ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಂಘಪರಿವಾರ

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ

ಸಂಘಪರಿವಾರದೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಂಡ ವಿವಿಧ ರಂಗದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸುಪ್ತವಾಗಿ ಅಥವಾ ಅಧಿಕೃತವಾಗಿ ಸೇರಿಕೊಂಡರೆ ಏನು ತೊಂದರೆ? ಅಂಥವರು ಯೋಜಿಸುವ ಸಾರ್ವಜನಿಕ ಕ್ರಿಯೆಗಳ ಮೂಲಕ ಅವರ ಸೈದ್ಧಾಂತಿಕ ನಿಲುವನ್ನು ಮುನ್ನೊತ್ತುವುದಕ್ಕೆ ವಿರೋಧ ಯಾಕೆ? ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ತೊಂದರೆ ಇರುವುದು ಸಂಘಪರಿವಾರದ ಸೃಜನಶೀಲರು ಮತ್ತು ಬುದ್ಧಿಜೀವಿಗಳು, ಅಥವಾ ಯಾರೇ ಆಗಲಿ, ಅವರು ಮೈಗೂಡಿಸಿಕೊಂಡಿರುವ ಅಥವಾ ಆಯ್ಕೆಯ ಸಿದ್ಧಾಂತದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಕ್ರಿಯೆಯಲ್ಲಿ ಅಲ್ಲ. ಎರಡನೆಯ ಕಾರಣ, ಸಂಘಪರಿವಾರದ ಸೈದ್ಧಾಂತಿಕ ನಿಲುವು ಭಾರತದ ಬಂಡವಾಳವಾದೀ ಪ್ರಭುತ್ವದ ನವಉದಾರವಾದೀ ಆರ್ಥಿಕತೆಗೆ ಊಳಿಗಮಾನ್ಯ ಧೋರಣೆಗಳ ರಾಜಕೀಯ ಮತ್ತು ಸಾಮಾಜಿಕತೆಗಳನ್ನು ಹೊಂದಿಸಿದ ಪರಿಷ್ಕೃತ ಫ್ಯಾಸೀವಾದವೇ ಆಗಿದೆ.

ಸಂಘಪರಿವಾರವು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಎಷ್ಟೋ ಮೊದಲೇ ಹಿಂದುತ್ವದ ಸೈದ್ಧಾಂತಿಕತೆಯಲ್ಲಿ ತಮ್ಮನ್ನು ಗುರುತಿಸಿಕೊಂಡ ಜನರು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ವಿವಿಧ ರೀತಿಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯಪೂರ್ವ ದಿನಗಳಿಂದಲೂ ಎಳೆಯರನ್ನು ಕ್ರೀಡೆ ಮತ್ತು ಧಾರ್ಮಿಕ-ಸಾಮಾಜಿಕ ಆಚರಣೆಗಳ ಮೂಲಕ ಆಕರ್ಷಿಸುತ್ತಾ, ಸಂಘಟಿಸುತ್ತಾ, ವಯಸ್ಸು, ಲಿಂಗ, ಉದ್ದೇಶ-ಸಂದರ್ಭಗಳಿಗನುಗುಣವಾದ ಸಂಘಟನೆಗಳನ್ನು ಹುಟ್ಟುಹಾಕುತ್ತಾ ಹೆಮ್ಮರವಾಗಿ ಬೆಳೆದ ಸಂಘಪರಿವಾರ ಡಿಜಿಟಲ್ ಬಂಡವಾಳವಾದದ ಪ್ರಸ್ತುತ ಕಾಲಘಟ್ಟದಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡಿದೆ. ಹೀಗಾಗಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಸಮೂಹ ಮಾಧ್ಯಮ ಹೀಗೆ ಭಾರತದ ಪ್ರಭುತ್ವದ ಎಲ್ಲ ಅಂಗಗಳಲ್ಲಿಯೂ ಸಂಘಪರಿವಾರದ ತಾತ್ವಿಕತೆಗೆ ಹೊದಿಸಿದ್ದ ಸಾಂಸ್ಕೃತಿಕ ಮುಸುಕನ್ನು ಕಳಚಿಹಾಕಿದ ಅಧಿಕಾರಸ್ಥರು, ಶಿಕ್ಷಣತಜ್ಞರು, ಸಂಸ್ಕೃತಿ ಚಿಂತಕರು, ತಾಂತ್ರಿಕ ಪರಿಣತರು ಮತ್ತು ರಾಜಕೀಯ ಕಾಲಾಳುಗಳು ಎಲ್ಲ ಕ್ಷೇತ್ರಗಳಲ್ಲೂ ಈಗ ಯಾವ ಮುಸುಕೂ ಇಲ್ಲದ ಹೆಮ್ಮೆಯ ಹಿಂದುತ್ವವಾದಿಗಳಾಗಿಯೇ ಕಾಣಸಿಗುತ್ತಾರೆ. ರಾಜ್ಯಗಳ ಮತ್ತು ಕೇಂದ್ರದ ಆರ್ಥಿಕ ನಿಯಂತ್ರಣದಲ್ಲಿ ಅರೆ ಸರ್ಕಾರೀ ಸಂಸ್ಥೆಗಳಾಗಿದ್ದ ವಿವಿಧ ಅಕಾಡೆಮಿಗಳು, ಈಗ ನೇರವಾಗಿ ಸಂಘಪರಿವಾರದ ಜನರಿಂದ ನಿರ್ವಹಿಸಲ್ಪಡುತ್ತಿವೆ. ಕರ್ನಾಟಕದ ಸಂದರ್ಭದಲ್ಲಿ ಹೇಳುವುದಾದರೆ, ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಕಾಶವಾಣಿಗಳೂ ಸಹ ಇದಕ್ಕೆ ಹೊರತಾಗಿಲ್ಲ.

ಲೇಖಕರು, ಚಿತ್ರ ನಿರ್ಮಾಪಕರು, ಕಲಾವಿದರು, ಸಂಸ್ಕೃತಿ ಚಿಂತಕರು ಮೊದಲಾದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಸಂಘಪರಿವಾರದೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಳ್ಳುವುದು ಅನೈತಿಕವೇ, ಅಪರಾಧವೇ ಎಂಬ ಪ್ರಶ್ನೆಗಳಿಗೆ ಈಗಿರುವ ‘ಪ್ರಜಾತಾಂತ್ರಿಕ’ ಚೌಕಟ್ಟಿನೊಳಗೇ ಉತ್ತರಿಸುವುದಾದರೆ, ತಾಂತ್ರಿಕವಾಗಿ ‘ಇಲ್ಲ’ ಎಂಬ ಖಚಿತ ಉತ್ತರ ಸಾಧ್ಯ. ಎಲ್‌ಪಿಜಿ ಆರ್ಥಿಕತೆ ಮತ್ತು ಸಾಮಾಜಿಕತೆಯ ಸಂದರ್ಭದಲ್ಲಿ ಲೇಖಕರು, ಚಿತ್ರ ನಿರ್ಮಾಪಕರು, ಕಲಾವಿದರು, ಸಂಸ್ಕೃತಿಚಿಂತಕರು ಮೊದಲಾದ ಸೃಜನಶೀಲರು ಮತ್ತು ಬುದ್ಧಿಜೀವಿಗಳಲ್ಲಿ ಅನೇಕರು ಸೈದ್ಧಾಂತಿವಾಗಿ ಬಂಡವಾಳವಾದದೊಂದಿಗೆ, ಉದಾರವಾದದೊಂದಿಗೆ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಇವೇ ಪ್ರಶ್ನೆಗಳನ್ನು ಅಂಥವರ ಬಗ್ಗೆ ಕೇಳಿದಾಗಲೂ ಈಗಿರುವ ಪ್ರಜಾತಾಂತ್ರಿಕ ಚೌಕಟ್ಟಿನೊಳಗೆ ಸಿಗುವ ಉತ್ತರ ‘ಇಲ್ಲ’ ಎಂಬುದೇ ಆಗಿದೆ. ಹಾಗಿದ್ದರೆ ಸಂಘಪರಿವಾರದೊಂದಿಗೆ ಸೈದ್ಧಾಂತಿಕವಾಗಿ ಗುರುತಿಸಿಕೊಂಡ ವಿವಿಧ ರಂಗದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸುಪ್ತವಾಗಿ ಅಥವಾ ಅಧಿಕೃತವಾಗಿ ಸೇರಿಕೊಂಡರೆ ಏನು ತೊಂದರೆ? ಅಂಥವರು ಯೋಜಿಸುವ ಸಾರ್ವಜನಿಕ ಕ್ರಿಯೆಗಳ ಮೂಲಕ ಅವರ ಸೈದ್ಧಾಂತಿಕ ನಿಲುವನ್ನು ಮುನ್ನೊತ್ತುವುದಕ್ಕೆ ವಿರೋಧ ಯಾಕೆ?

ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ತೊಂದರೆ ಇರುವುದು ಸಂಘಪರಿವಾರದ ಸೃಜನಶೀಲರು ಮತ್ತು ಬುದ್ಧಿಜೀವಿಗಳು, ಅಥವಾ ಯಾರೇ ಆಗಲಿ, ಅವರು ಮೈಗೂಡಿಸಿಕೊಂಡಿರುವ ಅಥವಾ ಆಯ್ಕೆಯ ಸಿದ್ಧಾಂತದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಕ್ರಿಯೆಯಲ್ಲಿ ಅಲ್ಲ. ಹಾಗೆ ಗುರುತಿಸಿಕೊಳ್ಳುವ ಸಿದ್ಧಾಂತವು ಜನಸಮುದಾಯದ ಅಂದರೆ ಸಾಮಾಜಿಕವಾಗಿ ದುಡಿಯುವ, ರಾಜಕೀಯವಾಗಿ ಆಳಿಸಿಕೊಳ್ಳುವ ಸಾಮಾನ್ಯ ಜನರ ಹಿತಾಸಕ್ತಿಗನ್ನು ಬೆಂಬಲಿಸುವ ಸಿದ್ಧಾಂತವಾಗಿದೆಯೋ, ಇಲ್ಲವೋ ಎಂಬುದು. ಅಂದರೆ ನಿಜವಾದ ಅರ್ಥದಲ್ಲಿ ‘ಪ್ರಜಾಪ್ರಭುತ್ವ’ವಾದೀ ಸಿದ್ಧಾಂತವಾಗಿದೆಯೋ ಇಲ್ಲವೋ ಎಂಬುದರಲ್ಲಿ.

ಎರಡನೆಯ ಕಾರಣ, ಸಂಘಪರಿವಾರವು ತನ್ನ ರಾಜಕೀಯ ಆಯ್ಕೆ ಮತ್ತು ಆರ್ಥಿಕ ಆದ್ಯತೆಗಳನ್ನು ಅವುಗಳ ನಿಜರೂಪದಲ್ಲಿ ಮಂಡಿಸುವ ಬದಲು ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಗೊಳಿಸುತ್ತದೆ. ಭಾರತೀಯ ಸಂಸ್ಕೃತಿ, ಸನಾತನ ಭಾರತ, ವೈದಿಕಪರಂಪರೆ, ಆರ್ಷಜ್ಞಾನ, ವೇದವಿಜ್ಞಾನ, ವಿಶ್ವಗುರು ಹೀಗೆ ಸಂಘಪರಿವಾರವು ತನ್ನ ಸಂಕಥನಗಳಲ್ಲಿ ಮತ್ತೆ ಮತ್ತೆ ಬಳಸುವ ಯಾವ ಪದಗುಚ್ಛವನ್ನು ನೋಡಿದರೂ ಅದರ ಹಿಂದಿರುವುದು ದಿವ್ಯ-ಭವ್ಯವೆಂದು ಕೀರ್ತಿಸುವ ವರ್ಣವ್ಯವಸ್ಥೆಯೇ. ಜಾತಿತಾರತಮ್ಯ ಆಧಾರಿತ ಉತ್ತಮಿಕೆಯ ಬ್ರಾಹ್ಮಣ ಯಜಮಾನ್ಯವೇ. ನಂಬಿಕೆಯನ್ನು ವಿಜ್ಞಾನವೆಂದು, ಪುರಾಣಗಳನ್ನು ಚರಿತ್ರೆಯೆಂದು, ಜಾತಿ ತಾರತಮ್ಯಗಳನ್ನು ನೈಸರ್ಗಿಕ ಭೇದಗಳೆಂದು ನಂಬುವ, ತನ್ನ ನಂಬಿಕೆಯೇ ಚಾರಿತ್ರಿಕ ಮತ್ತು ವಸ್ತುನಿಷ್ಠ ಸಾರ್ವಕಾಲಿಕ ಸತ್ಯವೆಂದು ಪ್ರತಿಪಾದಿಸುವ ಸಂಘಪರಿವಾರದ ಸೈದ್ಧಾಂತಿಕತೆಯ ಹಿಂದೆ ಯಾವ ವೈಚಾರಿಕತೆಗೂ ಜಗ್ಗದ ಮೌಢ್ಯವಿದೆ. ತನ್ನ ಅಜ್ಞಾನವನ್ನು ಸಮರ್ಥಿಸಿಕೊಳ್ಳುವ ಹುಂಬತನವಿದೆ. ತಾರ್ಕಿಕವಾಗಿ ಎದುರಿಸಲಾಗದವರನ್ನು ಬಗ್ಗುಬಡಿಯುವ ಕ್ರೌರ್ಯವಿದೆ. ಕ್ರಿಯೆಯ ಹೊಣೆಗಾರಿಕೆಯಿಂದ ಜಾರಿಕೊಳ್ಳಬಲ್ಲ ಕುತರ್ಕ-ಜಾಣ್ಮೆಗಳಿವೆ. ನೈತಿಕತೆ-ಅನೈತಿಕತೆ, ನ್ಯಾಯ-ಅನ್ಯಾಯ, ಸುಳ್ಳು-ಸತ್ಯಗಳ ನಡುವಿನ ಗೆರೆಯನ್ನು ಅಳಿಸಿ ಅಥವಾ ಆಚೀಚೆ ತಳ್ಳಿ ಗೊಂದಲದ ಲಾಭವನ್ನು ಪಡೆಯುವ ವ್ಯಾಪಾರಿಯ ಧೂರ್ತತೆ ಇದೆ. ಸಮಯಕ್ಕೊಂದು ಹೆಸರು, ಉದ್ದೇಶಕ್ಕೊಂದು ಸಂಘಟನೆಯನ್ನು ಹುಟ್ಟುಹಾಕಿ ತನ್ನೆಲ್ಲ ಹುಸಿಗಳನ್ನೂ ನಿಜವೆಂದು ತೋರುವಂತೆ ಪೋಷಿಸಬಲ್ಲ ಅಗಾಧ ಕಲ್ಪನಾಶಕ್ತಿ ಇದೆ.

ಬಂಡವಾಳವಾದೀ ಸಿದ್ಧಾಂತವು ಪ್ರತಿಪಾದಿಸುವ ಪ್ರಜಾಪ್ರಭುತ್ವವು ಕೇವಲ ತೋರಿಕೆಯದು. ಅಥವಾ ಅದು ಆಳುವವರ್ಗಕ್ಕೆ ಮಾತ್ರ ಅನ್ವಯವಾಗುವಂಥ ‘ಪ್ರಜಾತಂತ್ರ’. ಹಾಗಿದ್ದರೂ ಅದರಲ್ಲಿ ಆಳಿಸಿಕೊಳ್ಳುವ ಜನಸಮುದಾಯದ ಆಶೋತ್ತರಗಳ ಭಿನ್ನ ನೆಲೆಗಳ ಅಭಿವ್ಯಕ್ತಿಗೆ ಮತ್ತು ಸೀಮಿತ ಮಟ್ಟದ ಭಿನ್ನಮತಕ್ಕೆ ಸ್ವಲ್ಪವಾದರೂ ಅವಕಾಶವಿದೆ. ಅದು ಕೇವಲ ಆಳುವವರ ಅಧಿಕಾರವನ್ನು ಛಿದ್ರವಾಗದಂತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಎಂಬುದು ನಿಜ. ಹೀಗಿದ್ದರೂ ಒಟ್ಟು ಫಲಿತದಲ್ಲಿ, ಪ್ರಭುತ್ವದ ಬುನಾದಿಯನ್ನು ಅಲುಗಿಸದ ಭಿನ್ನಮತ ಮತ್ತು ಭಿನ್ನ ನಿಲುವುಗಳು ಜನಸಾಮಾನ್ಯರ ಅಸ್ಮಿತೆ ಮತ್ತು ಅನನ್ಯತೆಗಳಿಗೆ ಸ್ಥಳಾವಕಾಶವನ್ನು ಒದಗಿಸುತ್ತದೆ ಎಂಬುದೂ ಅಷ್ಟೇ ನಿಜ. ತನ್ನ ಗರ್ಭದಲ್ಲಿ ಆರ್ಥಿಕ ತಾರತಮ್ಯವನ್ನು ಪೋಷಿಸುತ್ತಲೇ ಸಮಾಜದ ಮೇಲ್ಪದರಗಳಲ್ಲಿ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ತೋರಿಕೆಯ ಇಲ್ಲವೆ ಸಾಂಕೇತಿಕವಾದ ಸಮಾನತೆಯನ್ನು ಬಂಡವಾಳವಾದವು ತಾತ್ವಿಕವಾಗಿಯಾದರೂ ಮಾನ್ಯಮಾಡುತ್ತದೆ. ಈ ಕಾರಣಕ್ಕಾಗಿಯೇ ಬಂಡವಾಳವಾದೀ ಪ್ರಜಾತಂತ್ರವು ‘ಪ್ರಜಾಪ್ರಭುತ್ವ’ ದ ಹೆಸರಿನಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿಯೂ ‘ಜನಪ್ರಿಯ’ವಾದ ಜನತಂತ್ರವಾಗಿದೆ.

ಬಂಡವಾಳವಾದೀ ಪ್ರಭುತ್ವದ ತೀವ್ರ ಸ್ವರೂಪವಾದ ಫ್ಯಾಸೀವಾದದ ಸೈದ್ಧಾಂತಿಕ ಚೌಕಟ್ಟಿನೊಳಕ್ಕೆ ವರ್ಗಭೇದದ ಜೊತೆಗೆ ವರ್ಣಭೇದ ಮತ್ತು ಜನಾಂಗ ಭೇದಗಳು ಸೇರಿಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಜನಸಮುದಾಯದ ಪರವಾದ ಭಿನ್ನಮತಕ್ಕೆ ಯಾವ ಅವಕಾಶವೂ ಇಲ್ಲ. ಮಾತ್ರವಲ್ಲ, ಭಿನ್ನಮತವೆಂಬುದೇ ಇರಬಾರದೆಂಬ ಏಕಾಧಿಕಾರದ ನಿಲುವು ಫ್ಯಾಸೀವಾದದ ಅವಿಭಾಜ್ಯ ಅಂಗ. ಇನ್ನೂ ತೀವ್ರಸ್ಥಿತಿಯಲ್ಲಿ ಭಿನ್ನನಿಲುವನ್ನು ಹೊಂದಿರುವ ಜನರ ಅಸ್ಮಿತೆ, ಅನನ್ಯತೆ ಮತ್ತು ಅಸ್ತಿತ್ವಗಳು ಏಕಾಧಿಕಾರದ ಮೂಸೆಯಲ್ಲಿ ಕರಗಿಹೋಗಬೇಕು ಇಲ್ಲವೇ ನಾಶವಾಗಬೇಕು ಎಂಬ ಪರ್ಯಾಯವನ್ನು ಫ್ಯಾಸೀವಾದವು ಜನರಮುಂದೆ ಇಡುತ್ತದೆ. ನಾಶವಾಗುವುದಕ್ಕಿಂತಾ ಬದುಕಿರುವುದೇ ಎಲ್ಲರ, ಅದರಲ್ಲೂ ನಿರ್ಬಲರ ಸ್ವಾತಂತ್ರ್ಯದ ಪ್ರಾಥಮಿಕ ಅಭಿವ್ಯಕ್ತಿಯಾದ್ದರಿಂದ ಅವರ ಪ್ರತಿರೋಧವಿಲ್ಲದ ಜೀವನಶೈಲಿಯು ಫ್ಯಾಸೀವಾದೀ ಪ್ರಭುತ್ವಕ್ಕೆ ಜನರ ‘ಸಮ್ಮತಿ’ಯಾಗಿ ಪರಿವರ್ತಿತವಾಗುತ್ತದೆ.

ಸಂಘಪರಿವಾರದ ಸೈದ್ಧಾಂತಿಕ ನಿಲುವು ಭಾರತದ ಬಂಡವಾಳವಾದೀ ಪ್ರಭುತ್ವದ ನವಉದಾರವಾದೀ ಆರ್ಥಿಕತೆಗೆ ಊಳಿಗಮಾನ್ಯ ಧೋರಣೆಗಳ ರಾಜಕೀಯ ಮತ್ತು ಸಾಮಾಜಿಕತೆಗಳನ್ನು ಹೊಂದಿಸಿದ ಪರಿಷ್ಕೃತ ಫ್ಯಾಸೀವಾದವೇ ಆಗಿದೆ. ಉತ್ಪಾದನೆ, ಸರಕು-ಸೇವೆ, ವಿನಿಮಯ-ಹಂಚಿಕೆಗಳ ಆರ್ಥಿಕತೆಯಲ್ಲಿ ಬಂಡವಾಳವಾದಿಯಾಗಿ, ಕೌಟುಂಬಿಕ ಸಂಬಂಧಗಳು, ಸಾಮಾಜಿಕ ಒಡನಾಟ ಮತ್ತು ಸಾಂಸ್ಕೃತಿಕ ಧೋರಣೆಗಳಲ್ಲಿ ಊಳಿಗಮಾನ್ಯ ಸಮಾಜವಾಗಿ ಇರುವ ಭಾರತದ ಸಂಕೀರ್ಣ ಸ್ವರೂಪವು ಸಂಘಪರಿವಾರದ ಅಧಿಕಾರಗ್ರಹಣಕ್ಕೆ ಅನುಕೂಲಕರವಾಗಿಯೂ, ತಮ್ಮ ಧೋರಣೆಗಳಿಗೆ ಹೊಂದುವಂತೆ ನಿಭಾಯಿಸಲು ಏಕಕಾಲಕ್ಕೆ ಕಷ್ಟಕರವಾದುದೂ ಆಗಿದೆ. ಯೂರೋಪಿನ ನಾಜೀ಼ ಫ್ಯಾಸೀವಾದದಲ್ಲಿ ಜನಾಂಗದ್ವೇಷಕ್ಕೆ ಗುರಿಯಾಗಿದ್ದ ಯಹೂದಿಗಳ ಸ್ಥಾನದಲ್ಲಿ ಭಾರತದಲ್ಲಿ ಸಂಘಪರಿವಾರದ ವೈದಿಕ-ಸನಾತನವಾದೀ ಫ್ಯಾಸೀವಾದಕ್ಕೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರು ದ್ವೇಷಯೋಗ್ಯರಾಗಿದ್ದಾರೆ. ಕಮ್ಯೂನಿಸ್ಟರು ಮತ್ತು ಅರಾಜಕತಾವಾದಿಗಳು ಹಿಟ್ಲರ್ ಮತ್ತು ಮುಸೋಲಿನಿಗೆ ಹೇಗೋ ಹಾಗೆ ಭಾರತದಲ್ಲಿ ಕಮ್ಯೂನಿಸ್ಟರು ಮತ್ತು ನಾಸ್ತಿಕರು ಸಂಘಪರಿವಾರಕ್ಕೆ ಹಾಗೆ.

ಊಳಿಗಮಾನ್ಯ ಸಮಾಜದಲ್ಲಿ ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜನಸಾಮಾನ್ಯರಿಗೆ ಸಮ್ಮತವಾದ ‘ಸರ್ವಶಕ್ತ’ ಏಕದೇವ-ದೇವಿಯ ಆರಾಧನೆಯು, ಏಕಾಧಿಕಾರದ ಮನುಷ್ಯರೂಪದ ನೇತಾರನ ಆರಾಧನೆಯಾಗುತ್ತದೆ. ಇದಕ್ಕೆ ವಿರುದ್ಧವಾದ ಧೋರಣೆಯು ನಾಸ್ತಿಕತೆ, ದೈವದ್ರೋಹ ಮತ್ತು ರಾಜದ್ರೋಹವೆನಿಸುತ್ತದೆ. ಸಂಘಪರಿವಾರವು ಅಂಥ ಏಕದೇವತೆಯ ಜೊತೆಗೆ, ಮತ್ತು ಅದರ ಸ್ಥಾನದಲ್ಲಿ ಮಾತೃಭೂಮಿಯನ್ನು ಪ್ರತಿಷ್ಠಾಪನೆಗೊಳಿಸುತ್ತದೆ. ಹೀಗಾಗಿ ಜನಸಮುದಾಯವನ್ನು ದೇಶವೆಂದು ಗುರುತಿಸಿ ಗೌರವಿಸುವ ಬದಲು ಭಾರತದ ಭೌಗೋಳಿಕ ಚಿತ್ರವನ್ನೇ ಭಾರತಮಾತೆ, ನಾಡದೇವಿ ಎಂದು ಭಾವಿಸಿ ಪೂಜಿಸುವಂಥ ದೇಶದ ಆರಾಧನೆಯು, ಸಂಘಪರಿವಾರದ ಪಾಲಿಗೆ ದೇಶಭಕ್ತಿ, ರಾಷ್ಟ್ರಭಕ್ತಿ, ನಾಡಭಕ್ತಿ ಮುಂತಾದ ಧಾರ್ಮಿಕ-ಲೌಕಿಕ ಮಿಶ್ರಣದ ರಾಜಕೀಯ ಮೌಲ್ಯವಾಗುತ್ತದೆ. ಇದರ ಬಗೆಗಿನ ಭಿನ್ನಮತವು ಸಹಜವಾಗಿಯೇ ದೇಶದ್ರೋಹ, ರಾಷ್ಟ್ರದ್ರೋಹ, ಮಾತೃಭೂಮಿಗೆ ತೋರಿಸಬಾರದ ಅಗೌರವ ಎಂದಾಗಿಬಿಡುತ್ತದೆ.

ಸಂಘಪರಿವಾರದ ಸೈದ್ಧಾಂತಿಕ ನಿಲುವಿನ ಜೊತೆ ತಮ್ಮನ್ನು ಗುರುತಿಸಿಕೊಳ್ಳುವ ಸೃಜನಶೀಲರು, ಕಲಾವಿದರು ಮತ್ತು ಬುದ್ಧಿಜೀವಿಗಳು ಬೌದ್ಧಿಕ ವಾಗ್ವಾದ ಮತ್ತು ಚರ್ಚೆಗಳಲ್ಲಿ  ತಮ್ಮ ಸೈದ್ಧಾಂತಿಕ ನೆಲೆಯನ್ನು ಸ್ಪಷ್ಟವಾಗಿ ಪ್ರಕಟಿಸಿ ಸಮರ್ಥಿಸಿಕೊಳ್ಳುವ ಬದಲು ‘ಹೀಗಿದ್ದರೇನು ತಪ್ಪು?’, ‘ಇದು ಹಿಂದಿನವರ ತೀರ್ಮಾನ’, ‘ನೀವೂ ಇದರಲ್ಲಿ ಪಾಲುದಾರರು’ ಮುಂತಾಗಿ ಪ್ರತಿದಾಳಿ ನಡೆಸಿ ಬಾಯಿ ಮುಚ್ಚಿಸಲು ಯತ್ನಿಸುತ್ತಾರೆ.

ಸಂಘಪರಿವಾರದಲ್ಲಿ ಮುಗ್ಧ ಕಾಲಾಳುಗಳಿದ್ದಾರೆ. ಅರೆಶಿಕ್ಷಿತ ಉತ್ಸಾಹಿಗಳಿದ್ದಾರೆ. ಅಧ್ಯಯನಶೀಲರಾದ ಬೌದ್ಧಿಕರಿದ್ದಾರೆ. ಆದರೂ ಸರ್ಕಾರದ ಅನುದಾನವನ್ನು ಪಡೆಯುವ ಅಕಾಡೆಮಿಗಳು, ಸಂಸ್ಕೃತಿ ಕೇಂದ್ರಗಳು, ಸಾಹಿತ್ಯ ಕೂಟಗಳು, ಚಲನಚಿತ್ರ ಸಂಸ್ಥೆಗಳು, ಕಲಾವಿದರ ಬಳಗಗಳು, ಪತ್ರಿಕಾ ಮಾಧ್ಯಮಗಳು, ದೂರದರ್ಶನ, ಆಕಾಶವಾಣಿಯಂಥ ಪ್ರಸಾರ ಕೇಂದ್ರಗಳು ಇವುಗಳಲ್ಲಿ ತುಂಬಿಕೊಂಡಿರುವ ಸಂಘಪರಿವಾರದ ಸೃಜನಶೀಲರು ಮತ್ತು ಬುದ್ಧಿಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವೈಚಾರಿಕ ಮತ್ತು ತಾರ್ಕಿಕ ನೆಲೆಗಳಲ್ಲಿ ಭಿನ್ನ ಸೈದ್ಧಾಂತಿಕ ನಿಲುವುಗಳ ಸೃಜನಶೀಲರನ್ನು ಮತ್ತು ಬುದ್ಧಿಜೀವಿಗಳೊಂದಿಗೆ ಮುಕ್ತಚರ್ಚೆ-ವಾಗ್ವಾದಗಳಲ್ಲಿ ಪರಸ್ಪರವಾಗಿ ಬೆರೆಯುವುದಕ್ಕಿಂತಾ ಏಕಮುಖವಾದ ಸ್ವಕೀರ್ತನೆ ಅಥವಾ ಎದುರಾಳಿಯ ಭರ್ತ್ಸನೆಗಳ ಮೂಲಕ ಎದುರಿಸುತ್ತಾರೆ. ಗುಂಪುದಾಳಿಯ ಮೂಲಕ ಮಣಿಸಲು ಯೋಚಿಸುತ್ತಾರೆ.

ಹೀಗಾಗಲು ಮುಖ್ಯ ಕಾರಣ ಸಂಘಪರಿವಾರದ ಸೈದ್ಧಾಂತಿಕ ನೆಲೆಯು ಬಂಡವಾಳವಾದದಂತೆ ಪ್ರಜಾತಾಂತ್ರಿಕವಾಗಿರದೆ, ಏಕಾಧಿಕಾರವನ್ನು ಬಯಸುವ ಫ್ಯಾಸೀವಾದವನ್ನೇ ನೆಚ್ಚಿಕೊಂಡಿರುವುದೇ ಆಗಿದೆ.

Donate Janashakthi Media

Leave a Reply

Your email address will not be published. Required fields are marked *