ಮಂಗಳೂರು ಕರಾವಳಿಯಲ್ಲಿ ಎಲ್‌ಪಿಜಿ ಕೊರತೆ: ಮೀನುಗಾರಿಕೆ ದೋಣಿಗಳ ಕಾರ್ಯಾಚರಣೆ ಭಾಗಶಃ ಸ್ಥಗಿತ

ಮಂಗಳೂರು : ಕರಾವಳಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಅನೇಕ ಮೀನುಗಾರಿಕೆ ದೋಣಿಗಳು ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಿರುವುದಾಗಿ ದೋಣಿ ಮಾಲೀಕರು ತಿಳಿಸಿದ್ದಾರೆ. ಇದರಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರು

ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಸುಮಾರು 1,500 ಕ್ಕೂ ಹೆಚ್ಚು ಹಡಗುಗಳು ಇದ್ದು, ಪರ್ಸ್‌ ಸೀನರ್‌ಗಳು ಮತ್ತು ಟ್ರಾಲರ್‌ಗಳು ಪ್ರಮುಖವಾಗಿವೆ. ಆದರೆ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡ ಕಾರಣ ಅನೇಕ ದೋಣಿಗಳು ಈಗ ತೀರದಲ್ಲಿಯೇ ಉಳಿದಿವೆ. ಕಳೆದ ಮೂರು ದಿನಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜು ಇಲ್ಲದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ ಎಂದು ಯಾಂತ್ರೀಕೃತ ದೋಣಿ ಮಾಲೀಕರು ತಿಳಿಸಿದ್ದಾರೆ.

ದೋಣಿ ಮಾಲೀಕರ ಪ್ರಕಾರ, ಸಾಮಾನ್ಯವಾಗಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗೆ ಸುಮಾರು 1,800 ರೂ. ಪಾವತಿಸಲಾಗುತ್ತದೆ. ಆದರೆ ಇದೀಗ ಪೂರೈಕೆದಾರರು ಸಿಲಿಂಡರ್‌ಗಳಿಲ್ಲ ಎಂದು ತಿಳಿಸಿದ್ದು, ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಒಂದೇ ಸಿಲಿಂಡರ್ ಬೆಲೆ 5,000 ರೂ.ವರೆಗೆ ಏರಿಕೆಯಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಜಾಗತಿಕ ಬಿಕ್ಕಟ್ಟು ಮಧ್ಯೆ ಇಂಧನ ಕೊರತೆ: ಪ್ರಧಾನಿಗೆ ದರ್ಶನ್ ಪುಟ್ಟಣ್ಣಯ್ಯ ಮನವಿ

ಸಿಲಿಂಡರ್‌ಗೆ ಪರ್ಯಾಯವಾಗಿ ಸೀಮೆಎಣ್ಣೆ ಸ್ಟೌವ್‌ಗಳನ್ನು ಬಳಸುವ ಸಾಧ್ಯತೆ ಇದ್ದರೂ ಅವುಗಳ ಬಳಕೆ ಕಡಿಮೆ ಇರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಜೊತೆಗೆ ಸೀಮೆಎಣ್ಣೆಯ ಸರಿಯಾದ ಪೂರೈಕೆಯೂ ಇಲ್ಲ ಎಂದು ದೋಣಿ ಮಾಲೀಕರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಪರ್ಸ್‌ ಸೀನ್ ದೋಣಿಯಲ್ಲಿ 35 ರಿಂದ 40 ಮಂದಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಆಳ ಸಮುದ್ರ ಮೀನುಗಾರಿಕೆ ಪ್ರಯಾಣವು 6 ರಿಂದ 10 ದಿನಗಳವರೆಗೆ ನಡೆಯುತ್ತಿದ್ದು, ಪ್ರತಿ ಪ್ರಯಾಣಕ್ಕೆ ಕನಿಷ್ಠ ಐದು ಸಿಲಿಂಡರ್‌ಗಳು ಅಗತ್ಯವಾಗುತ್ತವೆ. ಟ್ರಾಲ್ ದೋಣಿಗಳಲ್ಲಿ ಸಿಬ್ಬಂದಿ ಕಡಿಮೆ ಇದ್ದರೂ ಕನಿಷ್ಠ ಮೂರು ಸಿಲಿಂಡರ್‌ಗಳು ಬೇಕಾಗುತ್ತವೆ. ಮಂಗಳೂರು

ಒಂದು ಸಿಲಿಂಡರ್ ಸಾಮಾನ್ಯವಾಗಿ ಎರಡು ರಿಂದ ಮೂರು ದಿನಗಳವರೆಗೆ ಮಾತ್ರ ಸಾಕಾಗುತ್ತದೆ. ಕೆಲವೊಮ್ಮೆ ಮೀನು ಕಡಿಮೆ ಸಿಕ್ಕರೆ ಸಮುದ್ರದಲ್ಲೇ ಹೆಚ್ಚಿನ ದಿನ ಉಳಿಯಬೇಕಾಗುತ್ತದೆ. ಆದರೆ ಸಿಲಿಂಡರ್‌ಗಳ ಕೊರತೆಯಿಂದಾಗಿ ದೋಣಿಗಳು ಬೇಗನೆ ಬಂದರಿಗೆ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೀನಿನ ಲಭ್ಯತೆ ಕಡಿಮೆಯಾಗುವ ಸಾಧ್ಯತೆ ಇದ್ದು, ಮೀನಿನ ಬೆಲೆಗಳು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ

ಬಂದರಿಗೆ ಹಿಂತಿರುಗಿದ ನಂತರ ಕಾರ್ಮಿಕರು ಸಾಮಾನ್ಯವಾಗಿ ದೋಣಿಯಲ್ಲಿಯೇ ವಾಸಿಸುತ್ತಾರೆ. ಪ್ರತ್ಯೇಕ ವಸತಿ ಸೌಲಭ್ಯ ಇಲ್ಲದ ಕಾರಣ ಅವರು ಹೋಟೆಲ್ ಆಹಾರವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಅದು ದೀರ್ಘಕಾಲ ಸಾಧ್ಯವಿಲ್ಲ ಎಂದು ಕಾರ್ಮಿಕರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ದೋಣಿಗಳಿಗೆ ಅಗತ್ಯವಾದ ಎಲ್‌ಪಿಜಿ ಸಿಲಿಂಡರ್‌ಗಳನ್ನು ತಕ್ಷಣ ಪೂರೈಸುವಂತೆ ಡೀಲರ್‌ಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂದು ದೋಣಿ ಮಾಲೀಕರು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ : ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *