ಸಾಹಿತ್ಯ ಪರಿಚಾರಕರೋ ಸಂಘ ಪ್ರಚಾರಕರೋ?

ನಾ ದಿವಾಕರ

ಹಸಿದ ಹೊಟ್ಟೆಗಳಿಗೆ ಉಪನ್ಯಾಸ ಮಾಡದಿರಿ ಎಂದು ಹೇಳಿದ ಜಂಗಮ ಸನ್ಯಾಸಿ ವಿವೇಕಾನಂದರು ಅಧ್ಯಾತ್ಮವನ್ನು ಸಾಂಸ್ಥೀಕರಿಸಿದವರಲ್ಲ, ಸ್ಥಾವರಗಳಲ್ಲಿ ಬಂಧಿಸಿ ಆಯ್ದ ಕೆಲವರಿಗೆ ತಲುಪಿಸಲು ಇಚ್ಚಿಸಿದವರೂ ಅಲ್ಲ. ಅವರ ಆಶಯಗಳನ್ನೇ ಈಡೇರಿಸುವ ಸದುದ್ದೇಶ ರಾಮಕೃಷ್ಣ ಆಶ್ರಮದವರಿಗೆ ಇದ್ದಿದಲ್ಲಿ ಈ ಹೆಣ್ಣುಮಕ್ಕಳ ಕನ್ನಡ ಶಾಲೆಯನ್ನು ಕೆಡವುವ ಯೋಚನೆಯನ್ನೂ ಮಾಡುತ್ತಿರಲಿಲ್ಲ. ಇಂದು ಭಾರತ ಹಾಳಾಗುತ್ತಿರುವುದೇ ಈ ಕೆಡವುವ ಮನಸುಗಳಿಂದ. ಸಮಾಧಿಯ ಮೇಲೆ ನಿರ್ಮಾಣವಾಗುವ ಸ್ಥಾವರ ಎಷ್ಟೇ ಭವ್ಯವಾಗಿದ್ದರೂ ಅದು ಅಂತಿಮವಾಗಿ “ಗೋರಿ” ಎನಿಸಿಕೊಳ್ಳುವುದೇ ಹೊರತು, ಅರಮನೆಯಾಗುವುದಿಲ್ಲ. ವಿವೇಕಾನಂದರ ಹೆಸರಿನಲ್ಲಿ ನಿರ್ಮಿಸುವ ಸ್ಮಾರಕಕ್ಕೆ ಈ ಹಣೆಪಟ್ಟಿ ಸೂಕ್ತವೇ? ಸಾಹಿತಿಗಳು ಯೋಚಿಸಲಿ.

ಮೈಸೂರಿನ ಎನ್.ಟಿ.ಎಂ.ಎಸ್ ಶಾಲೆಯ ವಿವಾದ ಮೂಲತಃ ಎರಡು ಸಾಂಸ್ಕೃತಿಕ ನೆಲೆಗಳ ನಡುವಿನ ಸಂಘರ್ಷ. ಶಿಕ್ಷಣ, ಜನಪರ ಪರಂಪರೆ ಮತ್ತು ಇತಿಹಾಸ ಒಂದೆಡೆಯಾದರೆ ಆಧುನಿಕ ಸಾಂಸ್ಕೃತಿಕ ರಾಜಕಾರಣ, ಅಧ್ಯಾತ್ಮದ ವಾಣಿಜ್ಯೀಕರಣ ಮತ್ತೊಂದೆಡೆ ಪರಸ್ಪರ ಸಂಘರ್ಷದಲ್ಲಿ ತೊಡಗಿವೆ. ಮತಧರ್ಮ, ಅಧ್ಯಾತ್ಮ ಮತ್ತು ಸಾಂಸ್ಕೃತಿಕ ನೆಲೆಗಳು ಮಾರುಕಟ್ಟೆ ವ್ಯವಸ್ಥೆಯ ಒಂದು ಭಾಗವಾಗಿ ಇಂದು ಭೂಮಿಗಾಗಿ, ಸಂಪತ್ತಿನ ಶೇಖರಣೆಗಾಗಿ, ಬಂಡವಾಳದ ಕ್ರೋಢೀಕರಣಕ್ಕಾಗಿ ಹಾತೊರೆಯುತ್ತಿವೆ. ಈ ಸಂದಿಗ್ಧತೆಯ ನಡುವೆಯ ಜನಪರ ಪರಂಪರೆ, ಜನಸಂಸ್ಕೃತಿ ಮತ್ತು ಶಿಕ್ಷಣವನ್ನೂ ಒಳಗೊಂಡಂತೆ ಸಾರ್ವಜನಿಕ ಸಂಪನ್ಮೂಲಗಳು ಬಂಡವಾಳದ ಆಕ್ರಮಣಕ್ಕೊಳಗಾಗುತ್ತಿವೆ.

ಈ ಹಿನ್ನೆಲೆಯಲ್ಲೇ ಮೈಸೂರಿನಲ್ಲಿ ವಿವೇಕ ಸ್ಮಾರಕದ ವಿವಾದವೂ ಸೃಷ್ಟಿಯಾಗಿದೆ. ಜನಸಂಸ್ಕೃತಿಯನ್ನು ಪ್ರತಿನಿಧಿಸುವ “ಶಾಲೆ ಮತ್ತು ಶಿಕ್ಷಣ” ಎಂಬ ಸ್ಮಾರಕವನ್ನು ಧ್ವಂಸಗೊಳಿಸಿ ವಾಣಿಜ್ಯೀಕರಣಗೊಂಡ ಒಂದು ಆಧ್ಯಾತ್ಮಿಕ ಸ್ಥಾವರವನ್ನು, ಜಂಗಮ ಸನ್ಯಾಸಿ ಎಂದೇ ಕರೆಯಲ್ಪಡುವ ವಿವೇಕಾನಂದರ ನೆನಪಿನಲ್ಲಿ ನಿರ್ಮಿಸುತ್ತಿರುವುದು ಒಂದು ಸಾಂಸ್ಕೃತಿಕ ವಿಕೃತಿ, ಆಧ್ಯಾತ್ಮಿಕ ಕ್ರೌರ್ಯ ಎನ್ನಲಡ್ಡಿಯಿಲ್ಲ. ಆದರೂ ಆಧುನಿಕ ಆಧ್ಯಾತ್ಮಿಕ ಮಾರುಕಟ್ಟೆಗೆ ಭೂ ಆಸ್ತಿ, ಸಂಪತ್ತು ಮತ್ತು ರಾಜಕೀಯ ಒತ್ತಾಸೆ ಇವೆಲ್ಲವೂ ಅತ್ಯಗತ್ಯ. ಭೂಮಿಗಾಗಿ ಹೋರಾಡಬೇಕಾದ ಶೋಷಿತ ವರ್ಗಗಳಿಗಿಂತಲೂ ಹೆಚ್ಚಿನ ಹಪಹಪಿಯಿಂದ ಅಧ್ಯಾತ್ಮ ಕೇಂದ್ರಗಳು, ಮಠಮಾನ್ಯಗಳು ತುಂಡು ಭೂಮಿಗಾಗಿ ಸೆಣಸಾಡುತ್ತಿರುವುದು ಆಧುನಿಕ ಸಾಂಸ್ಕೃತಿಕ ಲೋಕದ ಒಂದು ವಿದ್ಯಮಾನ.

ಮೈಸೂರಿನ ಎನ್.ಟಿ.ಎಂ.ಎಸ್. ಶಾಲೆಯ ವಿವಾದವನ್ನು ಈ ನೆಲೆಯಲ್ಲಿ ನಿಂತು ನೋಡಿದಾಗ, ಪಾರಂಪರಿಕ ಶಾಲೆಯ ಉಳಿವಿಗಾಗಿ ಹೋರಾಡುತ್ತಿರುವ ಜನಪರ ಸಂಘಟನೆಗಳು ಮತ್ತು ಕನ್ನಡ ಪರ ಹೋರಾಟಗಾರರ ಧ್ಯೇಯೋದ್ದೇಶಗಳೂ ಸ್ಪಷ್ಟವಾಗುತ್ತವೆ. ಕಳೆದ 35 ದಿನಗಳಿಂದ ಸತತ ಹೋರಾಟ ಮಾಡುತ್ತಿರುವ ಮೈಸೂರಿನ ವಿಭಿನ್ನ ಸಂಘಟನೆಗಳು ಭೂ ಸ್ವಾಧೀನಕ್ಕಾಗಿ ಹೋರಾಡುತ್ತಿಲ್ಲ, ಒಂದು ನಿವೇಶನದ ಮಾರುಕಟ್ಟೆ ಮೌಲ್ಯಕ್ಕಾಗಿ ಹೋರಾಡುತ್ತಿಲ್ಲ, ವ್ಯಾಪಾರಿ ಮನೋಭಾವದಿಂದ ಮಾರುಕಟ್ಟೆ ಲಾಭವನ್ನು ಬಾಚಿಕೊಳ್ಳುವ ಮಹದಾಸೆಯಿಂದ ಹೋರಾಡುತ್ತಿಲ್ಲ. ಹೋರಾಟನಿರತರ ಪೈಕಿ ಗಾಂಧಿವಾದಿಗಳಿದ್ದಾರೆ, ಕಮ್ಯುನಿಸ್ಟರಿದ್ದಾರೆ, ಕಾರ್ಮಿಕರಿದ್ದಾರೆ, ಮಹಿಳೆಯರಿದ್ದಾರೆ, ಶೋಷಿತ ವರ್ಗಗಳಿವೆ, ಕನ್ನಡಪರ ಮನಸುಗಳಿವೆ. ರಿಯಲ್ ಎಸ್ಟೇಟ್ ಮಾಫಿಯಾಗಳು ಇಲ್ಲಿಲ್ಲ, ಭೂ ಕಬಳಿಕೆಯ ಸರದಾರರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಈ ಹೋರಾಟಗಾರರ ಉದ್ದೇಶ ಶಾಲೆಯನ್ನು ಉಳಿಸಿಕೊಳ್ಳುವುದಷ್ಟೇ ಆಗಿದೆಯೇ ಹೊರತು, ವಿವೇಕಾನಂದರ ಹೆಸರಿನಲ್ಲಿ ನಿರ್ಮಿಸಲಾಗುವ ಸ್ಮಾರಕವನ್ನು ವಿರೋಧಿಸುವ ಉದ್ದೇಶವಿಲ್ಲ.

ಶಾಲೆಯನ್ನು ಏಕೆ ಉಳಿಸಿಕೊಳ್ಳಬೇಕು? ಅದು ಕನ್ನಡ ಶಾಲೆ, ಹೆಣ್ಣು ಮಕ್ಕಳ ಶಾಲೆ, ಸರ್ಕಾರಿ ಶಾಲೆ ಮತ್ತು ರಾಜಪ್ರಭುತ್ವದಲ್ಲಿ ಜನ್ಮ ತಾಳಿದ ಶಾಲೆ. ದೇಶಾದ್ಯಂತ ಸಣ್ಣ ಪುಟ್ಟ ನಗರಗಳೂ ಕೆಲವೇ ವರ್ಷಗಳಲ್ಲಿ ವಿಸ್ತರಣೆಯಾಗುತ್ತಾ ನಗರೀಕರಣ ಪ್ರಕ್ರಿಯೆಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವ ಸಂದರ್ಭದಲ್ಲಿ, ಸರ್ಕಾರಿ ಶಾಲೆ ಎನ್ನುವುದು ನಗರ ವ್ಯಾಪ್ತಿಯಿಂದ ಹೊರತಾದ ಒಂದು ವಿದ್ಯಮಾನವಾಗಿದೆ. ನೂತನ ಹಿತವಲಯದ ಬಡಾವಣೆಗಳಲ್ಲಿ ಒಂದಾದರೂ ಸರ್ಕಾರಿ ಶಾಲೆ ತೆರೆಯುವ ಅಥವಾ ಇರುವ ಶಾಲೆಯನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಒಂದು ಆಡಳಿತ ವ್ಯವಸ್ಥೆಗೆ, ರಾಜಪ್ರಭುತ್ವ ಸ್ಥಾಪಿಸಿದ ಒಂದು ಹೆಣ್ಣುಮಕ್ಕಳ ಕನ್ನಡ ಶಾಲೆಯನ್ನು ಮುಚ್ಚಲು ಯಾವ ಅಧಿಕಾರವಿದೆ? ಇದು ನೈತಿಕತೆಯ ಪ್ರಶ್ನೆ ಅಲ್ಲವೇ?

ಖ್ಯಾತ ಸಾಹಿತಿ ಸನ್ಮಾನ್ಯ ಎಸ್.ಎಲ್. ಭೈರಪ್ಪನವರು, ಶಾಲೆಯ ಉಳಿವಿಗಾಗಿ ಹೋರಾಡುತ್ತಿರುವವರನ್ನು ಅವಹೇಳನ ಮಾಡುವ ಮುನ್ನ ಯೋಚಿಸಬೇಕಿತ್ತಲ್ಲವೇ. ಕನ್ನಡದ ಪ್ರತಿಷ್ಠಿತ ಕಾದಂಬರಿಕಾರರಾಗಿ, ತಮ್ಮ ಬಾಳಿ ಬದುಕಿದ ಮತ್ತು ತಮ್ಮ ಸುತ್ತಲಿನ ಸಮಕಾಲೀನ ಸಮಾಜವನ್ನು ಸಾಹಿತ್ಯ ಕೃತಿಗಳ ಮೂಲಕ ಕಟ್ಟಿಕೊಡುವ ಕಾಯಕದಲ್ಲಿ ತೊಡಗಿರುವ ಓರ್ವ ಸಾಹಿತಿಗೆ ಸಾಮಾಜಿಕ ಸೂಕ್ಷ್ಮತೆಯೊಂದಿಗೇ ಇತಿಹಾಸದ ಸೂಕ್ಷ್ಮತೆಯೂ ಇರಬೇಕಲ್ಲವೇ? ಒಂದು ಪಾರಂಪರಿಕ ಜನಪರ ಸಂಸ್ಥೆಯನ್ನು ಕೆಡವಿ ವಿವೇಕ ಸ್ಮಾರಕವನ್ನು ನಿರ್ಮಿಸುವ ಯೋಚನೆಯೇ ಭಾರತವನ್ನು ಹಾಳು ಮಾಡುವ ಮನೆಹಾಳ ಯೋಜನೆ ಅಲ್ಲವೇ ಭೈರಪ್ಪನವರೇ? ಶಾಲೆಯ ಉಳಿವಿಗಾಗಿ ಹೋರಾಡುತ್ತಿರುವವರು ಸ್ಮಾರಕವನ್ನು ವಿರೋಧಿಸುತ್ತಿಲ್ಲ ಆದರೆ ಈ ಮನೆಹಾಳ ಯೋಚನೆಯನ್ನು ವಿರೋಧಿಸುತ್ತಿದ್ದಾರೆ.

ಈ ಪ್ರತಿಭಟನಕಾರರಿಗೆ ದುಡ್ಡು ಎಲ್ಲಿಂದ ಬರುತ್ತಿದೆ ಎಂಬ ಯೋಚನೆ ಬಂದಕೂಡಲೇ ಮಾನ್ಯ ಭೈರಪ್ಪನವರ ಮನಸಿನಲ್ಲಿ ತಾಲಿಬಾನ್, ಐಸಿಸ್, ನಕ್ಸಲರು, ಭಯೋತ್ಪಾದಕರು, ಖಲಿಸ್ತಾನಿಗಳು, ಪಾಕಿಸ್ತಾನ ಇವೆಲ್ಲವೂ ರುದ್ರತಾಂಡವ ಮಾಡಿಬಿಡುತ್ತವೆ. ಈ ಪ್ರತಿಭಟನೆಯ ಖರ್ಚುಗಳನ್ನು ಪ್ರತಿಭಟನಾಕಾರರೇ ಸರಿದೂಗಿಸುತ್ತಿದ್ದಾರೆ ಎನ್ನುವ ಸತ್ಯ ಭೈರಪ್ಪನವರಿಗೆ ತಿಳಿದಿರಲಿ. ಹೋರಾಟಕ್ಕೆ ಸ್ಪಂದಿಸುವ ಎಲ್ಲ ಮನಸುಗಳೂ ತಮ್ಮ ಶಕ್ತ್ಯಾನುಸಾರ ಸಹಾಯ ಮಾಡಿವೆ. ಯಾರಿಂದಲೂ ಭಿಕ್ಷೆ ಬೇಡಿಲ್ಲ ಅಥವಾ ಗೋಗರೆದು ದೇಣಿಗೆ ಸಂಗ್ರಹ ಮಾಡಿಲ್ಲ. ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ಸಹ ಸಂವೇದನಾಶೀಲ ಮನಸುಳ್ಳ ವಕೀಲ ವೃಂದ ನೆರವಾಗಿದೆ. ಭಾರತದಲ್ಲಿ ಇನ್ನೂ ಇಂತಹ ಮನಸ್ಸುಗಳು ಜೀವಂತವಾಗಿವೆ ಎನ್ನುವ ವಾಸ್ತವ ಸಾಹಿತಿಯಾದವರಿಗೆ ತಿಳಿದಿರಲೇಬೇಕಲ್ಲವೇ?

ಯಾವುದೋ ಐಡಿಯಾಲಜಿಯುಳ್ಳವರು ಪ್ರತಿಭಟನೆಗೆ ದುಡ್ಡು ಹಾಕುತ್ತಿರಬಹುದು ಎಂದು ಹೇಳುವ ಮೂಲಕ ಮಾನ್ಯ ಭೈರಪ್ಪನವರು ತಮ್ಮ ಬೌದ್ಧಿಕ ಭ್ರಷ್ಟತೆಯನ್ನು ತಾವಾಗಿಯೇ ಪ್ರದರ್ಶಿಸಿದ್ದಾರೆ. ಮೈಸೂರಿನ ವರ್ತಕ ಸಮುದಾಯವೂ ಶಾಲೆಯ ಉಳಿವಿಗಾಗಿ ಹೋರಾಡುತ್ತಿದೆ. ಪೌರ ಕಾರ್ಮಿಕರೂ ಹೋರಾಡುತ್ತಿದ್ದಾರೆ. ಇದರಲ್ಲಿ ಸ್ವ ಹಿತಾಸಕ್ತಿ ಹೇಗಿರಲು ಸಾಧ್ಯ ಭೈರಪ್ಪನವರೇ? ಸಮಾಜದ ಅಲಕ್ಷಿತ ಸಮುದಾಯಗಳ ಬಡ ಮಕ್ಕಳು ಓದುವ ಶಾಲೆಯೊಂದರ ಉಳಿವಿಗೆ ಹೋರಾಡುವುದು ಸ್ವಹಿತಾಸಕ್ತಿಯೋ ಅಥವಾ ಅಂತಹ ಶಾಲೆಯೊಂದನ್ನು ನಿರ್ನಾಮ ಮಾಡುವುದು ಸ್ವಾರ್ಥಹಿತಾಸಕ್ತಿಯೋ? ಸಾಹಿತಿಯಾದವರಿಗೆ ಇದು ಅರ್ಥವಾಗಲೇಬೇಕಲ್ಲವೇ?

ಕುವೆಂಪು ಅವರಿಗೆ ಆಧ್ಯಾತ್ಮಿಕ ದೃಷ್ಟಿ ಮತ್ತು ಕಾವ್ಯ ಬರೆಯಲು ರಾಮಕೃಷ್ಣರು ಮತ್ತು ವಿವೇಕಾನಂದರು ಸ್ಫೂರ್ತಿ ನೀಡಿದ್ದಾರೆ ಎಂದು ಅರ್ಥವಾದ ಮೇಲೆ, ಕುವೆಂಪು ಅವರ ವಿಶ್ವಮಾನವ ಸಂದೇಶದ ಹಿಂದೆಯೂ ಇದೇ ಚೇತನಗಳಿವೆ ಎನ್ನುವ ವಾಸ್ತವವೂ ಅರ್ಥವಾಗಬೇಕಲ್ಲವೇ? ಕುವೆಂಪು ಅವರ ಶಿಷ್ಯರೆಂದು ಬೆನ್ನುತಟ್ಟಿಕೊಳ್ಳುವವರೂ ಸಹ ಇದನ್ನು ಅರ್ಥಮಾಡಿಕೊಳ್ಳಬೇಕಲ್ಲವೇ? ರಾಮಕೃಷ್ಣ ಆಶ್ರಮದ ಕನ್ನಡ ಪ್ರೇಮವನ್ನು ಯಾರೂ ಪ್ರಶ್ನಿಸುತ್ತಿಲ್ಲ. ಅಥವಾ ಸಾವಿರಾರು ಕನ್ನಡ ಪುಸ್ತಕಗಳನ್ನು ಪ್ರಕಟಣೆ ಮಾಡಿದ ಮಾತ್ರಕ್ಕೆ ಆಶ್ರಮ ಕನ್ನಡ ಸೇವೆಯಲ್ಲಿ ತೊಡಗಿದೆ ಎಂದು ಪ್ರಮಾಣೀಕರಿಸಲಾಗುವುದಿಲ್ಲ. ಕನ್ನಡ ಪ್ರೇಮ ಅಕ್ಷರ ತುಂಬಿದ ಹಾಳೆಗಳಲ್ಲೇ ಇರುವುದಾದರೆ ಪ್ರತಿಯೊಬ್ಬ ಪ್ರಕಾಶಕರೂ ಕನ್ನಡ ಸೇವೆಯಲ್ಲಿ ತೊಡಗಿರುವ ಕಂದಮ್ಮಗಳೇ ಅಲ್ಲವೇ?

ಶಿಕ್ಷಣ ಮತ್ತು ಅಧ್ಯಾತ್ಮ ಎರಡೂ ವಾಣಿಜ್ಯೀಕರಣಕ್ಕೊಳಗಾಗಿ, ಮಾರುಕಟ್ಟೆ ಜಗುಲಿಯಲ್ಲಿ ಬಿಕರಿಯಾಗಲು ಸಿದ್ಧವಾಗಿರುವ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮ ತನ್ನ ಪುಟ್ಟ ಸಾಮ್ರಾಜ್ಯ ವಿಸ್ತರಣೆಗೆ ವಿವೇಕ ಸ್ಮಾರಕವನ್ನು ಅಸ್ತ್ರವನ್ನಾಗಿ ಬಳಸುತ್ತಿರುವುದು ಗುಟ್ಟಿನ ಮಾತೇನಲ್ಲ. ತನ್ನ ಕನ್ನಡ ಸೇವೆಯನ್ನೇ ಮತ್ತಷ್ಟು ವಿಸ್ತರಿಸುವ ಸದುದ್ದೇಶ ಇದ್ದರೆ ಆಶ್ರಮದವರು ಅದನ್ನು ಶಾಲೆಯ ಸಮಾಧಿಯ ಮೇಲೆಯೇ ಏಕೆ ನೆರವೇರಿಸಬೇಕು? ಸಮಾಜದ ಅವಕಾಶ ವಂಚಿತ, ಅಲಕ್ಷಿತ ಜನಸಮುದಾಯಗಳ ಹಕ್ಕುಗಳನ್ನು ಕಸಿದುಕೊಂಡು ಅಧ್ಯಾತ್ಮವನ್ನು ಪೋಷಿಸುವ ವಿಕೃತ ಮನೋಭಾವ ವಿವೇಕಾನಂದರ ಚಿಂತನೆಗೆ ನಿಲುಕುವುದಿಲ್ಲ ಎನ್ನುವ ಸತ್ಯವನ್ನೂ ಭೈರಪ್ಪನವರು ಅರ್ಥಮಾಡಿಕೊಳ್ಳಬೇಕು.

ಹಸಿದ ಹೊಟ್ಟೆಗಳಿಗೆ ಉಪನ್ಯಾಸ ಮಾಡದಿರಿ ಎಂದು ಹೇಳಿದ ಜಂಗಮ ಸನ್ಯಾಸಿ ವಿವೇಕಾನಂದರು ಅಧ್ಯಾತ್ಮವನ್ನು ಸಾಂಸ್ಥೀಕರಿಸಿದವರಲ್ಲ, ಸ್ಥಾವರಗಳಲ್ಲಿ ಬಂಧಿಸಿ ಆಯ್ದ ಕೆಲವರಿಗೆ ತಲುಪಿಸಲು ಇಚ್ಚಿಸಿದವರೂ ಅಲ್ಲ. ಅವರ ಆಶಯಗಳನ್ನೇ ಈಡೇರಿಸುವ ಸದುದ್ದೇಶ ರಾಮಕೃಷ್ಣ ಆಶ್ರಮದವರಿಗೆ ಇದ್ದಿದಲ್ಲಿ ಈ ಹೆಣ್ಣುಮಕ್ಕಳ ಕನ್ನಡ ಶಾಲೆಯನ್ನು ಕೆಡವುವ ಯೋಚನೆಯನ್ನೂ ಮಾಡುತ್ತಿರಲಿಲ್ಲ. ಇಂದು ಭಾರತ ಹಾಳಾಗುತ್ತಿರುವುದೇ ಈ ಕೆಡವುವ ಮನಸುಗಳಿಂದ. ಸಮಾಧಿಯ ಮೇಲೆ ನಿರ್ಮಾಣವಾಗುವ ಸ್ಥಾವರ ಎಷ್ಟೇ ಭವ್ಯವಾಗಿದ್ದರೂ ಅದು ಅಂತಿಮವಾಗಿ “ಗೋರಿ” ಎನಿಸಿಕೊಳ್ಳುವುದೇ ಹೊರತು, ಅರಮನೆಯಾಗುವುದಿಲ್ಲ. ವಿವೇಕಾನಂದರ ಹೆಸರಿನಲ್ಲಿ ನಿರ್ಮಿಸುವ ಸ್ಮಾರಕಕ್ಕೆ ಈ ಹಣೆಪಟ್ಟಿ ಸೂಕ್ತವೇ? ಸಾಹಿತಿಗಳು ಯೋಚಿಸಲಿ.

ಶಿಕ್ಷಣವನ್ನು ಕಡೆಗಣಿಸುವುದು, ಸಾರ್ವತ್ರಿಕ ಶಿಕ್ಷಣವನ್ನು ಖಾಸಗೀಕರಣಗೊಳಿಸುವುದು, ಶಿಕ್ಷಣವನ್ನು ಮಾರುಕಟ್ಟೆ ಸರಕಿನಂತೆ ಬಿಕರಿ ಮಾಡುವುದು, ಶೈಕ್ಷಣಿಕ ಸಂಸ್ಥೆಗಳನ್ನು ಸಂತೆಮಾಳವನ್ನಾಗಿ ಮಾಡಿ ಸಾಮಾನ್ಯ ಜನರಿಂದ ಲೂಟಿ ಮಾಡುವುದು, ಶಿಕ್ಷಣವನ್ನು ಬಡಜನತೆಯ ಪಾಲಿಗೆ ಗಗನಕುಸುಮ ಮಾಡುವುದು ಇವೆಲ್ಲವೂ “ಭಾರತ ಹಾಳುಮಾಡುವ” ವಿದ್ಯಮಾನಗಳು ಅಲ್ಲವೇ ಭೈರಪ್ಪನವರೇ? ಇಂದು ಭಾರತ ಹಾಳಾಗುತ್ತಿರುವುದೂ ಇಂತಹ ಆಧ್ಯಾತ್ಮಿಕ, ಮತಧಾರ್ಮಿಕ, ಸಾಂಸ್ಕೃತಿಕ ದಲ್ಲಾಳಿಗಳೇ ಅಲ್ಲವೇ ಭೈರಪ್ಪನವರೇ? ಓರ್ವ ಸಾಹಿತಿಯಾಗಿ, ಸಮಾಜದ ಒಳ ಸೂಕ್ಷ್ಮಗಳನ್ನು ಬಲ್ಲ ಮತ್ತು ಗ್ರಹಿಸುವ ಶಕ್ತಿ ಇರುವ ಲೇಖಕರಾಗಿ ಈ ಸೂಕ್ಷ್ಮಗಳು ನಿಮಗೆ ಅರ್ಥವಾಗಿದ್ದರೆ “ಸ್ಮಾರಕ ವಿರೋಧಿಸುವುದು ಭಾರತ ಹಾಳುಮಾಡಿದಂತೆ” ಎಂದು ಹೇಳುತ್ತಿರಲಿಲ್ಲ.

ನೀವು ನಂಬಿ ಬದುಕಿರುವ, ಬದುಕುತ್ತಿರುವ ಮತ್ತು ಆರಾಧಿಸುವ ಸರಸ್ವತಿ ದೇವಿ ನಿಮಗೆ ಸಮಾಜವನ್ನು ನೋಡುವ ಮಸೂರವೊಂದನ್ನು ನೀಡಿರಲಿಕ್ಕೂ ಸಾಕು. ಅದೇ ಮಸೂರದಿಂದ ಸುತ್ತಲಿನ ಸಮಾಜವನ್ನು ನೋಡಿದ್ದರೆ ನಿಮಗೆ ಶಾಲೆ ಉಳಿಸಲು ಹೋರಾಡುತ್ತಿರುವವರಲ್ಲಿ ವಿಧ್ವಂಸಕರು ಕಾಣುತ್ತಿರಲಿಲ್ಲ. ದುರಂತ ಎಂದರೆ ನೀವು ನಿಮ್ಮ ಆರಾಧ್ಯದೈವ ಸರಸ್ವತಿದೇವಿಯ ಮಸೂರವನ್ನು ತೆಗೆದಿಟ್ಟು ಸಂಘದ ಮಸೂರವನ್ನು ತೊಟ್ಟು ಸಮಾಜವನ್ನು ನೋಡುತ್ತಿದ್ದೀರಿ. ಮಸೂರ ಬದಲಿಸಿ, ಮನಸೂ ಬದಲಾಗುತ್ತದೆ. ಸಮಾಜದ ಗರ್ಭದಿಂದ ಉದಯಿಸದ ಸಾಹಿತ್ಯವೂ ನಿರರ್ಥಕವಾಗುತ್ತದೆ ಎನ್ನುವ ಸೂಕ್ಷ್ಮವೂ ನಿಮಗೆ ತಿಳಿದಿರಲೇಬೇಕಲ್ಲವೇ?

Donate Janashakthi Media

Leave a Reply

Your email address will not be published. Required fields are marked *