ಸಂಜೀವಿನಿ ನೌಕರರು ಮತ್ತು ಫಲಾನುಭವಿಗಳ ಹಕ್ಕೊತ್ತಾಯಗಳನ್ನು ಈಡೇರಿಸಿ

ಬೆಂಗಳೂರು: ಗ್ರಾಮ ಪಂಚಾಯತ್ ಹಾಗೂ ನಗರ ಮತ್ತು ಪಟ್ಟಣಗಳ ವಾರ್ಡ್ ಮಟ್ಟಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹಿಳಾ ಸಬಲೀಕರಣದ ಸಂಜೀವಿನಿ ಯೋಜನೆ ಜಾರಿಗಾಗಿ ಕಾರ್ಯ ನಿರ್ವಹಿಸುವ  ನೌಕರರು ಮತ್ತು ಫಲಾನುಭವಿ ನೌಕರರು ಬೆಳಗಿನಿಂದ ಸಂಜೆಯತನಕ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗವೃವಧನ ಎಂಬ ಅಲ್ಪಪ್ರಮಾಣದ ವೇತನ ನಿಗದಿಪಡಿಸಿ ಬಿಟ್ಟಿ ಚಾಕರಿ ಮಾಡಿಸಿಕೊಳ್ಳಲಾಗುತ್ತಿದೆ. ನಮಗೆ ಗೌರವಧನದ ಬದಲಾಗಿ ವೇತನ ನಿಗದಿಪಡಿಸಿ, ಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎಸ್. ಅಶ್ವತ್ಥ ನಾರಾಯಣ ಅವರುಗಳಿಗೆ ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘವು ಸೇವೆಯಲ್ಲಿರುವ ನಮ್ಮಗಳಿಗೆ ಸರಕಾರದಿಂದ ಯಾವುದೇ ವೇತನಗಳಿಲ್ಲದೇ ಗೌರವಧನವೆಂಬ ಅಣಕದ ವೇತನಕ್ಕೆ ದುಡಿಯುವ ದುರ್ಬರ ಪರಿಸ್ಥಿತಿ ನಮ್ಮದಾಗಿದೆ. ನಿರ್ವಹಿಸುತ್ತಿರುವ ಕೆಲಸಗಳೆಲ್ಲವೂ ಬಹುತೇಕ ಬಿಟ್ಟಿ ಚಾಕರಿಯಾಗಿದೆ. ನಾಲ್ಕು ಗೋಡೆಯೊಳಗೆ ದುಡಿಯುವ ಬಿಟ್ಟಿ ಚಾಕರಿಯ ಬಂಧನದಿಂದ ಹೊರಬಂದು ಮುಖ್ಯವಾಹಿನಿಯ ದುಡಿಮೆಯಲ್ಲಿ ತೊಡಗಿಸಿಕೊಂಡರೂ, ಸರಕಾರವೇ ಗೌರವ ವೇತನವೆಂದು ನವನಾಮಕರಣ ಮಾಡಿ ಚಾಕರಿ ಮಾಡಿಸುತ್ತಿದೆ. ಪುರುಷ ಪ್ರಧಾನ ಸಮಾಜದಂತೆಯೇ ಸರಕಾರವು ನಮ್ಮನ್ನು ನಡೆಸಿಕೊಳ್ಳುತ್ತಿರುವುದು ತೀವ್ರ ಖಂಡನೀಯ. ಇದನ್ನು ಈ ಕೂಡಲೇ ತಡೆದು ನಮ್ಮಗಳಿಗೆ ವೇತನವನ್ನು ನಿಗದಿಸುವಂತೆ  ಸಂಘವು ಆಗ್ರಹಿಸಿದೆ.

ಇದನ್ನು ಓದಿ: ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಫೆ.10ರಂದು ಸಿಐಟಿಯು ಪ್ರತಿಭಟನೆ

ನಾವು ಮಹಿಳಾ ಸಬಲೀಕರಣದ ಕಾರ್ಯದಲ್ಲಿ ತೊಡಗಿಸಿಕೊಂಡು ಅಹರ್ನಿಸಿ ದುಡಿಯುತ್ತಿದ್ದೇವೆ. ಮುಖ್ಯವಾಗಿ, ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿ ಸಹಾಯಕರು ಮತ್ತು ವಿವಿಧ ಸಖಿ ಕಾರ್ಯಕರ್ತರು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಮಹಿಳಾ ಒಕ್ಕೂಟದ ಮುಖ್ಯ ಕಾರ್ಯಕರ್ತರಾಗಿ ದುಡಿಮೆ ಮಾಡುತ್ತಿದ್ದೇವೆ. ಕಳೆದ ಆರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನ ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ನಮ್ಮಗಳ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಈಗಾಗಲೇ ಮೂರು ನಾಲ್ಕು ಬಾರಿ ಒಂದು ವಾರ ಕಾಲ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿ ನಾವು ಗಣತಿ ಕಾರ್ಯದಲ್ಲಿ ತೊಡಗಿದ್ದು ಯಾವುದೇ ಭತ್ಯೆಯನ್ನು ನೀಡಿರುವುದಿಲ್ಲ. ದಿನ ಭತ್ಯೆ 500 ರೂ. ಗಳಂತೆ ಗಣತಿ ಕಾರ್ಯದ ಎಲ್ಲಾ ದಿನಗಳಿಗೆ ತಕ್ಷಣವೇ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಆರ್ಥಿಕ ನೀತಿಗಳನ್ನು ಬಲವಾಗಿ ಜಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹಿಳಾ ಸಬಲೀಕರಣದ ನೀತಿಯೂ ಕೂಡಾ, ಮಹಿಳೆಯರನ್ನ ಸಬಲೀಕರಣಗೊಳಿಸದೇ ಅವರ ಮೇಲೆ ಮತ್ತಷ್ಟು ಹೊರೆ ಹಾಗೂ ದೌರ್ಜನ್ಯಗಳನ್ನು ಹೆಚ್ಚಿಸುತ್ತಿದೆ. ಜನ ಸಂಖ್ಯೆಯ ಅರ್ಧಭಾಗ ಮಹಿಳೆಯರಿದ್ದರೂ ಬಜೆಟ್‌ನಲ್ಲಿ ನ್ಯಾಯವಾಗಿ ಅರ್ಧದಷ್ಠು ಅನುದಾನ ಒದಗಿಸದಿರುವುದು ಮಹಿಳಾ ಸಬಲೀಕರಣದ ಒಟ್ಟು ಸಮಸ್ಯೆಗಳ ಪ್ರಮುಖ ಮೂಲವಾಗಿದೆ ಎಂದು ಕರ್ನಾಟಕ ರಾಜ್ಯ ಸಂಜೀವಿನಿ ನೌಕರರ ಹಾಗೂ ಫಲಾನುಭವಿಗಳ ಸಂಘ ತಿಳಿಸಿದೆ.

ಇದನ್ನು ಓದಿ: ಕಾರ್ಮಿಕರ ಐಕ್ಯತೆ – ಜನತೆಯ ಸೌಹಾರ್ದತೆಗಾಗಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ

ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಶೌಚಾಲಯ ಹಾಗೂ ಪೀಠೋಪಕರಣ ಹಾಗೂ ಗಣಕಯಂತ್ರಗಳ ಸಹಿತ ಕಛೇರಿಗಳನ್ನು ರಾಜ್ಯದಾದ್ಯಂತ ಒದಗಿಸಬೇಕು. ತಕ್ಷಣದಿಂದಲೇ ಜಾರಿಗೆ ಬರುವಂತೆ ಪುಸ್ತಕ ಬರಹಗಾರರ ವೇತನ ರೂ.15,000 ಗಳಿಗೆ ಮತ್ತು ಸಂಪನ್ಮೂಲ ಸಹಾಯಕರಿಗೆ ಕನಿಷ್ಠ ರೂ.13,000, ವಿವಿಧ ಸಖಿ ಕಾರ್ಯಕರ್ತರಿಗೆ ರೂ. 8,000 ವೇತನವನ್ನು ಹೆಚ್ಚಿಸಬೇಕು. ಪ್ರಯಾಣ ಹಾಗೂ ದಿನ ಭತ್ಯೆ, ಮೊಬೈಲ್ ಹಾಗೂ ಅವುಗಳಿಗೆ ಅಗತ್ಯವಾದ ಕರೆನ್ಸಿ ಒದಗಿಸಬೇಕು. ಅದೇ ರೀತಿ ಭವಿಷ್ಯ ನಿಧಿ ಯೋಜನೆಯನ್ನು ಹಾಗು ಇಎಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ಉಚಿತ ವಿಮಾ ಸೌಲಭ್ಯ ಒದಗಿಸಬೇಕು. ಪ್ರತಿಯೊಬ್ಬರಿಗೂ ನಿವೇಶನ ಸಹಿತ ಉಚಿತ ಮನೆಯನ್ನು ಒದಗಿಸಬೇಕು. ಸರಕಾರಿ ನೌಕರಿಗಳಲ್ಲಿ ಆದ್ಯತೆ ಮೇರೆಗೆ ನೌಕರಿ ಒದಗಿಸಬೇಕು ಎಂದು ಸಂಘವು ಆಗ್ರಹಿಸಿದೆ.

ಮಹಿಳಾ ಸಬಲೀಕರಣಕ್ಕಾಗಿ ಪಂಚಾಯತ್ ಹಾಗೂ ವಾರ್ಡ್‌ ಮಟ್ಟಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಪುಸ್ತಕ ಬರಹಗಾರರು ಮತ್ತು ಮಹಿಳೆಯರ ನಡುವೆ ನೇರ ಕಾರ್ಯ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿ ಸಹಾಯಕರನ್ನು ಸರಕಾರಿ ನೌಕರರೆಂದು ಪರಿಗಣಿಸಿ ವೇತನವನ್ನು ನಿಗದಿಸಬೇಕು.  ಅಲ್ಲಿಯವರೆಗೆ ಕನಿಷ್ಠ ವೇತನ ಒದಗಿಸಬೇಕು. ಮಹಿಳಾ ಒಕ್ಕೂಟದ ಹಾಗೂ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಾಸಿಕ ಪ್ರೋತ್ಸಾಹ ಧನವನ್ನು ತಲಾ 2,000 ರೂ. ನೀಡಬೇಕು. ಸ್ವ ಸಹಾಯಗುಂಪುಗಳಿಗೆ ಅವಶ್ಯವಿರುವಷ್ಠು ಐದು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ಒದಗಿಸಬೇಕು ಎಂದು ತಿಳಿಸಲಾಗಿದೆ.

ಕಛೇರಿಗಳಲ್ಲಿ ಶೌಚಾಲಯ ಸೌಲಭ್ಯ ಹಾಗೂ ಅಗತ್ಯ ಪೀಠೋಪಕರಣಗಳು ಮತ್ತು ಗಣಕಯಂತ್ರಗಳನ್ನು ಒದಗಿಸಬೇಕು. ಮಹಿಳೆಯರ ಜನಸಂಖ್ಯೆಗನುಗುಣವಾಗಿ ಬಜೆಟ್ ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಗಂಡ ಸತ್ತ ಮಹಿಳೆಯರು, ಪರಿತ್ಯಕ್ತ ಮಹಿಳೆಯರು, ಅಂಗವಿಕಲ ಮಹಿಳೆಯರುಗಳಿಗೆ ಕನಿಷ್ಟ ಮಾಸಿಕ 5,000 ರೂಪಾಯಿಗಳ ನೆರವು ನೀಡಬೇಕು. ಗಂಡ ಸತ್ತ ಹಾಗೂ ಅಂಗವಿಕಲ ಮತ್ತು ದೇವದಾಸಿ ಯುವ ಮಹಿಳೆಯರ ಮರು ಮದುವೆಗೆ ಪ್ರೋತ್ಸಾಹ ಧನವನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *