ಐಪಿಎಲ್ ವಿಜಯೋತ್ಸವದಲ್ಲಿ ಕಾಲ್ತುಳಿತ: ಹೊಣೆ ಯಾರು?

ಪಂದ್ಯ ಪ್ರಾರಂಭವಾಗುವ ಮೊದಲೇ ಸಂಭ್ರಮಾಚರಣೆ ನಡೆಸಲು ನಿರ್ಧಾರ!!

RCB ಗೆಲುವಿನ ಸಂಭ್ರಮವು 11 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಕ್ರಿಕೆಟ್ ಎಂಬ ಆಟವನ್ನು ವ್ಯಾಪಾರೀಕರಣವನ್ನಾಗಿ ಮಾಡಿಕೊಂಡಿರುವುದು, ಅದರಲ್ಲಿ ನುಸುಳಿದ ರಾಜಕೀಯ ನಾಯಕರುಗಳು, ಐಪಿಎಲ್ ಗೆಲುವಿನಲ್ಲಿಯೂ ರಾಜಕೀಯ ಲಾಭ ಪಡೆಯಲು ಮುಗಿಬಿದ್ದ ರಾಜಕೀಯ ಪಕ್ಷಗಳು, ಜನರಲ್ಲಿ ಹುಚ್ಚು ಉನ್ಮಾದ ಸೃಷ್ಟಿಸಿದ ಟಿವಿ ಚಾನಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳು, ಸಮೂಹ ಸನ್ನಿಗೆ ಒಳಗಾದ ಯುವಜನತೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ತಮಗಿರುವ ಅಧಿಕಾರವನ್ನು ನಿಷ್ಠುರವಾಗಿ ಪರಿಪಾಲಿಸದೆ ಒತ್ತಡಗಳಿಗೆ ಮಣಿದು ಸಂಭ್ರಮಾಚರಣೆ ಮಾಡಲು ಅವಕಾಶ ಕೊಟ್ಟ ಪೊಲೀಸರು, ಭದ್ರತಾ ವೈಫಲ್ಯ, … ಹೀಗೆ ಈ ದುರಂತಕ್ಕೆ ಹಲವು ಕಾರಣಗಳನ್ನು ಬೊಟ್ಟುಮಾಡಿ ತೋರಿಸಬಹುದು. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಐಪಿಎಲ್ ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲೇ ಆರ್ ಸಿಬಿ ತಂಡದ ಗೆಲುವನ್ನು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸುವ ನಿರ್ಧಾರವಾಗಿತ್ತು!! ವಿಜಯೋತ್ಸವ

-ಸಿ. ಸಿದ್ದಯ್ಯ

ಕ್ರಿಕೆಟ್ ಜಗತ್ತಿನಲ್ಲಿ ಒಂದು ದೊಡ್ಡ ದುರಂತ ನಡೆದುಹೋಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವಿನ ಸಂಭ್ರಮಾಚರಣೆಯು ಹನ್ನೊಂದು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಐಪಿಎಲ್ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದ RCB ತಂಡವನ್ನು ಗೌರವಿಸಲು ಜೂನ್ 4ರಂದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಕ್ರೀಡಾಂಗಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಮತ್ತು ಜನರು ನೆರೆದಿದ್ದರು. ಈ ವೇಳೆ 11 ಜನರು ಅನಗತ್ಯವಾಗಿ ಸಾವನ್ನಪ್ಪಿದ್ದು ಎಲ್ಲರನ್ನೂ ಆಘಾತಗೊಳಿಸಿದೆ. ಮೃತರಲ್ಲಿ ಆರು ಪುರುಷರು ಮತ್ತು ಐವರು ಮಹಿಳೆಯರು. ಮೃತರಲ್ಲಿ ಒಂಬತ್ತು ಮಂದಿ 20 ವರ್ಷದೊಳಗಿನ ಯುವಜನತೆ. ಕಾಲ್ತುಳಿತದಲ್ಲಿ 64 ಜನರು ಗಂಭೀರವಾಗಿ ಗಾಯಗೊಂಡರು.

ಉನ್ಮಾದವೇ ವಿಜಯೋತ್ಸವಕ್ಕೆ ದಾರಿ ಮಾಡಿಕೊಟ್ಟಿತು

ಐಪಿಎಲ್ ಪಂದ್ಯಗಳಲ್ಲಿ ಆರ್ ಸಿಬಿ ಗೆದ್ದರೆ ದೇಶವೇ ಗೆದ್ದಂತೆ ಎಂದು ಬಿಂಬಿಸಲಾಯ್ತು. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಂತೂ ಆರ್ ಸಿಬಿ ನಮ್ಮದೇ ಎಂಬಂತೆ ಅದರ ಗೆಲುವನ್ನು ಬಯಸಿದರು. ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಎಲ್ಲೆಡೆ ಕೇಳಿಬಂತು. ಆರ್ ಸಿಬಿ ಫೈನಲ್ ಪ್ರವೇಶಿಸಿದ ನಂತರ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಜೂನ್ 3 ರಂದು ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಅಂತಿಮ ಪಂದ್ಯವನ್ನು ಕೋಟ್ಯಂತರ ಜನರು ವೀಕ್ಷಿಸಿದರು.

ಇದನ್ನೂ ಓದಿ: ಆಡಳಿತಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿಯಲ್ಲಿಯೇ ಸ್ಥಳಾವಕಾಶ: ಕೃಷ್ಣ ಬೈರೇಗೌಡ

ಆರ್ ಸಿಬಿ ತಂಡ ಜಯಗಳಿಸುತ್ತಿದ್ದಂತೆಯೇ ರಾಜ್ಯದಲ್ಲೆಡೆ ಸಂಭ್ರಮಾಚರಣೆಗಳು ರಾತ್ರಿಯಿಡೀ ನಡೆದವು. ರಸ್ತೆಗಿಳಿದ ಯುವಜನ ಹುಚ್ಚೆದ್ದು ಕುಣಿದಾಡಿದರು. ಯುವಜನರ ಈ ಉನ್ಮಾದದ ಲಾಭ ಪಡೆಯಲು ಸರ್ಕಾರ, ರಾಜಕೀಯ ನಾಯಕರು, ಆರ್ ಸಿಬಿ ತಂಡ, ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಈವೆಂಟ್ ಮ್ಯಾನೆಜ್ ಮೆಂಟ್ ನಡೆಸುವು ಡಿಎನ್ ಎ ಸಂಸ್ಥೆ ಮುಂದಾದವು. ವಿಧಾನಸೌಧದ ಎದುರು ಆರ್ ಸಿಬಿ ತಂಡವನ್ನು ಸನ್ಮಾನಿಸಿದರೆ ಸರ್ಕಾರದ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಕೆಲವರು ಸಲಹೆ ನೀಡಿದರು. ಅಲ್ಲಿ ಕೆಲವೇ ಗಂಟೆಗಳಲ್ಲಿ ವೇದಿಕೆ ನಿರ್ಮಾಣಗೊಂಡು ಎಲ್ಲವೂ ಸಜ್ಜಾಯಿತು.

ಕೆಎಸ್ ಸಿಎ ಅಧಿಕಾರಿಯಿಂದ 3ರ ಸಂಜೆಯೇ ಮನವಿ!!

ಜೂನ್ 3ರ ಸಂಜೆ 6 ಗಂಟೆಗೆ ತರಾತುರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶುಭೇಂದ್ ಘೋಷ್ ಅವರು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ, ಆರ್ ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಜೂನ್ 4ರಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಠಾಣೆಯ ಇನ್ ಸ್ಪೆಕ್ಟರ್ ಎ.ಕೆ.ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದರು ಎಂಬ ಅಂಶ ಪೊಲೀಸರ ಎಫ್ ಐ ಆರ್ ನಿಂದ ತಿಳಿದುಬಂದಿದೆ. ಕ್ರಿಕೆಟ್ ಸಂಸ್ಥೆಯ ಈ ಮನವಿಗೆ ಇನ್ ಸ್ಪೆಕ್ಟರ್ ಗಿರೀಶ್ ಅವರು, “ಆರ್ ಸಿಬಿ ತಂಡ ಗೆದ್ದರೆ, ಅಭಿಮಾನಿಗಳು ರಾತ್ರಿಯಿಡೀ ಸಂಭ್ರಮವನ್ನು ಆಚರಿಸುತ್ತಾರೆ, ಇದಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿರುತ್ತದೆ. ನೀವು ತಿಳಿಸಿದಂತೆ ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಜನರು ಜಮಾವಣೆಗೊಂಡು ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಲ್ಲದೆ ಸಮರ್ಪಕ ಬಂದೂಬಸ್ತ್ ವ್ಯವಸ್ಥೆಗೂ ಸಮಯಬೇಕಿದೆ” ಎಂದು ಹೇಳಿ ಅನುಮತಿ ನೀಡಲು ನಿರಾಕರಿಸಿದ್ದರು ಎಂಬ ಮಾಹಿತಿ ಎಫ್ ಐ ಆರ್ ನಲ್ಲಿದೆ.

ಪೊಲೀಸರ ಮೇಲೆ ಹೆಚ್ಚಿದ ಒತ್ತಡ

ಜೂನ್ 4ರಂದು ನಡೆಸಲು ಉದ್ದೇಶಿಸಿದ್ದ ವಿಜಯೋತ್ಸವ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು ಭದ್ರತೆ ಒದಗಿಸಬೇಕೆಂಬ ಒತ್ತಡ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ನಾಯಕರಿಂದಲೂ, ಕ್ರಿಕೆಟ್ ಸಂಸ್ಥೆಯಿಂದಲೂ ಪೊಲೀಸರ ಮೇಲೆ ಬರತೊಡಗುತ್ತದೆ. ಒತ್ತಡ ಹೆಚ್ಚಾದಾಗ ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಕೈಬಿಟ್ಟು, ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಂತಿಮ ಪಂದ್ಯ ಆರಂಭಕ್ಕೂ ಮುನ್ನ ಈ ವಿಜಯೋತ್ಸವ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿತ್ತು ಎಂಬುದನ್ನು ಗಮನಿಸಿದರೆ, ದೆಹಲಿಯಿಂದಲೂ ಈ ಒತ್ತಡ ಬಂದಿರಬಹುದು.

ತೆರೆದ ವಾಹನದಲ್ಲಿ ಮೆರವಣಿಗೆ ಕೈಬಿಟ್ಟಿದ್ದಕ್ಕೆ ಬಿಜೆಪಿ ಟೀಕೆ

ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆ ಕೈಬಿಟ್ಟ ಕ್ರಮವನ್ನು ಬಿಜೆಪಿ ಟೀಕಿಸುತ್ತದೆ. ಕಾಂಗ್ರೆಸ್ ಸರ್ಕಾರ ಅಭಿಮಾನಿಗಳ ಸಂಭ್ರಮಕ್ಕೆ ಅಡ್ಡಿ ಮಾಡುತ್ತಿದೆ ಎಂದು ಅದು ಆರೋಪಿಸಿತು. ‘ಬಿಜೆಪಿ ಕರ್ನಾಟಕ’ ಫೇಸ್ಬುಕ್ ನಲ್ಲಿ ಈ ರೀತಿ ಪೋಸ್ಟ್ ಮಾಡಲಾಗಿದೆ: “ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು Royal Challengers Bangaluru ಈ ವರ್ಷ ನನಸು ಮಾಡಿದೆ!! ಆದರೆ ತೆರೆದ ವಾಹನದಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಈ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ್.” ಎಂದು ಪೋಸ್ಟ್ ಮಾಡಿತ್ತು. ಅದರ ನಾಯಕರೂ ಸರ್ಕಾರದ ಈ ನಡೆಯನ್ನು ಟೀಕಿಸಿದರು. ಆ ಮೂಲಕ ಐಪಿಲ್ ಗೆಲುವು ಮತ್ತು ಅಭಿಮಾನಿಗಳ ಸಂಭ್ರಮದ ಲಾಭವನ್ನು ತಾನೂ ಪಡೆಯಲು ರಾಜ್ಯ ಬಿಜೆಪಿ ಯತ್ನಿಸಿತು. ಆದರೆ, ಕಾಳ್ತುಳಿತದ ನಂತರ ಇದಕ್ಕೆ ಸರ್ಕಾರವೇ ಹೊಣೆ, ಸಂಭ್ರಮದ ಮನೆಯಲ್ಲಿ ಸೂತಕ ಉಂಟಾಗಲು ನೇರ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಎಂದು ಬಿಜೆಪಿ ಕಟುವಾಗಿ ಟೀಕಿಸಿತು.

ವಿಜಯೋತ್ಸವದಲ್ಲಿ ಭಾಗಿಯಾಗಲು ಕರೆ, ನೇರ ಪ್ರಸಾರ

ಆರ್ ಸಿಬಿ ಪ್ರಾಂಚೈಸಿ ತನ್ನ ಅಧಿಕೃತ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಜೂನ್ 4ರ ಬೆಳಿಗ್ಗೆ ಕ್ರೀಡಾಂಗಣದಲ್ಲಿ ನಡೆಯುವ ವಿಜಯೋತ್ಸವದಲ್ಲಿ, ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ನಡೆಯುವ ಆಟಗಾರರ ಮೆರವಣಿಯಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಬೇಕೆಂದು ಕರೆ ನೀಡುತ್ತದೆ. ಕ್ರೀಡಾಂಗಣ ಪ್ರವೇಶಕ್ಕೆ ಉಚಿತ ಟಿಕೆಟ್ ನೀಡಲಾಗುವುದು ಎಂದೂ ಆರ್ ಸಿಬಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತದೆ. ಪೊಲೀಸ್ ಇಲಾಖೆಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ ಸಿಬಿ ಆಟಗಾರರನ್ನು ಸನ್ಮಾನಿಸುವುದಾಗಿ ಹೇಳುತ್ತದೆ. ಇದಕ್ಕೆ ಪೂರಕವಾಗಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ‘ಎಕ್ಸ್’ ಹೇಳಿಕೆಗಳು ಹೊರಬರುತ್ತವೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ ಸಿಬಿ ತಂಡವನ್ನು ಸನ್ಮಾನಿಸುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತದೆ.

ಆರ್ ಸಿಬಿ ಆಟಗಾರರ ತಂಡವು ಮಧ್ಯಾಹ್ನ 2.45 ರ ಹೊತ್ತಿಗೆ ಬೆಂಗಳೂರಿಗೆ ತಲುಪಿತು. ಡಿ.ಕೆ. ಶಿವಕುಮಾರ್ ಅವರು ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲೇ ತಂಡವನ್ನು ಎದುರುಗೊಳ್ಳುತ್ತಾರೆ ಮತ್ತು ವಿಶೇಷ ಭದ್ರತೆಯಲ್ಲಿ ಆಟಗಾರರನ್ನು ನಗರಕ್ಕೆ ಕರೆತರುತ್ತಾರೆ. ಇದರ ವಿಡಿಯೋಗಳು ಟಿವಿ ಚಾನಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತವೆ. ಈ ಉನ್ಮಾದವೇ ವಿಜಯೋತ್ಸವಕ್ಕೆ ದಾರಿ ಮಾಡಿಕೊಟ್ಟಿತು. ಇದು ಸಾಗರೋಪಾದಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯ ಸ್ಥಳಗಳಿಗೆ ಬರಲು ಪ್ರಮುಖ ಕಾರಣ.

ಕ್ರೀಡಾಂಗಣದ ಗೇಟ್ ಗಳನ್ನು ಬಂದ್ ಮಾಡಿಸಿದ್ದರು!

ರಾಜ್ಯ ಸರ್ಕಾರದ ಪರವಾಗಿ ವಿಧಾನಸೌಧದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಂಡವನ್ನು ಸನ್ಮಾನಿಸಿದರು. ವಿಧಾನಸೌಧದ ಎದುರು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಾಣಿಸಬೇಕು ಎನ್ನುವ ಕಾರಣಕ್ಕೆ ಕೆಲವರು ಒತ್ತಡ ತಂದು ಕ್ರೀಡಾಂಗಣದ ಗೇಟ್ ಗಳನ್ನು ಬಂದ್ ಮಾಡಿಸಿದ್ದರು ಎಂದು ಹೇಳಲಾಗುತ್ತಿದೆ. ಮಧ್ಯಾಹ್ನ 3 ಗಂಟೆಯ ನಂತರ ಒಂದೊಂದೇ ಗೇಟ್ ತೆರೆದು ಪ್ರವೇಶ ನೀಡಲಾಯಿತು. ಕ್ರೀಡಾಂಗಣವು 35,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ, ಆದರೆ ಕ್ರೀಡಾಂಗಣದ ಹೊರಗೆ ಸುಮಾರು ಎರಡು ಲಕ್ಷಕ್ಕೂ ಜನರು ಸೇರಿದ್ದರೆಂದು ಅಂದಾಜಿಸಲಾಗಿದೆ. ಇದರಿಂದಾಗಿ ತಳ್ಳಾಟ, ನೂಕುನುಗ್ಗಲು ಉಂಟಾಯಿತು.

ಈ ಕಾರಣದಿಂದ ಮತ್ತೆ ಗೇಟ್ ಬಂದ್ ಮಾಡಲಾಯಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು. ಕೆಲವರು ಗೇಟ್ ತಳ್ಳಿದರೆ, ಕೆಲವರು ಕಾಂಪೌಂಡ್ ಹತ್ತಿದರು. ಕೆಲವೇ ನಿಮಷಗಳ ಅಂತರದಲ್ಲಿ ಕೆಲವು ಗೇಟ್ ಗಳ ಬಳಿ ಕಾಲ್ತುಳಿತ ಸಂಭವಿಸಿತು. ಜನರು ಮತ್ತು ಅಭಿಮಾನಿಗಳ ಭಾವನೆಗಳನ್ನು ನಿರ್ಣಯಿಸುವುದು ಮತ್ತು ಅದಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡುವುದು ಸರ್ಕಾರ ಮತ್ತು ಸಂಘಟಕರ ಜವಾಬ್ದಾರಿಯಾಗಿದೆ. ಆದರೆ, ಕೆಲವು ಗಂಟೆಗಳ ಕಾಲ ತಮಗೆ ಪ್ರಥಮ ಚಿಕಿತ್ಸೆ ಕೂಡ ಲಭ್ಯವಿರಲಿಲ್ಲ ಎಂದು ಸಂತ್ರಸ್ತರು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯು ಅವರಿಗೆ ಮೂಲಭೂತ ಸೌಲಭ್ಯಗಳು ಮತ್ತು ಅಗತ್ಯವಾದಷ್ಟು ಭದ್ರತೆಯನ್ನು ಒದಗಿಸುವಲ್ಲಿ ವಿಫಲವಾಗಿರುವುದು ಇಲ್ಲಿ ಎದ್ದುಕಾಣುತ್ತದೆ.

ಹೊರಗೆ ಸಾವು ಬದುಕಿನ ಹೋರಾಟ: ಒಳಗೆ ವಿಜಯೋತ್ಸವ!!

ಗೆಲುವಿನ ಸಂಭ್ರಮದಲ್ಲಿ ಕ್ರೀಡಾಂಗಣದ ಹೊರೆಗೆ, ಕೆಲವರು ಜೀವ ಕಳೆದುಕೊಂಡು, ಸಹಸ್ರಾರು ಜನರು ಉಸಿರುಗಟ್ಟಿದ ಸ್ಥಿತಿಯಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಸಮಯದಲ್ಲಿಯೂ, ಕ್ರೀಡಾಂಗಣದ ಒಳಗೆ ವಿಜಯೋತ್ಸದ ಆಚರಣೆ ನಡೆಯುತ್ತಲೇ ಇತ್ತು. ಸಂಘಟಕರು, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ​​ಕೂಡ ಆಚರಣೆಯತ್ತ ಗಮನಹರಿಸಿತ್ತು. ಆಂಬ್ಯುಲೆನ್ಸ್‌ಗಳು ಹೊರಗೆ ಸೈರನ್ ಮೊಳಗಿಸುತ್ತಿದ್ದಾಗ, ಸಂಘಟಕರು ಒಳಗೆ ಪ್ರೇಕ್ಷಕರೊಂದಿಗೆ ಸಂಭ್ರಮದಿಂದ ನೃತ್ಯ ಮಾಡುತ್ತಿದ್ದರು.

ಕ್ರೀಡಾಂಗಣದೊಳಗಿನ ಈ ಸಂಭ್ರಮದ ಹೆಜ್ಜೆಗಳು ಅಸಭ್ಯ ದೃಶ್ಯವಾಯಿತು. ವಿರಾಟ್ ಕೊಹ್ಲಿ ಮತ್ತು ಅವರ ತಂಡವು ಕಿರೀಟದೊಂದಿಗೆ ಮೈದಾನವನ್ನು ಸುತ್ತುವರೆದಾಗ, ಹೊರಗೆ ಅಭಿಮಾನಿಗಳು ತಮ್ಮ ಜೀವಕ್ಕಾಗಿ ಹೋರಾಡುತ್ತಿದ್ದರು. ಹೊರಗೆ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡುತ್ತಿದ್ದರು. ಕ್ರೀಡಾಂಗಣದೊಳಗಿನ ಯಾರಿಗೂ ಸಹ ಹೊರಗಿನ ದುರಂತದ ಬಗ್ಗೆ ತಿಳಿದಿರಲಿಲ್ಲ ಎಂದು ನಂಬಲಾಗದು. ಒಳಗಿದ್ದ ನಮಗೆ ಹೊರಗೆ ಏನಾಗುತ್ತಿದೆ ಎಂಬುದೇ ತಿಳಿದಿರಲಿಲ್ಲ ಎಂದು ಕ್ರೀಡಾಂಗಣದ ಒಳಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಕ್ರೀಡಾಭಿಮಾನಿಯೊಬ್ಬರು ಹೇಳುತ್ತಾರೆ. ಏನೇ ಇರಲಿ, ದುರಂತದ ಹೊರತಾಗಿಯೂ ಕ್ರೀಡಾಂಗಣದಲ್ಲಿ ಆಚರಣೆಗಳು ನಡೆಯಬಾರದಿತ್ತು.

ಹಲವು ಅಧಿಕಾರಿಗಳ ಮೇಲೆ ಕ್ರಮ

ಈ ಘಟನೆ ನಡೆದ ನಂತರ ಜನರ ಅಕ್ರೋಶಗಳಿಂದ ಬೆಚ್ಚಿ ಬಿದ್ದಿರುವ ರಾಜ್ಯ ಸರ್ಕಾರ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರನ್ನು ಹುದ್ದೆಯಿಂದ ಕೈಬಿಟ್ಟರು. ನಗರ ಪೊಲೀಸ್ ಆಯುಕ್ತರು  ಸೇರಿದಂತೆ ಕೆಲವು ಪ್ರಮುಖ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಗುಪ್ತಚರ ಮುಖ್ಯಸ್ಥರ ಜೊತೆಗೆ ಹಲವಾರು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. RCB, ರಾಜ್ಯ ಕ್ರಿಕೆಟ್ ಸಂಘ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ವಿರುದ್ಧ FIR ದಾಖಲಿಸಲಾಗಿದೆ ಮತ್ತು ಕೆಲವರನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.

ಕಾಲ್ತುಳಿತದ ದೃಶ್ಯಗಳನ್ನು ನೋಡಿದರೆ, ನಿರ್ವಹಣೆ, ಭದ್ರತಾ ವೈಫಲ್ಯಗಳು ಮತ್ತು ಕಣ್ಗಾವಲು ಕೊರತೆ ಎದ್ದು ಕಾಣುತ್ತಿದೆ. ಘಟನೆಯ ಗಂಭೀರತೆಯಿಂದಾಗಿ, ರಾಜ್ಯ ಹೈಕೋರ್ಟ್ ಕೂಡ ಇದನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ ಘಟನೆ ನಡೆದ ಮರುದಿನವೇ ತಕ್ಷಣದ ತನಿಖೆಯನ್ನು ಪ್ರಾರಂಭಿಸಿದೆ. ಎತ್ತಲಾದ ಪ್ರಶ್ನೆಗಳು ಮೂಲತಃ ಕಾರ್ಯಕ್ರಮ ನಿರ್ವಹಣೆಯಲ್ಲಿನ ನ್ಯೂನತೆಗಳನ್ನು ದೃಢಪಡಿಸುತ್ತಿವೆ. ರಾಜ್ಯ ಸರ್ಕಾರ ಅವುಗಳಲ್ಲಿ ಕೆಲವನ್ನು ಒಪ್ಪಿಕೊಂಡಿದೆ. ನ್ಯಾಯಾಲಯವು ಈ ತಿಂಗಳ 10 ರೊಳಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿತು.

ಸಂಪೂರ್ಣವಾಗಿ ಒಂದು ವಾಣಿಜ್ಯ ಕ್ರೀಡೆ

ನವ ಉದಾರವಾದಿ ನೀತಿಗಳ ಪರಿಣಾಮವಾಗಿ ಐಪಿಎಲ್ ಬಂದಿತು. ಇದು ಸಂಪೂರ್ಣವಾಗಿ ಒಂದು ವಾಣಿಜ್ಯ ಕ್ರೀಡೆ. ಇದರಲ್ಲಿ ಪ್ರಾಯೋಜಕರು ಮತ್ತು ದೈತ್ಯ ಕಂಪನಿಗಳ ಹಸ್ತಕ್ಷೇಪಕ್ಕೆ ಮಿತಿಯಿಲ್ಲ. ತಮ್ಮ ಆಯ್ಕೆಯ ಆಟಗಾರರನ್ನು ಖರೀದಿಸಿ ತಂಡಗಳನ್ನು ರಚಿಸಿ, ಅವರೊಂದಿಗೆ ಆಟವಾಡಿಸುವುದು ಮತ್ತು ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ಮಾಡುವುದು ಜೂಜಾಟವನ್ನು ನೆನಪಿಸುತ್ತದೆ. ಇಲ್ಲಿ ನೀತಿಶಾಸ್ತ್ರದ ನಿಯಮಗಳು ಮತ್ತು ಕ್ರೀಡಾ ಮನೋಭಾವವು ಗೋಚರಿಸುವುದಿಲ್ಲ. ಗೋಚರಿಸುವುದು ವ್ಯಾಪಾರ, ಲಾಭ ಮತ್ತು ಜೂಜಾಟ ಮಾತ್ರ. ಐಪಿಎಲ್ ಪಂದ್ಯಗಳಿಗೆ ಒದಗಿಸಲಾದ ಪ್ರಚಾರ ಅಷ್ಟೆ ಅಲ್ಲ. ಯುವಕರು ಅದರತ್ತ ಆಕರ್ಷಿತರಾಗುತ್ತಾರೆ. ಕಂಪನಿಗಳು ಅವರ ಭಾವನೆಗಳನ್ನು ನಗದು ಮಾಡಿಕೊಳ್ಳುತ್ತಿವೆ. ಚಾಂಪಿಯನ್‌ಶಿಪ್ ಗೆದ್ದ ಆರ್‌ಸಿಬಿ ತಂಡವನ್ನು ತಕ್ಷಣವೇ ಗೌರವಿಸುವ ಮತ್ತು ವಿಜಯೋತ್ಸವವನ್ನು ಆಯೋಜಿಸುವ ಗುರಿಗೆ ಆ ಪ್ರವೃತ್ತಿಯೇ ಕಾರಣ. ಈ ಆತುರ ಕನಿಷ್ಠ ವ್ಯವಸ್ಥೆಗಳು ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ. ಗೋಚರಿಸುವ ಏಕೈಕ ವಿಷಯವೆಂದರೆ ಉನ್ಮಾದ ಇದ್ದಾಗಲೇ ವಿಜಯೋತ್ಸವದ ಹೆಸರಿನಲ್ಲಿ ಒಂದಷ್ಟು ಹಣಗಳಿಸುವ ಧಾವಂತ.

ದುರಂತಕ್ಕೆ ಹೊಣೆಗಾರರು ಯಾರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಸಾವುಗಳಿಗೆ ಈವೆಂಟ್ ಮ್ಯಾನೇಜ್‌ಮೆಂಟ್, ಆರ್‌ಸಿಬಿ ಮತ್ತು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು. ಹೊಣೆಗಾರರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಈ ದುರಂತವು ಒಂದು ಪಾಠವಾಗಬೇಕು. ಅಪರಾಧಿಗಳ ವಿರುದ್ಧ ವಿವರವಾದ ತನಿಖೆ ಮತ್ತು ಅನುಕರಣೀಯ ಕ್ರಮ ಇರಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು ರೂಪಿಸಬೇಕು ಮತ್ತು ಜಾರಿಗೊಳಿಸಬೇಕು. ಆಚರಣೆಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸದೆ, ಕಾಲ್ತುಳಿತಕ್ಕೆ ಜನರನ್ನು ಸಾಯಲು ಬಿಟ್ಟವರು ಕ್ಷಮೆಯಾಚಿಸಬೇಕು ಮತ್ತು ಅದಕ್ಕೆ ಉತ್ತರಿಸಬೇಕು.  ಇಂತಹ ಆಚರಣೆಗಳಲ್ಲಿ ಭಾಗವಹಿಸುವವರ ಜೀವ ಕಳೆದು ಹೋಗದಿರಲು, ಆಚರಣೆಗಳು ಸುರಕ್ಷಿತವಾಗಿರಬೇಕು. ಇಲ್ಲದಿದ್ದರೆ, ಮಾನವ ನಿರ್ಮಿತ ದುರಂತಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ; ವಿಜಯೋತ್ಸವ ಮೆರವಣಿಗೆಗಳು ಕಣ್ಣೀರಿನ ಮೆರವಣಿಗೆಗಳಾಗಿ ಬದಲಾಗುತ್ತವೆ. ಕೊನೆಯದಾಗಿ, ಆರ್ ಸಿಬಿ ತಂಡವನ್ನು ನಿಜವಾಗಿಯೂ ಯಾರು ಗೌರವಿಸಲು ಬಯಸಿದ್ದರು ಎಂಬುದು ನಮಗೀಗ ತಿಳಿಯಬೇಕಿದೆ.

ಗೆಲ್ಲುವ ಮೊದಲೇ ಸಂಭ್ರಮಾಚರಣೆ ನಿರ್ಧಾರವಾಗಿತ್ತು!!

ಆರ್ ಸಿಬಿ ತಂಡದ ಗೆಲುವಿಗೆ ಮೊದಲೇ ಬೆಂಗಳೂರಿನಲ್ಲಿ ಗೆಲುವಿನ ಸಂಭ್ರಮಾಚರಣೆ ನಿರ್ಧಾರವಾಗಿತ್ತೇ? ಹೌದು ಎನ್ನುತ್ತದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐಆರ್ ವರದಿ.  ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಅಂತಿಮ ಪಂದ್ಯದ ಟಾಸ್ ಪ್ರಕ್ರಿಯೆ ಆರಂಭವಾಗುವ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂಬ ಅಂಶ ಬಹಿರಂಗವಾಗಿದೆ. ಈ ನಿರ್ಧಾರದ ಬೆನ್ನಲ್ಲೆ ಜೂನ್ 3ರ ಸಂಜೆ 6 ಗಂಟೆಗೆ ತರಾತುರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶುಭೇಂದ್ ಘೋಷ್ ಅವರು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ, ಆರ್ ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ಜೂನ್ 4ರಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಠಾಣೆಯ ಇನ್ ಸ್ಪೆಕ್ಟರ್ ಎ.ಕೆ.ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದರು ಎಂಬ ಅಂಶ ಪೊಲೀಸರ ಎಫ್ ಐ ಆರ್ ನಿಂದ ತಿಳಿದುಬಂದಿದೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಕೆಲವರು ಇದನ್ನು ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ.

ಇದನ್ನೂ ನೋಡಿ: ವಚನಾನುಭವ 29| ಜೀವನದಲ್ಲಿ ಸಜ್ಜನವೇ ಮಜ್ಜನ Janashakthi Media

Donate Janashakthi Media

Leave a Reply

Your email address will not be published. Required fields are marked *