜನೆಗೆ ಮತ್ತಷ್ಟು ಅಡ್ಡಿಯಾಗುವ ಸಾಧ್ಯತೆಗಳಿವೆ. ತೀರ್ಪು ಬಂದ ಬಳಿಕ ಯೋಜನೆ ಅನುಷ್ಠಾನಕ್ಕೆ ತರಲು ಏನು ಸಮಸ್ಯೆ..? ಗೋವಾ ಸರ್ಕಾರ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಿ, ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಒಗ್ಗೂಡಿ ಹೋರಾಟ ಸಂಘಟಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ತನ್ನ ಪಾಲಿನ ₹5,300 ಕೋಟಿ ಬಿಡುಗಡೆ ಮಾಡುವ ಬದಲಿಗೆ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಿದೆ. ಕೇಂದ್ರದ ಬೇಡಿಕೆಯಂತೆ ಹಣಕಾಸಿನ ನವೀಕೃತ ಮಾಹಿತಿ, ಈವರೆಗೆ ಮಾಡಿದ ವೆಚ್ಚ, ಬಾಕಿ ವೆಚ್ಚ ಮತ್ತು ಬಾಕಿ ವೆಚ್ಚದ ಆಧಾರದ ಮೇಲೆ ಕೇಂದ್ರದಿಂದ ಪಡೆಯಬೇಕಾದ ನೆರವು ಎಷ್ಟು ಎಂಬೆಲ್ಲ ವಿವರಗಳನ್ನು ಕೇಳುತ್ತಿದೆ. ರಾಜಕೀಯ ಹೇಳಿಕೆಗಳನ್ನು ಕೊಡುತ್ತ ವಿಳಂಬ ಮಾಡದೆ ತಕ್ಷಣ ಈ ಎಲ್ಲ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಕಾಲಹರಣ ನಡೆಸದೆ, ಈವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿರುವ ₹9,713 ಕೋಟಿ ಹಾಗೂ ಕೇಂದ್ರದಿಂದ ಬರಬೇಕಿರುವ ನೆರವಿನ ಮತ್ತದ ಬಗ್ಗೆ ವಿಸ್ತೃತ ವರದಿಯನ್ನು ಕೊಟ್ಟು, ಕೇಂದ್ರದ ಮೇಲೆ ಒತ್ತಡವನ್ನು ಹೇರಿ ಆದಷ್ಟು ಶೀಘ್ರವಾಗಿ ಯೋಜನೆ ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ಕೆಇಎ ಪರೀಕ್ಷೆ ಮುಂದೂಡಿ – ಪರೀಕ್ಷಾರ್ಥಿಗಳ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *