ನಾವ್ಯಾಕೆ ಮುಸ್ಲಿಂ ಕೋಮುವಾದದ ಬಗ್ಗೆ ಹೆಚ್ಚು ಬರೆಯುತ್ತಿಲ್ಲ ಗೊತ್ತಾ ?

– ನವೀನ್ ಸೂರಿಂಜೆ

ಮುಸ್ಲೀಮರು ನಡೆಸುವ ಹಿಂಸಾಚಾರವನ್ನೂ ನಾವು ಖಂಡಿಸಬೇಕು” “ಹಿಂದೂ ಕೋಮುವಾದದಷ್ಟೇ ಮುಸ್ಲಿಂ ಕೋಮುವಾದ / ಮೂಲಭೂತವಾದ ಅಪಾಯಕಾರಿಯಾದುದು” ಈ ಎರಡ್ಮೂರು ವಾಕ್ಯಗಳನ್ನು ಇಟ್ಟುಕೊಂಡು ಕೋಮುವಾದವನ್ನು ಜನರಲೈಸ್ ಮಾಡಲಾಗುತ್ತಿದೆ. ನಾವು ಕೂಡಾ ಪೊಲಿಟಿಕಲೀ ಕರೆಕ್ಟ್ ಆಗಿರಬೇಕು ಎಂಬ ಕಾರಣಕ್ಕಾಗಿ ಈ ವಾಕ್ಯಗಳನ್ನು ಬಳಸಿಕೊಳ್ಳುತ್ತೇವೆ. ನೀವ್ಯಾಕೆ ಮುಸ್ಲಿಂ ಕೋಮುವಾದದ ಬಗ್ಗೆ ಬರೆಯಲ್ಲ ? ನೇತ್ರಾವತಿಯಲ್ಲಿ ನೆತ್ತರು ಪುಸ್ತಕದಲ್ಲೂ ಮುಸ್ಲೀಮರ ಹಿಂಸಾಚಾರದ ಬಗ್ಗೆ ಒಂದಕ್ಷರ ಬರೀಲಿಲ್ಲ ಯಾಕೆ ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಹಿಂದೂ ಕೋಮುವಾದ ಅಥವಾ ಬಹುಸಂಖ್ಯಾತ ಕೋಮುವಾದ ಎನ್ನುವುದು ದೇಶದ ಆಡಳಿತದೊಂದಿಗೆ ಮಿಳಿತವಾಗಿದೆ. ಸರ್ಕಾರ ಯಾವುದೇ ಇರಲಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿರುವ ಬಹುಸಂಖ್ಯಾತರು ಹಿಂದೂ ಕೋಮುವಾದವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪೋಷಿಸುತ್ತಾರೆ. ಹಿಂಸಾಚಾರ ನಡೆಸಿದ ಹಿಂದೂ ಕೋಮುವಾದಿಗಳನ್ನು ಪೊಲೀಸರು ಬಂಧಿಸಿರಬಹುದು‌. ಆ ಬಂಧನದ ಬಳಿಕ ಹಿಂದೂ ಕೋಮುವಾದಿಗಳ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳು ಧಿಡೀರನೆ ಅಭಿವೃದ್ದಿಯಾಗುತ್ತದೆ. ಒಂದು ಕಾಲದ ರೌಡಿ ಶೀಟರ್, ಭೂಗತ ಲೋಕದ ಡಾನ್, ಹಫ್ತಾ ವಸೂಲಿ ಮಾಡುವವನು ಹಿಂದುತ್ವ ಸಂಘಟನೆ ಸೇರಿಕೊಂಡರೆ ಆತ ಎಲ್ಲಾ ಆರೋಪಗಳನ್ನು ಕಳಚಿಕೊಂಡು ಹಿಂದೂ ನಾಯಕನಾಗುತ್ತಾನೆ. ಅದೇ ಒಬ್ಬ ಮುಸ್ಲೀಂ ರೌಡಿ ಮುಸ್ಲಿಂ ನಾಯಕನಾಗಲು ಸಾಧ್ಯವೇ ಇಲ್ಲ. ಮುಸ್ಲಿಂ ನಾಯಕ ಆಯೋಜಿಸಿದ್ದ ಪ್ರತಿಭಟನೆಯಲ್ಲೋ ಕಾರ್ಯಕ್ರಮದಲ್ಲೋ ಯಾರೊ ಭಾಷಣಕಾರ ಪ್ರಚೋದನಾಕಾರಿಯಾಗಿ ಮಾತನಾಡಿದರೂ ಆಯೋಜಕ ಮುಸ್ಲಿಂ ನಾಯಕನೇ ಭಯೋತ್ಪಾದಕನೆಂದೋ, ದೇಶದ್ರೋಹಿಯೆಂದೂ ಅನ್ನಿಸಿಕೊಳ್ಳುತ್ತಾನೆ.

ಕೋಮುಗಲಭೆಗಳಲ್ಲಿ ಮುಸ್ಲೀಮರ ಮನೆ, ಅಂಗಡಿ ಸುಟ್ಟು ಹಾಕಿದ ಎಷ್ಟು ಹಿಂದೂ ಕೋಮುವಾದಿಗಳು ಜಾಮೀನು ಸಿಗದೆ ಜೈಲಲ್ಲಿ ಕೊಳೆಯುತ್ತಿದ್ದಾರೆ ? ಎಷ್ಟು ಮುಸ್ಲಿಂ ಕೋಮುವಾದಿಗಳು ಜೈಲಲ್ಲಿದ್ದಾರೆ ಎಂಬ ಅಂಕಿಅಂಶಗಳನ್ನು ತೆಗೆದು ನೋಡಿ. ಈವರೆಗೆ ಭಯೋತ್ಪಾದನೆ ಪ್ರಕರಣ ದಾಖಲಿಸಿಕೊಂಡಿರುವ ಹಿಂದೂ ಕೋಮುವಾದಿಗಳು, ಮುಸ್ಲಿಂ ನಾಯಕರು ಎಲ್ಲೆಲ್ಲಿದ್ದಾರೆ ? ಕೇರಳದ ಜನಪ್ರಿಯ ಮುಸ್ಲಿಂ ನಾಯಕ ಮದನಿ ಸಂಸದರಾದರೇ ? ಪ್ರಜ್ಞಾಸಿಂಗ್ ಠಾಕೂರ್ ಹೇಗೆ ಸಂಸದರಾದರು ?

ಹಿಂದೂ ಆರೋಪಿಗೆ ಹಿಂದುತ್ವ ಸಂಘಟನೆಗಳ ಸಂಪರ್ಕ ಇದೆ ಎಂದಾದರೆ ಆತ ಅಟೋಮ್ಯಾಟಿಕಲಿ ರಕ್ಷಣೆಗೆ ಒಳಪಡುತ್ತಾನೆ. ಅದೇ ಅಮಾಯಕ ಸಂತ್ರಸ್ತ ಮುಸ್ಲೀಮನೊಬ್ಬನಿಗೆ ಪಿಎಫ್ಐ, ಎಸ್‌ಡಿಪಿಐ ರಕ್ಷಣೆ ನೀಡಿದೆ ಎಂದಾದರೆ ಸಂತ್ರಸ್ತನೂ ದೇಶದ್ರೋಹಿಯಂತೆ ಬಿಂಬಿತನಾಗುತ್ತಾನೆ.

ಹಾಗಾಗಿ ಮುಸ್ಲಿಂ ಕೋಮು ಹಿಂಸಾಚಾರ ಎನ್ನುವುದು ಒಂದು ಕ್ರೈಂ ಅಷ್ಟೆ. ಮುಸ್ಲೀಮರು ತಪ್ಪು ಮಾಡುವುದನ್ನೇ ಕಾಯೋದಕ್ಕೆ ಲಕ್ಷಾಂತರ ಕಣ್ಣುಗಳಿವೆ. ಮುಸ್ಲೀಮರನ್ನು ಬಂಧಿಸುವುದಕ್ಕೆ, ಕೈ ಕೋಳ ಹಾಕುವುದಕ್ಕೆ ಪೊಲೀಸರು ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತಾರೆ. ಮುಸ್ಲಿಂ ಆರೋಪಿಯ ಪರ ಯಾವ ರಾಜಕಾರಣಿಯೂ ಮಾತನಾಡುವ ದೈರ್ಯ ಈ ದೇಶದಲ್ಲಿ ಹೊಂದಿಲ್ಲ. ಮುಸ್ಲಿಂ ಧಾರ್ಮಿಕ ನಾಯಕರ‌್ಯಾರೂ ಕೂಡಾ ಮುಸ್ಲಿಂ ಆರೋಪಿಯ ಪರ ನಿಂತಿದ್ದಿಲ್ಲ. ನಿಜವಾದ ಮುಸ್ಲಿಂ ಆರೋಪಿಯ ರಕ್ಷಣೆ ಎನ್ನುವುದು ದೊಡ್ಡ ಜೋಕ್. ಹಾಗಾಗಿ ನಾವು ಮುಸ್ಲಿಂ ಹಿಂಸಾಚಾರದ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳಬೇಕಿಲ್ಲ. ನಾವು ಮಾತನಾಡಬೇಕಿರುವುದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಿಂದ ರಕ್ಷಣೆಗೊಳಪಟ್ಟು ಹಿಂಸಾಚಾರ ನಡೆಸುತ್ತಿರುವ ಕೋಮುವಾದದ ಬಗ್ಗೆ ಮಾತ್ರ.

Donate Janashakthi Media

Leave a Reply

Your email address will not be published. Required fields are marked *