ಬೆಂಗಳೂರು: ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳ ಕುರಿತು ರಾಜ್ಯ ಸರ್ಕಾರದಿಂದ ವರದಿ ಪಡೆಯುವಂತೆ ಹೈಕೋರ್ಟ್ ಗುರುವಾರ ಅಡ್ವೊಕೇಟ್ ಜನರಲ್ ಅವರನ್ನು ಕೇಳಿದೆ. ಬೆಂಗಳೂರು
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಕೇಳಿದೆ. ಪ್ರಕರಣ ಕುರಿತು ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡಿದೆ.
ವಿಧಾನಸೌಧದ ಮುಂದೆ ವಿಜಯೋತ್ಸವದ ಸಂದರ್ಭದಲ್ಲಿ ಹೈಕೋರ್ಟ್ ಕಟ್ಟಡದಲ್ಲಿ ಭದ್ರತಾ ಉಲ್ಲಂಘನೆಯ ಬಗ್ಗೆ ನ್ಯಾಯಾಲಯದ ರಿಜಿಸ್ಟ್ರಿಗೆ ಇಮೇಲ್ ಕಳುಹಿಸಿರುವುದಾಗಿ ವಕೀಲ ಜಿ.ಆರ್. ಮೋಹನ್ ನ್ಯಾಯಾಲಯದ ಮುಂದೆ ಉಲ್ಲೇಖಿಸಿದರು.
ಇದನ್ನೂ ಓದಿ : ಸಾಮಾಜಿಕ ವ್ಯಾಧಿಗೆ ಕಾನೂನು ಮದ್ದು ಆಗಲಾರದು ಬೆಂಗಳೂರು
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರನ್ನು ವೀಕ್ಷಿಸಲು ಅನೇಕ ಜನರಿಗೆ ಹೈಕೋರ್ಟ್ ಕಟ್ಟಡದ ಟೆರೇಸ್ಗೆ ಹೋಗಲು ಅವಕಾಶ ನೀಡಲಾಗಿದೆ, ಇದು ಭದ್ರತಾ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದರು. ಹೈಕೋರ್ಟ್ ಕಟ್ಟಡದಲ್ಲಿ ಸರಿಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಆದೇಶಗಳು ಜಾರಿಯಲ್ಲಿದ್ದು, ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ಗಮನಸೆಳೆದರು.
ಐಪಿಎಲ್ -2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ನಂತರ ಕೇವಲ 24 ಗಂಟೆಯೊಳಗೆ ಬೆಂಗಳೂರಿಗೆ ಬಂದು ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಸಂಭ್ರಮಾಚರಣೆ ಕೈಗೊಳ್ಳಲಾಯಿತು. ಇಷ್ಟೊಂದು ತರಾತುರಿಯಲ್ಲಿ ಕಾರ್ಯಕ್ರಮ ಆಚರಿಸಿದ್ದೇಕೆ, ಅದಕ್ಕೆ ಪೂರ್ವ ತಯಾರಿ ನಡೆಸಲಾಗಿತ್ತೇ, ಪೊಲೀಸ್ ಭದ್ರತೆ ಹೇಗೆ ಕೈಗೊಳ್ಳಲಾಯಿತು, ಭೀಕರ ಕಾಲ್ತುಳಿತ ಹೇಗೆ ಉಂಟಾಯಿತು ಎಂಬ ಬಗ್ಗೆ ಸರ್ಕಾರ ಹೈಕೋರ್ಟ್ ಗೆ ಉತ್ತರ ನೀಡಬೇಕಿದೆ.
ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡರೂ ಇನ್ನೂ ಎಫ್ ಐಆರ್ ದಾಖಲಾಗಿಲ್ಲ. ಘಟನೆಯನ್ನು ಕೇವಲ ‘ಅಸಹಜ ಸಾವು (UDR)‘ ಎಂದು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹನ್ನೊಂದು ಯುಡಿಆರ್ ದಾಖಲಾಗಿವೆ.
ಇದನ್ನೂ ನೋಡಿ : ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media