ಕೊಪ್ಪಳ | ಕೈಗಾರಿಕಾ ಮಾಲೀಕರ ಮತ್ತು ಮಾಲಿನ್ಯ ತಡೆಯದ ಸರಕಾರದ ದುರ್ನಡೆ – ಸಿಪಿಐಎಂ ಖಂಡನೆ

ಬೆಂಗಳೂರು : ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗಿಣಿಗೆರೆ ಭಾಗದಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಎಲ್ಲ ಕೈಗಾರಿಕೆಗಳು, ಅವು ಬಿಡುವ ವಿಪರೀತ ಕಲುಷಿತ ಹೊಗೆ ಹಾಗು ಎಬ್ಬಿಸುವ ಕೆಂಧೂಳು ಮತ್ತು ಹೆದ್ದಾರಿ ರಸ್ತೆ ನಿರ್ಮಾಣದ ವಿಪರೀತ ಧೂಳುಗಳ ಮೂಲಕ ಪರಿಸರ ಹಾಗು ನಾಗರೀಕ ಜನ ಜೀವನ ಹಾಗು ಕೃಷಿಯ ಮೇಲೆ ಆಗುತ್ತಿರುವ ತೀವ್ರ ಸ್ವರೂಪದ ಕೆಟ್ಟ ಪರಿಣಾಮಗಳಿಂದ ಈ ಭಾಗದ ಜನತೆಯ ಜೀವನವು ತೀವ್ರ ಸಂಕಷ್ಟಕ್ಕೆ ತುತ್ತಾಗುತ್ತಿದೆ. ಕೃಷಿ ಭೂಮಿಯ ಉತ್ಪಾದನೆಗೆ ಮತ್ತು ಜಾನುವಾರುಗಳ ಆರೋಗ್ಯಕ್ಕೆ ತೀವ್ರ ಧಕ್ಕೆ ಉಂಟಾಗುತ್ತಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಕೆ. ಪ್ರಕಾಶ್ ಹೇಳಿದ್ದಾರೆ.

ಕೈಗಾರಿಕಾ ಮಾಲೀಕರ ಹಾಗು ರಸ್ತೆ ನಿರ್ಮಾಣದ ಗುತ್ತಿಗೆದಾರರ ವಿರುದ್ಧ ಮತ್ತು ಈ ದುಷ್ಕೃತ್ಯವನ್ನು ಮತ್ತು ಪರಿಸರ ಸಂರಕ್ಷಣೆಗೆ ಅಗತ್ಯ ಕಾನೂನಿನ ಕ್ರಮ ಕೈಗೊಳ್ಳದೆ ಕೈಗಾರಿಕಾ ಮಾಲೀಕರ ಜೊತೆ ಶಾಮೀಲಾಗಿ ಇಂತಹದ್ದೊಂದು ಕೆಟ್ಟ ಸ್ಥಿತಿ ನಿರ್ಮಾಣಕ್ಕೆ ಕಾರಣರಾದ ಕೆಐಏಡಿಬಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ಆಡಳಿತದ ಅಧಿಕಾರಿ ವರ್ಗ, ಶಾಸಕರು ಮತ್ತು ರಾಜ್ಯ ಸರಕಾರದ ದುರ್ನಡೆಯನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕೈಗಾರಿಕೆಗಳ ಮೇಲೆ ಕಠಿಣ ಕಾನೂನು ಕ್ರಮ ವಹಿಸಿ, ಪರಿಸರ ಸಂರಕ್ಷಣೆಯ ಸುರಕ್ಷಾ ಕ್ರಮ ವಹಿಸುವವರೆಗೆ ಅವುಗಳನ್ನು ಬಂದ್ ಮಾಡಲು ಮತ್ತು ನಿರ್ಲಕ್ಷ್ಯ ವಹಿಸಿದ ಎಲ್ಲ ಜವಾಬ್ದಾರಿ ಹೀನ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಕಠಿಣ ಕಾನೂನು ಕ್ರಮವಹಿಸಲು ಸಿಪಿಐಎಂ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ ಮತ್ತು ಈ ಭಾಗದ ಜನತೆಗಾದ ಎಲ್ಲ ರೀತಿಯ ಹಾನಿಯನ್ನು ತುಂಬಿಕೊಡಲು ಅಗತ್ಯ ಪರಿಹಾರ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.

ಇದೇ ಕಾರಣದಿಂದ, ಈ ಭಾಗದಲ್ಲಿ ಕೈಗಾರಿಕೆಗಳೇ ಬೇಡವೆಂಬ ಅಭಿಪ್ರಾಯ ರೂಪುಗೊಳ್ಳಲು ಕಾರಣವಾಗುತ್ತಿದೆ. ರಾಜ್ಯ ಸರಕಾರ ಈ ಕುರಿತ ಜನತೆಯ ಭಾವನೆಗಳನ್ನು ಗೌರವಿಸಿ ಅಗತ್ಯ ಕ್ರಮವಹಿಸದೆ, ಕಠಿಣ ಕ್ರಮವಹಿಸದೆ ಜನತೆಯ ಬೆಂಬಲ ಗಳಿಸಲು ಸಾದ್ಯವಿಲ್ಲವೆಂಬುದನ್ನು ಮುಖ್ಯಮಂತ್ರಿಗಳು ಗಮನಿಸಬೇಕಾಗಿದೆ ಎಂದರು.

ಇದನ್ನೂ ಓದಿ: ಹಾವೇರಿ| ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಲು ಹೋರಾಟ ಸಮಿತಿ ಆಗ್ರಹ

ಬಿಜೆಪಿ ಹಾಗು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಕೈಗಾರಿಕಾ ವಿರೋದಿ ನಿಲುಮೆ – ಸಿಪಿಐಎಂ ವಿರೋಧ

ಒಂದೆಡೆ, ಬಿಜೆಪಿ ಹಾಗು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸರಕಾರದ ನೇತೃತ್ವ ವಹಿಸಿ ಕೈಗಾರಿಕಾ ನಿರ್ಮಾಣಕ್ಕೆ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಅದ್ಧೂರಿಯಾಗಿ ಸಂಘಟಿಸುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಈ ಪಕ್ಷಗಳ ಮುಖಂಡರು ಕೈಗಾರಿಕೆಗಳೆ ಬೇಡವೆಂದು ಪ್ರತಿಭಟನೆ ಸಂಘಟಿಸಲು ತೊಡಗಿರುವುದು ಕಂಡು ಬಂದಿದೆ. ಇದು, ಈ ಪಕ್ಷಗಳ ನಾಯಕರು ಜನತೆಯನ್ನು ತಮ್ಮ ಅಧಿಕಾರದಾಹದಿಂದ ತಪ್ಪುದಾರಿಗೆಳೆಯುತ್ತಿರುವುದನ್ನು ತೋರುತ್ತಿದೆ ಎಂದು ಸಿಪಿಐಎಂ ವಿರೋಧಿಸಿದೆ.

ಪರಿಸರ ಮಾಲಿನ್ಯದ ಭಯವಿದ್ದರೆ, ಅಂತಹ ಪ್ರಶ್ನೆಯ ನಿವಾರಣೆಗೆ ಕ್ರಮಗಳಾಗ ಬೇಕೆಂದು ಮತ್ತು ಜನ ವಸತಿಯಿಂದ ದೂರದಲ್ಲಿ ಅತ್ಯಂತ ಸುರಕ್ಷತೆಯಲ್ಲಿ ನಿರ್ಮಿಸುವಂತೆ ಒತ್ತಾಯಿಸಬಹುದೇ ಹೊರತು, ಕೈಗಾರಿಕೆ ನಿರ್ಮಾಣಕ್ಕೆ ಅಡ್ಡಿ ಪಡಿಸುವುದನ್ನು ಸಿಪಿಐ(ಎಂ) ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಕೈಗಾರಿಕೆ ಸ್ಥಾಪನೆಗೆ ಸಿಪಿಐಎಂ ಬೆಂಬಲ

ಕೈಗಾರಿಕೆ ನಿರ್ಮಾಣವನ್ನು ಸಿಪಿಐಎಂ ಖಂಡಿತಾ ವಿರೋಧಿಸುವುದಿಲ್ಲ ಅದನ್ನು ಸ್ವಾಗತಿಸುತ್ತದೆ. ಇದು ಈ ಭಾಗದ ಹಿಂದುಳಿದಿರುವಿಕೆಯ ನಿವಾರಣೆಗೆ, ಉದ್ಯೋಗ ನಿರ್ಮಾಣಕ್ಕೆ ಅಗತ್ಯವಾಗಿದೆ.

ಆದರೆ, ಅದರಿಂದ ನಾಗರೀಕ ಜನ ಜೀವನಕ್ಕೆ ಯಾವುದೆ ಧಕ್ಕೆ ಬಾರದಂತೆ, ಸುರಕ್ಷತಾ ಕ್ರಮ ವಹಿಸುವ ಖಾತರಿ ಭರವಸೆಯನ್ನು ಜನತೆಗೆ ನೀಡುವಂತೆ ಮತ್ತು ಅವರ ವಿಶ್ವಾಸದೊಂದಿಗೆ, ಜನ ವಸತಿಯಿಂದ ದೂರದಲ್ಲಿ ನಿರ್ಮಿಸಲು ಕ್ರಮವಹಿಸುವಂತೆ ಸರಕಾರಗಳನ್ನು ಸಿಪಿಐಎಂ ಒತ್ತಾಯಿಸುತ್ತದೆ.

ಭೂ ಸ್ವಾಧೀನ ಕಾಯ್ದೆ – 2013 ರಂತೆ, ಕೈಗಾರಿಕಾ ಸ್ಥಾಪನೆಗೆ ಮುಂಚೆ, ಕೈಗಾರಿಕಾ ಸ್ಥಾಪನೆಯಿಂದ ಪರಿಸರದ ಹಾಗು ಜನ ಜೀವನದ ಮೇಲಾಗುವ ಪರಿಣಾಮಗಳನ್ನು ತಜ್ಞರ ಸಮಿತಿಯ ಮೂಲಕ ಅಧ್ಯಯನ ನಡೆಸಬೇಕು. ಹಾಗೂ ಪರಿಸರದ ಸುರಕ್ಷತೆಯ ಖಾತರಿಯೊಂದಿಗೆ ನಾಗರೀಕ ಒಪ್ಪಿಗೆ ಪಡೆಯಬೇಕು ಮತ್ತು ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕಾ ನಿರ್ಮಾಣಕ್ಕೆ ಬಳಸದೆ ಇರುವುದು, ಕೃಷಿ ಯೋಗ್ಯವಲ್ಲದ ಹಾಗು ಮಳೆಯಾಧಾರಿತ ಜಮೀನುಗಳ ಶೇ 75 ರೈತರ ಒಪ್ಪಿಗೆ ಮೇರೆಗೆ ಮತ್ತು ಮಾರುಕಟ್ಟೆ ದರದ ಮೂಲಕ ಭೂ ಸ್ವಾಧೀನಕ್ಕೆ ಕ್ರಮವಹಿಸಬೇಕು.

ಭೂಮಿ , ವಸತಿ, ಉದ್ಯೋಗ ಕಳೆದುಕೊಂಡವರಿಗೆ ಖಾಯಂ ಉದ್ಯೋಗ ಸಹಿತ ಪುನರ್ವಸತಿಗೆ ಕ್ರಮ ವಹಿಸಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಖಾತರಿ ಪಡಿಸುವುದು ಮುಂತಾದ ಜನಪರ ಕ್ರಮಗಳ ಮೂಲಕ, ಜನ ವಸತಿಯಿಂದಾಚೆ, ಜನ ವಿಶ್ವಾಸದ ಮೂಲಕ ಕೈಗಾರಿಕೆ ನಿರ್ಮಾಣಕ್ಕೆ ಸರಕಾರ ಅಗತ್ಯ ಕ್ರಮ ವಹಿಸುವಂತೆ ಸಿಪಿಐಎಂ ಆಗ್ರಹಿಸಿದೆ.

ಇದನ್ನೂ ನೋಡಿ: ಬಿಟ್ಟಿ ಚಾಕರಿ ಬೇಡ ಸೇವಾ ಭದ್ರತಿ ನೀಡಿ | ಕರ್ನಾಟಕ ಸಂಜೀವಿನಿ ನೌಕರರ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *