ನೌಕರರ ಪಿಂಚಣಿ ಪಾವತಿಗೆ ಸಾರಿಗೆ ನಿಗಮಗಳ ವಾಣಿಜ್ಯ ಕಟ್ಟಡ ಅಡಮಾನ: ಸಚಿವ ಶ್ರೀರಾಮುಲು

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕೆಎಸ್ಆರ್​ಟಿಸಿ ಹೊರತುಪಡಿಸಿ ಇತರ ಮೂರು ನಿಗಮಗಳ ವಾಣಿಜ್ಯ ಕಟ್ಟಡಗಳನ್ನು ಅಡಮಾನ ಇರಿಸಿ ಸಾಲ ಪಡೆದು ನೌಕರರಿಗೆ ಪಿಂಚಣಿ ನೀಡಲು ಬಳಸಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

ಅಧಿವೇಶನದ ಅಂಗವಾಗಿ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಎಸ್ಆರ್​ಟಿಸಿಯಿಂದ ಯಾವುದೇ ವಾಣಿಜ್ಯ ಕಟ್ಟಡವನ್ನು ಅಡಮಾನ ಇಟ್ಟಿಲ್ಲ. ಆದರೆ, ಬಿಎಂಟಿಸಿಯಿಂದ ಶಾಂತಿನಗರ ವಾಣಿಜ್ಯ ಕಟ್ಟಡ ಅಡಮಾನ ಇಟ್ಟು ₹390 ಕೋಟಿ ಸಾಲ ಪಡೆಯಲಾಗಿದೆ.

ವಾಣಿಜ್ಯದ ದೃಷ್ಟಿಯಿಂದ ನಮ್ಮ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿಲ್ಲ. ಸೇವಾ ದೃಷ್ಟಿಯಿಂದ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ, ಸಾಲ ಮಾಡಬೇಕಾದ ಸನ್ನಿವೇಶ ಬಂದಿದೆ. ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟು ಶೀಘ್ರ ಲಾಭದತ್ತ ತರಲು ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಸಂಸ್ಥೆಯನ್ನು ಲಾಭದತ್ತ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವರು ಉತ್ತರಿಸಿದರು.

ಕಟ್ಟಡ ಅಡಮಾನದಿಂದ ಬಂದ ಹಣವನ್ನು ಭವಿಷ್ಯ ನಿಧಿ ಸಲುವಾಗಿ ಬಳಸಲಾಗಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ 16.39 ಎಕರೆ ಜಾಗ ಅಡಮಾನ ಇಟ್ಟು ₹100 ಕೋಟಿ ಸಾಲ ಪಡೆಯಲಾಗಿದೆ. ಅದನ್ನ ಭವಿಷ್ಯ ನಿಧಿಗೆ ಬಳಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಾಣಿಜ್ಯ ಕಟ್ಟಡ ಅಡಮಾನ ಇಟ್ಟು ₹50 ಕೋಟಿ ಸಾಲ ಪಡೆದು ಭವಿಷ್ಯ ನಿಧಿಗೆ ವಿನಿಯೋಗಿಸಲಾಗಿದೆ. ಕೋವಿಡ್ ವೇಳೆ ಸರ್ಕಾರ ಸಾರಿಗೆ ಸಿಬ್ಬಂದಿ ವೇತನ, ನಿರ್ವಹಣೆಗೆ ಸಹಾಯ ಮಾಡಿದೆ. ಆದರೂ ಭವಿಷ್ಯ ನಿಧಿಗಾಗಿ ಸಾಲ ಮಾಡಬೇಕಾಗಿದೆ ಬಂದಿದೆ ಎಂದು ಹೇಳಿದರು.

ಕೋವಿಡ್ ವೇಳೆ ಮರಣ ಹೊಂದಿದವರಿಗೆ ನಿಗದಿಯಂತೆ ಪರಿಹಾರ ನೀಡಲಾಗುತ್ತಿದೆ. ಉಳಿದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಂಜೆ 6ರ ನಂತರ ಪರಿಷತ್ ಕಲಾಪ ಮುಂದುವರೆಯುವುದಿಲ್ಲ

ಸೋಮವಾರದಿಂದ ವಿಧಾನಪರಿಷತ್ ಕಲಾಪವನ್ನು ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ನಡೆಸಲಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಾವು 27 ಜನ ಸದಸ್ಯರು ಇದ್ದೇವೆ. ಒಂದೇ ಒಂದು ಸ್ಥಾಯಿ ಸಮಿತಿಯನ್ನೂ ನಮಗೆ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಕಲಾಪ ನಡೆಸುವ ಸಮಯವನ್ನು ಸೂಚಿಸುವ ನಿಯಮಾವಳಿ ಪುಸ್ತಕದಲ್ಲಿನ ಉಲ್ಲೇಖವನ್ನು ಪ್ರಸ್ತಾಪಿಸಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೆ ನಡೆಸಬೇಕು ಎಂದಿದೆ. ಸಂಜೆ 6 ಗಂಟೆ ನಂತರ ಕಲಾಪದಲ್ಲಿ ಭಾಗಿಯಾಗುವುದು ಕಷ್ಟವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಹೊರಟ್ಟಿಯವರು, ಸಮನ್ವಯತೆ ಕೊರತೆಯಿಂದ ಹಾಗಾಗಿದೆ, ಸರಿಪಡಿಸಲಾಗುತ್ತದೆ. ಸೋಮವಾರದಿಂದ ಬೆಳಗ್ಗೆ 10.30ರಿಂದ ಸಂಜೆ 6ರವರೆಗೆ ಕಲಾಪ ನಡೆಸಲಾಗುತ್ತದೆ. ಸಹಕಾರ ಕೊಡಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *