ಸಾವಿರಕ್ಕೂ ಹೆಚ್ಚು ಸುರಕ್ಷಿತ ಹೆರಿಗೆ ಮಾಡಿಸಿದ ಸೋಮಿ

ಜ್ಯೋತಿ ಶಾಂತರಾಜು

ತಾಯ್ತನ ಎಷ್ಟು ಶ್ರೇಷ್ಠವೋ ಹೆರಿಗೆ ಮಾಡಿಸುವುದೂ ಅಷ್ಟೇ ಶ್ರೇಷ್ಠ. ಅದು ಜಗತ್ತಿನ ಪವಿತ್ರ ವೃತ್ತಿಗಳಲ್ಲೊಂದು. ಅದರಲ್ಲೂ ಆಸ್ಪತ್ರೆಗಳಿಲ್ಲದ ಪ್ರದೇಶಗಳಲ್ಲಿ ಹೆರಿಗೆ ಮಾಡಿಸುವವರಂತೂ ದೇವರಿದ್ದಂತೆ ಈಗೀಗ ಅವರು ಅತಿ ಅಪರೂಪ. ನಾನಿವತ್ತು ಹೇಳಹೊರಟಿರುವುದು ಅಂತಹ ಅಪರೂಪದ ವ್ಯಕ್ತಿಯೊಬ್ಬರ ಬಗ್ಗೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಕ್ಯಾದಗಿ ಹೊಂಡ ಎಂಬಲ್ಲಿ ವಾಸವಿರುವ ಸೌಮ್ಯ ಅಲ್ಲಿನ ಎಲ್ಲರಿಗೂ ಸೋಮಿ ಅಂತಲೇ ಚಿರಪರಿಚಿತ. ನಲವತ್ತೈದರಿಂದ ಐವತ್ತರ ವಯಸ್ಸಿನ ಸೋಮಿ ಇದುವರೆಗೂ ಸಾವಿರಕ್ಕೂ ಹೆಚ್ಚು ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.

‘ನಾನು ಚಿಕ್ಕವಳಿದ್ದಾಗ ಅಲ್ಲಲ್ಲಿ “ಕಪ್ಪು ಜನ ಕೆಂಪು ನೆರಳು” ಎಂಬ ನಾಟಕದಲ್ಲಿ ಅಭಿನಯಿಸುತ್ತಿದ್ದೆ. ನಂತರ ಅಮ್ಮನ ಜೊತೆಗೆ ಕೆಲಸಕ್ಕೆ ಹೋಗ್ತಾ ಇದ್ದೆ. ಆಗಾಗ ಅಮ್ಮ ಹೆರಿಗೆ ಮಾಡಿಸೋಕೆ ಕೂಡ ಹೋಗ್ತಿದ್ಲು. ಆಗ ನಾನು ಅಮ್ಮನ ಜೊತೆಗೆ ಹೋಗ್ತಿದ್ದೆ. ಮಗುವನ್ನು ಹೇಗೆ ಹೆರುತ್ತಾರೆ.. ಮಾಲಿಶ್ ಹೇಗೆ ಮಾಡುತ್ತಾರೆ.. ಎಲ್ಲವನ್ನು ಕುತೂಹಲದಿಂದ ನೋಡುತ್ತಿದ್ದೆ. ಅಮ್ಮ ಬೇಡ ಎಂದರೂ ಹಠ ಮಾಡಿ ನಾನು ನೋಡ್ಬೇಕು ಕಲಿಬೇಕು ಅಂತ ಅಲ್ಲಿಯೇ ನಿಲ್ಲುತ್ತಿದ್ದೆ. ನನಗಾಗ ಸುಮಾರು ಹತ್ತು ವರ್ಷ ವಯಸ್ಸು ಇರಬಹುದು. ನಾನಾಗಲೆ ಹೆರಿಗೆಯಾದವರ ಬಟ್ಟೆ ತೊಳೆಯುವುದು, ಮಕ್ಕಳ ಸಂಡಸ್ ತೊಳೆಯುವುದು ಎಲ್ಲ ಮಾಡ್ತಿದ್ದೆ. ಮಕ್ಕಳಿಗೆ ಎಣ್ಣೆ ಹಚ್ಚುವುದು ಮಾಲಿಶ್ ಮಾಡುವುದು ನನಗೆ ತುಂಬ ಖುಷಿ. ಒಂದುದಿನ ಮಗುವಿಗೆ ಎಣ್ಣೆ ಎಲ್ಲ ಹಚ್ಚಿ ಖುಷಿಯಿಂದ ಅಮ್ಮ ನಾನು ಎಣ್ಣೆ ಹಚ್ಚಿದ್ದೇನೆ, ಮಾಲಿಶ್ ಮಾಡಿದ್ದೇನೆ ನೋಡು ಅಂತ ತೋರಿಸಿದಾಗ ಅಮ್ಮನೂ ಖುಷಿಯಾಗಿದ್ಲು.’

ಇದನ್ನು ಓದಿ: ನಾಗವೇಣಿ ಸಾಮಾನ್ಯಳಲ್ಲ… ತೆಂಗಿನಕಾಯಿ ಮಾರಿಯೇ ಬದುಕಿಗೊಂದು ದಾರಿ ಮಾಡಿಕೊಂಡಳು

‘ನಾನು ಆಗ ಚಿಕ್ಕವಳಾದ್ದರಿಂದ ಕುತೂಹಲ ಹೆಚ್ಚು. ಮಕ್ಕಳ ಹುಟ್ಟು, ಪಾಲನೆ ಪೋಷಣೆ ಎಲ್ಲ ಹೇಗೆ ಆಗುತ್ತೆ ಅಂತ ಒಮ್ಮೆ ಯೋಚಿಸುತ್ತಿದ್ದೆ. ಅಮ್ಮ ಎಲ್ಲವನ್ನು ನನಗೆ ಅರ್ಥ ಆಗುವ ರೀತಿಯಲ್ಲಿ ಬಿಡಿಸಿ ಹೇಳಿದಳು. ಒಂದು ದಿನ ಅಮ್ಮ ಎಲ್ಲೋ ಹೋಗಿದ್ಲು. ಒಂದು ಹೆಂಗಸಿಗೆ ಹೆರಿಗೆ ನೋವು ಕಾಣಿಸಿಕೊಳ್ತು. ಅವರ ಮನೆಯಲ್ಲಿ ಅವರ ಅತ್ತಿಗೆ ಬಿಟ್ಟು ಬೇರೆ ಯಾರೂ ಇರಲಿಲ್ಲ. ಅವರಿಗೆ ಹೆರಿಗೆ ಮಾಡಿಸುವ ಬಗ್ಗೆ ಏನೂ ಗೊತ್ತಿಲ್ಲ. ನನಗೂ ಏನೂ ಗೊತ್ತಿಲ್ಲ. ಆ ಹೆಂಗಸು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದದ್ದನ್ನು ನನಗೆ ನೋಡಲಾಗಲಿಲ್ಲ. ಅಮ್ಮ ಹೆರಿಗೆ ಮಾಡಿಸುವುದನ್ನು ನಾನು ನೋಡಿದ್ದೆನಲ್ಲ ಮತ್ತು ಈಗ ಅನಿವಾರ್ಯತೆಯಿತ್ತಲ್ಲವೇ ಹಾಗಾಗಿ ಇದೊಮ್ಮೆ ಪ್ರಯತ್ನ ಮಾಡೋಣ ಎಂದು, ಸೊಂಟಕ್ಕೆ ಟವೆಲ್ ಒಂದನ್ನು ಕಟ್ಟಿಕೊಂಡು  ಸ್ವಲ್ಪ ಹೆದರಿಕೆಯಿಂದಲೇ ಮುಂದೆ ಹೋದೆ. ಅವಳ ಒದ್ದಾಟದಲ್ಲಿಯೇ ಕಾಲನ್ನು ಅಗಲ ಮಾಡಿಸಿ ಬೆರಳಿನಿಂದ ಮಗುವಿನ ತಲೆಯನ್ನು ಸ್ವಲ್ಪ ಸ್ವಲ್ಪವೆ ಎಳೆದುಕೊಂಡು ತಲೆಯನ್ನು ಮುಂದೆ ತೆಗೆದುಕೊಂಡೆ. ಅವಳಿಗೆ ಫೋರ್ಸ್ ಕೊಡು ಅಂತ ಹೇಳಿದೆ, ಕೊಟ್ಟರು ಒಂದೇ ಸಲಕ್ಕೆ ಮಗು ಪೂರ್ತಿ ಬಂತು. ಅಮ್ಮ ಮಾಡ್ತಿದ್ದದ್ದನ್ನು ನೆನಪಿಸಿಕೊಳ್ಳುತ್ತಿದ್ದೆ. ಹೊಸದೊಂದು ಬ್ಲೇಡ್ ತರಿಸಿ, ಬಿಸಿ ನೀರಲ್ಲಿ ಕುದಿಸಿ ನಾಲ್ಕು ಬೆರಳಿನಷ್ಟು ಉದ್ದ ಹೊಕ್ಕಳ ಬಳ್ಳಿಯನ್ನು ಬಿಟ್ಟು ಕತ್ತರಿಸಿದೆ. ನಂತರ ಹೊಕ್ಕಳ ಬಳ್ಳಿಯನ್ನು ರಕ್ತ ಬರದಂತೆ ದಾರದಿಂದ ಕಟ್ಟಿದೆ. ಕೂಸಿನ ನಂತರ ಮಲಮೂತ್ರ ಬೀಳಲಿಲ್ಲ. ಕೊನೆಗೆ ನಾನೆ ಕೈ ಹಾಕಿ ಹೊರ ಬೀಳುವಂತೆ ಮಾಡಿದೆ. ಎಲ್ಲವೂ ಸರಿಯಾಗಿಯೇ ಆಯಿತು. ನಂತರ ಸೊಂಟ ಬಿಗಿದು ಮನೆಗೆ ಬಂದೆ. ಇದು ನಾನು ಮಾಡಿಸಿದ ಮೊದಲ ಹೆರಿಗೆಯ ಅನುಭವ. ನನಗಂತೂ ಆಗ ಹೇಳತೀರದ ಖುಷಿ.

ಇದನ್ನು ಓದಿ: ನದಿ, ಜಲಪಾತಗಳಲ್ಲಿ ಮುಳುಗಿದ ಶವ ತೆಗೆಯುವ ಬಾಬಾ ಅಣ್ಣು ಸಿದ್ದಿ ಅವರ ಸಾಹಸ ಗಾಥೆ

ನನ್ನ ಅಮ್ಮ ಲಕ್ಷ್ಮಿ ಅಪ್ಪ ನಾಗೇಶ್. ನನ್ನ ತಂದೆ ತಾಯಿಗೆ ಐದು ಹೆಣ್ಣು, ಎರಡು ಗಂಡು ಮಕ್ಕಳು. ಹೇಳತೀರದ ಬಡತನ. ನಾನು ಮೂರನೇ ತರಗತಿವರೆಗೆ ಓದಿದ್ದೇನೆ. ನಂತರ ದನ ಕಾಯಲು ಹೋಗುತ್ತಿದ್ದೆ. ಭತ್ತ ಕುಟ್ಟಬೇಕಿತ್ತು. ಅಮ್ಮ ಒಂದು ದೊಡ್ಡ ಪಾತ್ರೆ ತುಂಬ ಗಂಜಿ ಮಾಡಿ ಇಡ್ತಿದ್ರು. ಹಸಿವಾದಾಗ ಹೊಟ್ಟೆ ತುಂಬ ಅದನ್ನು ಕುಡಿದು ಮತ್ತೆ ಕೆಲಸಕ್ಕೆ ಮರಳುತ್ತಿದ್ದೆವು. ನನಗೆ ಹನ್ನೆರಡು ವರ್ಷಕ್ಕೆ ಮದುವೆಯಾಯ್ತು. ಸಾಂಸಾರಿಕ ಜೀವನ ಅಷ್ಟು ಸುಖವಾಗಿರಲಿಲ್ಲ. ಮದುವೆಯಾಗಿ ಹದಿಮೂರು ವರ್ಷದ ನಂತರ ಒಂದು ಗಂಡು ಮಗು ಹುಟ್ಟಿತು. ಗಂಡನ ಮನೆಯಲ್ಲಿ ಸುಖ ಎನ್ನುವುದು ಮರೀಚಿಕೆಯಾಗಿತ್ತು. ಒಪ್ಪತ್ತಿನ ಊಟಕ್ಕೂ ಕಷ್ಟ. ಗಂಡ ಕುಡಿದು ಬಂದು ಹೊಡೆಯುತ್ತಿದ್ದರು. ಹೊರಗೆಲ್ಲೂ ಹೋಗುವ ಹಾಗಿಲ್ಲ. ಹೊಸ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ. ಗಂಡನ ಕಾಟ ತಾಳಲಾರದೆ ಎಷ್ಟೋ ಸಲ ಬೆಟ್ಟದಲ್ಲಿ ಕಾಲ ಕಳೆದಿದ್ದೇನೆ. ಮೂರು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ. ಕೊನೆಗೆ ಒಂದು ಗಟ್ಟಿ ನಿರ್ಧಾರ ಮಾಡಿದೆ. ನಮ್ಮ ಸಲುವಾಗಿ ನಾನು ಬದುಕಬೇಕು ಮಕ್ಕಳಿದ್ದಾರೆ ಅಂತ ತೀರ್ಮಾನ ಮಾಡಿ ಗಟ್ಟಿಯಾಗಿ ನಿಂತೆ. ಗಂಡ ನನ್ನ ಹೊಡೆಯಲು ಬಂದರೆ ನಾನು ತಡೆಯುತ್ತಿದ್ದೆ. ಅವರಿಗೆ ಹೆಚ್ಚು ಕುಡಿಯುವ ಅಭ್ಯಾಸ ಇತ್ತು. ಒಮ್ಮೆ ಜಾಂಡೀಸ್ ಖಾಯಿಲೆ ಬಂದು ತೀರಿಕೊಂಡರು. ಇಂದಿಗೆ ಅವರು ತೀರಿಕೊಂಡು ಸುಮಾರು 15 ವರ್ಷಗಳು ಕಳೆದವು.  ಒಮ್ಮೆ ಭಟ್ಟರೊಬ್ಬರ ಮನೆಯಲ್ಲಿ ಬಾವಿ ನೀರು ಸೇದುವಾಗ ಒಂದು ಹೆಂಗಸಿಗೆ ಹೆರಿಗೆ ನೋವು ಬಂದಿತ್ತು ಅವಳನ್ನು ಕರೆದುಕೊಂಡು ಹೋಗಿ ಮಲಗಿಸಿ ಅಮ್ಮ ಮಾಡುತ್ತಿದ್ದ ಹಾಗೆ ಮಾಡಿದೆ. ಹೀಗೆ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದೇನೆ ಎಲ್ಲಾ ಮಕ್ಕಳು ಚೆನ್ನಾಗಿದ್ದಾರೆ. ನಂತರ ಸ್ವಚ್ಛತೆ, ಮಗುವಿನ ಲಾಲನೆ ಪಾಲನೆ, ಹೆರಿಗೆ ಮಾಡಿಸುವ ತರಬೇತಿಯನ್ನು ಯಲ್ಲಾಪುರದಲ್ಲಿ ಮಾಡಿದೆ.’

ಇದನ್ನು ಓದಿ: ಅವ್ವನ ಅಕ್ಕರೆಯಲ್ಲಿ ಬೆಳೆದ ಬಹುಮುಖ ಪ್ರತಿಭೆ – ರಂಗಕರ್ಮಿ ಅಂಕರಾಜು

‘ಆಗೆಲ್ಲ ಒಂದು ಹೆರಿಗೆ ಮಾಡಿಸಿದರೆ,  ಒಂದು ಊಟ ಸಿಗುವುದು ಕಷ್ಟ. 15, 20 ರೂಪಾಯಿ ಕೂಡ ಕೊಡಲು ಮೇಲೆ ಕೆಳಗೆ ನೋಡ್ತಿದ್ರು.

ಹೇಗೋ ಆ ದಿನದ ಹಸಿವು ಕಳೆಯುತ್ತಿತ್ತು. ಮತ್ತೆ ಊಟ ಬೇಕು ಅಂದ್ರೆ ಬೇರೆ ಎಲ್ಲಾದರೂ ಹೋಗಿ ಕೆಲಸ ಮಾಡಬೇಕು. ಹೀಗಿತ್ತು ಆಗಿನ ನನ್ನ ಪರಿಸ್ಥಿತಿ. ಆಗೆಲ್ಲ ಹಳ್ಳಿಕಡೆ ಆಶಾಕಾರ್ಯಕರ್ತರು, ದವಾಖಾನೆ, ಡಾಕ್ಟರ್ ಯಾರೂ ಸಿಗುತ್ತಿರಲಿಲ್ಲ. ನಾನು ಅಲ್ಲಲ್ಲಿ ಹೆರಿಗೆ ಮಾಡಿಸಲು ಹೋಗುತ್ತಿದ್ದೆ. ಅರಬೈಲ್, ಶೇವ್ ಕಾರ್, ಕೈಗಡಿ, ಅತ್ತಿ ಸವಲು, ಪಣಸುಗೋಳೆ, ಲಬ್ ಗೊಳಿ, ಕೊಪ್ಪ, ನೆಲಗಿನ ಜೆಡ್ಡಿ ಇತರೆ ಸುತ್ತ ಮುತ್ತಲಿನ ಎಲ್ಲಾ ಊರುಗಳಿಗೂ ನನ್ನ ಪರಿಚಯವಿತ್ತು. ಹೆರಿಗೆ ಮಾಡಿಸಲು ಕೆಲವೊಮ್ಮೆ ಕಾಲ್ನಡಿಗೆಯಲ್ಲೇ ನಾಲ್ಕೈದು ಮೈಲಿ ಹೋಗುತ್ತಿದ್ದೆ. ಕೆಲವು ಸಲ ಗಾಡಿ ತಂದು ಮಧ್ಯರಾತ್ರಿ ಎರಡು, ಮೂರು ಗಂಟೆಗೆಲ್ಲ ನನ್ನ ಏಳಿಸಿ ಹೆರಿಗೆ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ರಾತ್ರಿ ಹೆರಿಗೆ ಮಾಡಿಸಿ ಬೆಳಗ್ಗೆ ಮನೆಗೆ ಬಂದರೆ ನನ್ನ ಗಂಡ ನನ್ನನ್ನು ಮನೆ ಒಳಗೆ ಸೇರಿಸುತ್ತಿರಲಿಲ್ಲ. ಆದರೆ, ಎಲ್ಲರೂ ಹೆರಿಗೆ ಮಾಡಿಸಲು ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಹೆರಿಗೆ ನೋವಲ್ಲದೆಯೂ ನೋವು ಬರುತ್ತದೆ. ಆಗ ಕುಡಿಯಲು ಜೀರಿಗೆ ನೀರು ಚೆನ್ನಾಗಿ ಕುದಿಸಿ ಕೊಟ್ಟು ನೋಡುತ್ತಿದ್ದೆ. ಹೆರಿಗೆ ನೋವಾದರೆ ಬಿಟ್ಟು ಬಿಟ್ಟು ನೋವು ಬರುತ್ತದೆ. ಮೂತ್ರ ತುಂಬ ಹೋಗುತ್ತದೆ. ಮೂತ್ರ ದಂಡೆ ಹೊಡೆದ ಕೂಡಲೆ ಹೆರಿಗೆಗೆ ತಯಾರಿ ಇರುತ್ತದೆ. ಪದೇ ಪದೇ ನೋವು ಬರಲಿಲ್ಲವೆಂದರೆ ದೇಹದ ಉಷ್ಣತೆ ಹೆಚ್ಚಾಗಿಯೂ ಒಮ್ಮೊಮ್ಮೆ  ಹಾಗಾಗಿರುತ್ತದೆ. ಕೆಲವು ಮಕ್ಕಳಿಗೆ ಮೊದಲು ತಲೆ ಬಂದರೆ, ಕೆಲವು ಮಕ್ಕಳಿಗೆ ಮೊದಲು ಎರಡು ಕಾಲು ಬರುತ್ತದೆ. ಒಂದೊಂದು ಹೆರಿಗೆಯನ್ನು ಮಾಡಿಸಿ ಒಂದೊಂದು ಜೀವ ಉಳಿಸುವಾಗಲೂ ತುಂಬ ಕಷ್ಟಪಟ್ಟಿದ್ದೇನೆ. ಸೋಮಿಯಂತೆ ಹೆರಿಗೆ ಮಾಡಿಸುವವರು, ಬಾಣಂತನ ಚೆನ್ನಾಗಿ ಮಾಡುವವರು ಯಾರಿಲ್ಲ ಅಂತ ಈಗ ಅವರೆಲ್ಲರೂ ನೆನಪಿಸಿಕೊಳ್ಳುತ್ತಾರೆ. ಬೆಳಗ್ಗೆ 4:30ಕ್ಕೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಮನೆಗೆಲಸ ಮುಗಿಸಿ ದೇವರ ಪೂಜೆ ಮಾಡಿ ಕೆಲಸಕ್ಕೆ ಹೊರಡುತ್ತೇನೆ. ಅಡಿಕೆ ಸುಲಿಯುವುದು, ನಾಟಿ ಮಾಡುವುದು, ಗದ್ದೆ ಕೊಯ್ಯುವುದು ಎಲ್ಲಾ ಕೆಲಸಗಳನ್ನು ಮಾಡುತ್ತೇನೆ.

ಈಗ ನನ್ನ ಇಬ್ಬರು ಗಂಡು ಮಕ್ಕಳಿಗೂ ಮದುವೆ ಮಾಡಿದ್ದೇನೆ. ಅವರವರ ಪಾಡಿಗೆ ಅವರು ಚೆನ್ನಾಗಿದ್ದಾರೆ.’

‘ಎಷ್ಟು ದಿನ ನನ್ನಿಂದಾಗತ್ತೋ ಅಲ್ಲಿಯವರೆಗೆ ನಾನು ದುಡಿದು ತಿನ್ನುತ್ತೇನೆ. ಈಗಲೂ ಯಾರಾದರೂ ಹೆರಿಗೆ ಮಾಡಿಸಲು ಕರೆದರೆ ನಾನು ತುಂಬ ಖುಷಿಯಿಂದ ಹೋಗುತ್ತೇನೆ. ನಾನು ಕಲಿತ ಕೆಲಸ ಇದು. ಹಸಿದಾಗ ಅನ್ನವಿಟ್ಟಿದೆ ಒಳ್ಳೆಯ ಹೆಸರು ಕೊಟ್ಟಿದೆ ನನ್ನ ಬದುಕು, ಜೀವನ ಎಲ್ಲ ಇದರಿಂದಲೇ’ ಎಂದು ಸಂತಸದ ಕಂಬನಿಯನ್ನು ಕಣ್ಣಂಚಲ್ಲಿ ತಂದುಕೊಂಡರು ಸೋಮಿ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *