ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣ : ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಮಂಗಳೂರು : ಪ್ರಸಿದ್ಧ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿ ಟ್ರಾಪ್, ಬ್ಲಾಕ್ ಮೇಲ್ ನಿಂದ ಕಂಗೆಟ್ಟು ಈ ಆತ್ಮಹತ್ಯೆ ಸಂಭವಿಸಿದೆ. ಇಷ್ಟಲ್ಲದೆ ಪ್ರಕರಣದಲ್ಲಿ ಇನ್ನುಷ್ಟು ನಿಗೂಢ ಅಂಶಗಳು, ಭಾಗೀದಾರಿಕೆಯ ಶಂಕೆ ಇದೆ. ಈ ಪ್ರಕರಣ ಮಾತ್ರವಲ್ಲದೆ ಇನ್ನಷ್ಟು ಹನಿಟ್ರಾಪ್, ಬ್ಲಾಕ್ ಮೇಲ್ ಪ್ರಕರಣಗಳು ಮಂಗಳೂರಿನ ಪ್ರತಿಷ್ಟಿತರು, ಉದ್ಯಮಿಗಳನ್ನು ಗುರಿಯಾಗಿಸಿ ನಡೆದಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ದಿಲ್ಲದೆ ಮುಗಿದು ಹೋಗಿರುವ ಇಂತಹ ಪ್ರಕರಣಗಳಲ್ಲಿ ಹಲವು ಕುಟುಂಬಗಳು ಛಿದ್ರವಾಗಿವೆ ಎಂಬ ಮಾತುಗಳಿವೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಷ್ಟಿತ ಉದ್ಯಮಿ ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣವನ್ನು ಆಳವಾದ ತನಿಖೆಗೆ ಒಳಪಡಿಸಬೇಕು ಎಂದು ಸುರತ್ಕಲ್ ‘ನಾಗರಿಕ ಹೋರಾಟ ಸಮಿತಿ, ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಮಹಿಳೆಯನ್ನು ಬಳಸಿಕೊಂಡು ಹಣ ಹಾಗೂ ವೈಯುಕ್ತಿಕ ದ್ವೇಷ ಸಾಧನೆ ಸಹಿತ ವಿವಿಧ ಉದ್ದೇಶ ಸಾಧನೆಗಾಗಿ ಮಮ್ತಾಜ್ ಅಲಿಯವರನ್ನು ಹಾಗೂ ಕುಟುಂಬವನ್ನು ಗುರಿಯಾಗಿಸಿ ಪರಿಚಿತ ತಂಡ ಬ್ಲಾಕ್ ಮೇಲ್ ಗೆ ಒಳಪಡಿಸಿದೆ ಹಾಗು ಅಸಾಧ್ಯ ಕಿರುಕಳ ನೀಡಿದೆ, ಇದರಿಂದ ಉಂಟಾದ ಒತ್ತಡವನ್ನು ಭರಿಸಲಾಗದೆ ಮಮ್ತಾಜ್ ಅಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ ಎಂದರು.

ಬೆದರಿಕೆ, ಮಾನಸಿಕ ಕಿರುಕುಳ, ಪ್ರತಿಷ್ಟೆಗೆ ಕಳಂಕ ಹಚ್ಚುವ ಯತ್ನ, ಬ್ಲಾಕ್ ಮೇಲ್, ಸತತವಾಗಿ ಹಣ ಸುಲಿಗೆ… ಹೀಗೆ ಹಲವು ತಿಂಗಳುಗಳಷ್ಟು ದೀರ್ಘ ಕಾಲದ ವ್ಯಾಪ್ತಿಯನ್ನು ಈ ಪ್ರಕರಣ ಹೊಂದಿದೆ. ಕುಟುಂಬ ದೂರು ದಾಖಲಿಸಿದ ಆರು ಜನರಲ್ಲದೆ ಇನ್ನೂ ಹಲವರು ಈ ಕೃತ್ಯದಲ್ಲಿ ಕೈಯ್ಯಾಡಿಸಿರುವ ಅನುಮಾನಗಳು ಸಾರ್ವಜನಿಕ ವಲಯದದಲ್ಲಿದೆ. ಮಮ್ತಾಜ್ ಅಲಿ ಮುಸ್ಲಿಂ ಸಾಮಾಜಿಕ ರಂಗದಲ್ಲಿ ಮಾತ್ರವಲ್ಲದೆ ಧಾರ್ಮಿಕ ವಲಯದಲ್ಲಿಯೂ ಪ್ರಭಾವಶಾಲಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದರು. ಅಲಿ ಕುಟುಂಬ ರಾಜಕೀಯವಾಗಿಯು, ಉದ್ಯಮ ವಲಯಲದಲ್ಲಿಯೂ ಪ್ರತಿಷ್ಟಿತ ಸ್ಥಾನಮಾನ ಹೊಂದಿದೆ‌. ಈ ಎಲ್ಲಾ ಅಂಶಗಳು, ಆರೋಪಿತರಲ್ಲಿ ಕೆಲವರ ಹಿನ್ನಲೆಗಳು ಇದು ಸಾಮಾನ್ಯ ಒಂದು ಹನಿ ಟ್ರಾಪ್ ಅಲ್ಲ ಎಂಬ ಸಾರ್ವಜನಿಕ ವಲಯದ ಅನುಮಾನಗಳನ್ನು ಪುಷ್ಟಿಗೊಳಿಸುವಂತಿದೆ. ಮಮ್ತಾಜ್ ಅಲಿಯವರನ್ನು ಹಣಕಾಸಿನ ಬ್ಲಾಕ್ ಮೇಲ್ ಗೆ ಒಳಪಡಿಸಿದ ಸಂದರ್ಭ ದೊಡ್ಡ ಮೊತ್ತ ಪಾವತಿಯಾಗಿರುವ ಕುರಿತು ಕುಟಂಬವೇ ದೂರಿನಲ್ಲಿ ಒಪ್ಪಿಕೊಂಡಿದ್ದು, ಹಣ ಪಾವತಿಯ ತರುವಾಯವೂ ಬ್ಲಾಕ್ ಮೇಲ್ ಮುಂದುವರಿದದ್ದು, ಆಪ್ತ ಮಾತುಕತೆಗಳ ಆಡಿಯೋಗಳು ಆಯ್ದ ಕೆಲವು ಪ್ರತಿಷ್ಟಿತರಿಗೆ ತಲುಪಿರವುದು ಪ್ರಕರಣ ಮೇಲ್ಕಂಡಷ್ಟು ಸರಳ ಅಲ್ಲ, ಹಣದ ಸುಲಿಗೆ ಮಾತ್ರ ಇವರ ಉದ್ದೇಶ ಆಗಿರಲಿಲ್ಲ ಎಂಬಂತೆ ಗೋಚರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಕರಣದ ತನಿಖೆಯನ್ನು ವಿಶೇಷವಾಗಿ ಪರಿಗಣಿಸಬೇಕು, ಒತ್ತಡಗಳಿಗೆ ಮಣಿಯದ ದಕ್ಷ ಅಧಿಕಾರಿಗಳಿಗೆ ತನಿಖೆಯ ಹೊಣೆಗಾರಿಕೆ ನೀಡಬೇಕು ಎಂದು ಹೋರಾಟ ಸಮಿತಿ ಹೇಳಿದೆ.

ಹನಿಟ್ರಾಪ್ ಪ್ರಕರಣಗಳು ಮಂಗಳೂರಿನಲ್ಲಿ ಸಾಮಾನ್ಯವಾಗುತ್ತಿದೆ‌ ಹಲವಾರು ಉದ್ಯಮಿಗಳು, ಪ್ರತಿಷ್ಟಿತರು ಇದರ ಬಲಿಪಶುಗಳಾಗಿದ್ದಾರೆ, ಲಕ್ಷ, ಕೋಟಿಗಳ ಲೆಕ್ಕದಲ್ಲಿ ಹಣ ಪಾವತಿಸಿ “ಸೆಟಲ್ ಮೆಂಟ್” ಮಾಡಿಕೊಂಡಿದ್ದಾರೆ. ಪೊಲೀಸ್ ದೂರುಗಳು ದಾಖಲಾಗದೆ ಪ್ರಕರಣಗಳು ಮುಚ್ಚಿಹೋಗಿವೆ, ಇದರಿಂದ ಹಲವು ಕುಟುಂಬಗಳು ನೆಮ್ಮದಿ ಕಳೆದು ಕೊಂಡು ಛಿದ್ರವಾಗಿವೆ ಎಂಬ ಪಿಸು ಮಾತುಗಳು ವರ್ಷಗಳಿಂದ ಚರ್ಚೆಯಲ್ಲಿವೆ. “ವೈಟ್ ಕಾಲರ್” ಸೋಗಿನ, ರಾಜಕೀಯ ಒಡನಾಟದ ಕೆಲವರು ಇಂತಹ ಪ್ರಕರಣಗಳ ಸೂತ್ರಧಾರರು ಎಂದು ಆರೋಪಗಳಿವೆ. ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ಉಂಟು ಮಾಡಿರುವ ತಲ್ಲಣಗಳನ್ನು ಗಮನಿಸಿಯಾದರು ಇಂತಹ ಜಾಲಗಳನ್ನು ಮಟ್ಟ ಹಾಕಲು ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ” ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *