ಆಡಳಿತ ಶಕ್ತಿ ಕೇಂದ್ರ: ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿ ಬ್ಯಾಗಿನಲ್ಲಿ ₹10.5 ಲಕ್ಷ ಪತ್ತೆ

ಬೆಂಗಳೂರು: ರಾಜ್ಯ ಆಡಳಿತ ಶಕ್ತಿ ಕೇಂದ್ರ ಎನಿಸಿಕೊಂಡಿರುವ ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 10.50 ಲಕ್ಷ ರೂಪಾಯಿ ಮೊತ್ತದ ಬ್ಯಾಗ್‌ ಅನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಬುಧವಾರ ವಿಧಾನಸೌಧಕ್ಕೆ ಹಣದ ಬ್ಯಾಗಿನ ಸಮೇತ ಆಗಮಿಸಿದ ಮಂಡ್ಯ ಮೂಲದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಜಗದೀಶ್ ಅವರನ್ನು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಅವರ ಬಳಿ ಹಣ ಇರುವುದು ಗೊತ್ತಾಗುತ್ತಿದ್ದಂತೆ ದಾಖಲೆ ಕೇಳಿದ್ದರು. ಆದರೆ, ಹಣದ ಬಗ್ಗರ ಯಾವುದೇ ದಾಖಲೆ‌ ಇರಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ‌ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಣದ ಮೂಲದ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

‘ಮಂಡ್ಯಕ್ಕೆ ಹಣ ತೆಗೆದುಕೊಂಡು ಹೋಗುತ್ತಿದೆ.‌ ಕೆಲಸ, ಇದ್ದಿದ್ದರಿಂದ ವಿಧಾನಸೌಧಕ್ಕೆ ಬಂದೆ ಎಂಬುದಾಗಿ‌ ಜಗದೀಶ್ ಹೇಳಿಕೆ‌ ನೀಡಿದ್ದಾರೆ. ಆದರೆ, ಹಣ ಎಲ್ಲಿಂದ ತಂದಿದ್ದಾರೆ? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು‌ ಎಂಬುದಕ್ಕೆ‌ ಯಾವುದೇ‌ ಪುರಾವೆ‌ ನೀಡಿಲ್ಲ. ಜಗದೀಶ್ ವಶಕ್ಕೆ‌ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಜಪ್ತಿ ಮಾಡಿದ್ದ ಹಣವನ್ನು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅಕ್ರಮ ಹಣ ಹೊಂದಿದ್ದ ಆರೋಪದಡಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *