ಶಾಲಾ ಪೂರ್ವ ಶಿಕ್ಷಣದ ಅಗತ್ಯತೆ, ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಗೆ ಆಗ್ರಹ

ಬೆಂಗಳೂರು: ರಾಜ್ಯದ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ 4-6 ವರ್ಷಗಳ ಒಳಗಿನ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣವನ್ನು ಪ್ರಾರಂಭಿಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದ್ದು, ಶಾಲಾ ಪೂರ್ವ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿಯವರೆಗೆ ಇದನ್ನು ಎಲ್ಲಿಯೂ ಜಾರಿಗೊಳಿಸಬಾರದು ಎಂದು ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ” ಆಂದೋಲನ ಸಮಿತಿಯು ಸರ್ಕಾರಕ್ಕೆ ಆಗ್ರಹಿಸಿದೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಪತ್ರಕರ್ತೆ ವಿಜಯಮ್ಮ ಮಾತನಾಡಿ,  ಸರ್ಕಾರದ ಈ ನಿರ್ಧಾರ ಅಂಗನವಾಡಿಗಳ ಕತ್ತು ಹಿಸಕುವ ಕೆಲಸವೆಂದು ಆರೋಪಿಸಿದರು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಚರ್ಚಿಸದೆ ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಈ ಸುತ್ತೋಲೆಗಳಿಂದ ಆಗಿರುವ ಗೊಂದಲವನ್ನು ನಿವಾರಿಸಲು, ಎರಡೂ ಇಲಾಖೆಗಳು ಪರಸ್ಪರ ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ, ಎರಡೂ ಇಲಾಖೆಗಳು ನಡೆಸುತ್ತಿರುವ ಅಲ್ಲಿಯ ತನಕ 11-6- ರ ಮತ್ತು 19-5-2024 ರ ಆದೇಶಗಳನ್ನು ತಡೆಹಿಡಿಯಬೇಕು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ 7 ಜಿಲ್ಲೆಗಳ ವ್ಯಾಪ್ತಿಯನ್ನೂ ಒಳಗೊಂಡು ರಾಜ್ಯದ ಎಲ್ಲಿಯೂ ಜಾರಿಯಾಗಬಾರದು ಎಂದು ಆಗ್ರಹಿಸಿದರು.

ಅಂಗನವಾಡಿ ಕೆಂದ್ರಗಳನ್ನು ಬಲಪಡಿಸಿ, ಅಲ್ಲಿರುವ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ಪಿಯುಸಿ, ಪದವಿ, ಸ್ನಾತಕ್ಕೋತ್ತರ ಅರ್ಹತೆ ಇರುವ ಸಾಕಷ್ಟು ಜನ ಕಾರ್ಯಕರ್ತೆಯರು ಇದ್ದಾರೆ. ಮೇಲಾಗಿ ಮಕ್ಕಳನ್ನು ಲಾಲನೆ ಪಾಲನೆ ಮಾಡುವಲ್ಲಿ 20 ರಿಂದ 30 ವರ್ಷದ ಅನುಭವ ಅವರಿಗೆ ಇದೆ. ಹಾಗಾಗಿ ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ- ಯುಕೆಜಿ ಆರಂಭವಾಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌ಎಸ್‌ ಸುನಂದ ಮಾತನಾಡಿ,  ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ 4 ರಿಂದ 6 ವರ್ಷದ ಮಕ್ಕಳಿಗೆ ಎಲ್.ಕೆ.ಜಿ-ಯುಕೆಜಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಸುತ್ತೋಲೆ ಹೊರಡಿಸಿದ್ದು, ಇದುವರೆಗೂ ರಾಜ್ಯದಲ್ಲಿ 2524 ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸರ್ಕಾರದ ಐಸಿಡಿಎಸ್ ಯೋಜನೆಯಿಂದ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ. ಆದ್ದರಿಂದಲೇ ಕಳೆದ ಜೂನ್ 3 ರಿಂದ ರಾಜ್ಯವ್ಯಾಪಿ ಹೋರಾಟಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ ಜೂನ್19 ಮತ್ತು20 ರಂದು ಭೃಹತ್ ಹೋರಾಟ ನಡೆದಿದೆ. ಶಿಕ್ಷಣ ಇಲಾಖೆಯವರ ವಾದ ಏನೆಂದರೆ, ಬಡವರ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು, ಒಂದನೇ ತರಗತಿಗೆ ಬರುವ ಮಗು ಶಾಲಾ ವ್ಯವಸ್ಥೆಗೆ ಸಿದ್ಧವಾಗಿರಬೇಕು ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಬೇಕು, ಆದ್ದರಿಂದ ಮಕ್ಕಳು 4 ವರ್ಷದಿಂದ ಮೇಲ್ಪಟ್ಟವರಿರುವಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಯಾವುದೇ ಮಗುವಿನ 40% ದೈಹಿಕ ಬೆಳವಣಿಗೆ 85% ಮಾನಸಿಕ ಬೆಳವಣಿಗೆಯಾಗುವ ಸಂದರ್ಭದಲ್ಲಿ ಲಾಲನೆ-ಪಾಲನೆ, ಪೋಷಣೆ ಮತ್ತು ಶಿಕ್ಷಣವನ್ನು ಕೊಡುವ ಸಲುವಾಗಿಯೇ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ, ಅಂಗನವಾಡಿ ಕೇಂದ್ರದ ಪರಿಕಲ್ಪನೆ ಕೂಡ ಬಂದಿರುವುದು. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಮೇಲಿನ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3-4 ವರ್ಷದ ಮಕ್ಕಳು ಮಾತ್ರವೇ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. 49 ವರ್ಷಗಳಿಂದ ಸರ್ಕಾರದ ಮಾರ್ಗದರ್ಶನದಲ್ಲಿಯೇ ಐಸಿಡಿಎಸ್ ಮೂಲಕ ನಡೆಸಲಾಗುತ್ತಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಎಲ್ಲಾ ಅಂಶಗಳನ್ನು ಒಳಗೊಂಡ ಶಾಲಾಪೂರ್ವ ಶಿಕ್ಷಣಕ್ಕೆ ಗಂಭೀರವಾಗಿ ಧಕ್ಕೆಯಾಗುತ್ತದೆ. ಈ ಯೋಜನೆ ಯಾವಾಗ ಬೇಕಾದರೂ ಕುಸಿದು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆಎಸ್‌ ವಿಮಲಾ ಮಾತನಾಡಿ,  ಅಂಗನವಾಡಿ ಕೇಂದ್ರದ ಹೆಸರು ‘ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ’ ಎಂದು ಪರಿವರ್ತಿಸಬೇಕು ಎಂದರು. ಪಿಯುಸಿ ಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿರುವ ಮತ್ತು ಸರ್ಕಾರಿ ಶಾಲೆಯ ಅವರಣದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಳ್ಳುವುದು. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡಬೇಕು.  ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಶೂಗಳನ್ನು ನೀಡುವುದು. ಅಂಗನವಾಡಿ ಕಾರ್ಯಕರ್ತರನ್ನು “ಶಿಕ್ಷಕಿ” ಎಂದು ಹೆಸರಿಸಿ ಪದನಾಮ ಬದಲಿಸಬೇಕು.  ಐಸಿಡಿಎಸ್‌ ಯೋಜನೆಗೆ ಅನುದಾನವನ್ನು ನಿರಂತರವಾಗಿ ಹೆಚ್ಚಳ ಮಾಡುವುದು. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಈ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡಬೇಕು ಎಂದು ಆಗ್ರಹಿಸಿದರು.

ಸಂಶೋಧನಾ ವಿದ್ಯಾರ್ಥಿ ಎಸ್‌ ಆರ್‌ ಶಂಶಾಂಕ್‌ ಮಾತನಾಡಿ, ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡುವ ಬಗ್ಗೆ ಕಾನೂನು ರೂಪಿಸಬೇಕು.  ಅಂಗನವಾಡಿ ಕಾರ್ಯಕರ್ತೆಯರನ್ನು ನಿರಂತರವಾಗಿ ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು. ಚುನಾವಣಾ ಕೆಲಸಗಳಿಗೆ ನಿವೃತ್ತ ಅಂಗನವಾಡಿ ನೌಕರರನ್ನು ಬಳಸಿಕೊಳ್ಳುವ ಯೋಚನೆ ಮಾಡಬೇಕು ಎಂದು ಆಗ್ರಹಿಸಿದರು.

ಐಸಿಡಿಎಸ್‌ ಯೋಜನೆ ಉಳಿಸಿ, ಮಕ್ಕಳನ್ನು ರಕ್ಷಿಸಿ ಎಂಬ ಬೇಡಿಕೆ ಸೇರಿದಂತೆ 12 ಶಿಫಾರಸ್ಸುಗಳುಳ್ಳ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಸರ್ಕಾರ ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್‌ ಎಚ್ಚರಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *