ಬೆಂಗಳೂರು | ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನಿಧನ

ಬೆಂಗಳೂರು : ಸಾರಿಗೆ ಸಂಘಟನೆಗಳ ಮುಂಚೂಣಿ ನಾಯಕ, ಕಾರ್ಮಿಕ ಕಣ್ಮಣಿ ಅನಂತ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅವರಿಗೆ 85 ವರ್ಷ ವಯಸ್ಸಾಗಿತ್ತು.

ಇಂದು ಸಂಜೆ 5.30ಕ್ಕೆ  ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಯಿತು. ಅವರನ್ನು ವಿಜಯನಗರದ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಅನಂತ ಸುಬ್ಬರಾವ್ ನಿಧನದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡರು ಮಾಹಿತಿ ನೀಡಿದ್ದಾರೆ

AITUC ಸಂಘಟನೆಯಲ್ಲಿ ಸುರ್ಧೀರ್ಘ ಸೇವೆ ಸಲ್ಲಿಸಿದ್ದ ಅನಂತ್ ಸುಬ್ಬರಾವ್, ಕಳೆದ 40 ವರ್ಷದಿಂದ ನೌಕರರ ಪರವಾಗಿ ಹೋರಾಟ ನಡೆಸುತ್ತಿದ್ದರು. ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸುಬ್ಬರಾವ್ ಅವರು ಭಾರತೀಯ ಜೀವ ವಿಮಾ ನಿಗಮದ (LIC) ಮೂಲಕ ಕಾರ್ಮಿಕ ಚಳವಳಿಗೆ ಪಾದಾರ್ಪಣೆ ಮಾಡಿದ್ದರು.

ಅನಂತಸುಬ್ಬರಾವ್ ನಿಧನಕ್ಕೆ ಸಿಪಿಐ(ಎಂ) ಕಂಬನಿ

ಎಐಟಿಯುಸಿ ಮಾಜಿ ರಾಜ್ಯಾಧ್ಯಕ್ಷರಾಗಿ ಬಹಳ ದೀರ್ಘ ಕಾಲ ಕಾರ್ಮಿಕ ಚಳವಳಿಯನ್ನು ಮುನ್ನಡೆಸಿದ್ದ ರಾಜ್ಯದ ಹಿರಿಯ ಕಾರ್ಮಿಕ ನಾಯಕರಾದ ಅನಂತ ಸುಬ್ಬರಾವ್ ನಿಧನ ರಾಜ್ಯದ ಹಾಗೂ ದೇಶದ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಸುಮಾರು 6೦ ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಬೆಂಗಳೂರು ನಗರ ಹಾಗೂ ರಾಜ್ಯದ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ದಣಿವರೆಯದೇ ದುಡಿದ ಅನಂತಸುಬ್ಬರಾವ್ ನಿಧನದಿಂದ ಕರ್ನಾಟಕ ರಾಜ್ಯ ಒಬ್ಬ ಅನುಭವಿ ಕಾರ್ಮಿಕ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದು ಸಿಪಿಐ(ಎಂ) ಶ್ರದ್ಧಾಂಜಲಿಯನ್ನು ಅರ್ಪಿಸಿದೆ.

ಘನ ಕೈಗಾರಿಕೆಗಳು ವಿಶೇಷವಾಗಿ ಸಾರಿಗೆ ಕಾರ್ಮಿಕರನ್ನು ಸಂಘಟಿಸಿದ್ದ ಕಾಂ.ಅನಂತ ಸುಬ್ಬರಾವ್ ರವರು ಲಕ್ಷಾಂತರ ಕಾರ್ಮಿಕರ ಬದುಕನ್ನು ಉತ್ತಮಪಡಿಸಲು ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಮಿಕ ವರ್ಗ ಹೋರಾಡಿ ಗಳಿಸಿದ್ದ ಎಲ್ಲಾ ರೀತಿಯ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸುತ್ತಿರುವ ಈ ಸಂದರ್ಭದಲ್ಲಿ ಹಲವಾರು ದಶಕಗಳ ಹೋರಾಟದ ಅನುಭವ ಇದ್ದ ನಾಯಕರ ಸಾವಿನಿಂದಾಗಿ ಬಹಳ ದೊಡ್ಡ ಶೂನ್ಯವೊಂದು ಅವರಿಸಿದಂತಾಗಿದೆ ಎಂದು ಸಿಪಿಐ(ಎಂ) ಭಾವಿಸಿದೆ.

ಹೆಚ್.ವಿ. ಅನಂತಸುಬ್ಬರಾವ್ ರವರ ಕುಟುಂಬಕ್ಕೆ, ಎಐಟಿಯುಸಿ ಮತ್ತು ಸಿಪಿಐ ಪಕ್ಷದ ರಾಜ್ಯ ಸಮಿತಿಗೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *