ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ : ಭಾಗ 1

ನಾ ದಿವಾಕರ

ರಾಜ್ಯ ಸಾರಿಗೆ ಬಸ್ಸುಗಳು ಎಂದೂ ಭರ್ತಿಯಾದದ್ದೇ ಇಲ್ಲ, ಎಂದೂ ಸಹ ತುಂಬಿ ತುಳುಕುವಂತೆ ಸಂಚರಿಸಿದ್ದೇ ಇಲ್ಲ, ಎಂದಿಗೂ ಫುಟ್‌ಬೋರ್ಡ್ಗಳ ಮೇಲೆ ಪ್ರಯಾಣಿಕರು ಸಂಚರಿಸಿದ್ದೇ ಇಲ್ಲ, ಎಂದೂ ಸಹ ಬಸ್ಸುಗಳಲ್ಲಿ ಮಹಿಳೆಯರ ನಡುವೆ ಜಗಳ-ಕದನ-ಬೈಗುಳಗಳ ಮೇಳ ನಡೆದೇ ಇಲ್ಲ,  ಎಂದಿಗೂ ಜನರು ಕಿಟಕಿಗಳ ಮೂಲಕ ತೂರಿಹೊಗಿ ತಮ್ಮ ಆಸನ ಭದ್ರಪಡಿಸಿಕೊಂಡಿದ್ದೇ ಇಲ್ಲ ಎನ್ನುವ ರೀತಿಯಲ್ಲಿ ಈ ಎಲ್ಲ ರೀತಿಯ ಪ್ರಸಂಗಗಳನ್ನೂ ರೋಚಕವಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್‌ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳು ಹೊಸ ಸರ್ಕಾರದ ಶಕ್ತಿ ಯೋಜನೆಯʼ ದುಷ್ಪರಿಣಾಮ ʼ ಎನ್ನುವ ರೀತಿಯಲ್ಲಿ ಈ ಪ್ರಸಂಗಗಳನ್ನು ರೋಚಕವಾಗಿ ಬಿತ್ತರಿಸಲಾರಂಭಿಸಿದ್ದು ನಮ್ಮ ಸಾಮಾಜಿಕ ಮಾಲಿನ್ಯದ ಸಂಕೇತವಾಗಿಯೇ ಕಾಣುತ್ತದೆ.

ಸ್ವತಂತ್ರ ಭಾರತ ಆಧುನಿಕತೆಯ ಹಾದಿಯಲ್ಲಿ ಎಷ್ಟೇ ಎತ್ತರದ ಶಿಖರಗಳನ್ನು ತಲುಪಿದ್ದರೂ ತಳಮಟ್ಟದ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ತನ್ನ ಮೂಲ ಬೇರುಗಳಲ್ಲಡಗಿರುವ ಪಿತೃಪ್ರಧಾನತೆ ಹಾಗೂ ಊಳಿಗಮಾನ್ಯ ಗುಣಲಕ್ಷಣಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾರತ ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಎರಡು ಶತಮಾನಗಳೇ ಕಳೆದಿವೆ, ಪಾಶ್ಚಿಮಾತ್ಯ ಜೀವನಶೈಲಿಯನ್ನು, ಬದುಕಿನ ಮಾರ್ಗಗಳನ್ನು, ಸಾಮಾಜಿಕ ಧೋರಣೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುತ್ತಲೇ ವಸಾಹತು ದಾಸ್ಯವನ್ನೂ ದಾಟಿ ಒಂದು ಸ್ವತಂತ್ರ ಗಣತಂತ್ರವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಒಳಗೊಂಡಂತೆ ವೈಚಾರಿಕತೆ-ವೈಜ್ಞಾನಿಕ ಮನೋಭಾವ ಮತ್ತು ಜನಸಾಮಾನ್ಯರ ನಿತ್ಯ ಬದುಕಿನ ನಡೆನುಡಿಗಳ ಮೂಲಕ ಭಾರತ ಇಂದು ಅತ್ಯಂತ ಮುಂದುವರೆದ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ. ಈ ನಮ್ಯತೆ ಇರುವುದರಿಂದಲೇ ಭಾರತೀಯ ಸಮಾಜವು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಬಹುಬೇಗನೆ ತನ್ನದಾಗಿಸಿಕೊಳ್ಳುತ್ತಿದೆ.

ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕ ವಾತಾವರಣದಲ್ಲಿ ಪ್ರಾಚೀನ ಸಂಪ್ರದಾಯಗಳೊಂದಿಗೆ ಮುಖಾಮುಖಿಯಾಗುತ್ತಲೇ ಮುನ್ನಡೆಯುತ್ತಿರುವ ಮೇಲ್ವರ್ಗದ-ಮೇಲ್ಪದರದ ಸಮಾಜದ ನಡುವೆಯೇ, ಭಾರತದ ಭವಿಷ್ಯವು ತಿರಸ್ಕರಿಸಲ್ಪಟ್ಟ ಪ್ರಾಚೀನ ಪರಂಪರೆ-ಸಂಪ್ರದಾಯಗಳ ಪುನರುತ್ಥಾನದಲ್ಲೇ ಅಡಗಿದೆ ಎಂಬ ಒಂದು ವಾದವೂ ಸಹ ದೇಶದ ಪ್ರತಿಷ್ಠಿತ ಬೌದ್ಧಿಕ ವಲಯಗಳಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿದೆ. ಆಧುನಿಕ ವಿಜ್ಞಾನದ ಅವಿಷ್ಕಾರಗಳಾದ ಉಪಗ್ರಹಗಳು ಮತ್ತು ಈ ಉಪಗ್ರಹಗಳನ್ನಾಧರಿಸಿದ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಳ್ಳುತ್ತಲೇ, ಈ ವೈಜ್ಞಾನಿಕ ಅವಿಷ್ಕಾರಗಳು ತಿರಸ್ಕರಿಸುವ ಅವೈಜ್ಞಾನಿಕ ತತ್ವ ಮೀಮಾಂಸೆಗಳನ್ನು ಮತ್ತೊಮ್ಮೆ ಸಮಾಜಕ್ಕೆ ತಲುಪಿಸುವ ಪ್ರಯತ್ನಗಳಲ್ಲಿ ಈ ದ್ವಂದ್ವವನ್ನು ಸ್ಪಷ್ಟವಾಗಿ ಗಮನಿಸಬಹುದು. ಅತ್ಯಾಧುನಿಕ ವಿಜ್ಞಾನ-ಶಿಕ್ಷಣ (ವೈಜ್ಞಾನಿಕತೆ ಅಲ್ಲ) ಪಡೆದ ಆಧುನಿಕ ಸಮಾಜವೂ ಸಹ ಇದೇ ಉಪಗ್ರಹಗಳು ಒದಗಿಸುವ ಜ್ಞಾನಕ್ಕೆ ವ್ಯತಿರಿಕ್ತವಾದ ಪ್ರಾಚೀನ ನಂಬಿಕೆಗಳತ್ತ ವಾಲುತ್ತಿರುವುದನ್ನು ಈ ದ್ವಂದ್ವದ ನಡುವೆ ಗುರುತಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಫಲಜೋತಿಷ್ಯದ ಪ್ರಸರಣದಲ್ಲಿ ಗುರುತಿಸಬಹುದು.

ಆಧುನಿಕತೆ ಮತ್ತು ಸ್ತ್ರೀ ಸಂವೇದನೆ

ಈ ವಾಲುವಿಕೆಯ ಒಂದು ಆಯಾಮವನ್ನು ಮಹಿಳಾ ಸಂವೇದನೆ ಮತ್ತು ಲಿಂಗ ಭೇದಗಳ ವಿಚಾರದಲ್ಲೂ ಸ್ಪಷ್ಟವಾಗಿ ಗಮನಿಸಲು ಸಾಧ್ಯ. ಭವ್ಯ ಭಾರತದ ಪರಂಪರೆಯ ಬಗ್ಗೆ ವ್ಯಾಖ್ಯಾನಿಸುವ ಬೌದ್ಧಿಕ ವಲಯವು ಲಿಂಗ ಸೂಕ್ಷ್ಮತೆಯ ಸುಳಿವೂ ದೊರೆಯದ ರೀತಿಯಲ್ಲಿ ಪ್ರಾಚೀನ ಪರಂಪರೆಯ ಪಿತೃಪ್ರಧಾನತೆಯನ್ನು ವೈಭವೀಕರಿಸುವುದನ್ನು ಭಾರತದ ಉದ್ದಗಲಕ್ಕೂ, ಜಾತಿ-ಧರ್ಮಗಳ ಗೆರೆಗಳನ್ನು ದಾಟಿ ಗಮನಿಸಬಹುದು. ಹಾಗಾಗಿಯೇ ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವ ಯಾವುದೇ ಪ್ರಯತ್ನಗಳು ಸಮಾಜದ
ಮೇಲ್ವರ್ಗ-ಮೇಲ್ಪದರದಿಂದ ವಿರೋಧ ಎದುರಿಸುತ್ತವೆ. ಈ ಮೇಲ್ಪದರವು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ಅವಿಷ್ಕಾರಗಳ ಫಲಾನುಭವಿಗಳೂ, ಆರಾಧಕರೂ ಆಗಿದ್ದರೆ ಅದು ಕಾಕತಾಳೀಯ ವಿಡಂಬನೆ ಎನ್ನಬಹುದು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದರಿಂದ ಹಿಡಿದು ಸಾರಿಗೆ ಬಸ್ಸು-ರೈಲುಗಳಲ್ಲಿ ಶೇ 50ರಷ್ಟು ಆಸನಗಳನ್ನು ಮಹಿಳೆಯರಿಗೆ ಮೀಸಲಿಡುವ ದೈನಂದಿನ ವಿಚಾರದವರೆಗೂ ಈ ವಿರೋಧ ವಿಭಿನ್ನ ನೆಲೆಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಪಿತೃಪ್ರಧಾನ ವ್ಯವಸ್ಥೆಯ ನೆಲೆಯಲ್ಲಿ ಈ ವಿದ್ಯಮಾನವನ್ನು ಗಮನಿಸಿದಾಗ, ಭಾರತದ ಶ್ರೇಣೀಕೃತ ಸಮಾಜವೇ ಇಂದಿಗೂ ಇಲ್ಲಿನ ಪ್ರಜಾಪ್ರಭುತ್ವದ ನೆಲೆಗಳಲ್ಲೂ ಆಧಿಪತ್ಯ ಸಾಧಿಸಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಈ ಸಮಾಜದ ಗರ್ಭದಲ್ಲೇ ಅಡಗಿರುವ ಪುರುಷಾಧಿಪತ್ಯ ಮತ್ತು ವಾರಸುದಾರಿಕೆಯ ಮೇಲರಿಮೆಗಳು ಸರ್ಕಾರದ ಆಡಳಿತ ನೀತಿಗಳನ್ನೂ ಆವರಿಸಿರುತ್ತದೆ.

ಈ ವ್ಯೂಹವನ್ನು ದಾಟಿ ಪ್ರತಿಪಾದಿಸಲಾಗುವ ಮಹಿಳಾ ಸಮಾನತೆ ಅಥವಾ ಮಹಿಳಾ ಸಂವೇದನೆಯ ಆಡಳಿತಾತ್ಮಕ ಕ್ರಮಗಳು ವಿಶಾಲ ಸಮಾಜದಲ್ಲಿ ವಿರೋಧಿ ಅಲೆಗಳನ್ನು ಸೃಷ್ಟಿಸುತ್ತವೆ. ಲಿಂಗ ಸೂಕ್ಷ್ಮತೆಯ ಕೊರತೆ ಮತ್ತು ಪಿತೃಪ್ರಧಾನತೆಯ ಅಸ್ಮಿತೆಗಳು ಈ ವಿರೋಧಗಳಿಗೆ ಮೂಲ ಕಾರಣವಾಗಿರುತ್ತವೆ. ಹಾಗಾಗಿಯೇ ಮಹಿಳಾ ಸಂಕುಲದ ಸಾಂವಿಧಾನಿಕ ಹಕ್ಕುಗಳೂ ಸಹ ಆಡಳಿತ ವ್ಯವಸ್ಥೆಯಿಂದ ಅಥವಾ ಸರ್ಕಾರದ ವತಿಯಿಂದ ಕೊಡಮಾಡುವ ಒಂದು ವಿನಾಯಿತಿ/ರಿಯಾಯಿತಿ/ಸೌಲಭ್ಯ/ಸವಲತ್ತು ಎನಿಸಿಕೊಳ್ಳುತ್ತದೆ. ತಮಗೆ ನ್ಯಾಯಯುತವಾಗಿ ಬರಬೇಕಾದ ಪ್ರತಿಯೊಂದನ್ನೂ ಕೇಳಿಪಡೆಯಬೇಕಾದ ವಾತಾವರಣದಲ್ಲಿ ಬದುಕುತ್ತಿರುವ ತಳಮಟ್ಟದ ಸಮಾಜ ಮತ್ತು ಮಹಿಳಾ ಸಂಕುಲ ಹೀಗೆ ಪಡೆದುಕೊಂಡಿದ್ದನ್ನೂ ʼಉಚಿತʼ ಎಂದು (Freebies) ಬಣ್ಣಿಸುವ ಮೂಲಕ ಆಳುವ ವ್ಯವಸ್ಥೆಯು ತನ್ನ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಯನ್ನು ಮತ್ತೆ ಮತ್ತೆ ದೃಢೀಕರಿಸುತ್ತಲೇ ಬಂದಿದೆ.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ/ಜಾರಿಗೊಳಿಸಲಿರುವ ಹಲವು ಯೋಜನೆಗಳನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕ ವ್ಯಂಗ್ಯ, ಆಕ್ರೋಶ ಹಾಗೂ ವಿರೋಧಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದೊಂದು ಸಾಮಾಜಿಕ ವ್ಯಾಧಿ, ಸಾಂಸ್ಕೃತಿಕ ವ್ಯಸನದಂತೆಯೇ ಕಾಣುತ್ತದೆ. ಈ ವಿರೋಧ ಹಾಗೂ ಅಪಹಾಸ್ಯಗಳನ್ನು ರಾಜಕೀಯ ನೆಲೆಯ ಬದಲು ಸಾಮಾಜಿಕ ನೆಲೆಯಲ್ಲಿ ನಿಂತು ನೋಡಿದಾಗ ಸಮಾಜದೊಳಗಿನ ಊಳಿಗಮಾನ್ಯ ಆಧಿಪತ್ಯದ ಧೋರಣೆಗಳೂ ಸ್ಪಷ್ಟವಾಗಿ ಕಾಣುತ್ತದೆ. ಪುರುಷಾಹಮಿಕೆಗೆ ದೃಢ ಬುನಾದಿ ಹಾಕುವ ಈ ಧೋರಣೆಗಳ ಒಂದು ಒಳಸುಳಿಯಾಗಿ ಮಹಿಳೆಯರಿಗಾಗಿ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯ ಸುತ್ತ ವ್ಯಂಗ್ಯೋಕ್ತಿಗಳೂ ಕಂಡುಬರುತ್ತವೆ. ಪುರುಷಾಧಿಪತ್ಯದ ಅಧೀನತೆಯಲ್ಲೇ ಮಹಿಳಾ ಶಕ್ತಿಯನ್ನೂ ನಿಯಂತ್ರಿಸುವ ಊಳಿಗಮಾನ್ಯ ಧೋರಣೆಯ ಪರಿಣಾಮವೇ, ನಮಗೆ ಮಹಿಳಾ ಮೀಸಲಾತಿಯನ್ನೂ ಸೇರಿದಂತೆ ಎಲ್ಲ ಸಾಂವಿಧಾನಿಕ ಹಕ್ಕುಗಳೂ ಸಹ  ಸರ್ಕಾರ ಅಥವಾ ಪ್ರಭುತ್ವ ʼ ಕೊಡಮಾಡುವ ʼ ಬಳುವಳಿಯಂತೆ ಕಾಣುತ್ತದೆ. Freebies ಅಥವಾ ಅದರ ಸಂವಾದಿಯಾಗಿ ಬಳಕೆಯಾಗುತ್ತಿರುವ ʼಉಚಿತʼ ಎಂಬ ಪದದ ಮೂಲ ಧಾತುವನ್ನು ಇಲ್ಲಿ ಗುರುತಿಸಬೇಕು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಎರಡೂ ಸಹ ನೇರವಾಗಿ ಮಹಿಳಾ ಕೇಂದ್ರಿತ ಯೋಜನೆಗಳಾಗಿರುವುದರಿಂದ ಬಾಹ್ಯ ಸಮಾಜದಲ್ಲಿ ಈ ಎರಡೂ ಯೋಜನೆಗಳು ಅವಹೇಳನಕ್ಕೆ ಗುರಿಯಾಗುತ್ತಿವೆ. ರಾಜ್ಯ ಸಾರಿಗೆ ಬಸ್ಸುಗಳಲ್ಲಿ (ಹವಾನಿಯಂತ್ರಿತ-ಐಷಾರಾಮಿ ಬಸ್ಸುಗಳನ್ನು ಹೊರತುಪಡಿಸಿ) ರಾಜ್ಯದ ಸಮಸ್ತ ಮಹಿಳೆಯರಿಗೆ ಟಿಕೆಟ್‌ ರಹಿತ ಪ್ರಯಾಣದ ಸವಲತ್ತನ್ನು ಒದಗಿಸುವ ಶಕ್ತಿ ಯೋಜನೆ, ರಾಜ್ಯದ ಫಲಾನುಭವಿ ಮಹಿಳೆಯರಿಗೆ ಎಷ್ಟು ಉಪಯುಕ್ತವಾಗಲಿದೆ ಎಂಬ ಬೌದ್ಧಿಕ ಚರ್ಚೆಗೆ ಸಮಾನಾಂತರವಾಗಿ ಈ ಯೋಜನೆಯಿಂದ ಮಹಿಳಾ ಸಬಲೀಕರಣ, ಮಹಿಳೆಯ ಭೌತಿಕ ಚಲನೆ ಹಾಗೂ ಮಹಿಳಾ ಶ್ರಮ ಮತ್ತು ಶ್ರಮಶಕ್ತಿಯ ಚಲನೆಗೆ ಎಷ್ಟರ ಮಟ್ಟಿಗೆ ಫಲಕಾರಿಯಾಗಲಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಸಮಾಜದ ಪ್ರಜ್ಞಾವಂತ ವಲಯದ ಈ ಚರ್ಚೆಗಳ ಮತ್ತೊಂದು ಬದಿಯಲ್ಲಿ ಈ ಯೋಜನೆಯು ನಮ್ಮ ಸಮಾಜದೊಳಗಿನ ಪುರುಷಾಧಿಪತ್ಯದ ಕೊಳಚೆಯನ್ನೂ ಒಮ್ಮೆಲೆ ಹೊರಹಾಕಿರುವುದು ಸ್ವಾಗತಾರ್ಹವೇ ಎನ್ನಬಹುದು. ಸಮಾಜಮುಖಿಯಾಗಿರಬೇಕಾದ ಕೆಲವು ಮಾಧ್ಯಮ ವಾಹಿನಿಗಳು ಈ ಕೊಳಚೆಯ ಸಂಗ್ರಹಾಗಾರಗಳಾಗಿರುವುದು ಮಾತ್ರ ದುರಂತ.

ಸ್ವತಂತ್ರ ಮುಂಚಲನೆಯ ಅಪವಾಖ್ಯಾನಗಳು

ಶಕ್ತಿ ಯೋಜನೆ ಜಾರಿಯಾದ ಕೂಡಲೇ ಕರ್ನಾಟಕದಾದ್ಯಂತ ಎರಡು ರೀತಿಯ ವಾತಾವರಣ ಸೃಷ್ಟಿಯಾಯಿತು. ಮೊದಲನೆಯದು ರಾಜ್ಯವ್ಯಾಪಿಯಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿನ ಹೆಚ್ಚಳ. ಶಾಲೆಯಲ್ಲಿ ಕೊನೆಯ ಬೆಲ್‌ ಹೊಡೆದ ಕೂಡಲೇ ಮಕ್ಕಳು ಒಮ್ಮೆಲೇ ಹೊರಬರುವ ರೀತಿಯಲ್ಲಿ ರಾಜ್ಯದ ಮಹಿಳೆಯರು ತಾವು ಬಹುದಿನಗಳಿಂದ ಅದುಮಿಟ್ಟುಕೊಂಡಿದ್ದ ಪ್ರಯಾಣದ ಅಪೇಕ್ಷೆಯನ್ನು ಪೂರೈಸಿಕೊಳ್ಳಲು ಹೊರಬಂದಂತೆ ತೋರುತ್ತಿತ್ತು. ಮಡುಗಟ್ಟಿದ ಆಕಾಂಕ್ಷೆ, ಅಪೇಕ್ಷೆಗಳಿಗೆ ಮುಕ್ತ ಅವಕಾಶ ದೊರೆತಾಗ ಒಮ್ಮೆಲೇ ಬೃಹತ್‌ ಪ್ರಮಾಣದಲ್ಲಿ ಪ್ರತಿಕ್ರಯಿಸುವ ಒಂದು ಸಾಮಾಜಿಕ ಪ್ರಕ್ರಿಯೆಯನ್ನು (ಭಾವನಾತ್ಮಕವಾದ ವಿಚಾರಗಳಲ್ಲಿ ಇದನ್ನು ಕಾಕ್‌ ಬಾಟಲ್‌ ಅಥವಾ ಸೋಡಾ ಬಾಟಲ್‌ ಪರಿಣಾಮ ಎಂದೂ ಹೇಳಲಾಗುತ್ತದೆ) ಒಮ್ಮೆಲೆ ಹೆಚ್ಚಾದ ಮಹಿಳೆಯರ ಪ್ರಯಾಣದಲ್ಲೂ ಕಾಣಬಹುದಿತ್ತು. ಏಕೆ ಹೀಗೆ ಎಂದು ಯೋಚಿಸುವ ವ್ಯವಧಾನ ನಮ್ಮ ಸಮಾಜದಲ್ಲಿ ಇದ್ದಿದ್ದರೆ ಬಹುಶಃ ಈ ಪ್ರಕ್ರಿಯೆಯ ಒಳಸುಳಿಗಳನ್ನು ಒಳಹೊಕ್ಕು ಅರ್ಥಮಾಡಿಕೊಳ್ಳಬಹುದಿತ್ತು. ಆ ಪ್ರಯತ್ನಗಳು ಈಗ ನಡೆಯುತ್ತಿರುವುದು ಸಮಾಧಾನಕರ ಅಂಶ.

ಮತ್ತೊಂದು ವಾತಾವರಣ ಎಂದರೆ ರಾಜಕೀಯ ವಿರೋಧ ಹಾಗೂ ಪುರುಷಾಸೂಯೆಯ ನೆಲೆಯಲ್ಲಿ ವ್ಯಕ್ತವಾದಂತಹ ವ್ಯಂಗ್ಯ ಮತ್ತು ಅಪಮಾನಕರ ವ್ಯಾಖ್ಯಾನಗಳು. ರಾಜ್ಯ ಸಾರಿಗೆ ಬಸ್ಸುಗಳು ಎಂದೂ ಭರ್ತಿಯಾದದ್ದೇ ಇಲ್ಲ, ಎಂದೂ ಸಹ ತುಂಬಿ ತುಳುಕುವಂತೆ ಸಂಚರಿಸಿದ್ದೇ ಇಲ್ಲ, ಎಂದಿಗೂ ಫುಟ್‌ಬೋರ್ಡ್ಗಳ ಮೇಲೆ ಪ್ರಯಾಣಿಕರು ಸಂಚರಿಸಿದ್ದೇ ಇಲ್ಲ, ಎಂದೂ ಸಹ ಬಸ್ಸುಗಳಲ್ಲಿ ಮಹಿಳೆಯರ ನಡುವೆ ಜಗಳ-ಕದನ-ಬೈಗುಳಗಳ ಮೇಳ ನಡೆದೇ ಇಲ್ಲ,  ಎಂದಿಗೂ ಜನರು ಕಿಟಕಿಗಳ ಮೂಲಕ ತೂರಿಹೊಗಿ ತಮ್ಮ ಆಸನ ಭದ್ರಪಡಿಸಿಕೊಂಡಿದ್ದೇ ಇಲ್ಲ ಎನ್ನುವ ರೀತಿಯಲ್ಲಿ ಈ ಎಲ್ಲ ರೀತಿಯ ಪ್ರಸಂಗಗಳನ್ನೂ ರೋಚಕವಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್‌ ವಿಶ್ವವಿದ್ಯಾಲಯದ ಅಧ್ಯಯನ ಪೀಠಗಳು ಹೊಸ ಸರ್ಕಾರದ ಶಕ್ತಿ ಯೋಜನೆಯʼ ದುಷ್ಪರಿಣಾಮ ʼ ಎನ್ನುವ ರೀತಿಯಲ್ಲಿ ಈ ಪ್ರಸಂಗಗಳನ್ನು ರೋಚಕವಾಗಿ ಬಿತ್ತರಿಸಲಾರಂಭಿಸಿದ್ದು ನಮ್ಮ ಸಾಮಾಜಿಕ ಮಾಲಿನ್ಯದ ಸಂಕೇತವಾಗಿಯೇ ಕಾಣುತ್ತದೆ. ಅಸಮರ್ಪಕ ಸಾರಿಗೆ ವ್ಯವಸ್ಥೆಯಡಿಯಲ್ಲೇ ತಮ್ಮ ನಿತ್ಯ ದುಡಿಮೆಗಾಗಿ ಬಸ್‌ ಪ್ರಯಾಣ ಮಾಡಿರುವ/ಮಾಡುತ್ತಿರುವ ಯಾರಿಗೇ ಆದರೂ ಈ ಪ್ರಸಂಗಗಳು ಹೊಸತಾಗಿ ಕಾಣುವುದಿಲ್ಲ. ಬಸ್‌ ಮೇಲೆ ಕುಳಿತು ಪ್ರಯಾಣಿಸುವುದೂ ಸಹ ಸಹಜವಾಗಿಯೇ ಕಾಣುತ್ತದೆ.

ಈ ವ್ಯಂಗ್ಯೋಕ್ತಿಗಳಿಗಿಂತಲೂ ಕ್ರೂರವಾಗಿ ಪ್ರಕಟವಾದದ್ದು ಸಾಂಪ್ರದಾಯಿಕ ಸಮಾಜದ ವಕ್ರ ಮನಸ್ಥಿತಿ. ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರು ತಮ್ಮ ಕುಟುಂಬಗಳನ್ನು ಧಿಕ್ಕರಿಸಿಬಿಡುತ್ತಾರೆ, ಕುಟುಂಬಗಳ ವಿಘಟನೆಯಾಗಿಬಿಡುತ್ತದೆ, ಗೃಹಿಣಿಯರು ತಮ್ಮ ಗಂಡಂದಿರನ್ನೂ ಲೆಕ್ಕಿಸದೆ ಓಡಾಡಲಾರಂಭಿಸುತ್ತಾರೆ, ಹೆಣ್ಣು ಮಕ್ಕಳು ಹಿರಿಯರ ಅಣತಿಯನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ಸುತ್ತಾಡಲಾರಂಭಿಸುತ್ತಾರೆ, ಪತಿಗೆ ಅಧೀನಳಾಗಿಯೇ ಇದ್ದ ಪತ್ನಿಯೂ ಲಕ್ಷ್ಮಣರೇಖೆಯನ್ನು ದಾಟಿ ತನ್ನ ಪ್ರಯಾಣಕ್ಕೆ ಮುಂದಾಗುತ್ತಾಳೆ–ಹೀಗೆ ಹತ್ತುಹಲವು ರೀತಿಯ ವ್ಯಾಖ್ಯಾನಗಳು ಹರಿದಾಡಲಾರಂಭಿಸಿವೆ. ವಾಸ್ತವದಲ್ಲಿ ಭಾರತದ ಕುಟುಂಬ ವ್ಯವಸ್ಥೆಯಲ್ಲಿ ಇದಾವುದೂ ಸಂಭವಿಸುವುದಿಲ್ಲ. ಕೆಳಸ್ತರದ ಸಮಾಜದಲ್ಲಿ ಮಹಿಳೆಯರ ಬಾಹ್ಯ ಚಲನೆಗೆ ಅಡ್ಡಿಯಾಗಿದ್ದ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳು ಹಾಗೂ ಪುರುಷಾಧೀನ ಕುಟುಂಬಗಳಲ್ಲಿ ಅಡ್ಡಿಯಾಗಿದ್ದ ಕಟ್ಟಳೆಗಳು ಮಹಿಳೆಯರ ಚಲನೆಯನ್ನು ನಿಯಂತ್ರಿಸಿದ್ದೇ ಅಲ್ಲದೆ ಅವರ ಹಂಬಲ ಮತ್ತು ಅಪೇಕ್ಷೆಗಳನ್ನೂ ಅದುಮಿಟ್ಟುಕೊಳ್ಳುವಂತೆ ಮಾಡುತ್ತವೆ. ಅನಿವಾರ್ಯವಾಗಿಯೋ, ಒತ್ತಡದಿಂದಲೋ, ಸಂಪ್ರದಾಯ ಕಟ್ಟಳೆಗಳಿಗೆ ಮಣಿದೋ ಮಹಿಳೆಯರು ನಾಲ್ಕು ಗೋಡೆಗಳೊಳಗೆ ಅಥವಾ ತಮ್ಮ ಊರುಗಳ ಒಳಗೇ ಬಂಧಿತರಾಗಿರುತ್ತಾರೆ.

ಧರ್ಮಸ್ಥಳ ಮುಂತಾದ ಯಾತ್ರಾಸ್ಥಳಗಳಗೆ ಒಮ್ಮೆಲೆ ಧಾವಿಸಿದ ಸಹಸ್ರಾರು ಮಹಿಳೆಯರನ್ನು ಸೂಕ್ಷ್ಮವಾಗಿ ಗಮನಿಸಿದಾಗ ಶಕ್ತಿ ಯೋಜನೆ ಈ ಕಟ್ಟಲೆಗಳ ಭಂಗ ಮಾಡಲು ನೆರವಾಗಿರುವುದನ್ನೂ ಗಮನಿಸಬಹುದು. ಈ RushಓRushಉ ಎಂದು ಉದ್ಗರಿಸುವವರಿಗೆ ಈ ತಾತ್ಕಾಲಿಕವಾದ ಸನ್ನಿವೇಶವೇ ಅಸಹನೀಯವಾಗಿ ಕಾಣುತ್ತದೆ.
ಪುರುಷ ಪ್ರಧಾನ-ಸಂಪ್ರದಾಯವಾದಿ ಸಮಾಜಕ್ಕೆ ಶಾಶ್ವತವಾಗಿ ತಾವು ವಿಧಿಸುತ್ತಿದ್ದ ಲಕ್ಷ್ಮಣರೇಖೆಗಳು ಅಳಿಸಿಹೋಗಬಹುದೇನೋ ಎಂಬ ಆತಂಕವೂ ಸಹ ಇಲ್ಲಿ ಢಾಳಾಗಿ ಕಾಣುತ್ತದೆ. ಸ್ವಂತ ದುಡಿಮೆ ಅಥವಾ ಆದಾಯವಿಲ್ಲದ, ಪರಾವಲಂಬಿಯಾಗಿರುವ ಮಹಿಳೆ ತನಗೆ ಬೇಕೆನಿಸಿದ ಕಡೆಗೆ ಹೋಗಲು ಬಯಸುವಾಗ ಅಡ್ಡಿಯಾಗುವುದು ಒಂದು ಕುಟುಂಬದ ವೆಚ್ಚ ಮತ್ತೊಂದು ಸಂಪ್ರದಾಯದ ಗೋಡೆಗಳು. ಎಷ್ಟೋ ಮಧ್ಯಮವರ್ಗದ ಕುಟುಂಬಗಳಲ್ಲಿ ಸಂಪಾದನೆ ಮಾಡುವ ಮಹಿಳೆಯೂ ಇಂತಹುದೇ ಪರಿಸ್ಥಿತಿ ಎದುರಿಸುತ್ತಿರುತ್ತಾಳೆ. ಸಂಪ್ರದಾಯದ ರಕ್ಷಾ ಕವಚವಾಗಿ ಆರ್ಥಿಕ ಸ್ಥಿತಿಗತಿಗಳೂ ನೆರವಾಗುತ್ತವೆ. ಸರ್ಕಾರದ ಶಕ್ತಿ ಯೋಜನೆ ಈ ಎರಡೂ ಕವಚಗಳನ್ನು ಒಮ್ಮೆಲೆ ಕಳಚಿಹಾಕಿ, ಮಹಿಳೆಗೆ ಒಂದು ಸಾಮಾಜಿಕ-ಭೌತಿಕ ಚಲನೆಯ ಶಕ್ತಿಯನ್ನು ಒದಗಿಸಿದೆ. ಇದರಿಂದ ಸರ್ಕಾರದ ಬೊಕ್ಕಸ ಸಾರಿಗೆ ಸಂಸ್ಥೆಗಳ ಖಜಾನೆ ಬರಿದಾಗುತ್ತದೆ ಎಂದು ಹುಯಿಲೆಬ್ಬಿಸುವವರನ್ನು ಅಂಕಿಅಂಶಗಳೇ ತೆಪ್ಪಗಾಗಿಸಿವೆ.

ಮುಂದುವರೆಯುತ್ತದೆ…

Donate Janashakthi Media

Leave a Reply

Your email address will not be published. Required fields are marked *