ಮೇ 1 ರಿಂದ  ಎಲ್ಲ ವಯಸ್ಕರಿಗೆ ಲಸಿಕೆಯ ಕಾರ್ಯಕ್ರಮ ಎಂದರೆ ಲಸಿಕೆಗಳ ಬೆಲೆ ಹೆಚ್ಚಿಸುವ, ರಾಜ್ಯಗಳ ಹೊರೆ ಹೆಚ್ಚಿಸುವ ಕ್ರಮವಷ್ಟೇ?

ಕೇಂದ್ರ ಸರಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊವಿಡ್‍-19 ಲಸಿಕೆ ಹಾಕುವ ಕಾರ್ಯಕ್ರಮವನ್ನು ಪ್ರಕಟಿಸಿದೆ. ಎಪ್ರಿಲ್‍ 19ರಂದು  ‘ರಾಷ್ಟ್ರೀಯ ಕೊವಿಡ್‍-19 ಲಸಿಕೀಕರಣ ಕಾರ್ಯಕ್ರಮ’ದ “ಉದಾರೀಕೃತ ಮತ್ತು ವೇಗ ಹೆಚ್ಚಿಸಿದ ಮೂರನೇ ಘಟ್ಟದ ಕಾರ್ಯವ್ಯೂಹ” ಎಂಬುದನ್ನು ಪ್ರಕಟಿಸಿದೆ.

ಇದನ್ನು ಓದಿ: ಏನಿದು ರೆಮ್ಡೆಸಿವಿರ್ ಔಷಧ? ಇದರ ಪ್ರಯೋಜನವೇನು ಮತ್ತು ಏಕೆ ಇದರ ಕೊರತೆಯಿದೆ?

ವಾಸ್ತವವಾಗಿ ಇದು ಖಾಸಗಿ ಲಸಿಕೆ ತಯಾರಕರಿಗೆ  ಉಡುಗೊರೆ, ಇದರ ಹೊರೆಯನ್ನು ಸದ್ದಿಲ್ಲದೆ  ನಾಗರಿಕರ ಮೇಲೆ ದಾಟಿಸಲಾಗುತ್ತದೆ ಎಂದು ಆರ್ಥಿಕ ತಜ್ಞರೊಬ್ಬರು ಟಿಪ್ಪಣಿ ಮಾಡಿದ್ದಾರೆ.

ಇದರ ಮುಖ್ಯ ಅಂಶವೆಂದರೆ, ಲಸಿಕೆ ತಯಾರಕರು 50%ದಷ್ಟು ಡೋಸ್‍ಗಳನ್ನು ಭಾರತ ಸರಕಾರಕ್ಕೆ ಪೂರೈಸಬೇಕು ಮತ್ತು ಉಳಿದ 50%ವನ್ನು ರಾಜ್ಯ ಸರಕಾರಗಳಿಗೆ ಮತ್ತು ಬಹಿರಂಗ ಮಾರುಕಟ್ಟೆಯಲ್ಲಿ ಮಾರಬಹುದು. ಮತ್ತು ರಾಜ್ಯಗಳಿಗೆ ಮತ್ತು ಬಹಿರಂಗ ಮಾರುಕಟ್ಟೆಗೆ ಪೂರೈಸುವ ಡೋಸ್‍ಗಳ ಬೆಲೆಯನ್ನು “ಮುಂಗಡವಾಗಿ ಮೇ 1 ರ ಮೊದಲು  ಪಾರದರ್ಶಕವಾಗಿ” ಘೋಷಿಸಬೇಕು. ಹೀಗೆ ತಾವೇ “ಪಾರದರ್ಶಕವಾಗಿ” ನಿರ್ಧರಿಸಿದ ಬೆಲೆಗಳಲ್ಲಿ ಖಾಸಗಿ ಲಸಿಕೆ ಕೊಡುವವರ ಮೂಲಕವೇ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು!

ಅಂದರೆ ಈ ‘ಉದಾರ’ ಲಸಿಕೀಕರಣ ಎಂಬುದು ಲಸಿಕೆಗಳ ಬೆಲೆಗಳ ‘ಉದಾರೀಕರಣ’ದ ಮೂಲಕ ಬರುತ್ತಿದೆ. ಬೆಲೆಗಳ ಉದಾರೀಕರಣ ಎಂದರೆ ಏರಿಕೆಯಂದೇ ಅರ್ಥ ತಾನೇ? ವಿಶೇಷವೆಂದರೆ ರಾಜ್ಯ ಸರಕಾರಗಳು ಈ ಬೆಲೆಗಳಲ್ಲೇ ಲಸಿಕೆಗಳನ್ನು ಪಡೆಯಬೇಕು.

ಇದನ್ನು ಓದಿ: ಅಕ್ರಮವಾಗಿ ರೆಮ್‍ಡಿಸಿವಿರ್ ಮಾರಾಟ ಮಾಡುತ್ತಿದ್ದವರ ಬಂಧನ

ಅಂದರೆ, ಮೂಲಭೂತವಾಗಿ ಭಾರತ ಸರಕಾರ  ರಾಜ್ಯಗಳಿಗೆ ಲಸಿಕೆಗಳನ್ನು ಖಾತ್ರಿಪಡಿಸುವ  ತನ್ನ ಹೊಣೆಗಾರಿಕೆಯಿಂದ ಹಿಂದಕ್ಕೆ ಸರಿದಿದೆ ಎಂಬುದೇ ಇದರ ಅರ್ಥವಾಗುತ್ತದೆ ಎಂದು ಆರ್ಥಿಕ ತಜ್ಞ ಮತ್ತು  ಕೇರಳ ಯೋಜನಾ ಆಯೋಗದ ಸದಸ್ಯ ಪ್ರೊ. ರಾಮ ಕುಮಾರ್‍ ಟಿಪ್ಪಣಿ ಮಾಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಲಸಿಕೆ ಕೊರತೆಯನ್ನು ನಿರ್ಮಿಸಿದ ಕೇಂದ್ರ ಸರಕಾರ ಈಗ ರಾಜ್ಯ ಸರಕಾರಗಳಿಗೆ ಲಸಿಕೆ ತಯಾರಕರಿಂದ ನೇರವಾಗಿಯೇ ಖರೀದಿಸಿ ಎಂದು ಹೇಳುತ್ತಿದೆ. ಮೇ 1ರಿಂದ ಲಸಿಕೆಗಳ ಕೊರತೆಯಾದರೆ, ಅದಕ್ಕೆ ರಾಜ್ಯ ಸರಕಾರಗಳೇ ಹೊಣೆಯಾಗುತ್ತವೆ. ಕೇಂದ್ರ ಸರಕಾರದ ಹೊಣೆ ಕೇವಲ ಮೊದಲ 30 ಕೋಟಿ ಆದ್ಯತೆಯ ವಿಭಾಗಗಳಿಗೆ ಉಚಿತವಾಗಿ ಲಸಿಕೆ ಹಾಕಿಸುವಷ್ಟಕ್ಕೇ ಸೀಮಿವಾಗುತ್ತದೆ. ಉಳಿದವರೆಲ್ಲರೂ ಈಗ ತೆರುವುದಕ್ಕಿಂತ ಹೆಚ್ಚಿನ ಬೆಲೆ ತೆತ್ತು ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ.  ಇದು ಈ ‘ಉದಾರೀಕೃತ’ ಮೂರನೇ ಘಟ್ಟದ ಕಾರ್ಯವ್ಯೂಹದ ಸಾರಾಂಶ.

ಇದು ಅತ್ಯಂತ ಪ್ರತಿಗಾಮಿ ಧೋರಣೆ, ಇದನ್ನು ರಾಜ್ಯ ಸರಕಾರಗಳು ವಿರೋಧಿಸಬೇಕಾಗಿದೆ ಎನ್ನುತ್ತಾರೆ ಪ್ರೊ.ರಾಮ ಕುಮಾರ್. ಇದು ರಾಜ್ಯಗಳ ಹಣಕಾಸಿನ ಮೇಲೆ  ಗಂಭೀರ ಹೊರೆಯನ್ನು ಹಾಕುತ್ತದೆ. ಇದರಿಂದ ಲಸಿಕೆಗಳ ಬೆಲೆಗಳು ಏರುತ್ತವೆ. ಇದು ಭಾರತ ಸರಕಾರಕ್ಕೆ ಲಸಿಕೀಕರಣ ಯೋಜನೆಯಲ್ಲಿ ತನ್ನ ವಿಫಲತೆಗಳನ್ನು ಲಸಿಕೆ ತಯಾರಕರು ಮತ್ತು ರಾಜ್ಯ ಸರಕಾರಗಳ ನಡುವಿನ ಚೌಕಾಶಿಯ ಹಿಂದೆ ಮರೆಮಾಚಲು ಬಳಸಿಕೊಳ್ಳಲು ಅವಕಾಶ ಕೊಡುತ್ತದೆ. ವಾಸ್ತವವಾಗಿ ಇದು ಖಾಸಗಿ ಲಸಿಕೆ ತಯಾರಕರಿಗೆ  ಉಡುಗೊರೆ, ಇದರ ಹೊರೆಯನ್ನು ಸದ್ದಿಲ್ಲದೆ  ನಾಗರಿಕರ ಮೇಲೆ ದಾಟಿಸಲಾಗುತ್ತದೆ ಎಂದು ಪ್ರೊ. ರಾಮಕುಮಾರ್ ‍ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *