ಸಾಮಾಜಿಕ ಭದ್ರತೆ ಖಾತ್ರಿ ಇಲ್ಲ,  ಕೇವಲ ಭರವಸೆ ಮಾತ್ರ

ಸಾಮಾಜಿಕ ಸುರಕ್ಷತಾ ಸಂಹಿತೆ-2020

ಕಾನೂನಿನಲ್ಲಿ ಯಾವುದೂ ಸ್ಪಷ್ಟವಾಗಿಲ್ಲ. ಸಾಮಾಜಿಕ ಭದ್ರತೆಗಳನ್ನು ’ಜಾರಿಮಾಡಬಹುದು’, ’ನೀಡಬಹುದು’, ’ಸೂಚಿಸಬಹುದು’, ’ಕೊಡಬಹುದು’ ಎನ್ನುವ  ಭವಿಷ್ಯಕ ವಾಕ್ಯಗಳೇ ತುಂಬಿವೆ. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ’ಸಾಮಾಜಿಕ ಭದ್ರತಾ ನಿಧಿ’ ಸ್ಥಾಪಿಸಲು 2020ರ ಸಾಮಾಜಿಕ ಭದ್ರತಾ ಸಂಹಿತೆ ಪ್ರಸ್ತಾಪಿಸಿದೆ. ಆದರೆ ಇದಕ್ಕಾಗಿ ಹಣ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ.  ನಾಲ್ಕು ಸಂಹಿತೆಯ ಅಡಿಯಲ್ಲಿ  ಮಾಲಿಕರಿಗೆ ವಿಧಿಸಲಾದ ದಂಡಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಈ ನಿಧಿಗೆ ಜಮಾ ಮಾಡಲಾಗುವುದು ಎಂದು ಮಾತ್ರ ಹೇಳಲಾಗಿದೆ. ಮಾಲಿಕರು ಕಾನೂನು ಉಲ್ಲಂಘಿಸದೆ ದಂಡದ ಹಣ ಇಲ್ಲದಿದ್ದರೆ, ಎಲ್ಲಿಂದ ಹಣ ಬರುತ್ತದೆ?

– ಕೆ.ಮಹಾಂತೇಶ್

ಭಾರತ ಸರಕಾರ ಸಂಸತ್ತಿನ ಉಭಯ ಸದನಗಳಲ್ಲಿ ಸೆಪ್ಟೆಂಬರ್ 28 ರಂದು ಅಂಗೀಕರಿಸಿದ ’ಸಾಮಾಜಿಕ ಸುರಕ್ಷತಾ ಸಂಹಿತೆ 2020’ ಕ್ಕೆ ಸೆಪ್ಟೆಂಬರ್ 28 ರಂದು ರಾಷ್ಟ್ರಪತಿಗಳು ಅಂತಿಮ ಮುದ್ರೆ ಹೊತ್ತಿದ್ದಾರೆ. ಇದಾದ ಬಳಿಕ  ’ಸಾಮಾಜಿಕ ಸುರಕ್ಷತಾ ಸಂಹಿತೆ – 2020’ ನ್ನು ಸೆಪ್ಟೆಂಬರ್ 29ರಂದು ಭಾರತ ಸರಕಾರದ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ದೇಶದ 36 ನೇ ಕಾನೂನಾಗಿ ಜಾರಿಯಾಗಿದೆ. ಇದೀಗ ಕಾನೂನು ಜಾರಿ ಪ್ರಕ್ರಿಯೆಯಾಗಿ ನಿಯಮಾವಳಿಗಳನ್ನು ಪ್ರಕಟ ಮಾಡಿ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ.

ಒಂಬತ್ತು ಕಾನೂನುಗಳ ರದ್ದು

ಕೇಂದ್ರ ಸರಕಾರದ ಹಾಲಿ ಜಾರಿಯಲ್ಲಿದ್ದ ಒಂಬತ್ತು ಕಾನೂನುಗಳನ್ನು ’ಸಾಮಾಜಿಕ ಸುರಕ್ಷತಾ ಸಂಹಿತೆ 2020 ರಲ್ಲಿ ವಿಲೀನಗೊಳಿಸಿ (ಕಲಂ 164ರಲ್ಲಿ) ರದ್ದುಗೊಳಿಸಿದೆ. ಅವುಗಳೆಂದರೆ : ನೌಕರರ ನ? ಪರಿಹಾರ ಕಾಯ್ದೆ 1923, ನೌಕರರ ರಾಜ್ಯ ವಿಮಾ ಕಾಯ್ದೆ (ಇ.ಎಸ್.ಐ) 1948, ನೌಕರರ ಭವಿಷ್ಯನಿಧಿ ಮತ್ತು ವಿವಿಧ ನಿಬಂಧಗಳ ಕಾಯ್ದೆ 1952, ಹೆರಿಗೆ ಸವಲತ್ತು ಕಾಯ್ದೆ 1961, ಗ್ರಾಚುಯಿಟಿ ಪಾವತಿ ಕಾಯ್ದೆ 1972, ಉದ್ಯೋಗ ವಿನಿಮಯ ಕೇಂದ್ರ ಕಾಯ್ದೆ (ಕಡ್ಡಾಯ ಖಾಲಿ ಸ್ಥಾನಗಳ ಪ್ರಕಟಣೆ) 1959. ಸಿನಿಮ ಕಾರ್ಮಿಕರ ಸಾಮಾಜಿಕ ನಿಧಿ ಕಾಯ್ದೆ 1981. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ 1996, ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008 ಪ್ರಮುಖವಾದವುಗಳು.

ಸಾಮಾಜಿಕ ಭದ್ರತೆ ಸಂಹಿತೆ ಉದ್ದೇಶ

ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಅವರು ಲೋಕಸಭೆಯಲ್ಲಿ ಸಾಮಾಜಿಕ ಭದ್ರತಾ ಸಂಹಿತೆ 2020 ನ್ನು ಮಂಡಿಸಿ ಪರಿಚಯಿಸುತ್ತಾ ಕಾರ್ಮಿಕರು ತಮ್ಮ ಮೂಲಭೂತ ಅಗತ್ಯಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಸಾರ್ವತ್ರಿಕ ಮತ್ತು ಸಮಗ್ರ ಸಾಮಾಜಿಕ ಭದ್ರತೆಯ ಅಗತ್ಯವನ್ನು ಎರಡನೇ ರಾಷ್ಟೀಯ ಕಾರ್ಮಿಕ ಆಯೋಗ (ಎನ್.ಸಿ.ಎಲ್ 2002) ಹೇಳಿತ್ತು ಮತ್ತು ಈ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳ ಸರಳೀಕರಣ ಮತ್ತು ಕ್ರೋಢೀಕರಣಕ್ಕೆ ಶಿಫಾರಸ್ಸು ಮಾಡಿತು. ಹೀಗಾಗಿ  ಅದಕ್ಕನುಗುಣವಾಗಿ ಸಾಮಾಜಿಕ ಭದ್ರತಾ ಸಂಹಿತೆ 2020 ಈ ಕಾನೂನುಗಳ ನಿಬಂಧನೆಗಳನ್ನು ಸರಳೀಕರಿಸಲು ಮತ್ತು ಸಂಯೋಜಿಸಲು ಪ್ರಯತ್ನಿಸಿದೆ ಎಂದು ಕೋಡ್ ಅಗತ್ಯವನ್ನು ಪ್ರತಿಪಾದಿಸಿದ್ದರು.

ಸಾಮಾಜಿಕ ಭದ್ರತೆ ಸಂಹಿತೆ ರೂಪುಗೊಂಡ ಬಗೆ

ಸಾಮಾಜಿಕ ಭದ್ರತೆ (ಸಂಹಿತೆ) ಮಸೂದೆಯನ್ನು ಮೊದಲು ಸಂಸತ್ತಿನಲ್ಲಿ 2019 ಡಿಸೆಂಬರ್ 11 ರಂದು ಮಂಡಿಸಲಾಯಿತು. ಬಳಿಕ ಅದನ್ನು ಸಂಸತ್ತಿನ ಜಂಟಿ ಸ್ಥಾಯಿ ಸಮಿತಿಗೆ 2019ರ 24 ಡಿಸೆಂಬರ್ ರಂದು ವರ್ಗಾಯಿಸಲಾಯಿತು. ಸಂಸತ್ತಿನ ಸ್ಥಾಯಿ ಸಮಿತಿಯು ಹಲವು ಶಿಫಾರಸ್ಸುಗಳೊಂದಿಗೆ ದಿನಾಂಕ 31-7-2020 ರಂದು ತನ್ನ ವರದಿ ನೀಡಿತು. ಇದಾದ ಬಳಿಕ ಸೆಪ್ಟೆಂಬರ್ 19 2020 ರಂದು ಸಂಸತ್ತಿನಲ್ಲಿ ಪುನರ್ ಮಂಡಿಸಲಾಯಿತು 23-9-2020 ರಂದು ಅದು ಅಲ್ಲಿ ಅಂಗೀಕಾರ ಪಡೆದು ಸೆಪ್ಟೆಂಬರ್ 28 ರಂದು ರಾಷ್ಟ್ರಪತಿ ಅಂಕಿತ ಹಾಗೂ 29 ರಂದು ಗೆಜೆಟ್ ಪ್ರಕಟಣೆ ಮೂಲಕ ಸಾಮಾಜಿಕ ಭದ್ರತೆ ಸಂಹಿತೆ 2020 ಕಾನೂನಿನ ಸ್ವರೂಪ ಪಡೆಯಿತು. ಈ ಸಂಹಿತೆಯು 14 ಅಧ್ಯಾಯಗಳನ್ನು 164 ಕಲಂಗಳನ್ನು ಹಾಗೂ 7 ಅನುಚ್ಚೇಧಗಳನ್ನು ಒಳಗೊಂಡಿದೆ.

ಎರಡನೇ ರಾಷ್ಟೀಯ ಕಾರ್ಮಿಕ ಆಯೋಗ ದ(ಎನ್.ಸಿ.ಎಲ್ 20002) ಶಿಫಾರಸ್ಸುಗಳೇನು ?

20002 ರಲ್ಲಿ ಸಮಾವೇಶಗೊಂಡಿದ್ದ ಎರಡನೇ ರಾಷ್ಟೀಯ ಕಾರ್ಮಿಕ ಆಯೋಗ ದ(ಎನ್.ಸಿಎಲ್)ವು ಪ್ರಮುಖವಾಗಿ ಈ ಕೆಳಗಿನ ಮೂರು ಶಿಫಾರಸ್ಸುಗಳನ್ನು ಸಾರ್ವತ್ರಿಕ ಸಾಮಾಜಿಕ ಸುರಕ್ಷತೆ ಕುರಿತಾಗಿ ಮಾಡಿತ್ತು 1) ಎಲ್ಲಾ ಉಧ್ಯಮಗಳಿಗೂ ಸಾಮಾಜಿಕ ಭದ್ರತಾ ವ್ಯವಸ್ಥೆಯೂ ಅನ್ವಯವಾಗಬೇಕು 2) ಸಾಮಾಜಿಕ ಭದ್ರತೆ ಜಾರಿಗೆ ಅಡ್ಡಿಯಾಗಿರುವ ಎಲ್ಲಾ ವೇತನ ಮಿತಿಗಳನ್ನು ತೆಗೆದು ಹಾಕಬೇಕು ಮತ್ತು 3) ಅಸ್ತಿತ್ವದಲ್ಲಿರುವ ಯೋಜನೆಗಳ ಆಡಳಿತಾತ್ಮಕ ಏಕೀಕರಣಗೊಳ್ಳಬೇಕು.

ಸಾಮಾಜಿಕ ಭದ್ರತೆ ಸಂಹಿತೆ ಅಡಿಯಲ್ಲಿ ಅಸ್ತಿತ್ವಕ್ಕೆ ಬರುವ ಸಂಸ್ಥೆಗಳು

ಈ ನೂತನ ಸಂಹಿತೆಯಡಿ ಜಾರಿಯಾಗುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲು ಈ ಕೆಳಕಂಡ ರೀತಿಯ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗುವುದೆಂದು ಹೇಳಲಾಗಿದೆ. (ಕಲಂ 4 ರಿಂದ 13)

1) ಇ.ಪಿ.ಎಫ್ (ಭವಿಷ್ಯನಿಧಿ) ಇಪಿಎಸ್(ಪಿಂಚಣಿ) ಮತ್ತು ಇ.ಡಿ.ಎಲ್.ಐ (ವಂತಿಗೆ ಆಧಾರಿತ ವಿಮೆ) ಯೋಜನೆಗಳನ್ನು ನಿರ್ವಹಿಸಲು ಕೇಂದ್ರ ಭವಿ?ನಿಧಿ ಆಯುಕ್ತರ ನೇತೃತ್ವದಲ್ಲಿ ಟ್ರಸ್ಟೀಗಳನ್ನು ಒಳಗೊಂಡ ಕೇಂದ್ರ ಮಂಡಳಿ

2) ಅಸಂಘಟಿತ ಕಾರ್ಮಿಕರಿಗಾಗಿ ಯೋಜನೆಗಳನ್ನು ನಿರ್ವಹಿಸಲು ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಸಾಮಾಜಿಕ ಭದ್ರತಾ ಮಂಡಳಿಗಳು. ಇದಲ್ಲದೆ ಹೊಸ ವಿಭಾಗದ ಗಿಗ್ ಮತ್ತು ಪ್ಲಾಟ್ ಫಾರ್ಮ ಕಾರ್ಮಿಕರಿಗಾಗಿ ಕೂಡ ರಾಷ್ಟ್ರೀಯ ಮಂಡಳಿ ರಚನೆ

3) ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕರ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಸರಕಾರವು ನಾಮನಿರ್ದೇಶನ ಮಾಡಿದ ಅಧ್ಯಕ್ಷರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗಳು

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳು

ಸಂಹಿತೆಯ ಕಲಂ 109 ರಲ್ಲಿ ಕೇಂದ್ರ ಸರಕಾರ ಕಾಲಕಾಲಕ್ಕೆ ಈ ಕೆಳಕಂಡ ಯೋಜನೆಗಳನ್ನು ಅಸಂಘಟಿತ ಕಾರ್ಮಿಕರಿಗೆ ಜಾರಿಗೊಳಿಸಬಹುದು ಎಂದು ಹೇಳಲಾಗಿದೆ 1) ಜೀವ ಮತ್ತು ಅಂಗವೈಕಲ್ಯಕ್ಕೆ ಭದ್ರತೆ 2) ಆರೋಗ್ಯ ಮತ್ತು ಹೆರಿಗೆ ಸೌಲಭ್ಯ 3) ವೃದ್ಧಾಪದಲ್ಲಿ ರಕ್ಷಣೆ 4) ಶಿಕ್ಷಣ ಮತ್ತು ಇತರೆ 5) ಕೇಂದ್ರ ಸರಕಾರದ ನಿರ್ಧಾರಕ್ಕೆ ಬಿಟ್ಟ ಇತರೆ ಸೌಲಭ್ಯಗಳು. ಹಾಗೆನೇ ರಾಜ್ಯ ಸರಕಾರವೂ ಈ ಕೆಳಕಂಡ ವಿ?ಯಗಳ ಕುರಿತಾಗಿ ಕಾಲಕಾಲಕ್ಕೆ ಯೋಜನೆಗಳನ್ನು ಪ್ರಕಟಿಸಬಹುದೆಂದು ಹೇಳಲಾಗಿದೆ 1) ಭವಿಷ್ಯನಿಧಿ 2) ಉದ್ಯೋಗದಲ್ಲಿ ಉಂಟಾಗುವ ಗಾಯಕ್ಕೆ ಸೌಲಭ್ಯ 3) ವಸತಿ 4) ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳು 5) ಕಾರ್ಮಿಕರಿಗೆ ಕೌಶಲಭಿವೃದ್ಧಿ 6) ಅಂತ್ಯ ಕ್ರಿಯೆಗೆ ಸಹಾಯ 7) ವೃದ್ಧಾಪ್ಯ ಕೇಂದ್ರಗಳು

ಕೊಡುಗೆಗಳು ಅಥವಾ ವಂತಿಗೆಗಳು

ಉದ್ಯೋಗದಾತ ಮತ್ತು ಉದ್ಯೋಗಿಗಳ ವಂತಿಗೆಗಳ ಮೂಲಕ ಇಪಿಎಫ್, ಇಪಿಎಸ್, ಮತ್ತು ಇ.ಡಿ.ಎಲ್.ಐ ಮತ್ತು ಇ.ಎಸ್.ಐ ಯೋಜನೆಗಳಿಗೆ ಹಣಕಾಸು ಸಂಪನ್ಮೂಲ ಪಡೆಯುತ್ತದೆ. ಗಿಗ್ ಮತ್ತು ಪ್ಲಾಟ್ ಪಾರ್ಮ ಕಾರ್ಮಿಕರಿಗೆ ಅವರ ಉದ್ಯೋಗದಾತರಿಂದ ಮತ್ತು ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಸರಕಾರದ ಕೊಡುಗೆಗಳು ಮತ್ತು ಉದ್ಯೋಗದಾತರಿಂದ ಕಾನೂನು ಉಲ್ಲಂಘಿಸಿದಾಗ ವಸೂಲಾಗುವ ದಂಡಗಳ ಮೂಲಕ ಹಣಕಾಸು ಸಂಪನ್ಮೂಲ ಸಂಗ್ರಹಿಸುವ ಪ್ರಸ್ತಾಪ.

ತಪಾಸಣೆ ಮತ್ತು ಮೇಲ್ಮನವಿಗಳ ಕುರಿತು

ಸರಕಾರವು ಸಂಹಿತೆಯ ವ್ಯಾಪ್ತಿಗೆ ಬರುವ ಉದ್ಯಮ ಮತ್ತು ಸಂಸ್ಥೆಗಳನ್ನು ಪರಿಶೀಲಿಸಲು ಸೂಕ್ತವಾದ ಇನ್ಸ್‌ಸ್ಪೆಕ್ಟರ್ ಕಂ ಫಸಿಲಿಟೆಟರ್ ಗಳನ್ನು ನೇಮಿಸಬಹುದು ಮತ್ತು ಸಂಹಿತೆಯ ಅನುಸರಣೆ ಬಗ್ಗೆ ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗೆ ಸಲಹೆ ನೀಡಬಹುದು

ವ್ಯಾಖ್ಯಾನಗಳಲ್ಲಿನ ಬದಲಾವಣೆ

ಮೇಲ್ಮನವಿ, ಮೌಲ್ಯಮಾಪನ ಮತ್ತು ಅಪರಾಧ ಹಾಗೂ ಡಂಡಗಳ ಕುರಿತ ನಿಬಂಧನೆಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ

ಇದರಲ್ಲಿ ಮುಖ್ಯವಾಗಿ ಕಾರ್ಮಿಕ ಕಾನೂನು ಜಾರಿಯಲ್ಲಾಗುವ ಉಲ್ಲಂಘನೆಯ ಅಪರಾಧ, ಅದಕ್ಕಾಗಿ ವಿಧಿಸಲಾಗುವ ದಂಡಗಳ ಮೊತ್ತ ನಿರ್ಣಯ, ಅಸಂಘಟಿತ ಕಾರ್ಮಿಕ ಮಂಡಳಿಗಳ ಸಂಯೋಜನೆಯಲ್ಲಿ ಬದಲಾವಣೆ ಮತ್ತು ಕೊವೀಡ್ ಸೇರಿ ಪ್ರಕೃತಿ ವಿಕೋಪ, ಸಾಂಕ್ರಾಮಿಕ ಸಮಯದಲ್ಲಿ ಸರಕಾರಕ್ಕೆ ಹೆಚ್ಚುವರಿ ಅಧಿಕಾರಗಳು, ಕೇಂದ್ರ ರಾಜ್ಯ ಸರಕಾರಗಳಿ ವ್ಯಾಪ್ತಿ – ಇವು ಸೇರಿವೆ.

ಸಂಹಿತೆಯಲ್ಲಿನ ಪ್ರಮುಖ ನೂನ್ಯತೆಗಳು

ಸಂಸದೀಯ ಸ್ಥಾಯೀ ಸಮಿತಿ ಶಿಫಾರಸ್ಸುಗಳ ನಿರ್ಲಕ್ಷ್ಯ

ಗ್ರಾಚುಯಿಟಿ ಅವಧಿ ಕಡಿತ, ಉದ್ಯೋಗ ವಿನಿಮಯ ಕೇಂದ್ರಗಳ ಪುನಶ್ಚೇತನ, ಐದು ಎಕ್ಟೇರ್ ವ್ಯಾಪ್ತಿಯ ತೋಟ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ, ಹಿಂದೆ ರದ್ದುಪಡಿಸಲಾದ ಬೀಡಿ, ಸಿನಿಮಾ ಮತ್ತು ಗಣಿ ಕಾರ್ಮಿಕ ಕಲ್ಯಾಣ ನಿಧಿ ಪುನರ್ ಸ್ಥಾಪಿಸಬೇಕೆಂದು ನೀಡಿದ್ದ ಸಂಸತ್ತಿನ ಸ್ಥಾಯಿ ಸಮಿತಿ ಮುಖ್ಯ ಶಿಫಾರಸ್ಸುಗಳನ್ನು ಸಂಹಿತೆ 2020 ಒಳಗೊಂಡಿಲ್ಲ.

ದಂಡಗಳ ಮೂಲಕ ಸಾಮಾಜಿಕ ನಿಧಿಗೆ ಹಣ?  :

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ’ಸಾಮಾಜಿಕ ಭದ್ರತಾ ನಿಧಿ’ ಸ್ಥಾಪಿಸಲು 2020ರ ಸಾಮಾಜಿಕ ಭದ್ರತಾ ಸಂಹಿತೆ ಪ್ರಸ್ತಾಪಿಸಿದೆ. ಆದರೆ ಇದಕ್ಕಾಗಿ ಹಣ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ.  ನಾಲ್ಕು ಸಂಹಿತೆಯ ಅಡಿಯಲ್ಲಿ  ಮಾಲಿಕರಿಗೆ ವಿಧಿಸಲಾದ ದಂಡಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಈ ನಿಧಿಗೆ ಜಮಾ ಮಾಡಲಾಗುವುದು ಎಂದು ಮಾತ್ರ ಹೇಳಲಾಗಿದೆ. ಮಾಲಿಕರು ಕಾನೂನು ಉಲ್ಲಂಘಿಸದೆ ದಂಡದ ಹಣ ಇಲ್ಲದಿದ್ದರೆ, ಎಲ್ಲಿಂದ ಹಣ ಬರುತ್ತದೆ?

ಇ.ಎಸ್.ಐ ಕುಟುಂಬ ಸದಸ್ಯರ ಚಿಕಿತ್ಸೆಗೆ ಸೇವಾಶುಲ್ಕ

ಸಂಹಿತೆಯಲ್ಲಿ ಇ.ಎಸ್.ಐ ಆಸ್ಪತ್ರೆಗಳಲ್ಲಿ ವಿಮೆದಾತರ ಕುಟುಂಬದ ಸದಸ್ಯರ ಚಿಕಿತ್ಸೆಗೆ ಸೇವಾ ಶುಲ್ಕ ವಿಧಿಸಲಾಗುವುದು ಮತ್ತು ಇದುವರೆಗೂ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ಕಾಲಕಾಲಕ್ಕೆ ಬದಲಾಯಿಸುವ ಅಧಿಕಾರ ಇ.ಎಸ್.ಐ ಮಂಡಳಿಗೆ ಕೊಡಲಾಗಿದೆ.  ಖಾಸಗೀ ಆಸ್ಪತ್ರೆಗಳಿಗೂ ಅವಕಾಶ ಅಲ್ಲದೆ ವಿಮೆ ಹಣ ಇತರೆ ಉದ್ದೇಶಗಳಿಗೂ ಬಳಸಲು ಕೇಂದ್ರ ಸರಕಾರಕ್ಕೆ ಅಧಿಕಾರ ಸಹ ಕೊಡಲಾಗಿದೆ.

10 ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ಯಮಕ್ಕೆ ಸೌಲಭ್ಯಗಳಿಂದ ವಂಚಿತ

ಸಾಮಾಜಿಕ ಭದ್ರತೆಯನ್ನು 10 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಕಾರ್ಮಿಕರನ್ನು ಹೊಂದಿರುವ ಉದ್ಯಮಗಳನ್ನು ಇ.ಪಿ.ಎಫ್, ಇಪಿಎಸ್, ಮತ್ತು ಇಡಿ.ಎಲ್.ಐ ಮತ್ತು ಇ.ಎಸ್.ಐ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರಿಂದ ಕೊಟ್ಯಾಂತರ ಕಾರ್ಮಿಕರು ಭವಿಷ್ಯನಿಧಿ, ವಿಮಾ ಮೊದಲಾದ ಸಾಮಾಜಿಕ ಭದ್ತತಾ ಕ್ರಮಗಳಿಂದ ವಂಚಿತರಾಗುತ್ತಾರೆ.

ಭವಿಷ್ಯನಿಧಿ, ವಿಮೆ ಮಾಲೀಕರ ವಂತಿಗೆ ಕಡಿತ ಹಾಗೂ ಸೆಸ್ ಸಂಗ್ರಹದಲ್ಲಿ ವಿನಾಯ್ತಿಗಳು

ಭವಿಷ್ಯನಿಧಿ ಕಾನೂನಿನಲ್ಲಿ ಈಗಾಗಲೇ ಮಾಲೀಕರ ಪಾಲನ್ನು ಶೇ12 ರಿಂದ 10 ಕ್ಕೆ ಇಳಿಸಲಾಗಿದೆ. ಅದೇ ರೀತಿ ಇ.ಎಸ್.ಐ ಮಾಲಿಕರ ವಂತಿಗೆ ಪಾಲನ್ನು ಶೇ 4.75 ರಿಂದ 3.25 ಕ್ಕೆ ಇಳಿಸಲಾಗಿದೆ. ಅಲ್ಲದೆ ಇನ್ನು ಕಡಿತ ಮಾಡುವ ಅಧಿಕಾರ ಕೇಂದ್ರ ಸರಕಾರ ಕೈಯಲ್ಲಿ ಉಳಿಸಿಕೊಂಡಿದೆ. ಇ.ಎಸ್.ಐ ಪಿಎಫ್ ಯೋಜನೆಯಿಂದ ಹೊರ ಹೋಗುವ ಅವಕಾಶ ನೀಡಿದೆ. ಇದುವರೆಗೂ ವ್ಯಕ್ತಿಗತವಾಗಿ 10 ಲಕ್ಷ ಮೇಲ್ಪಟ್ಟ ನಿರ್ಮಾಣ ಕಾಮಗಾರಿಗೆ ಶೇ. 1 ರ? ಇದ್ದ ಸೆಸ್ ನ್ನು 50 ಲಕ್ಷದ ವರೆಗೂ ವಿನಾಯ್ತಿ ನೀಡಿದೆ.  ಕಟ್ಟಡ ಕಾರ್ಮಿಕ ಮಂಡಳಿಗೆ ಸೆಸ್ ವಿನಾಯ್ತಿ ಕೋರಿಕೆಗೆ ಮಾಲಿಕರಿಗೆ ಅವಕಾಶ ಕಲ್ಪಿಸಿದೆ ಮತ್ತು ಈ ಮೂರು ಮಂಡಳಿಗಳ ನಿಧಿ ಹಾಗೂ ಸಾಮಾಜಿಕ ಭದ್ರತಾನಿಧಿ ನಿಯಂತ್ರಣ ಅಧಿಕಾರವನ್ನುತನ್ನ ಕೈಯಲ್ಲಿ ಕೇಂದ್ರ ಸರಕಾರ ಉಳಿಸಿಕೊಂಡಿದೆ.

ಕೇಂದ್ರ ಸರಕಾರದ ಕೈಯಲ್ಲಿ ಅಧಿಕಾರ ಕೇಂದ್ರೀಕರಣ

ಕಾನೂನಿನಲ್ಲಿ ಯಾವುದೂ ಸ್ಪಷ್ಟವಾಗಿಲ್ಲ. ಸಾಮಾಜಿಕ ಭದ್ರತೆಗಳನ್ನು ’ಜಾರಿಮಾಡಬಹುದು, ನೀಡಬಹುದು, ಸೂಚಿಸಬಹುದು, ಕೊಡಬಹುದು ಎನ್ನುವ  ಭವಿಷ್ಯಕ ವಾಕ್ಯಗಳೇ ತುಂಬಿವೆ. ಮಾತ್ರವಲ್ಲ, ಸಂಹಿತೆಯ ಮತ್ತೊಂದು ಪ್ರಮುಖ ಆತಂಕದ ಸಂಗತಿಯೆಂದರೆ ’ಕಾರ್ಮಿಕ’ ವಿಷಯವು ಸಂವಿಧಾನದ ’ಸಮವರ್ತಿ’ಪಟ್ಟಿಯಲ್ಲಿದೆ. ಆದರೂ ಕೇಂಧ್ರ ಸರಕಾರವೇ 98 ವಿಷಯಗಳಲ್ಲಿ ಕಾಯ್ದೆಯನ್ನು ಬದಲಾಯಿಸುವ ಕಾರ್ಯನಿರ್ವಾಹಕ ಅಧಿಕಾರವನ್ನು ತನ್ನ ಕೈಯಲ್ಲಿ ಕೇಂದ್ರೀಕರಿಸಿಕೊಂಡಿದೆ. ಅಲ್ಲದೆ  30 ವಿಷಯಗಳಲ್ಲಿ ಏಕಪಕ್ಷೀಯವಾಗಿ ಅಧಿಕಾರ ಚಲಾಯಿಸಿ ಬದಲಾಯಿಸುವ ಅಧಿಕಾರ ಉಳಿಸಿಕೊಂಡಿದೆ. ಈ ರೀತಿಯ ಮೂಲಕ ಕೇಂದ್ರ ಸರಕಾರ ರಾಜ್ಯ ಸರಕಾರಗಳು ಹಾಗೂ ಸಂಸತ್ತಿನ ಸಾರ್ವಭೌಮ ಅಧಿಕಾರವನ್ನು ಕಸಿದುಕೊಂಡಿದೆ. ಅಸಂಘಟಿತ ಕಾರ್ಮಿಕ ಮಂಡಳಿಗಳ ಸಂಯೋಜನೆಯಲ್ಲಿ ಬದಲಾವಣೆ ಮತ್ತು ಕೊವೀಡ್ ಸೇರಿ ಪ್ರಕೃತಿವಿಕೋಪ, ಸಾಂಕ್ರಾಮಿಕ ಸಮಯದಲ್ಲಿ ಸರಕಾರಕ್ಕೆ ಹೆಚ್ಚುವರಿ ಅಧಿಕಾರಗಳನ್ನು ರಾಜ್ಯಗಳ ಜೊತೆ ಕೇಂದ್ರ ಉಳಿಸಿಕೊಂಡಿದೆ.

ಕೇಂದ್ರ ಕಾರ್ಮಿಕ ಸಂಘಗಳ ಆಗ್ರಹಗಳು

* ಇ.ಎಸ್.ಐ, ಇಪಿಎಫ್ ಹಾಗೂ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಗಳು ಸ್ವತಂತ್ರವಾಗಿ ಮೊದಲಿನಂತೆ ಸ್ವಾಯತ್ತ ಮಂಡಳಿಗಳ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು

* ಅಸಂಘಟಿತ ಕಾರ್ಮಿಕರಿಗೆ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐ.ಎಲ್.ಓ) ಸಮಾವೇಶದಂತೆ ಸಾರ್ವತ್ರಿಕವಾಗಿ 9 ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒದಗಿಸಬೇಕು ಅದಕ್ಕಾಗಿ ವಾರ್ಷಿಕ ಶೇ 3 ರಷ್ಟಿದರೂ ಬಜೆಟ್ ನಲ್ಲಿ ಹಣ ಒದಗಿಸಬೇಕು

* ಯೋಜನಾ ಕಾರ್ಮಿಕರನ್ನು ಇ.ಎಸ್.ಐ, ಪಿ.ಎಫ್ ಹಾಗೂ ಕನಿಷ್ಟ ವೇತನ ವ್ಯಾಪ್ತಿಗೆ ಒಳಪಡಿಸಬೇಕು.

* ಸಂಘಟಿತ ವಲಯದ ಕಾರ್ಮಿಕರು ಗ್ರಾಚುಯಿಟಿ, ಬೋನಸ್ ಮೊದಲಾದ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಬೇಕಾದರೆ ಎಲ್ಲಾ ವೇತನ ಮಿತಿಗಳನ್ನು ತೆಗೆದು ಹಾಕಬೇಕು ಮತ್ತು 10ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ಯಮಗಳನ್ನು ಸಾಮಾಜಿಕ ಭದ್ರತಾ ಸಂಹಿತೆ ವ್ಯಾಪ್ತಿಗೆ ಸೇರಿಸಬೇಕು.

* ಸಾಮಾಜಿಕ ಸುರಕ್ಷತಾ ಸಂಹಿತೆ ಅಡಿಯಲ್ಲಿ ಕೇಂದ್ರ ಸರಕಾರ ರೂಪಿಸಿಕೊಂಡಿರುವ ಅಧಿಕಾರಗಳನ್ನು ರಾಜ್ಯಗಳಿಗೆ ಮತ್ತು ಸಾಮಾಜಿಕ ಭದ್ರತಾ ಮಂಡಳಿಗೆ ವರ್ಗಾಯಿಸಬೇಕು.

* ರದ್ದುಪಡಿಸಿರುವ ಗಣಿ, ಬೀಡಿ ಹಾಗೂ ಗಣಿ ಕಾರ್ಮಿಕ ಕಲ್ಯಾಣ ನಿಧಿಗಳನ್ನು ಪುನರ್ ಸ್ಥಾಪಿಸಬೇಕು

 

 

Donate Janashakthi Media

Leave a Reply

Your email address will not be published. Required fields are marked *