ಫೆ. 8- 9 ರಂದು ಎಂಪಿಗಳ ಮನೆಗಳ ಮುಂದೆ ಪ್ರತಿಭಟನೆ; ಮಾರ್ಚ್ 5ರಿಂದ ಸತತ ಪ್ರತಿಭಟನೆ
ದಿಲ್ಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ಜನವರಿ 24ರಂದು ನಡೆದ ಸಭೆಯ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕೃಷಿ ಮಾರುಕಟ್ಟೆ, ಕನಿಷ್ಠ ಬೆಂಬಲ ಬೆಲೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟನ್ನು (ಎನ್ಪಿಎಫ್ಎಎಂ) ರದ್ದುಗೊಳಿಸಬೇಕು ಮತ್ತು ಒಂದು ಬಾರಿಯ ಸಾಲ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತತ ಚಳುವಳಿಗಳನ್ನು ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ 12 ರಾಜ್ಯಗಳ 73 ರೈತ ಸಂಘಟನೆಗಳ 165 ಪ್ರತಿನಿಧಿಗಳು ಭಾಗವಹಿಸಿದ್ದರು. ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಹಾನ್, ರಾಕೇಶ್ ಟಿಕಾಯತ್, ರೇವುಲಾ ವೆಂಕಯ್ಯ, ಸತ್ಯವಾನ್ ಮತ್ತು ಡಾ. ಸುನೀಲಮ್ರವರಿದ್ದ ಅಧ್ಯಕ್ಷ ಮಂಡಳಿಯು ಸಭೆಯನ್ನು ನಿರ್ವಹಿಸಿತು.
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಹೊಸ ಚೌಕಟ್ಟು ಕೃಷಿ ಮಾರುಕಟ್ಟೆಗಳ ಮೇಲೆ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಶಾಸನಸಭೆಗಳ ಅಧಿಕಾರವನ್ನು ಮೀರಿ ಹೋಗುತ್ತದೆ ಎಂಬ ತಮ್ಮ ಟೀಕೆಯನ್ನು ಪುನರುಚ್ಛರಿಸಿದರು. ಹೊಸ ಕರಡು ಚೌಕಟ್ಟು ರದ್ದಾದ ಮೂರು ಕೃಷಿ ಕಾನೂನುಗಳನ್ನು ಮಾರುವೇಷದಲ್ಲಿ ಮರಳಿ ತರುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ರೈತ ಸಂಘಗಳು ಫೆಬ್ರವರಿ 8 ಮತ್ತು 9 ರಂದು ಸಂಸತ್ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿ ಹೊಸ ಚೌಕಟ್ಟಿನ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಕೇಳುವ ಜ್ಞಾಪಕ ಪತ್ರವನ್ನು ಸಲ್ಲಿಸಲಿವೆ ಎಂದು ಹೇಳಿದರು.
“ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಮಾರ್ಚ್ 5 ರಿಂದ ರಾಜ್ಯ ರಾಜಧಾನಿಗಳು, ಜಿಲ್ಲೆಗಳು ಮತ್ತು ಉಪವಿಭಾಗಗಳ ಮಟ್ಟದಲ್ಲಿ ಶಾಶ್ವತ ಆಂದೋಲನಗಳನ್ನು ಸ್ಥಾಪಿಸುತ್ತೇವೆ ಮತ್ತು ರಾಜ್ಯ ವಿಧಾನಸಭೆಗಳು ಚೌಕಟ್ಟಿನ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಬೇಕೆAದು ಮತ್ತು ಅದನ್ನು ಜಾರಿಗೆ ತರದಂತೆ ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.
ಎಂಎಸ್ಪಿ, ಘೋಷಣೆ, ಸರ್ಕಾರಿ ಖರೀದಿ, ಆಹಾರ ದಾಸ್ತಾನಿನ ಪ್ರಸ್ತಾಪವೇ ಇಲ್ಲ
ಈ ನೀತಿಯನ್ನು ಸರ್ಕಾರಿ ಮಂಡಿಗಳ ಮೇಲಿನ ಒಂದು ದಾಳಿ ಎಂದು ರೈತ ಮುಖಂಡರು ೊಕ್ಕೊರಲಿನಿಂದ ಖಂಡಿಸಿರುವುದಾಗಿ ಎಸ್ಕೆಎಂ ಹೇಳಿಕೆ ತಿಳಿಸಿದೆ. ಕೃಷಿ ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಸಂಸ್ಕರಣಾ ಕಾರ್ಪೊರೇಟ್ ಉದ್ಯಮದಲ್ಲಿ ಬಹುರಾಷ್ಟಿçÃಯ ಕಂಪನಿಗಳು ಮತ್ತು ಕಾರ್ಪೊರೇಟ್ ಬೆಳವಣಿಗೆಗೆ ಸಹಾಯ ಮಾಡಲು ಅವುಗಳನ್ನು ಖಾಸಗೀಕರಣಗೊಳಿಸಲು ಈ ದಾಳಿ ನಡೆಸಲಾಗುತ್ತಿದೆ. ಕೃಷಿಕ ಉತ್ಪನ್ನ ಸಂಘಟನೆ(ಎಫ್ಪಿಒ)ಗಳು ಮತ್ತು ಇಲೆಕ್ಟಾçನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ಗಳ ಮೂಲಕ ಸ್ಥಳೀಯ ಗ್ರಾಮೀಣ ಮಂಡಿಗಳಿಗೆ ಲಗ್ಗೆ ಹಾಕುತ್ತದೆ ಮತ್ತು ಎಫ್ಪಿಒಗಳು, ಸಹಕಾರಿಗಳು ಮತ್ತು ಸ್ವಸಹಾಯ ಗುಂಪು(ಎಸ್ಹೆಚ್ಜಿ)ಗಳ ಮೂಲಕ ಕಾಂಟ್ರಾಕ್ಟ್ ಕೃಷಿಯನ್ನು ಜಾರಿಗೊಳಿಸುತ್ತದೆ, ಈ ಮೂಲಕ ಆಹಾರ ಸಂಸ್ಕರಣಾ ಮೌಲ್ಯವರ್ಧಿತ ಸರಪಳಿಗಳಿಗೆ ಅಗ್ಗದ ಆಹಾರ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿಯನ್ನು ಫ್ಯೂಚರ್ ಟ್ರೇಡ್ ಮತ್ತು ಷೇರು ಮಾರುಕಟ್ಟೆಯೊಂದಿಗೆ ಜೋಡಿಸುತ್ತದೆ. ಇವೆಲ್ಲವನ್ನು ಡಬ್ಲ್ಯುಟಿಒ ಮತ್ತು ವಿಶ್ವಬ್ಯಾಂಕ್ ಹೇಳಿದ ಪ್ರಕಾರ ಮಾಡಲಾಗುತ್ತಿದೆ.
ಈ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಘೋಷಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ, ಸರ್ಕಾರಿ ಸಂಗ್ರಹಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಗೆ ಆಹಾರ ದಾಸ್ತಾನು ಬಗ್ಗೆ ಕುರಿತೂ ಇದರಲ್ಲಿ ಏನೂ ಉಲ್ಲೇಖವಿಲ್ಲ ಎಂಬ ಸಂಗತಿಯತ್ತ ಎಸ್ಕೆಎಂ ಹೇಳಿಕೆ ಗಮನ ಸೆಳೆದಿದೆ.
ಈ ಕರಡು ನೀತಿ ಚೌಕಟ್ಟು ಮುಖ್ಯವಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಸಾಲ ಸೌಲಭ್ಯಗಳನ್ನು ಸುಧಾರಿಸುವುದು ಮುಂತಾದ ರೈತರ ಪ್ರಮುಖ ಬೇಡಿಕೆಗಳನ್ನು ನಿರ್ಲಕ್ಷಿಸಿದೆ, ಬದಲಾಗಿ, ಇದು ರಾಜ್ಯ ಬೆಂಬಲಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಕಿತ್ತುಹಾಕುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ, ಇದರಿಂದಾಗಿ ಸಣ್ಣ ಮತ್ತು ಮಧ್ಯಮ ರೈತರನ್ನು ಖಾಸಗಿ ವ್ಯಾಪಾರೀ ದುಷ್ಟಕೂಟಗಳ ಶೋಷಣೆಗೆ ಗುರಿ ಮಾಡುತ್ತದೆ ಎಂಬ ಕಾರಣಗಳಿಗಾಗಿ ರೈತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸುಧಾರಣೆಗಳು ಎಂಬುದು ಕಾರ್ಪೊರೇಟ್-ಸ್ನೇಹೀ ಕ್ರಮಗಳು, ಇದರಿಂದ ಗಮನಾರ್ಹ ಪ್ರಯೋಜನವಾಗುವುದು ಈಗಾಗಲೇ ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆ ಮಾಡಿರುವ ರಿಲಯನ್ಸ್ ಮತ್ತು ಅದಾನಿಯಂತಹ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಆಹಾರ ಭದ್ರತೆಗೆ ಅಪಾಯ
ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಲು ಕರಡಿನಲ್ಲಿ ನಿಯಂತ್ರಕ ಸುರಕ್ಷತಾ ಕ್ರಮಗಳ ಕೊರತೆಯಿದೆ ಇದರಿಂದಾಗಿ ಕಾರ್ಪೊರೇಟ್ ಶೋಷಣೆ ಹೆಚ್ಚುತ್ತದೆ ಮತ್ತು ರೈತರ ಸಾಲ ಮತ್ತು ಆತ್ಮಹತ್ಯೆಗಳ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. ಕೃಷಿಕ ಉತ್ಪಾದಕ ಸಂಸ್ಥೆಗಳ (ಎಫ್ಪಿಒಗಳ) ಮೂಲಕ ಕಾರ್ಪೊರೇಟೀಕರಣ ಮತ್ತು ಷೇರು ಮಾರುಕಟ್ಟೆಗಳಿಗೆ ಲಗತ್ತಿಸುವುದಕ್ಕೆ ಒತ್ತು ನೀಡುವುದರಿಂದ ಕಾರ್ಪೊರೇಟ್ ನಿಯಂತ್ರಣ ಮತ್ತಷ್ಟು ಬಲಗೊಳ್ಳುತ್ತದೆ, ಇದು ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದೂ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಇದಲ್ಲದೆ, ಏಕರೂಪದ ಸುಧಾರಣೆಗಳನ್ನು ಜಾರಿಗೆ ತರಲು “ಸಬಲೀಕೃತ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ”ಯ ಹೆಸರಿನಲ್ಲಿ ಈ ಕರಡು ಅಧಿಕಾರದ ಕೇಂದ್ರೀಕರಣ ಮಾಡುತ್ತದೆ, ಇದು ರಾಜ್ಯಗಳ ಸ್ವಾಯತ್ತತೆಯನ್ನು ಮತ್ತು ಸಹಕಾರಿ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ಸರ್ವಸಾಮಾನ್ಯ ವಿಷಯಗಳ ಕುರಿತು ಜಂಟಿ ಹೋರಾಟ ನಡೆಸಲು ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯಸೂಚಿಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಏಕತಾದ ಮುಖಂಡರಾದ ಜೋಗಿಂದರ್ ಸಿಂಗ್ ಉಗ್ರಹಾನ್ ಹೇಳಿದರು. ಈ ಕುರಿತು ಫೆಬ್ರುವರಿ 12 ರಂದು ಚಂಡೀಗಡದ ಕಿಸಾನ್ ಭವನದಲ್ಲಿ ಒಂದು ಸಭೆ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.