ಹಾಡಿ ಜನರಿಗೆ ಡೋಲಿಯೇ ಆಂಬುಲೆನ್ಸ್‌ | ನಿದ್ದೆಯಲ್ಲಿ ಜಿಲ್ಲಾಡಳಿತ

ಕೊಡಗು : ಬೆಡ್ ಶೀಟ್ ಗೆ ಬಡಿಗೆ ಕಟ್ಟಿ ಮಾಡಿದ ಡೋಲಿಯೇ ಇಲ್ಲಿನ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವ ಗಾಡಿಯಾಗಿದೆ. ಅದು ಇಲ್ಲದಿದ್ದರೆ ಹಾಡಿಯಲ್ಲೇ ಮಲಗಿ ಪ್ರಾಣಬಿಡಬೇಕಾದ ಪರಿಸ್ಥಿತಿ. ಇಂತಹ ಅಮಾನವೀಯ ದೃಶ್ಯ ಇಂದಿಗೂ ಕಂಡು ಬಂದಿರುವುದು. ದಕ್ಷಿಣದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸೂಳೆಭಾವಿ ಹಾಡಿಯಲ್ಲಿ. ಬೆಡ್ ಶೀಟ್ ಒಂದನ್ನು ಬಡಿಗೆಗೆ ಕಟ್ಟಿ ಅದರೊಳಗೆ ವೃದ್ಧೆಯೊಬ್ಬರನ್ನು ಮಲಗಿಸಿ ಆಸ್ಪತ್ರೆಗೆ ಕರೆದೊಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇಂದಿಗೂ ಕೂಡ ಇಲ್ಲಿ ವಾಸಿಸುವ ಜನರು ಮನಕಲಕುವ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜನರಿಗೆ 

ಮೂಲ ಆದಿವಾಸಿಗಳಾದ ಜೇನು ಕುರುಬ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯುವ ಕುರಿತು ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಿಂದ 2018 ರಲ್ಲಿ ಸಮೀಕ್ಷೆ ನಡೆಸಲಾಗಿದೆ. ಆದರೆ ಸಮೀಕ್ಷೆಯ ವರದಿ ಏನಾಗಿದೆ? ಸಮೀಕ್ಷೆಯಲ್ಲಿ ಅಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ದಾಖಲಾಗಿಲ್ಲವೇ?  30 ಕ್ಕೂ ಹೆಚ್ಚು ಜೇನುಕುರುಬ ಬುಡಕಟ್ಟು ಜನಾಂಗದವರು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:“ಕೊರಗರು ಕುಡಿತ – ದುಶ್ಚಟದಿಂದ ಖಾಯಿಲೆಗೆ ತುತ್ತಾಗಿ ಸಾಯುತ್ತಿದ್ದಾರೆ” ಸರಕಾರದ ಆದೇಶದಲ್ಲಿ ಉಲೇಖಕ್ಕೆ ಖಂಡನೆ

ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಬದುಕುತ್ತಿರುವ ಜೇನುಕುರುಬ ಸಮುದಾಯದ 36 ಕುಟುಂಬಗಳ ದುಃಸ್ಥಿತಿ ಸರ್ಕಾರದ ಕಣ್ಣಿಗೆ ಬಿದ್ದಂತೆ ಕಾಣುತ್ತಿಲ್ಲ.  ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಹಾಡಿಗೆ ಇಂದಿಗೂ ಸಮರ್ಪಕವಾದ ರಸ್ತೆಯಿಲ್ಲ. ಕುಶಾಲನಗರ, ಸೋಮವಾರಪೇಟೆ ನಡುವಿನ ರಾಜ್ಯ ಹೆದ್ದಾರಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಇರುವ ಸೂಳೆಭಾವಿ ಹಾಡಿಗೆ ಸ್ವಲ್ಪ ದೂರದವೆಗೆ ಮಾತ್ರವೇ ಚಿಕ್ಕದಾದ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಇದು ಕೇವಲ ನಾಲ್ಕೈದು ಕುಟುಂಬಗಳಿಗೆ ಮಾತ್ರ ಸಂಪರ್ಕ ಕಲ್ಪಿಸುತ್ತದೆ. ಉಳಿದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಕಾಡಿನ ನಡುವೆ ಇರುವ ಕಾಲು ದಾರಿಯೇ ಗತಿ. ಅಲ್ಲಿ ವಾಸಿಸುವವರಿಗೆ ಯಾರಿಗೇ ಆರೋಗ್ಯ ಸರಿಯಿಲ್ಲದಿದ್ದರೂ ಇದೇ ರಸ್ತೆಯೇ ಗತಿಯಾಗಿದೆ.

ಕಲ್ಯಾಣಿ ಎಂಬ ವೃದ್ಧೆಯೊಬ್ಬರು ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ತೀವ್ರ ಸುಸ್ತಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಯುವಕರು ಜೋಲಿಯಲ್ಲಿ ಈ ವೃದ್ದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂತಹ ಯಾತನೆಯ ಬದುಕನ್ನು ಇಲ್ಲಿನ ಜನರು ನಡೆಸಬೇಕಾಗಿದೆ. ಇದೊಂದೇ ಗಂಭೀರ ಸಮಸ್ಯೆಯಲ್ಲ, ಜೊತೆಗೆ ಇಲ್ಲಿರುವ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕೂಡ ಇಲ್ಲದಂತಹ ಪರಿಸ್ಥಿತಿ ಇದೆ.

ಇದನ್ನೂ ಓದಿ:‘ಪುನರ್ ವಸತಿ’ ಬಿಟ್ಟು ಕಾಡಿಗೆ ಮರಳಿದ ಆದಿವಾಸಿಗಳು

ಜಲಜೀವನ್ ಮಿಷನ್ ನಿಂದ ಪೈಪ್ ಲೈನ್ ಅಳವಡಿಸಿದ್ದಾರೆ ಅದರಲ್ಲಿ ನೀರು ಬರುವುದಿಲ್ಲ. ಎರಡು ಕಿಲೋ ಮೀಟರ್ ದೂರದಲ್ಲಿ ಗುಂಡಿಯೊಂದಕ್ಕೆ ಸಿಮೆಂಟ್ ರಿಂಗುಗಳನ್ನು ಅಳವಡಿಸಿ ತೆರೆದ ಬಾವಿ ರೀತಿಯಲ್ಲಿ ಮಾಡಲಾಗಿದೆ. ಇದೇ ನಮ್ಮ ಬದುಕಿಗೆ ಜೀವಜಲವಾಗಿದೆ. ನಾವೆಲ್ಲರೂ ಕೂಲಿ ಕೆಲಸ ಮಾಡಿ ಬದುಕುತ್ತಿರುವವರಾಗಿದ್ದು, ಕೂಲಿ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆ ಆರು ಗಂಟೆಯಾಗಿರುತ್ತದೆ.

ಅಷ್ಟೊತ್ತಿಗೆ ಕತ್ತಲೆ ಆವರಿಸಿರುತ್ತದೆ. ಮಿತಿಮೀರಿ ಕಾಡಾನೆಗಳ ಕಾಟವಿದ್ದು ಆ ಜೀವಭಯದಲ್ಲೇ ಎರಡು ಕಿಲೋಮೀಟರ್ ತೆರಳಿ ಗುಂಡಿಯಿಂದ ನೀರು ತರಬೇಕು. ನಮ್ಮ ಮಕ್ಕಳನ್ನು ಎರಡು ಕಿಲೋಮೀಟರ್ ಕಾಡಿನಲ್ಲಿ ಆನೆಗಳ ಆತಂಕದಲ್ಲಿ ಶಾಲೆಗೆ ಕರೆದೊಯ್ಯಬೇಕು ಎಂದು ತಮ್ಮಗಿರುವ ತೊಂದರೆಗಳ ಬಗ್ಗೆ ಹಾಡಿಯ ಜನ ನೋವಿನಿಂದಲೆ ನುಡಿದರು.

ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಜೇನುಕುರುಬರ ಮುಖಂಡ ಕಾಳಿಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

36 ಕುಟುಂಬಗಳು ಅರಣ್ಯ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ 7 ಕುಟುಂಬಗಳಿಗೆ ಮಾತ್ರವೇ ಒಂದು ಎಕರೆ, ಅರ್ಧ ಎಕರೆಯಂತೆ ಭೂಮಿ ನೀಡಿದ್ದಾರೆ. ಉಳಿದವರಿಗೆ ಭೂಮಿ ಮಂಜೂರು ಮಾಡಿಲ್ಲ ಎನ್ನುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದು ಎಷ್ಟು ಬಾರಿ ಇಲ್ಲಿನ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಬಂದಾಗ ಮತ ಕೇಳಲು ಬರುವ ಶಾಸಕರು, ಆ ಬಳಿಕ ಇತ್ತ ತಿರುಗಿ ನೋಡುವುದಿಲ್ಲ ಎನ್ನುವುದು ಇಲ್ಲಿಯ ಜನರ ಆಕ್ರೋಶ. ಇನ್ನಾದರೂ ಹಾಡಿಗೆ ಕನಿಷ್ಠ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಗಮನಹರಿಸಬೇಕಿದೆ. ಜನರಿಗೆ 

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 08 | ಭಾಗ 01 Live

Donate Janashakthi Media

Leave a Reply

Your email address will not be published. Required fields are marked *