ನಾಡಿಗೆ ಬೆಳಕು ನೀಡುವ ಕಾಯಕ ಮಾಡುವ ಚೇತನ್ ಕುಮಾರ್

ಜ್ಯೋತಿ ಶಾಂತರಾಜು

ಇಂದಿನ ಕಾಲದಲ್ಲಿ ಕರೆಂಟ್ ಅಥವಾ ಪವರ್ ಇಲ್ಲದಿದ್ದರೆ ನಮ್ಮ ಬಹುತೇಕ ವ್ಯವಸ್ಥೆ ನಿಂತುಬಿಡುತ್ತದೆ. ಮನೆಯಲ್ಲಿ ನೀರು ಕಾಯಿಸುವುದರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳವರೆಗೆ ಎಲ್ಲದಕ್ಕೂ ಕರೆಂಟ್ ಬೇಕು. ಬೆಳಕು, ಅಡುಗೆ, ಮನರಂಜನೆ, ವಾಹನ ಚಾಲನೆಗೆ ಹೀಗೆ ಕರೆಂಟ್  ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಇನ್ನು ವಿದ್ಯುತ್ ಸರಬರಾಜು ಮಾಡುವ ಲೈನ್‌ ಮ್ಯಾನ್ ಕೆಲಸ ಅಷ್ಟು ಸುರಕ್ಷಿತವಾದುದಲ್ಲ. ಸೈನಿಕರಂತಯೇ ಇವರೂ ಕೂಡ ನಮಗಾಗಿ ಅಪಾಯ ಮೈಮೇಲೆಳೆದುಕೊಂಡೇ ವೃತ್ತಿ ನಿರ್ವಹಿಸಬೇಕು. ನಮ್ಮ ಅನಿವಾರ್ಯತೆ ಪೂರೈಸಲು ಯಾವಾಗಲೂ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುವ ನಾಡಿನ ಈ ವಿದ್ಯುತ್ ಯೋಧರ ಜೀವನ ಪಯಣ ಇಂದಿನ ನಿಮ್ಮ ಓದಿಗೆ.

ಇದನ್ನು ಓದಿ: ಸಾವಿರಕ್ಕೂ ಹೆಚ್ಚು ಸುರಕ್ಷಿತ ಹೆರಿಗೆ ಮಾಡಿಸಿದ ಸೋಮಿ

ಈ ನಾಗರಿಕ ಜಗತ್ತಿನಲ್ಲಿ ಎಲ್ಲಾ ಮಾನವ ಚಟುವಟಿಕೆಗಳು, ಅವರ ಜೀವನೋಪಾಯ ಮತ್ತು ಆರ್ಥಿಕ ಬೆಳವಣಿಗೆಯು ವಿದ್ಯುತ್ತಿನಿಂದ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ 24×7 ವಿದ್ಯುತ್ ಅತ್ಯಗತ್ಯ. ಹಳ್ಳಿ, ಗುಡ್ಡಗಾಡು, ಉದ್ಯಮ, ಮಾಧ್ಯಮ, ಆಸ್ಪತ್ರೆ, ಪ್ರಿಂಟಿಂಗ್, ಪ್ಯಾಕೇಜಿಂಗ್, ಯಂತ್ರೋಪಕರಣಗಳು, ಹೋಟೆಲ್, ಕೃಷಿ ಮಾಡಲು ನಿರಂತರವಾಗಿ ಎಲ್ಲಾ ವರ್ಗದವರಿಗೂ ವಿದ್ಯುತ್ ಅತ್ಯಗತ್ಯ.

ಯಾರೇನೇ ನಿಂದಿಸಿದರು, ಕಷ್ಟವಾದರೂ, ಸುಖವಾದರೂ ನಾಡಿಗೆ ಬೆಳಕು ನೀಡುತ್ತಾ ಕಾಯಕ ಮಾಡುತ್ತಿರುವ ಚೇತನ್ ಕುಮಾರ್ ಕೆ. ಇವರು ಮೂಲತಃ ನೆಲಮಂಗಲದ ಸಮೀಪ ಇರುವ ತಿರುಮಲಾಪುರ ಗ್ರಾಮದವರು. ಹೆಸರಿಗೆ ತಕ್ಕಂತೆ ಚೇತನವಾಗಿರುವ ಇವರ ಜೀವನ ಪರಿಚಯ ಮತ್ತು ನಿತ್ಯ ಹೋರಾಟದ ಬಗ್ಗೆ ಅವರ ಮಾತಿನಲ್ಲಿ ಓದಿಕೊಳ್ಳಿ. ಅಮ್ಮ ಯಶೋಧ, ಅಪ್ಪ ಕೆಂಪರಾಜು ದಂಪತಿಗಳಿಗೆ ಇಬ್ಬರು ಮಕ್ಕಳು. ನಾನು ಮತ್ತು ನನ್ನ ತಂಗಿ. ನಾನು ಒಂಭತ್ತನೇ ತರಗತಿಯಲ್ಲಿ ಓದುವಾಗಲೇ ತಂದೆ ತೀರಿಕೊಂಡರು. ನಂತರ ನನ್ನ ಮತ್ತು ತಂಗಿಯ ಎಲ್ಲಾ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ಅಮ್ಮ ಆ ಕಾಲಕ್ಕೆ ಹತ್ತನೇ ತರಗತಿಯವರೆಗೆ ಓದಿದ್ದರು. ಹಾಗಾಗಿ ಟಿ. ಬೇಗೂರು ಹತ್ತಿರ ಇರುವ ಫಾರ್ಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗ ಅಮ್ಮನಿಗೆ ಬರುತ್ತಿದ್ದ ಸಂಬಳ 300/- ರೂಪಾಯಿಗಳು. ಬರುತ್ತಿದ್ದ ಸಂಬಳದಲ್ಲಿಯೇ ಅಮ್ಮ ಮನೆ ನಿಭಾಯಿಸಿಕೊಂಡು ಇದ್ದುದರಲ್ಲಿಯೇ ನಮ್ಮನ್ನು ತುಂಬ ಚೆನ್ನಾಗಿ ಬೆಳೆಸಿದಳು. ಕಷ್ಟ ಏನೂ ಅಂತ ಆಗಿನಿಂದಲೇ ತಿಳಿದುಕೊಂಡು ಬೆಳೆದ ನಾವು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಎಸ್.ಎಸ್.ಎಲ್.ಸಿ.ಯಲ್ಲಿ 85% ಅಂಕಗಳು ಬಂದಿದ್ದವು. ಹತ್ತನೇ ತರಗತಿ ಮುಗಿದ ನಂತರವೇ ಡಿಪ್ಲೊಮೊ ಸೇರಿಕೊಳ್ಳಲು ಮನಸ್ಸು ಮಾಡಿದೆ. ಬೇಗ ಓದು ಮುಗಿಸಿ ಅಮ್ಮನ ಹೆಗಲ ಭಾರವನ್ನು ಕಡಿಮೆ ಮಾಡಬೇಕು ಅನ್ನಿಸಿ ಸರ್ಕಾರಿ ಪಾಲಿಟೆಕ್ನಿಕ್ ಗೆ ಅರ್ಜಿ ಹಾಕಿದ್ದೆ. ಅದೃಷ್ಟವಶಾತ್ ಎಂಬಂತೆ ನನಗೆ ಸೀಟ್ ಸಿಕ್ಕಿತ್ತು. ಗವರ್ನಮೆಂಟ್ ಪಾಲಿಟೆಕ್ನಿಕ್ ಆದ್ದರಿಂದ ಫೀಸ್ ಕಡಿಮೆ ಇತ್ತು. ಅಷ್ಟು ಹೊತ್ತಿಗೆ ಅಮ್ಮನ ಸಂಬಳ 3500/- ರೂ ಆಗಿತ್ತು. ತುಮಕೂರಿನ ಗವರ್ನಮೆಂಟ್ ಪಾಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮ ಮುಗಿಸಿದೆ. ಡಿಪ್ಲೋಮ ಮುಗಿಸಿದ ನಂತರ ಇಂಜಿನಿಯರಿಂಗ್ ಮಾಡುವ ಕನಸು ಪ್ರಬಲವಾಗಿದ್ದರೂ  ಮನೆಯ ಪರಿಸ್ಥಿತಿ ಕಷ್ಟಗಳನ್ನು ನೆನಪಿಸಿತ್ತು. ಹಾಗಾಗಿ ಅಮ್ಮ ಮಾಡುತ್ತಿದ್ದ ಕಂಪನಿಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ನಂತರ 2016ರ ಆಗಸ್ಟ್ ನಲ್ಲಿ ಕ.ವಿ.ಪ್ರ.ನಿ.ನಿ. (ಕೆಪಿಟಿಸಿಎಲ್‌)ದಲ್ಲಿ ಅರ್ಜಿ ಹಾಕಿದ್ದೆ. ಗ್ರಾಮೀಣ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಐದು ಫಿಸಿಕಲ್ ಟೆಸ್ಟ್ ಗಳು ಇರುತ್ತವೆ.

ಇದನ್ನು ಓದಿ: ಮಕ್ಕಳ ಶಿಕ್ಷಣಕ್ಕಾಗಿ ಪ್ರತಿದಿನ 130 ಕಿ.ಮೀ. ಪ್ರಯಾಣ ಮಾಡುವ ಶಿಕ್ಷಕ ಮಂಜುನಾಥ್

ಮೊದಲನೆಯದಾಗಿ ಕಂಬ ಹತ್ತುವುದು, 100 ಮೀಟರ್‌ ಅನ್ನು 14ಸೆಕೆಂಡ್ ಗಳಲ್ಲಿ ಓಡಬೇಕು. ಗುಂಡು ಎಸೆತದಲ್ಲಿ 8ಮೀ  ಎಸೆಯಬೇಕು. ಒಂದು ನಿಮಿಷಕ್ಕೆ 50 ಸ್ಕಿಪಿಂಗ್ ಆಡಬೇಕು. 800 ಮೀಟರ್‌ ಅನ್ನು 3 ನಿಮಿಷದಲ್ಲಿ ಓಡಬೇಕು. ಇದರಲ್ಲಿ ಮೂರರಲ್ಲಿ ಪಾಸ್ ಆಗಬೇಕು. ನಾನು 4 ರಲ್ಲಿ ಪಾಸ್ ಮಾಡಿದ್ದೆ. ಹಾಗಾಗಿ 2017ರಲ್ಲಿ ಜೂನಿಯರ್ ಪವರ್ ಮ್ಯಾನ್ ಕೆಲಸ ಸಿಕ್ತು. ನಂತರ ನಾನು ಕೆಲಸ ಮಾಡ್ತಾ ತಂಗಿಯನ್ನು ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ನಾ ಕಂಡ ಕನಸನ್ನು ತಂಗಿಯ ಮೂಲಕ ನನಸಾಗಿಸಿಕೊಳ್ಳುತ್ತಿದ್ದೇನೆ.

 

ಸಮಾಜದಲ್ಲಿ ಅಶಾಂತಿ, ಗಲಾಟೆ, ಗದ್ದಲಗಳು ಉಂಟಾದರೆ ಪೊಲೀಸ್ ನವರಿಂದ ಕಂಟ್ರೋಲ್ ಮಾಡಲು ಸಾಧ್ಯವಾಗದಿದ್ದರೆ, ಆರ್ಮಿಯವರನ್ನು ಕರೆಸುತ್ತಾರೆ. ಸರ್ಕಾರಿ ಡಾಕ್ಟರ್ ಗಳು ಮುಷ್ಕರ ಮಾಡಿದರೆ ಖಾಸಗಿ ಡಾಕ್ಟರ್ ಗಳನ್ನು ಕರೆಸುತ್ತಾರೆ. ಸರ್ಕಾರಿ ಬಸ್ ಮುಷ್ಕರ ಮಾಡಿದರೆ ಖಾಸಗಿ ವಾಹನಗಳನ್ನು ಆದರೆ ನಮ್ಮ ಪವರ್ ಮ್ಯಾನ್ ಗಳು ಮುಷ್ಕರ ಮಾಡಿದರೆ ಇದಕ್ಕೆ ಇನ್ನೊಂದು ಮೀಸಲು ಪಡೆ ಅಂತ ಇನ್ನೊಂದು ಇಲ್ಲ. ಯಾವುದೊ ಒಂದು ವೈರ್ ಕಟ್ ಆಗಿದೆ ಅಂದಾಗ ನಮ್ಮ ಪವರ್ ಮ್ಯಾನ್ ಗಳೇ ಹೋಗಬೇಕು. ಬೇರೆ ಯಾರನ್ನೂ ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಮೇಣದ ಬತ್ತಿ ಹೇಗೆ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕನ್ನು ನೀಡುತ್ತದೆಯೋ ಹಾಗೆ ನಮ್ಮ ಪವರ್ ಮ್ಯಾನ್ ಗಳ ಕೆಲಸ. ಯಾವ ಕ್ಷಣದಲ್ಲಿ ಬೇಕಾದರೂ ಪ್ರಾಣಪಕ್ಷಿ ಹಾರಿಹೋಗಬಹುದು.

ಹಲವು ರೀತಿಯಲ್ಲಿ ವಿದ್ಯುತ್ ತಯಾರಾಗುತ್ತಿದೆ. ಜಲ ವಿದ್ಯುತ್, ಗಾಳಿ ವಿದ್ಯುತ್, ಸೋಲಾರ್ ಪ್ಲಾಂಟ್ ಮತ್ತು ಕಲ್ಲಿದ್ದಲು ವಿದ್ಯುತ್ ನ ಮೂಲಗಳಾಗಿವೆ. ಕೆಲವೊಮ್ಮೆ ನಾವು ರೀಡಿಂಗ್ ಗೆ ಅಂತ ಹೋದಾಗ ಪವರ್ ಸ್ಟೇಷನ್ ಯಾರ್ಡ್ ಗಳಲ್ಲಿ ಡಿಸ್ಕ್ ಗಳು ಫ್ಲ್ಯಾಶ್ ಓವರ್ ಆಗುತ್ತದೆ. ಆಗ ನೂರು ಇನ್ನೂರು ಮೀಟರ್ ವರೆಗೂ ಡಿಸ್ಕ್ ಗಳು ಸಿಡಿಯುತ್ತದೆ. ಅದೇನಾದರೂ ತಲೆಗೆ ಸಿಡಿದರೆ ಆ ಕ್ಷಣದಲ್ಲೇ ಸತ್ತು ಹೋಗುತ್ತಾರೆ. ಇನ್ನೊಂದು ಬೇಸರದ ಸಂಗತಿ ಎಂದರೆ, ಕೋವಿಡ್ ಸಮಯದಲ್ಲಿ ಪೊಲೀಸರು ಆರೋಗ್ಯ ಸಿಬ್ಬಂದಿಗಳು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಡಾಕ್ಟರ್ ಗಳು ಎಲ್ಲರಿಗೂ ಕರೋನ ವಾರಿಯರ್ಸ್ ಎಂದು ಸನ್ಮಾನ ಮಾಡಿದರು. ನಾವು ಒಂದು ಗಂಟೆ ಕರೆಂಟ್ ಕೊಟ್ಟಿಲ್ಲ ಅಂದಿದ್ರೆ ಯಾವ ಹಾಸ್ಪಿಟಲ್ ರಿಪೋರ್ಟ್ ಗಳೂ ಬರುತ್ತಿರಲಿಲ್ಲ. ಯಾವ ಯಂತ್ರೋಪಕರಣಗಳು ಕೆಲಸ ಮಾಡುತ್ತಿರಲಿಲ್ಲ. ಆಗ ರಜೆ ತೆಗೆದುಕೊಳ್ಳದೆ ನಮ್ಮ ಪವರ್ ಮ್ಯಾನ್ ಗಳು ಕೆಲಸ ಮಾಡಿದ್ದೇವೆ. ನಮ್ಮ ಇಲಾಖೆಯಲ್ಲಿ 70% ರಜೆ ಘೋಷಿಸಲಿಲ್ಲ. ಹೀಗೆ ಕೆಲಸ ಮಾಡಿದರೂ ನಮ್ಮನ್ನು ಯಾರೂ ಗುರುತಿಸಲಿಲ್ಲ.

ಇದನ್ನು ಓದಿ: ಕೌದಿಯೊಳಗಿನ ಒಂದೊಂದು ಚಿತ್ತಾರಗಳು ಒಂದೊಂದು ಕತೆ ನೆನಪಿಸುತ್ತವೆ

ತುಂಬಾ ವರ್ಷಗಳಿಂದ ಲೈನ್ಮೆನ್ ಅಂತಲೇ ಕರೆಯುತ್ತಿದ್ದರು. ಡಿ. ಕೆ. ಶಿವಕುಮಾರ್ ಅವರು 2017- 2018ರಲ್ಲಿ ಲೈನ್ಮೆನ್ ಅಂತ ಕರೆಯುವುದಕ್ಕಿಂತ ಪವರ್ ಮ್ಯಾನ್( ಶಕ್ತಿ ಮಿತ್ರ )ಅಂತ ಮರುನಾಮಕರಣ ಮಾಡಿದರು.

ಒಟ್ಟು 5 ನಿಗಮಗಳಿವೆ. ಬೆಂಗಳೂರಿನಲ್ಲಿ ಬೆಸ್ಕಾಂ, ಮೈಸೂರಿನಲ್ಲಿ ಚೆಸ್ಕಾಂ, ಮಂಗಳೂರಿನಲ್ಲಿ ಮೆಸ್ಕಾಂ, ಗುಲ್ಬರ್ಗ ದಲ್ಲಿ ಜೆಸ್ಕಾಂ, ಹುಬ್ಬಳ್ಳಿಯಲ್ಲಿ ಹೆಸ್ಕಾಂ. ವಿದ್ಯುತ್ ಇಲ್ಲಿಂದ ಎಲ್ಲಾ ಕಡೆಗೆ ಸರಬರಾಜು ಆಗುತ್ತದೆ.

ಮಳೆಗಾಲದಲ್ಲಿ ಹೆಚ್ಚು ಸಮಸ್ಯೆಗಳು ಬರುತ್ತವೆ. ಮರಗಳು ಬೀಳುವುದು, ಕಂಬ ಮುರಿಯುವುದು ಹೆಚ್ಚಿರುತ್ತದೆ. ಸುರಕ್ಷಿತ ಸಾಧನಗಳನ್ನು ಸಂಸ್ಥೆ ಕೊಟ್ಟಿದ್ದರೂ ಅವಗಢಗಳು ಕಣ್ಮುಚ್ಚಿ ಬಿಡುವಷ್ಟರಲ್ಲಿ ಸಂಭವಿಸಿಬಿಡುತ್ತವೆ. ಒಂದು ಲೈನಿನಲ್ಲಿ 11ಕೆಬಿ ಯಿಂದ 15 ರಿಂದ 20 ಹಳ್ಳಿಗಳಿಗೂ ಹೋಗಿರುತ್ತದೆ. ನಮ್ಮಲ್ಲಿರುವುದು ಒಂದೇ ಲೈನ್. ಆದರೆ ಅದರಿಂದ 20 ಊರಿಗೆ ಪವರ್ ಹೋಗಿರುತ್ತದೆ.

ಎಲ್ಲೋ ಒಂದು ಕಡೆ ಕರೆಂಟ್ ಹೋದಾಗ  20 ಹಳ್ಳಿಗಳಲ್ಲೂ ಕರೆಂಟ್ ಇರುವುದಿಲ್ಲ. ಆ ಒಂದೇ ಸಮಯಕ್ಕೆ ನೂರಾರು ಫೋನ್ ಕಾಲ್ ಬಂದಿರುತ್ತದೆ. ಒಂದೇ ಮಾರ್ಗದಲ್ಲಿ ಲೈನ್ ಹೋಗಿರುತ್ತದೆ. ಯಾವುದೋ ತೋಟದಲ್ಲಿ ವೈರ್ ಕಟ್ ಆಗಿರುತ್ತದೆ, ಮರ ಬಿದ್ದಿರುತ್ತದೆ. ವೈರ್ ಕಟ್ ಆಗಿದೆ ಎಂದಾಗ ಯಾವ ಸಾರ್ವಜನಿಕರೂ ಕೂಡ ಹತ್ತಿರ ಬಂದು ಮುಟ್ಟುವುದಿಲ್ಲ. ಜನರನ್ನು ನಾವೆ ಕರೆಯಬೇಕು. ಇಲ್ಲ ಕರೆಂಟ್ ತೆಗೆದಿದ್ದೇವೆ ಬನ್ನಿ ಎಂದಾಗ ಯಾರೋ ಒಬ್ಬರು ಸಹಾಯ ಮಾಡುವ ಮನಸ್ಥಿತಿ ಇರುವವರು ಕೆಲವೊಬ್ಬರು ಬರುತ್ತಾರೆ.

ಆಫೀಸ್ ಗಳಲ್ಲಿ ಲೈನ್ ಕ್ಲಿಯರ್ ಅಂತ ತೆಗೆದುಕೊಂಡಿರಬೇಕು. ಅಚಾನಕ್ಕಾಗಿ ಆಗಿ ಲೈನ್ ಕ್ಲಿಯರ್ ಆಗದೆ ಪವರ್ ಆನ್ ಮಾಡಿದರೆ ದೇಹವೇ ಹತ್ತಿಕೊಂಡು ಉರಿಯುವ ಸಾಧ್ಯತೆ ಇರುತ್ತದೆ. ಹಾಗೂ ವೈರಿಂದ ವೈರ್ ಶಾರ್ಟ್ ಆದಾಗಲೂ ಕರೆಂಟ್ ಆಫ್ ಆಗಲಿಲ್ಲ ಅಂದಾಗಲೂ ದೇಹ ಹತ್ತಿಕೊಂಡು ಉರಿದು ತುಂಡು ತುಂಡಾಗಿ ಬೀಳುವ ಸಾಧ್ಯತೆಯೂ ಇರುತ್ತದೆ. ಎಲ್ಲೇ ಯಾವುದೇ ವೈರ್ ಕಟ್ ಆದಾಗಲೂ ಪವರ್ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳದೆ ಜನಸಾಮಾನ್ಯರು ಯಾರೂ ಮುಟ್ಟಬಾರದು. ಸಹಾಯವಾಣಿ 1912 ಗೆ ಕರೆ ಮಾಡಿದಾಗ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಯಾವ ಏರಿಯಾ, ಯಾವ ಲೈನ್ ಹೋಗಿದೆ ಅಂತ ಆಫೀಸಿನವರು ತಿಳಿದುಕೊಂಡು ಲೈನ್ ಆಫ್ ಮಾಡುತ್ತಾರೆ.

ಇದನ್ನು ಓದಿ: ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಛಲವಾದಿ ನೀಲಿ ಲೋಹಿತ್‌

ವಿದ್ಯುತ್ ಇಲಾಖೆ ಎನ್ನುವುದೇ ಚಾಲೆಂಜ್. ಏಜನ್ಸಿ, ಹೊರ ಗುತ್ತಿಗೆ ಅಂತ ಕೆಲಸ ಮಾಡುವವರಿಗೆ ತುಂಬ ಕಷ್ಟ. ಪ್ರಾಣ ಪಣವಿಟ್ಟು ಎಷ್ಟೇ ವರ್ಷ ಕೆಲಸ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸರ್ಕಾರದ ಅಧೀನದಲ್ಲಿ ಇರುವವರಿಗಾದರೆ ಆಕಸ್ಮಿಕವಾಗಿ ಏನಾದರೂ ಸತ್ತರೆ ಅವರ ಮನೆಯಲ್ಲಿ ಬೇರೆ ಯಾರಿಗಾದರೂ ಕೆಲಸ ಕೊಡುತ್ತಾರೆ. ಜಾಸ್ತಿ ಅನಾಹುತಗಳಾಗುವುದೇ ಕಂಬದ ಮೇಲಿಂದ ಬೀಳುವುದು. ಕರೆಂಟ್ ಹೊಡೆದಾಗ ಸೆಕೆಂಡಿನಲ್ಲಿ ಪ್ರಾಣ ಹಾನಿಯಾಗುತ್ತದೆ. ಕರೆಂಟ್ ಹೊಡೆದ ವ್ಯಕ್ತಿಯ ದೇಹದ ಯಾವುದಾದರೂ ಭಾಗದಿಂದ ವಿದ್ಯುತ್ ಹೊರಗೆ ಹೋದರೆ ವ್ಯಕ್ತಿ ಸ್ವಲ್ಪ ಪ್ರಮಾಣದಲ್ಲಿ ಬದುಕುಳಿಯುವ ಸಾಧ್ಯತೆಗಳಿವೆ

ಈ ಇಲಾಖೆಯಲ್ಲಿ ಸೀಮಿತ ಅವಧಿಯ ಕೆಲಸ ಇರುವುದಿಲ್ಲ. ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರೂ ಕೆಲಸಕ್ಕೆ ಹೋಗಬೇಕಾಗಿ ಬರಬಹುದು. ಇದೆ ಕಾರಣದಿಂದಲೇ ಆಗೆಲ್ಲ ಕೆಇಬಿಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡೋದಿಲ್ಲ ಅಂತಿದ್ರಂತೆ. ಯಾವಾಗ ಬೇಕಾದರೂ ಅನಾಹುತ ಆಗತ್ತೆ ಅಂತ ಗೊತ್ತಿದ್ದರೂ ಖುಷಿಯಿಂದ ಕೆಲಸ ಮಾಡುತ್ತೇವೆ.

ಯಾವುದೇ ಕಂಪನಿಗೆ ಹೋದ್ರೂ ಸ್ವಾಗತ, ಆಫೀಸ್ ರೂಮ್, ರೆಸ್ಟ್ ರೂಮ್, ಇತ್ಯಾದಿ ಅಂತ ನಾಮಪಲಕಗಳ ರೂಮುಗಳು ಇರುತ್ತವೆ. ಆದರೆ, ನಮ್ಮ ಇಲಾಖೆಯಲ್ಲಿ ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ ಅಂತಲೇ ಇರುತ್ತದೆ. ಎಲ್ಲಾದರೂ ವೈರ್ ಕಟ್ಟಾಗಿ ಬಿದ್ದಿದ್ದರೆ ಇಲಾಖೆಗೆ ತಿಳಿಸಬೇಕು. ಇಲ್ಲದಿದ್ದರೆ ಯಾರೋ ಗೊತ್ತಿಲ್ಲದ ಅಮಾಯಕರು, ದಾರಿ ಹೋಕರು, ದನ ಕಾಯುವವರು, ವೈರ್ ಬಿದ್ದಿದೆಯಲ್ಲ ಅಂತ ಹೋಗಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ದಯವಿಟ್ಟು ಇನ್ಮುಂದೆ ಯಾರದಾದರೂ ಗಮನಕ್ಕೆ ಬಂದಾಗ ಸಹಾಯವಾಣಿ 1912ಕ್ಕೆ ಕರೆಮಾಡಿ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ತಿಳಿಸಿದರೆ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಚೇತನ್.

ಇದನ್ನು ಓದಿ: 5000 ಕ್ಕಿಂತಲೂ ಹೆಚ್ಚು ಅನಾಥ ಶವಗಳ ಸಂಸ್ಕಾರ ಮಾಡಿರುವ ಆಶಾ

ಚೇತನ್ ಅವರು ತಮ್ಮ ಕೆಲಸದ ಜೊತೆ ಜೊತೆಗೆ ಆನಂದ್ ತಿಪಟೂರು ಅವರ ಸಾರಥ್ಯದಲ್ಲಿ ಅಮೃತ ಹಸ್ತ ತಂಡದ ಮೂಲಕ ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು, ಹಸಿದವರಿಗೆ ಅನ್ನ ಹಂಚುವುದು, ಆಶ್ರಮಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವುದು, ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಇದ್ದವರಿಗೆ ರಕ್ತದಾನ ಮಾಡುವುದು. ಹೀಗೆ ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪವರ್ ಮ್ಯಾನ್ ಗಳು ಮೈ ಎಲ್ಲಾ ಕಣ್ಣಾಗಿದ್ದುಕೊಂಡು ಕೆಲಸ ಮಾಡಿ ನಮ್ಮ ನಿಮ್ಮ ಮನೆಗಳಿಗೆ ಬೆಳಕನ್ನು ನೀಡುತ್ತಿದ್ದಾರೆ.

ಏರಿಯಾದಲ್ಲಿ ಮರ ಬಿದ್ದಿರಬಹುದು. ಇಲ್ಲ ವೈರ್ ಕಟ್ಟಾಗಿರಬಹುದು. ಕಂಬ ನೆಲಕ್ಕುರುಳಿರಬಹುದು. ಹೀಗೆನಾದರೂ ಆಗಿದ್ದರೆ ಅಸಡ್ಡೆ ತೋರದೆ ಸಂಬಂಧಪಟ್ಟ ಎಇ/ಜೆಇ ಅಥವಾ ಪವರ್ ಮ್ಯಾನ್ ಗಳಿಗೆ ತಿಳಿಸಿ. ಇಲ್ಲ ಸಹಾಯವಾಣಿಗೆ ಕರೆಮಾಡಿ. ಎಷ್ಟೋ ಸಲ ಪವರ್ ಮ್ಯಾನ್ ಗಳು ಕಂಬಗಳಲ್ಲಿ ಕ್ಷಣಮಾತ್ರದಲ್ಲಿ ಹೊತ್ತುರಿಯುವುದನ್ನು ನೋಡಿದ್ದೇವೆ. ಇವರು ಕೆಲಸಕ್ಕೆ ಹೋದಾಗ ವಾಪಸ್ ಬರುವವರೆಗೆ ಇವರ ತಾಯಂದಿರ, ಹೆಂಡತಿ, ಮಕ್ಕಳ ಸಂಕಟ ಹೇಳತೀರದು. ಯಾವುದೇ ಹಬ್ಬವಿರಲಿ ಜಾತ್ರೆಯಿರಲಿ ಇವರು ಕೆಲಸದಲ್ಲಿರುತ್ತಾರೆ. ಕಾಡುಗಳಲ್ಲಿ, ಬಯಲು ಪ್ರದೇಶಗಳಲ್ಲಿ ಕೆಲವೊಮ್ಮೆ ಊಟ, ಕುಡಿಯಲು ನೀರು ಸಹ ಸಿಗುವುದಿಲ್ಲ. ಬಿಸಿಲಿದ್ದರೂ ಮಳೆಗಾಲದಲ್ಲಿ ತೊಯ್ದು ತೊಪ್ಪೆಯಾಗಿ, ಗುಡುಗು ಸಿಡಿಲುಗಳಿದ್ದರೂ, ಪ್ರವಾಹವಿದ್ದರೂ ತಮ್ಮ ಕರ್ತವ್ಯ ನಿರ್ವಹಿಸುವ ಇವರೂ ಕೂಡ ಗಡಿಯಲಿರುವ ಯೋಧನಷ್ಟೇ ಗೌರವಕ್ಕೆ ಅರ್ಹರು. ಆದರೆ ನಾವು ಇವರನ್ನು ನಡೆಸಿಕೊಳ್ಳುವ ಬಗೆ ಎಂತು… ನಮ್ಮ ಸಮಾಜ ನೋಡುವ ಅಮಾನವೀಯ ರೀತಿ, ಮಾತುಗಳನ್ನು ಬಿಟ್ಟು ಅವರೂ ಮನುಷ್ಯರು ಎಂಬ ಭಾವನೆಯಿಂದಾದರೂ ಗೌರವಿಸೋಣ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *