ರೈತರಿಂದ “ಅಂಬಾನಿ – ಆದಾನಿ” ಕಂಪನಿ ವಸ್ತುಗಳ ಬಾಯ್ಕಟ್ ಅಭಿಯಾನ

ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಕರೆ ನಿಡಿದ್ದ  ಭಾರತ್ ಬಂದ್‌ಗೆ ವ್ಯಾಪಕ ಜನಸ್ಪಂದನೆಯ ದೊರೆತ ನಂತರವೂ ಮೋದಿ ಸರಕಾರ ರೈತರ ಬೇಡಿಕೆಗಳಿಗೆ ಕಿವಿಗೊಡಲಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ತಮ್ಮ ಹೋರಾಟವನ್ನು ತೀವ್ರಗೊಳಿಸುವುದಕ್ಕಾಗಿ  ಅಂಬಾನಿ ಮತ್ತು ಅದಾನಿ ಕಂಪನಿಗಳ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ರೈತರು  ವಿನೂತನ ಪ್ರತಿಭಟನೆಗೆ  ನಿರ್ಧಾರ ಮಾಡಿದ್ದಾರೆ. ಆದಾನಿ ಕಂಪನಿಯ ವಸ್ತುಗಳ ಬಾಯ್ಕಟ್ ಗೆ ವ್ಯಾಪಕ  ಜನಸ್ಪಂದನೆ ದೊರತಿದೆ.

ಮೋದಿ ಸರಕಾರ ಜಾರಿ ಮಾಡಿರುವ ಮೂರು ಕೃಷಿ ಮಸುದೆಗಳಿಗೂ ಅಂಬಾನಿ, ಆದಾನಿ ಗೂ ಕನೆಕ್ಷನ್ ಇದೆ ಎಂದು ಹೇಳಿ ರೈತರು ರಿಲಯನ್ಸ್ ವಸ್ತುಗಳನ್ನು ಬಹಿಷ್ಕರಿಸುವಂತೆ ಹೋರಾಟ ನಡೆಸುತ್ತಿದ್ದಾರೆ.  ಇದು ಸಹಜವಾಗಿಯೇ ಕಳೆದ ಆರು ವರ್ಷಗಳಲ್ಲಿ ‘ಅಚ್ಛೇ ದಿನ್’ಗಳನ್ನು ಕಂಡಿರುವ ಅದಾನಿ, ಅಂಬಾನಿಗಳು ಕ್ರುದ್ಧರಾಗುವಂತೆ ಮಾಡಿದೆ.  ಡಿಸಂಬರ್ 12 ರಂದು  ದಿಲ್ಲಿ- ಜೈಪುರ  ರಾಷ್ರ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದ ರೈತರು  ಅಂದು  ದೇಶಾಧ್ಯಂತ 165 ಕ್ಕೂ ಹೆಚ್ಚು ಟೋಲ್ ಗಳನ್ನು ಬಂದ್ ಮಾಡಿದ್ದರು. ಇಂದು  ದೆಹಲಿಯಲ್ಲಿ ಮತ್ತೊಂದು ದೆಹಲಿ ಚಲೊ ನಡೆಸಿದರು, ಸಹಸ್ರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದರು. ಆದಾನಿ, ಅಂಬಾನಿ ಕಂಪನಿಯ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಹೋರಾಟಕ್ಕೆ  ಕರ್ನಾಟಕದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಯೋ ಸಿಮ್ ನಿಂದ ಇತರೆ ನೆಟ್ವರ್ಕ್ ಗಳಿಗೆ ಪೋರ್ಟ್ ಆಗುತ್ತಿರುವುದು, ರಿಲಯನ್ಸ್ ಮಾಲ್, ಪೆಟ್ರೋಲ್ ಬಂಕ್ ಗಳ ಮುಂದೆ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ರೈತರ ಹೋರಾಟಕ್ಕೆ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಿದ್ದು, ಜಿಯೋ ಸಿಮ್ ಗಳನ್ನು ಬಳಸದಂತೆ ವಿದ್ಯಾರ್ಥಿಗಳಿಗೆ ಕರೆ ನೀಡುತ್ತದ್ದಾರೆ. ಈಗಾಗಲೆ  ಐದು ನೂರಕ್ಕೂ ಹೆಚ್ಚು ಜಿಯೋ ಸಿಮ್ ನಿಂದ ಇತರೆ ನೆಟ್ವರ್ಕ್ ಗಳಿಗೆ  ಪೋರ್ಟ್ ಮಾಡಲಾಗಿದೆ  ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳುತ್ತಿವೆ.

ರೈತರು ಯಾಕೆ ಜಿಯೋ ಸಿಮ್ ಹಾಗೂ ರಿಲಾಯನ್ಸ್ ವಸ್ತುಗಳನ್ನು ಬಹಿಷ್ಕರಿಸಲು ಕರೆ  ನೀಡಿರುವ ಕಾರಣವಾದರು ಏನು? ಆ ಕೃಷಿ ಮಸೂದೆಗಳಿಗೂ ಆದಾನಿ, ಅಂಬಾನಿಯವರಿಗೆ ಏನಾದರೂ ಲಿಂಕ್ ಇದೆಯಾ ಎಂಬ ಪ್ರಶ್ನೆಗಳು  ಮೂಡುವುದು ಸಹಜ.  ಈ ಕೃಷಿ ಮಸೂದೆಗಳಿಗೂ, ಆದಾನಿ, ಅಂಬಾನಿಗೂ ಕನೆಕ್ಷನ್ ಇರುವುದು ನಿಜ ಎಂದು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಮುಖಂಡರಾದ ಎಚ್ . ಆರ್.  ನವೀನ್ ಕುಮಾರ್ ಹೇಳುತ್ತಾರೆ.

ಭಾರತ ಆಹಾರ ನಿಗಮ(ಎಫ್‌ಸಿಐ)ದ ಆಧುನಿಕ ಹಗೇವುಗಳ ನಿರ್ಮಾಣದ ಮತ್ತು ನಿರ್ವಹಣೆಯ ಕಾಂಟ್ರಾಕ್ಟ್ ಪಡೆದಿರುವ ಅದಾನಿ ಗುಂಪಿನ ವಕ್ತಾರರು ಎಫ್.ಸಿ.ಐ ಗೆ 3.5 ಲಕ್ಷ ಕೋಟಿ ರೂಗಳ ಸಾಲವನ್ನು ಹೊರಿಸಿದೆ.  ಅದಾನಿಗೆ ಆಹಾರಧಾನ್ಯಗಳ ಸಾರ್ವಜನಿಕ ದಾಸ್ತಾನಿನಲ್ಲಿ ಪ್ರಭಾವ ಬೀರಲು ಅನುವು ಮಾಡಿಕೊಡಲಿಕ್ಕಾಗಿ ಹೆಣೆದ ಮಹಾ ಕಾರ್ಯತಂತ್ರ ಇದಾಗಿದೆ. ಅದಾನಿಗೆ ಆಹಾರಧಾನ್ಯಗಳ ಸಾರ್ವಜನಿಕ ದಾಸ್ತಾನಿನಲ್ಲಿ ಪ್ರಭಾವ ಬೀರಲು ಈ ಕೃಷಿ ಕಾಯ್ದೆಗಳು ಈ ಪ್ರಕ್ರಿಯೆಯನ್ನು ಮುಂದಕ್ಕೋಯ್ಯುವ, ಕ್ರೋಡೀಕರಿಸುವ ಕೆಲಸ ಮಾಡುತ್ತಿವೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಇನ್ನೊಂದು ಮುಖ್ಯವಾದ ಸಂಗತಿಯನ್ನ ಗಮನಿಸ್ಲೇಬೇಕು, ಆದಾನಿಯವರ ಕೃಷಿ ಸಾಗಾಣಿಕಾ ಕಂಪನಿಗಳು 2014 ಕ್ಕೂ ಮುಂಚೆ ಕೇವಲ ಎರಡು ಇದ್ವು. ಈಗ ಅದು 22 ಕ್ಕೇ ಏರಿದೆ. ಅಂದ್ರೆ 2014 ರಿಂದ ಇಲ್ಲಿವಯರೆಗೆ 20 ಹೆಚ್ಚುವರಿ  ಕೃಷಿ ಸಾಗಾಣಿಕ ಕಂಪನಿಗಳನ್ನು ಆದಾನಿಯವರು ಸ್ಥಾಪಿಸಿಕೊಂಡಿದ್ದಾರೆ. ಕನೆಕ್ಷನ್ ಇದೆ ಎಂಬುದಕ್ಕೆ ಇದೆ ಸಾಕ್ಷಿ ಅಲ್ಲವೆ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲೂ ರೈತರ ಹೋರಾಟಗಳನ್ನು ಬೆಂಬಲಿಸಿ ಪೋಸ್ಟರ್, ಟ್ವಿಟ್ಟರ್ ಅಬಿಯಾನವನ್ನು ನಡೆಸಲಾಗುತ್ತಿದೆ. ಕೆಲವರು  ಆದಾನಿ, ಅಂಬಿನಿವರ ಕೃಷಿ ಕಂಪನಿಗಳು ನಮ್ಮನ್ನು ಹೇಗೆ ಮೋಸಗೊಳಿಸುತ್ತವೆ ಎಂಬುದರ ಕುರಿತು ಕಿರು ವಿಡೀಯೊಗಳನ್ನು ಪ್ರದರ್ಶಿಸುತ್ತಿರುವುದು  ಸಾರ್ವಜನಕರನ್ನು ಆಕರ್ಷಿಸುತ್ತಿದೆ.

ಇಷ್ಟೆಲ್ಲಾ ಕೃಷಿ  ಮಸೂದೆಗಳ ಬಗ್ಗೆ ವಿರೋಧದ ವ್ಯಕ್ತವಾಗುತ್ತಿದೆ. ದೆಹಲಿಯಲ್ಲಿ 20 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲೂ ನಿರಂತರ ಪ್ರತಿಭಟನೆ, ರಸ್ತೆತಡೆ, ಬಾರುಕೋಲು ಚಳುವಳಿ ನಡೆಯುತ್ತಿವೆ. ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆಯಿಂದ ಹಿಂದೆ ಸರಿಯಬೇಕಿದೆ. ರೈತರ ಹಿತವನ್ನು ಕಾಪಾಡಲು ಅಪಾಯಕಾರಿ  ಮಸೂದೆಗಳನ್ನು ವಾಪಸ್ಸ ಪಡೆಯಬೇಕಿದೆ.

Donate Janashakthi Media

One thought on “ರೈತರಿಂದ “ಅಂಬಾನಿ – ಆದಾನಿ” ಕಂಪನಿ ವಸ್ತುಗಳ ಬಾಯ್ಕಟ್ ಅಭಿಯಾನ

Leave a Reply

Your email address will not be published. Required fields are marked *