36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ?!

ಪ್ರತಿವಾರ ಉದ್ಯೋಗದ ಸರ್ವೆ ನಡೆಸುವ ಸಿಎಂಐಇ ಸಂಸ್ಥೆಯ ಎಪ್ರಿಲ್ ತಿಂಗಳ ವರದಿ ಈಗ ಬಮದಿದೆ. ಇಡೀ ಎಪ್ರಿಲ್ ತಿಂಗಳಲ್ಲಿ ೧೨.೧೨ ಕೋಟಿ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಅದು ತೋರಿಸಿದೆ. ಮಾರ್ಚ್ ಕೊನೆಯ ವಾರದಲ್ಲಿ ಅಂದರೆ ಲಾಕ್ಡೌನಿನ ಮೊದಲ ವಾರದಲ್ಲಿ ೮೫ ಲಕ್ಷ ಉದ್ಯೋಗಗಳು ನಷ್ಟ ಆದವು ಎಂದು  ಈ ಹಿಂದೆ ಅದರ ಸವೇ ಹೇಳಿತ್ತು. ಅಂದರೆ ಲಾಕ್ ಡೌನಿನ ೩೬ ದಿನಗಳಲ್ಲಿ ಒಟ್ಟು ೧೩ ಕೋಟಿ ಉದ್ಯೋಗ ನಷ್ಟವಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಸರಾಸರಿ ಉದ್ಯೋಗಿಗಳ ಸಂಖ್ಯೆಯ ೩೦ಶೆ.ದಷ್ಟು. ಅಂದರೆ ಸುಮಾರು ಪ್ರತಿ ಮೂರರಲ್ಲಿ ಎರಡು ಉದ್ಯೋಗಗಳಷ್ಟೇ ಉಳಿದಿವೆ.

ನಿಜ, ಇವು ಅಂದಾಜು ಅಂಕಿ-ಅಂಶಗಳಷ್ಟೇ. ಆದರೆ ದೇಶ, ಅದರಲ್ಲೂ ಜನಸಾಮಾನ್ಯರು ಎಂತಹ ಆರ್ಥಿಕ ಸಂಕಟವನ್ನು ಎದುರಿಸಬೇಕಾಗಿ ಬಂದಿದೆ ಎಂಬುದನ್ನು ಇದು ಖಂಡಿತವಾಗಿಯೂ ಸೂಚಿಸುತ್ತದೆ ಎನ್ನುತ್ತಾರೆ ಪರಿಣಿತರು.

ಎಪ್ರಿಲ್ ತಿಂಗಳ ಸರ್ವೆಯ ಅಂಕಿ-ಅಂಶಗಳ ವಿವರಗಳಿಗೆ ಹೋದಾಗ ಇನ್ನಷ್ಟು ಆಘಾತಕಾರೀ ಚಿತ್ರಗಳು ಮೂಡಿ ಬರುತ್ತವೆ.

ವಿಭಾಗವಾರು ಏರಿಳಿಕೆಗಳನ್ನು ನೋಡಿ

  • ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳು -9.1 ಕೋಟಿ
  • ಉದ್ಯಮಿಗಳು       -1.8 ಕೋಟಿ
  • ಸಂಬಳದಾರ ನೌಕರರು       -1.8 ಕೋಟಿ
  • ರೈತರು                +58 ಲಕ್ಷ
  • ಒಟ್ಟು                -12.12 ಕೋಟಿ

ಮುಕ್ಕಾಲು ಪಾಲು ಉದ್ಯೋಗ ನಷ್ಟ ಆಗಿರುವುದು ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳಿಗೆ. ಇದರಲ್ಲಿ ಬೀದಿ ಮಾರಾಟಗಾರರು, ಸಣ್ಣ-ಪುಟ್ಟ ವ್ಯಾಪಾರಿಗಳು, ಅಂಗಡಿದಾರರು, ಅಲ್ಲಿ ಕೆಲಸ ಮಾಡುವವರು ಮತ್ತು ದಿನಗೂಲಿಗಳು ಸೇರುತ್ತಾರೆ. ಇವರು ನಮ್ಮ ಉದ್ಯೋಗ ಪಿರಮಿಡ್ಡಿನ ತಳಬಾಗದಲ್ಲಿರುವ ದೊಡ್ಡ ವಿಭಾಗ, ಅದಕ್ಕನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುನವಿಸಿದ್ದಾರೆ.

ಉದ್ಯಮಿಗಳು ಎನ್ನುವಾಗ ಇಲ್ಲಿ ಹೆಚ್ಚಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ್ರ ಪ್ರಮಾಣದ ಉದ್ದಿಮೆಗಳವರು(ಎಂಎಸ್‌ಎಂಇ), ಕೆಲವು ದೊಡ್ಡ ಪ್ರಮಾಣದ ಉದ್ದಿಮೆದಾರರು ನಷ್ಟ ಅನುಭವಿಸಿರಬಹುದು. ಆದರೂ ಬಹುಪಾಲು ಈ ಎಂಎಸ್‌ಎಂಇ ಗಳದ್ದೇ.

ಮಾಸಿಕ ಸಂಬಳ ಪಡೆಯುವ ನೌಕರರಲ್ಲೂ ೧.೮ ಕೋಟಿ ಜನ ಉದ್ಯೋಗ ಕಳಕೊಂಡಿದ್ದಾರೆ ಎಂಬುದು ಗಮನಾರ್ಹ.

ರೈತರ ಸಂಖ್ಯೆ, ಅಂದರೆ ಕೃಷಿಯಲ್ಲಿ ತೊಡಗಿರುವವವರ ಸಂಖ್ಯೆ ಮಾತ್ರ ಸುಮಾರು ೫೮ಲಕ್ಷದಷ್ಟಾದರೂ ಹೆಚ್ಚಾಗಿದೆ. ಆದರೆ ಇದರರ್ಥ ಕೃಷಿ ರಂಗದಲ್ಲಿ ಉದ್ಯೋಗಾವಕಾಶ ಹೆಚ್ಚಿದೆಯೆಂದೇನಲ್ಲ. ನಗರಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಮರಳಿದವರಲ್ಲಿ ಕೆಲವರು ಮತ್ತೆ ಕೃಷಿರಂಗದಲ್ಲೇ ಏನೋ ಕೆಲಸ ಹುಡುಕಿಕೊಂಡಿದ್ದಾರೆ ಎಂದರ್ಥ. ಅಂದರೆ ಕೃಷಿರಂಗದ ಒಟ್ಟು ಆದಾಯ ಈಗ ಈ ಹೆಚ್ಚುವರಿ ೫೮ಲಕ್ಷ ಜನಗಳ ನಡುವೆಯೂ ಹಂಚಿ ಹೋಗುತ್ತದೆ, ವಾಸ್ತವಿಕವಾಗಿ ರೈತರ ತಲಾ ಆದಾಯ ಇಳಿಯುತ್ತದೆ. ಅಲ್ಲದೆ ಇದು  ಕಟಾವಿನ ಸಮಯವಾದ್ದರಿಂದ ಸದ್ಯಕ್ಕೆ ಇವರಿಗೆ ಏನೋ ತುಸು ಆದಾಯ ಬರುವ ಕೆಲಸ ಸಿಕ್ಕಿದೆ. ಮುಂದೇನು ಎಂಬ ಚಿಂತೆ ಇದ್ದೇ ಇದೆ.

ಒಟ್ಟಾರೆಯಾಗಿ, ಲಾಕ್‌ಡೌನಿನಿಂದಾಗಿ ಆಗಿರುವ ೧೩ ಕೊಟಿ ಉದ್ಯೋಗನಷ್ಟಗಳಲ್ಲಿ ೮.೫ ಕೋಟಿ ನಗರ ಪ್ರದೇಶಗಳಲ್ಲಿ, ೪.೫ ಕೊಟಿ ಗ್ರಾಮೀಣ ಪ್ರದೇಶಗಳಲ್ಲಿ. ಕೃಷಿ ಚಟುವಟಿಕೆಗಲಲ್ಲಿ ತೊಡಗಿರುವವರ ಸಂಖ್ಯೆ ತಸು ಹೆಚ್ಛಾಗಿದ್ದರ ಅರ್ಥ, ಗ್ರಾಮೀಣ ಪ್ರದೇಶದ ಉಳಿದ ವಲಯಗಳಲ್ಲಿ. ಮುಖ್ಯವಾಗಿ ಚಿಲ್ಲರೆ ವ್ಯಾಪಾರಗಳಲ್ಲಿ, ಸಾರಿಗೆ ಮುಂತಾದವುಗಳಲ್ಲಿ  ಇನ್ನಷ್ಟು ಹೆಚ್ಚು ನಷ್ಟಗಳು ಉಂಟಾಗಿವೆ. ಇವರು ಈ ಮೊದಲಿನಂತೆ ನಗರಗಳಿಗೂ ಹೋಗುವಂತಿಲ್ಲ.

ಇವೆಲ್ಲ ಅನಿರೀಕ್ಷಿತವೇನಲ್ಲ. ಇದನ್ನು ಮುಂಗಂಡು ಸರಕಾರ ಸರಿಯಾದ ಯೋಜನೆಯೊಂದಿಗೆ ಲಾಕ್‌ಡೌನ್ ಹಾಕಿದ್ದರೆ ಜನಸಾಮಾನ್ಯರು ಅದರಲ್ಲೂ ಕೋಟ್ಯಂತರ ವಲಸೆ ಕಾರ್ಮಿಕರು ಈಗ ಕಾಣುತ್ತಿರುವಂತೆ ಹಸಿವು, ಅವಮಾನ, ಸಾವುಗಳನ್ನು ಎದುರಿಸಬೇಕಾಗಿ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಆಗ್ರಹಿಸಿರುವಂತೆ ಅಗತ್ಯ ಇರುವ ಎಲ್ಲರಿಗೆ ೧೦ ಕೆ.ಜಿ. ಆಹಾರಧಾನ್ಯಗಳು ಸೇರಿದಂತೆ ಆವಶ್ಯಕ ವಸ್ತುಗಳನ್ನು ಮತ್ತು ಸ್ಥಬ್ಧಗೊಂಡ ಅರ್ಥವ್ಯವಸ್ಥೆ  ಮತ್ತೆ ಚಾಲನೆ ಪಡೆಯುವ ವರೆಗೆ,ಅಂದರೆ ಮುಂದಿನ ಮೂರು ತಿಂಗಳಾದರೂ ಒಂದು ಕುಟುಂಬಕ್ಕೆ ತಿಂಗಳಿಗೆ ೭೫೦೦ ರೂ. ಕೊಡುವ ವ್ಯವಸ್ಥೆ ಮಾಡಿದ್ದರೆ ದೇಶದ ಜನಸಾಮಾನ್ಯರು ಇಷ್ಟೊಂದು ಸಂಕಟ ಪಡುವ ಅಗತ್ಯ ಬರುತ್ತಿರಲಿಲ್ಲ. ಇದಕ್ಕೆ ಹೆಚ್ಚೆಂದರೆ ಜಿಡಿಪಿಯ ೩ಶೇ. ವೆಚ್ಚ ತಗಲುತ್ತದಷ್ಟೇ.

ಹಿಡಿಯಷ್ಟು ಸೂಪರ್ ಶ್ರೀಮಂತರಿಗೆ, ನಮ್ಮ ಬ್ಯಾಂಕುಗಳಿಗೆ ನಷ್ಟ ಉಂಟುಮಾಡಿ ಆರಾಮವಾಗಿ ಇರುವ, ದೇಶ ಬಿಟ್ಟು ಪಲಾಯನ ಮಾಡಿದ ಮಂದಿಗೂ  ೬೯ ಸಾವಿರ ಕೋಟಿ ರೂ.ಗಳನ್ನು ಇತ್ತೀಚೆಗಷ್ಟೇ ಕೊಟ್ಟಿರುವ ಸರಕಾರಕ್ಕೆ ಇದು ಖಂಡಿತಾ ಅಸಾಧ್ಯವೇನಲ್ಲ. ಆದರೆ ಅದು ಪರಿಹಾರದ ಹೆಸರಲ್ಲಿ ಕೊಟ್ಟದ್ದು ಜಿಡಿಪಿಯ ೦.೭ಶೇ.ದಷ್ಟು ಮಾತ್ರ. ಇದರಿಂದ ಜನಧನ ಖಾತೆಗಳಿಗೆ ಕೇವಲ ಒಮ್ಮೆ ೫೦೦ರೂ. ಕೊಡುವುದಾಗಿ ಸರಕಾರ ಹೇಳಿತು. ಅದೂ ಬಹಳಷ್ಟು ಮಂದಿಗೆ ತಲುಪಿಲ್ಲ ಎಂದು ವರದಿಯಾಗಿದೆ.

ನಂತರ ಯಾವುದೇ ಪರಿಹಾರ ಪ್ರಕಟವಾಗಲಿಲ್ಲ, ಲಾಕ್‌ಡೌನನ್ನು ವಿಸ್ತರಿಸಿದಾಗಲೂ ಯಾವುದೇ ಪರಿಹಾರದ ಮಾತೂ ಪ್ರಧಾನಿಗಳ ಮನದಿಂದಲೇ ಆಗಲಿ, ಬಾಯಿಂದಲೇ ಆಗಲಿ ಬರಲೇ ಇಲ್ಲ. ಲಾಕ್‌ಡೌನಿನ ಮೂರನೇ ಘಟ್ಟ ಮುಗಿರುವ ಒಮದು ವಾರದ ಮೊದಲು, ಮೇ ೧೧ರಂದು ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೊ ಕಾನ್ಫರೆನ್ಸಿನಲ್ಲೂ ಹಲವು ಮುಖ್ಯಮಂತ್ರಿಗಳು ಕೇಳಿದರೂ ಅದಕ್ಕೆ ಉತ್ತರ ದೊರೆತಿಲ್ಲ. ಬದಲಿಗೆ, ಉದ್ಯೋಗದಾತರೆನಿಸಿಕೊಳ್ಳುವ ಮಾಲಕರಿಗೆ ಕಾರ್ಮಿಕ ಕಾನೂನುಗಳಲ್ಲಿ ಭಾರೀ ರಿಯಾಯ್ತಿ/ವಿನಾಯ್ತಿಗಳನ್ನು ನೀಡುವ ಮೂಲಕ ನೇರ ರಿಟ್ರೆಂಚ್‌ಮೆಂಟ್ ಇತ್ಯಾದಿಗಳ ಮೂಲಕ ಇನ್ನಷ್ಟು ಉದ್ಯೋಗ ನಷ್ಟಗಳಿಗೆ ಅವಕಾಶವನ್ನು ತೆರೆದು ಕೊಡಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *