ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಮೀ ಅಂತರಕ್ಕೆ ಒಂದೇ ಟೋಲ್‌: ಸಚಿವ ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇವಲ 60 ಕಿ.ಮೀ. ಅಂತರದಲ್ಲಿ ಇರುವ ಎರಡು ಟೋಲ್‌ಗ‌ಳ ಪೈಕಿ ಒಂದನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಯಲ್ಲಿ ಇಂದು ಘೋಷಣೆ ಮಾಡಿದ್ದಾರೆ.

60 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಟೋಲ್ ಕೇಂದ್ರಗಳು  ಇದ್ದಲ್ಲಿ ಅದನ್ನು ಮೂರು ತಿಂಗಳಿನಲ್ಲಿ ಮುಚ್ಚಲಾಗುತ್ತದೆ. ಟೋಲ್‌ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯರಿಗೆ ಆಧಾರ್‌ ಕಾರ್ಡ್‌ ಆಧಾರಿತ ಪಾಸ್‌ ನೀಡಲಾಗುತ್ತದೆ ಎಂದೂ ಗಡ್ಕರಿ ಭರವಸೆ ನೀಡಿದ್ದಾರೆ. 2024ರ ಡಿಸೆಂಬರ್‌ ಒಳಗಾಗಿ ದೇಶದ ಹೆದ್ದಾರಿಗಳು ಅಮೆರಿಕದಲ್ಲಿ ಇರುವ ಅತ್ಯುತ್ತಮ ಹೆದ್ದಾರಿಗಳಂತೆ ಪರಿರ್ತನೆಗೊಳ್ಳಲಿವೆ. ಅಲ್ಲಿನ ರಸ್ತೆಗಳಂತೆ ಗುಣಮಟ್ಟದ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ 2024ರ ಡಿಸೆಂಬರ್‌ ಒಳಗಾಗಿ ಇಲ್ಲಿನ ರಸ್ತೆಗಳ ಗುಣಮಟ್ಟಗಳನ್ನು ಹೊಂದಲಿವೆ ಎಂದು ಸಚಿವ ನಿತಿನ್ ಗಡ್ಕರಿ‌ ಹೇಳಿದರು.

ಹೊಸ ಮಾರ್ಗಸೂಚಿ:

2021ರಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಂತೆ, ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನಗಳ ಸುಗಮ ಮತ್ತು ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಹೊರಡಿಸಿದ ಮಾರ್ಗಸೂಚಿ ಅನ್ವಯ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಸಹ ಪ್ರತಿ ವಾಹನ 10 ಸೆಕೆಂಡ್ ಮೀರದಂತೆ ಕಾಯುವುದನ್ನು ತಡೆಯಬೇಕು ಎಂದು ಹೇಳಲಾಗಿದೆ.

ಮಾರ್ಗಸೂಚಿಯಂತೆ, ಟೋಲ್‌ ಕೇಂದ್ರಗಳಲ್ಲಿ 100 ಮೀಟರ್‌ಗಿಂತ ಹೆಚ್ಚು ವಾಹನಗಳು ಸರದಿ ನಿಲ್ಲಲು ಅವಕಾಶವಿಲ್ಲ. ಇದರಿಂದಾಗಿ ವಾಹನಗಳ ಸಂಚಾರ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯುತ್ತದೆ. ಇದರೊಂದಿಗೆ, ಫಾಸ್ಟ್ ಟ್ಯಾಗ್ ಶೇ100ರಷ್ಟು ಕಡ್ಡಾಯಗೊಳಿಸಿದ ನಂತರ ಯಾವುದೇ ಕಾಯುವಿಕೆಯ ಸಮಯವು ಉಳಿತಾಯವಾಗಿದೆ ಎಂದು ಪ್ರಾಧಿಕಾರ ಹೇಳಿತ್ತು.

ಒಂದು ವೇಳೆ ಯಾವುದಾದರೂ ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್‌ಗಿಂತ ಹೆಚ್ಚಾದರೆ ಟೋಲ್ ಬೂತ್‌ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗೆ ಬರಲು ಉಳಿದ ವಾಹನಗಳಿಗೆ ಯಾವುದೇ ಟೋಲ್ ಪಾವತಿಸದೇ ಸಂಚರಿಸಲು ಅವಕಾಶವಿದೆ. ಈ ಉದ್ದೇಶಕ್ಕಾಗಿ ಪ್ರತಿ ಟೋಲ್ ಕೇಂದ್ರ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗಿದೆ ಎಂದು ತಿಳಿಸಲಾಗಿತ್ತು.

ಒಟ್ಟಾರೆ ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಕೇಂದ್ರಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನ ಅಂದಾಜು ಮಾಡಿ ಪರಿಣಾಮಕಾರಿ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಫಾಸ್ಟ್ ಟ್ಯಾಗ್ ಅಳವಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಇದು ಟೋಲ್ ಕಾರ್ಯಾಚರಣೆಗಳಲ್ಲಿನ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಿದೆ.

ಇಲಾಖೆಯ ಮುಂದಿನ ಯೋಜನೆ

ಇಲಾಖೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಸಚಿವರು, “ದೆಹಲಿ-ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ಕೇವಲ ನಾಲ್ಕು ಗಂಟೆಗಳಲ್ಲಿ ಸಂಚಾರ ನಡೆಸಬಹುದು” ಎಂದು ವಿವರಣೆ ನೀಡಿದರು.

2023ರ ಡಿಸೆಂಬರ್‌ ಒಳಗಾಗಿ ಮಾನಸ ಸರೋವರ ಯಾತ್ರೆ ಕೈಗೊ ಳ್ಳಲು ಚೀನಾ ಅಥವಾ ನೇಪಾಳ ಮೂಲಕ ತೆರಳ ಬೇಕಾಗಿಲ್ಲ. ಉತ್ತರಾಖಂಡದ ಪಿತ್ರೋಗಡದ ಮೂಲಕ ತೆರಳುವ ಬಗ್ಗೆ ಹೊಸ ಮಾರ್ಗ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದರಿಂದಾಗಿ ಸುಲಭವಾಗಿ ಪ್ರಯಾಣ ಸಾಧ್ಯವಾಗಲಿದೆ. ಜತೆಗೆ ಈಗಿನ ದಾರಿಯಂತೆ ನಡೆದುಕೊಂಡು ಹೋಗಬೇಕಾಗುವ ಅಗತ್ಯ ಬರುವುದಿಲ್ಲ ಎಂದರು.

“ಶ್ರೀನಗರ-ಜಮ್ಮು ರಸ್ತೆಯನ್ನು ಮುಂದಿನ ದಿನಗಳಲ್ಲಿ ಕಾತ್ರಾ-ಅಮೃತಸರ-ದೆಹಲಿ ರಸ್ತೆಗೆ ಸೇರಿಸಲಾಗುತ್ತದೆ. ಇದರಿಂದಾಗಿ ಶ್ರೀನಗರ-ಮುಂಬೈ ನಡುವಿನ ಪ್ರಯಾಣದ ಅವಧಿ 20 ಗಂಟೆಗಳಿಗೆ ಇಳಿಕೆಯಾಗಲಿದೆ. ದೆಹಲಿ-ಜೈಪುರ, ದೆಹಲಿ-ಮುಂಬೈ, ದೆಹಲಿ-ಡೆಹ್ರಡೂನ್ ಎಕ್ಸ್‌ಪ್ರೆಸ್ ವೇಗಳನ್ನು ಈ ವರ್ಷದೊಳಗೆ ಪೂರ್ಣಗೊಳಿಸಲಾಗುತ್ತದೆ. ಜೈಪುರ-ಡೆಹ್ರಡೂನ್ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ. ದೆಹಲಿ-ಮುಂಬೈ ಪ್ರಯಾಣದ ಅವಧಿ 12 ಗಂಟೆ ಆಗಲಿದೆ” ಎಂದರು.

ಬೆಳವಣಿಗೆಯಾಗುತ್ತಿರುವ ತಾಂತ್ರಿಕ ಅಂಶಗಳಿಂದಾಗಿ ವಿದ್ಯುತ್‌ ಚಾಲಿತ ವಾಹನಗಳ ವೆಚ್ಚ ಕಡಿಮೆಯಾಗುತ್ತಿದೆ. ಮುಂದಿನ 2 ವರ್ಷಗಳಲ್ಲಿ ಪೆಟ್ರೋಲ್‌ ಚಾಲಿತ ವಾಹನಗಳಿಗೆ ಸಮನಾಗಿ ಅವುಗಳು ವೃದ್ಧಿ ಕಾಣಲಿವೆ ಎಂದು ಹೇಳಿದ್ದಾರೆ. ಲೀಥಿಯಂ ಬ್ಯಾಟರಿಗಳ ದರವೂ ಕಡಿಮೆ ಯಾಗಲಿದೆ ಎಂದು ಗಡ್ಕರಿ ಅವರು ಪ್ರತಿಪಾದಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *