ಸಾಮಾಜಿಕ ವ್ಯಾಧಿಗೆ ಕಾನೂನು ಮದ್ದು ಆಗಲಾರದು

ಆಳವಾದ ಬೇರುಗಳಿಗೆ ಹರಡಿರುವ ರೋಗಕ್ಕೆ  ಕಾಂಡಗಳಿಗೆ ಔಷಧ ನೀಡಿ ಪ್ರಯೋಜನವೇನು ?

ಭಾರತದ ಕಮರ್ಷಿಯಲ್‌ ಚಲನಚಿತ್ರಗಳ ಕಥಾಹಂದರಗಳಲ್ಲಿ ಅಂದಿನಿಂದ ಇಂದಿನವರೆಗೂ ಗುರುತಿಸಬಹುದಾದ ಸಮಾನ ಎಳೆ ಎಂದರೆ, ಗಲಭೆ, ದೊಂಬಿ, ಹತ್ಯೆ, ಹೀರೋ-ವಿಲನ್‌ ನಡುವೆ ಮಾರಣಾಂತಿಕ ಬಡಿದಾಟ ಈ ಎಲ್ಲ ದೃಶ್ಯಗಳೂ ಮುಗಿದು ಸಮಾಪ್ತಿಯಾಗುವ ವೇಳೆಗೆ ಪೊಲೀಸರು ಪ್ರವೇಶಿಸುವುದು. ಇದೊಂದು ರೀತಿಯಲ್ಲಿ Template ಆಗಿದ್ದು ಎಲ್ಲ ಭಾಷೆಗಳ ಸಿನೆಮಾಗಳಲ್ಲೂ ಅನುಸರಿಸಲಾಗುವ ಒಂದು ಮಾದರಿ. ಚಿಕ್ಕವರಾಗಿದ್ದಾಗಿನಿಂದಲೂ ಸಿನೆಮಾ ನೋಡುವಾಗೆಲ್ಲಾ ಏಕೆ ಹೀಗೆ ಎಂದು ಯೋಚಿಸುವುದಕ್ಕಿಂತಲೂ ಅದನ್ನು ವಾಸ್ತವವೇನೋ ಎಂಬಂತೆ ಸ್ವೀಕರಿಸುವುದು ಸಾಮಾನ್ಯ ಸಂಗತಿ.  ವಿಡಂಬನೆ ಎಂದರೆ ಈ ಸಿನೆಮಾ ಕತೆಗಾರರ/ನಿರ್ದೇಶಕರ ದೂರಗಾಮಿ ಮುಂಗಾಣ್ಕೆ ವಾಸ್ತವಿಕ ಬಾಹ್ಯ ಜಗತ್ತಿನಲ್ಲೂ ಅಷ್ಟೇ ಸತ್ಯ. ಚುನಾಯಿತ ಸರ್ಕಾರಗಳು ಇದನ್ನು ಮತ್ತೆ ಮತ್ತೆ ನಿರೂಪಿಸುತ್ತಲೇ ಬಂದಿವೆ. ಸಾಮಾಜಿಕ

-ನಾ ದಿವಾಕರ

ಕರ್ನಾಟಕದ ಕರಾವಳಿಯಲ್ಲಿ ಏನೋ ಒಂದು ಐಬು ಇದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೊಲೆ, ಸುಲಿಗೆ, ಅಪಹರಣ, ಪ್ರತೀಕಾರದ ದಾಳಿ, ಅತ್ಯಾಚಾರ ಹೀಗೆ ಅಪರಾಧ ಸಂಹಿತೆಯಲ್ಲಿ ಕಾಣುವ ಎಲ್ಲ ರೀತಿಯ ದುಷ್ಟಕೂಟಗಳೂ ಹಲವು ದಶಕಗಳಿಂದ ವ್ಯವಸ್ಥಿತವಾಗಿ ಸ್ಥಾಪಿತವಾಗಿರುವುದನ್ನು ನೋಡಿದಾಗ, ಚುನಾಯಿತ ಸರ್ಕಾರಗಳು ಸಾಮಾನ್ಯವಾಗಿ ನಿರ್ವಚಿಸುವ “ಕಾನೂನು ಸುವ್ಯವಸ್ಥೆ” ಮತ್ತು ನಾಗರಿಕ ಸಮಾಜವು ಅಪೇಕ್ಷಿಸುವ “ಸೌಹಾರ್ದತೆ-ಸಮನ್ವಯ ಮತ್ತು ಶಾಂತಿ” ಈ ಉನ್ನತ ಗುರಿ- ಉದಾತ್ತ ಲಕ್ಷಣಗಳು ಅರಬ್ಬೀ ಸಮುದ್ರದ ಯಾವ ಭಾಗದಲ್ಲಿ ಮುಳುಗಿಹೋಗಿದೆ ಎಂಬ ಅನುಮಾನ ಮೂಡಲೇಬೇಕು. ಇಡೀ ರಾಜ್ಯದ ಜನರನ್ನು, ವಿಶೇಷವಾಗಿ ಸಾಮಾಜಿಕ ಪ್ರಜ್ಞೆ ಇರುವವರನ್ನು, ತಲ್ಲಣಗೊಳಿಸುವ ವರದಿಯೊಂದನ್ನು ಇಂದಿನ ಪ್ರಜಾವಾಣಿ ಪ್ರಕಟಿಸಿದೆ. (ಧರ್ಮದ ಮತ್ತು ಅಮಾಯಕರಿಗೆ ಕುತ್ತು – ಪ್ರವೀಣ್‌ ಕುಮಾರ್‌ ಪಿ.ವಿ. -30-5-2025 ಪ್ರಜಾವಾಣಿ ) ಸಾಮಾಜಿಕ

ವಾಸ್ತವ  ಮತ್ತು ಗ್ರಹಿಕೆಯ ನಡುವೆ

ಸುಹಾಸ್‌ ಶೆಟ್ಟಿ ಹತ್ಯೆಯ ನಂತರ ನಿದ್ರಾವಸ್ಥೆಯಿಂದ ಎದ್ದಿದ್ದ ರಾಜ್ಯ ಸರ್ಕಾರ, ಅಬ್ದುಲ್‌ ರಹಮಾನ್‌ ಹತ್ಯೆಯ ನಂತರ ಪೂರ್ಣ ಎಚ್ಚರಗೊಂಡಿದ್ದು, ದಕ್ಷಿಣ ಕನ್ನಡದ ಹಿಂಸಾತ್ಮಕ ವಾತಾವರಣವನ್ನು ನಿಯಂತ್ರಿಸಲು “ ಕೋಮುವಾದ-ಸಂಘರ್ಷ ನಿಗ್ರಹ ಪಡೆ ”ಯನ್ನು ರಚಿಸುವುದಾಗಿ ಹೇಳಿದೆ. ಬೇಹುಗಾರಿಕೆ, ಕಣ್ಗಾವಲು,  ಗುಪ್ತಚರ ಮಾಹಿತಿ ಸಂಗ್ರಹ ಮತ್ತು ʼಕಟ್ಟುನಿಟ್ಟಿನ ಕ್ರಮʼ ಈ ಆಡಳಿತಾತ್ಮಕ ಉಪಕ್ರಮಗಳನ್ನು ಈ ಪಡೆ ನಿರ್ವಹಿಸಲಿದೆ. ಬಹುಶಃ 200ಕ್ಕೂ ಹೆಚ್ಚು ಮುಸ್ಲಿಮ್‌ ಸಮುದಾಯದ ನಾಯಕರು ಕಾಂಗ್ರೆಸ್‌ ಪಕ್ಷ ತೊರೆದಿರುವುದು ಪಕ್ಷದ ನಾಯಕತ್ವವನ್ನು ಬಡಿದೆಬ್ಬಿಸಿರಬೇಕು. ʼ ಮುಸ್ಲಿಂ ಬಾಂಧವರಿಗೆ ರಕ್ಷಣೆ ಇಲ್ಲ ʼ ಎಂಬ ಈ ನಾಯಕರ ಅಳಲು ಮತ್ತೊಂದು ಬದಿಯಲ್ಲಿ ಬಿಜೆಪಿ-ಹಿಂದುತ್ವ ನಾಯಕರ ʼ ಹಿಂದೂಗಳಿಗೆ ರಕ್ಷಣೆ ಇಲ್ಲʼ ಎಂಬ ಆಪಾದನೆಯ ಪ್ರತಿಬಿಂಬದಂತೆ ಕಾಣುತ್ತದೆ. ಈ ಎರಡೂ ಗುಂಪುಗಳ ಸಮೀಪದೃಷ್ಟಿಯ ಸಂಕುಚಿತ ಮನೋಭಾವ ( Myopic View and Mindset) ದಕ್ಷಿಣ ಕನ್ನಡದಲ್ಲಿ ನಿಶ್ಶೇಷವಾಗುತ್ತಿರುವ ಮನುಜ ಸಂಬಂಧಗಳು ಮತ್ತು ಸೂಕ್ಷ್ಮ ಸಂವೇದನೆಗಳನ್ನು ಗಮನಿಸಿದಂತೆಯೇ ಕಾಣುವುದಿಲ್ಲ. ಎಷ್ಟಾದರೂ ಇದು ರಾಜಕೀಯ.

ಪ್ರಜಾವಾಣಿ ವರದಿಯ ಅನುಸಾರ ಮಂಗಳೂರು ಮತ್ತು ದಕ್ಷಿಣಕನ್ನಡದ ಇತರ ಜಿಲ್ಲೆಗಳಲ್ಲಿ ಕಳೆದ 25 ವರ್ಷಗಳಲ್ಲಿ 49 ʼ ಪ್ರಮುಖ ಹತ್ಯೆಗಳು ʼ ಸಂಭವಿಸಿವೆ. ಕರ್ನಾಟಕದಲ್ಲಿ ಕೋಮುವಾದ ಮತ್ತು ಮತೀಯವಾದ ಹಾಗೂ ಇದರಿಂದಲೇ ಪೋಷಿಸಲ್ಪಡುವ ಮತಾಂಧ ಶಕ್ತಿಗಳಿಗೆ ಕೇಂದ್ರ ಆವಾಸ ಸ್ಥಾನವಾಗಿರುವ ಕರಾವಳಿ-ದಕ್ಷಿಣ ಕನ್ನಡದ ಸಮಕಾಲೀನ ಚರಿತ್ರೆಯಲ್ಲಿ ದಾಖಲಾಗಿರುವ ಹತ್ಯೆಗಳನ್ನು ಗಮನಿಸಿದರೆ, ಹಂತಕರು ಮತ್ತು ಹತ್ಯೆಗೀಡಾದವರ ಬಹುಪಾಲು ವ್ಯಕ್ತಿಗಳ ವಯೋಮಾನ 18 ರಿಂದ 30ರ ಒಳಗಿರುವುದನ್ನು ಗುರುತಿಸಬಹುದು. ಪರಸ್ಪರ ಸೇಡು, ಪ್ರತೀಕಾರ, ಮತೀಯ ದ್ವೇಷ ಮತ್ತು ಅಸೂಯೆಗಳೇ ಈ ಹತ್ಯೆಗಳಿಗೆ ಕಾರಣವಾಗಿರುವುದು ವಾಸ್ತವ. ಈ ಹಂತಕರು-ಸಂತ್ರಸ್ತರು ಮತ್ತು ಅತ್ಯಾಚಾರಿಗಳು ಅರಬ್ಬೀ ಸಮುದ್ರದ ತಳದಿಂದ ಉದ್ಭವಿಸಿದ್ದಾರೆಯೇ ? ಅಥವಾ ಪಶ್ಚಿಮ ಘಟ್ಟಗಳ ದಟ್ಟಾರಣ್ಯದಲ್ಲಿ ಸ್ವಯಂಭುಗಳಾಗಿ ಉದಯಿಸಿದ್ದಾರೆಯೇ ?

ಈ ಇಡೀ ಯುವ ತಲೆಮಾರಿನ ಮಿದುಳಿನಲ್ಲಿ ದ್ವೇಷಾಸೂಯೆಗಳ ವಿಷಬೀಜ ಬಿತ್ತುವ ಸಾಂಸ್ಥಿಕ ನೆಲೆಗಳನ್ನು, ಸಾಂಘಿಕ ಬಿಂದುಗಳನ್ನು ಇನ್ನಾದರೂ ನಾವು ಗುರುತಿಸಬೇಕಿದೆ. ತಮ್ಮ ಸಾಂಸ್ಕೃತಿಕ ಆಧಿಪತ್ಯಕ್ಕಾಗಿ, ಸಾಮಾಜಿಕ ಪಾರಮ್ಯಕ್ಕಾಗಿ ಮತ್ತು ಧಾರ್ಮಿಕ ಅಸ್ಮಿತೆಗಳಿಗಾಗಿ ʼಅನ್ಯʼರನ್ನು ಸೃಷ್ಟಿಸುವ ಒಂದು ಪರಂಪರೆಯ ಚೌಕಟ್ಟಿನೊಳಗೆ ಇದನ್ನು ನಿರ್ವಚಿಸಬೇಕಿದೆ. ಈ ಯುವ ಸಮೂಹ ತಮ್ಮ ವೈಯುಕ್ತಿಕ ಹಿತಾಸಕ್ತಿಗಳನ್ನು, ಭವಿಷ್ಯದ ಹಾದಿಯನ್ನು, ಕೌಟುಂಬಿಕ ಜವಾಬ್ದಾರಿಗಳನ್ನು ಮರೆತು, ʼ ರಕ್ಷಕ ಪಡೆಗಳಾಗಿ ʼ ರೂಪುಗೊಳ್ಳುವ ಒಂದು ಪ್ರಕ್ರಿಯೆಯಲ್ಲಿ ಇವರನ್ನು ಗುರುತಿಸಬೇಕಿದೆ. ಮಂದಿರ, ಮಸೀದಿ, ಗೋವು, ಆಹಾರ ಪದ್ಧತಿ, ವಸ್ತ್ರ ಸಂಹಿತೆ, ಮನುಜ ಸಹಜ ಪ್ರೀತಿ-ಪ್ರೇಮ ಮತ್ತು ತತ್ಸಂಬಂಧಿತ ವೈವಾಹಿಕ ಬಂಧನಗಳು ಈ ತುಡುಗು ಪಡೆಗಳಿಗೆ (Fringe elements) ದ್ವೇಷಾಸೂಯೆಗಳನ್ನು ಸೃಷ್ಟಿಸಿಕೊಳ್ಳುವ ಆಕರಗಳಾಗಿ ಕಾಣುತ್ತವೆ. ಈ ಪ್ರಕ್ರಿಯೆಯ ಅತ್ಯಂತ ಕ್ರೂರ ಭಾವಾತಿರೇಕದ ಆಯಾಮವನ್ನು ʼಗುಂಪು ಥಳಿತʼ (Mass lynching) ಗಳಲ್ಲಿ ಕಾಣಬಹುದು. ʼ ಲವ್‌ ಜಿಹಾದ್‌ʼ ಎಂಬ ಅರ್ಥಹೀನ ಕಲ್ಪಿತ ವಿದ್ಯಮಾನವೂ ಇದರ ಒಂದು ಭಾಗವಾಗಿ ಕಾಣುತ್ತದೆ.

ಯುವ ಸಂಕುಲದ ಒಳಬಿರುಕುಗಳು

ಈ ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳುವ, ಜೀವ ಕಳೆದುಕೊಳ್ಳುವ ಅಥವಾ ಉಳಿದರೆ ಸೆರೆವಾಸ-ನ್ಯಾಯಾಲಯಗಳ ಜಂಜಾಟದಲ್ಲಿ ಸಿಲುಕಿ ತಮ್ಮ ಭವಿಷ್ಯದ ದಿನಗಳನ್ನು ನಾಶಪಡಿಸಿಕೊಳ್ಳುವ ಯುವ ಸಮೂಹವನ್ನು ತಯಾರು ಮಾಡಿರುವುದು ಯಾರು ? ಇಲ್ಲಿ ʼ ಹಿಂದುತ್ವ ʼ ಅಥವಾ ʼಜಿಹಾದಿ ʼ ಎಂಬ ವರ್ಗೀಕರಣವನ್ನು ಬದಿಗೊತ್ತಿ ನೋಡಿದಾಗ, ಎರಡೂ ಮತಗಳ ಮೂಲಭೂತವಾದಿ ಗುಂಪುಗಳು ಈ ಯುವ ಸಮೂಹವನ್ನು ಶಸ್ತ್ರೀಕರಣಕ್ಕೊಳಪಡಿಸುತ್ತಿರುವುದನ್ನು (Weaponisation) ಸ್ಪಷ್ಟವಾಗಿ ಕಾಣಬಹುದು. ಸಾಂಘಿಕ ನೆಲೆಯಲ್ಲಿ, ಸಾಂಸ್ಥಿಕ ಭೂಮಿಕೆಯ ಮೇಲೆ ಕಟ್ಟಲಾಗುವ ಈ ಅಪರಾಧಿಕ ಜಗತ್ತಿನ ವಾರಸುದಾರರು, ನಿರ್ದೇಶಕರು, ನಿರ್ವಾಹಕರು ಮತ್ತು ಮೇಲ್ವಿಚಾರಕರು ತಮ್ಮದೇ ಆದ ರಾಜಕೀಯ ಸ್ವಹಿತಾಸಕ್ತಿಗಾಗಿ ಅಥವಾ ಧಾರ್ಮಿಕ ಅಸ್ಮಿತೆಗಳಿಗಾಗಿ, ಈ ಸಮೂಹದ ಮನಸ್ಸಿನಲ್ಲಿ ದ್ವೇಷಾಸೂಯೆಗಳ ವಿಷಬೀಜವನ್ನು ಬಿತ್ತುವುದನ್ನು ಗಮನಿಸಲೇಬೇಕಲ್ಲವೇ ? ಕೋಮು ಸೌಹಾರ್ದತೆ, ಭಾಷಾ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರಾಗಿದ್ದ ಕರಾವಳಿ/ದಕ್ಷಿಣ ಕನ್ನಡ ಹೀಗೇಕಾಯಿತು ?

ಇದನ್ನೂ ಓದಿ: ಮೊದಲು ಕನ್ನಡಿಗರ ಕ್ಷಮೆ ಕೇಳಿ: ಕಮಲ್‌ ಹಾಸನ್‌ ಗೆ ಹೈಕೋರ್ಟ್‌ ತರಾಟೆ

ಕಳೆದ ನಾಲ್ಕು ದಶಕಗಳ ಬೆಳವಣಿಗೆಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಮತ-ಧರ್ಮಗಳನ್ನು ಮುಖಾಮುಖಿಯಾಗಿಸಿ, ಪರಸ್ಪರ ವಿರೋಧಿ ಕಟಕಟೆಗಳಲ್ಲಿ ನಿಲ್ಲಿಸಿ ಈ ಅಪರಾಧಗಳನ್ನು ವ್ಯಾಖ್ಯಾನಿಸುತ್ತಾ ಹೋದಂತೆಲ್ಲಾ, ಈ ಅಸ್ಮಿತೆಗಳನ್ನೇ ರಾಜಕೀಯ ಬಂಡವಾಳದಂತೆ ಪ್ರಯೋಗಿಸುವ ಸಾಂಸ್ಕೃತಿಕ-ಮತೀಯ ರಾಜಕಾರಣದ ವಾರಸುದಾರರಿಗೆ ಅನುಕೂಲವಾಗುವುದೇ ಹೆಚ್ಚು. ಏಕೆಂದರೆ ಪ್ರತಿಯೊಂದು ಹತ್ಯೆ ಅಥವಾ ಹಲ್ಲೆ ನಡೆದಾಗಲೂ ಬೊಟ್ಟುಮಾಡಿ ತೋರಿಸಲು ಮತ್ತೊಂದು ಸಮುದಾಯ ಇರುತ್ತದೆ. ಈ ಸಾಮುದಾಯಿಕ ವ್ಯಾಖ್ಯಾನದಿಂದ ಹೊರಬಂದು, ಸಾಮಾಜಿಕ ನೆಲೆಯಲ್ಲಿ, ಸಮಾಜಶಾಸ್ತ್ರೀಯ (Sociological) ಚೌಕಟ್ಟಿನೊಳಗೆ ವಿಶ್ಲೇಷಿಸಿದಾಗ ನಮಗೆ ಇಲ್ಲಿ ಕಾಣುವುದು/ಕಾಣಬೇಕಿರುವುದು, ದ್ವೇಷ-ಹಿಂಸೆ-ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಸಾಂಸ್ಥೀಕರಿಸಿ ಸಾರ್ವತ್ರೀಕರಿಸಿ ಸ್ವೀಕೃತಗೊಳಿಸುವಂತಹ ಒಂದು ಸಾಮಾಜಿಕ ವ್ಯಾಧಿ (Social malaise) ̤

ಈ ವ್ಯಾಧಿಯು ದೇಶದಾದ್ಯಂತ, ವಿಶೇಷವಾಗಿ ಕರ್ನಾಟಕದ ಕರಾವಳಿಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಬೇರುಗಳನ್ನೂ ಕಲುಷಿತಗೊಳಿಸಿದೆ, ಅಸಸ್ಥಗೊಳಿಸುತ್ತಿದೆ ಮತ್ತು ಕ್ರಮೇಣವಾಗಿ ಶಿಥಿಲಗೊಳಿಸುತ್ತಿದೆ. ಈ ಸಾಮಾಜಿಕ ವ್ಯಾಧಿ ಹರಡಿದಂತೆಲ್ಲಾ ಹಿಂಸೆ ಮತ್ತು ಕ್ರೌರ್ಯ ಯುವ ಸಮೂಹದಲ್ಲಿ ಒಂದು ಗೀಳಾಗಿ ಪರಿವರ್ತನೆ ಹೊಂದುತ್ತದೆ. ತನ್ನ ಸಹಜೀವಿಯನ್ನು ಥಳಿಸುವ, ಹತ್ಯೆ ಮಾಡುವ, ಚಿತ್ರಹಿಂಸೆಗೊಳಪಡಿಸುವ ಮನೋಭಾವ ತೀವ್ರತೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಉನ್ಮತ್ತ ಮನಸ್ಸುಗಳ ಕೈಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಾಗ ಅದು ಕ್ರೌರ್ಯದ ಪರಾಕಾಷ್ಠೆಗೆ ಮೂಲವಾಗುತ್ತದೆ. ಈ ಮನೋಭಾವವನ್ನು ಸೃಷ್ಟಿಸುತ್ತಿರುವ ಸೈದ್ಧಾಂತಿಕ ಚಿಂತನಾ ವಾಹಿನಿಗಳು, ಶಸ್ತ್ರಗಳನ್ನು ಪೂರೈಸುವಂತಹ ಸಾಂಸ್ಥಿಕ ನೆಲೆಗಳು ನಮ್ಮ ನಡುವೆಯೇ ಸಕ್ರಿಯವಾಗಿ , ಇನ್ನೂ ಕ್ರಿಯಾಶೀಲವಾಗಿ ಇರುವುದನ್ನು ಕಂಡೂ ಕಾಣದಂತಿದ್ದೇವೆ. ಈ ಸಾಂಸ್ಥಿಕ ಚಟುವಟಿಕೆಗಳ ಮೇಲೆ ಕಣ್ಗಾವಲು ಸರ್ಕಾರದಿಂದ ಸಾಧ್ಯವೇ ?

ಸೀಮಿತ ಸಾಂಸ್ಕೃತಿಕ ಚೌಕಟ್ಟುಗಳಿಂದಾಚೆ

ಈ ವ್ಯಾಧಿಯನ್ನು ಮನುವಾದಿ, ಹಿಂದುತ್ವವಾದಿ, ಜಿಹಾದಿ ಮುಂತಾದ ಗುಣವಿಶೇಷಣಗಳೊಂದಿಗೆ ನೋಡುವುದಕ್ಕಿಂತಲೂ, ಬಾಲ್ಯದಿಂದಲೇ ಸೈದ್ಧಾಂತಿಕ ಅಥವಾ ತಾತ್ವಿಕ ಬೋಧನೆಗಳಿಂದ ಪ್ರಭಾವಿತರಾಗಿ, ಈ ಬೋಧಿತ ಉನ್ಮಾದದ (Indoctrinated Intoxication) ಪರಿಣಾಮವಾಗಿಯೇ ದಾರಿತಪ್ಪುವ ಒಂದು ದೊಡ್ಡ ಯುವ ಸಮೂಹವನ್ನು ಕಳೆದ ಮೂರು-ನಾಲ್ಕು ದಶಕಗಳಲ್ಲಿ ಸೃಷ್ಟಿಸಲಾಗಿದೆ. ಈ ಸಾಂಸ್ಥಿಕ ನೆಲೆಗಳಲ್ಲಿ ಉತ್ಪಾದಿಸಲಾಗುವ ಆಲೋಚನೆ, ಕ್ರಿಯೆ ಮತ್ತು ಭಾವಾತಿರೇಕದ ಅಂಧ ವಿಶ್ವಾಸ, ಯುವ ಸಮೂಹವನ್ನು ನೈಜ ಇತಿಹಾಸದಿಂದ, ತಾವೇ ಬಾಳಿಬದುಕಬೇಕಾದ ವಿಶಾಲ ಬಹುಸಾಂಸ್ಕೃತಿಕ ಸಮಾಜದಿಂದ ಹಾಗೂ ತಮ್ಮ ಜೊತೆಗೇ ಆಟಪಾಠದೊಂದಿಗೆ ಬೆಳೆದ ಸಮುದಾಯದಿಂದ ವಿಮುಖವಾಗಿಸುತ್ತದೆ. ಭಾರತೀಯ ಸಮಾಜದಲ್ಲಿ ಅಸ್ಮಿತೆಗಳು ಸೃಷ್ಟಿಯಾಗುವುದು ಮೇಲ್ಪದರದಲ್ಲಿ ಜಾತಿ-ಮತಗಳ ನೆಲೆಯಲ್ಲಾದರೂ, ನಿತ್ಯ ಬದುಕಿನಲ್ಲಿ ಸಮುದಾಯ ಮತ್ತು ಸಾಮುದಾಯಿಕ ಪ್ರಜ್ಞೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.

ಈ ಸಾಮುದಾಯಿಕ ಪ್ರಜ್ಞೆಯನ್ನು ಭ್ರಷ್ಟಗೊಳಿಸುವ ಕೋಮುವಾದಿ, ಮತೀಯವಾದಿ, ಜಾತಿವಾದಿ, ಸ್ತ್ರೀ ದ್ವೇಷೀ ನೆಲೆಗಳಲ್ಲೇ ಕಾನೂನು ಪರಿಭಾಷೆಯ ʼಅಪರಾಧಿʼ ಸೃಷ್ಟಿಯಾಗುವುದು ಇತಿಹಾಸ ಕಂಡಿರುವ ಸತ್ಯ.  ಆಂಗ್ಲ ನಾಣ್ಣುಡಿಯಲ್ಲಿ ಹೇಳಿದಂತೆ “ ಅಪರಾಧಿಗಳು ಜನಿಸುವುದಿಲ್ಲ ತಯಾರಿಸಲ್ಪಡುತ್ತಾರೆ ” . ಜನ್ಮತಃ ವ್ಯಕ್ತಿ ಅಥವಾ ಸಮುದಾಯವನ್ನು ʼಅಪರಾಧಿʼ ಎಂದು ನಿರ್ವಚಿಸುವ ವಸಾಹತು ಯುಗದ ಪರಿಕಲ್ಪನೆಯನ್ನು ಆಧುನಿಕ ಯುಗ ತಿರಸ್ಕರಿಸಿದೆ. ಆದರೂ 21ನೇ ಶತಮಾನದ ಭಾರತೀಯ ಸಮಾಜ ಈ ಧೋರಣೆಯನ್ನು ಪೋಷಿಸುತ್ತಲೇ ಬಂದಿದೆ. ಅದಿರಲಿ, ಇಲ್ಲಿ ಪ್ರಶ್ನೆ ಇರುವುದು ಈ ಅಪರಾಧಗಳು ಏಕೆ ಸಂಭವಿಸುತ್ತವೆ ? ಕೆಲವು ಪ್ರದೇಶಗಳಲ್ಲಿ ಏಕೆ ಆಳವಾಗಿ ಬೇರೂರುತ್ತವೆ ? ಮಾನವ ಜೀವವನ್ನೇ ಸಹಿಸದ ರಾಕ್ಷಸೀ ಪ್ರವೃತ್ತಿ ಸಮಾಜದಲ್ಲಿ ಏಕೆ ಉತ್ಪತ್ತಿಯಾಗುತ್ತದೆ, ಇದಕ್ಕೆ ಮಾನವ ಸಮಾಜ, ಅದರಲ್ಲೂ ಯುವ ಸಂಕುಲ ಏಕೆ ಬಳಕೆದಾರನಾಗುತ್ತದೆ ? ಈ ಪ್ರಶ್ನೆಗಳನ್ನು ಪ್ರಾದೇಶಿಕ ಲಕ್ಷಣಗಳಲ್ಲೂ ಗುರುತಿಸಬಹುದು.

ಆಧುನಿಕ ನಗರೀಕರಣದ ನೆಲೆಯಲ್ಲಿ

ಕಡಲ ತೀರದ ಯಾವುದೇ ನಗರದಲ್ಲಾದರೂ, ನಗರೀಕರಣ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಸಾಗುತ್ತದೆ. ಭಾಷೆ, ಜೀವನಶೈಲಿ, ಸಂಸ್ಕೃತಿ, ಆರ್ಥಿಕತೆ, ರಾಜಕೀಯ ಚಿಂತನೆ ಇವೆಲ್ಲವೂ ಅಷ್ಟೇ ವೇಗದಲ್ಲಿ ಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಅಷ್ಟೇ ವೇಗದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ಪ್ರಗತಿಯನ್ನೂ ಇತಿಹಾಸದಲ್ಲಿ ಗುರುತಿಸಬಹುದು. ಆದರೆ ಈ ʼ ಪ್ರಗತಿ ʼ ಯ ಹಾದಿಯಲ್ಲಿ ಸಮಾಜ-ಸಂಸ್ಕೃತಿಯನ್ನು ನಿರ್ದೇಶಿಸುವ ಮೇಲ್ಪದರದ ಸಮಾಜ ಹಾಗೂ ರಾಜಕೀಯವನ್ನು ನಿಯಂತ್ರಿಸುವ ಪಕ್ಷಗಳು, ಜಾತಿ-ಧರ್ಮಗಳ ಗಡಿಗಳನ್ನು ದಾಟಿ ಇಡೀ ಸಾಮಾಜಿಕ ನಿರೂಪಣೆಯನ್ನು (Narratives) ಕಟ್ಟಿಕೊಡುತ್ತವೆ. ಇಲ್ಲಿ ಅನುಸರಿಸಲಾಗುವ ಪ್ರಾಚೀನ ಧಾರ್ಮಿಕ ನಂಬಿಕೆಗಳು, ಗ್ರಾಂಥಿಕ ವಿಶ್ವಾಸ ಮತ್ತು ಶ್ರೇಣೀಕೃತ ಜಾತಿಯ ಬೋಧನೆಗಳು ಸಮಾಜದ ಒಂದು ವರ್ಗದ ಉನ್ನತೀಕರಣಕ್ಕೆ ಕಾರಣವಾದರೆ, ಮತ್ತೊಂದು ದುರ್ಬಲ ವರ್ಗವನ್ನು ಈ ಉನ್ನತೀಕರಣದ ಸಾಂಸ್ಥೀಕರಣಕ್ಕೆ ಅಗತ್ಯವಾದ ಸರಕಿನಂತೆ ಅಥವಾ ಅಸ್ತ್ರದಂತೆ ಬಳಕೆಯಾಗುತ್ತವೆ.

ಈ ಎರಡನೇ ವರ್ಗದಲ್ಲಿ ಸೃಷ್ಟಿಯಾಗುವುದು ʼ ಅಪರಾಧಿಕ ʼ ಜಗತ್ತು. ಬಹುತೇಕವಾಗಿ ಸಮಾಜದ ಕೆಳಪದರದ ಅನಕ್ಷರಸ್ಥ, ನಿರುದ್ಯೋಗಿ ಹಾಗೂ ಅಭದ್ರತೆಯನ್ನೆದುರಿಸುತ್ತಿರುವ ಯುವ ಸಮೂಹವನ್ನು ಕೇಂದ್ರೀಕರಿಸಿ-ಧೃವೀಕರಿಸಿ-ಕ್ರೋಢೀಕರಿಸಲಾಗುತ್ತದೆ ಈ ಸಮಾಜ ಅಂತರ್ಗತಗೊಳಿಸಿಕೊಳ್ಳುವ (Internalise) ಸಾಂಸ್ಕೃತಿಕ ಆಲೋಚನಾ ವಿಧಾನಗಳು ಯುವ ಸಮೂಹವನ್ನು ಅತ್ಯಾಚಾರ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ, ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರ ಮತ್ತಿತರ ಪ್ರಾಚೀನ ನಡವಳಿಕೆಗಳತ್ತ ಆಕರ್ಷಿಸಲಾಗುತ್ತದೆ. ಇವುಗಳನ್ನು ಸಾಂಸ್ಥೀಕರಣಗೊಂಡ ಧರ್ಮ-ಜಾತಿ ಮತ್ತು ಸಾಮುದಾಯಿಕ ನೆಲೆಗಳಲ್ಲಿ ಅನುಸರಿಸಬಹುದಾದ ಸ್ವೀಕೃತ ಮಾದರಿಗಳನ್ನಾಗಿ ರೂಪಿಸಲಾಗುತ್ತದೆ. ಕೋಮುವಾದ, ಭಯೋತ್ಪಾದನೆ, ಮತಾಂಧತೆ ಮತ್ತು ಜಾತಿ-ಮಹಿಳಾ ದೌರ್ಜನ್ಯ ಇವೆಲ್ಲವೂ ಉತ್ಪಾದನೆಯಾಗುವುದು ಈ ಒಂದು ಸಮಾಜದ ನಡುವೆ.

ಇಲ್ಲಿಯೇ ಅಪರಾಧಿಗಳೂ ಸೃಷ್ಟಿಯಾಗುತ್ತಾರೆ. ಮಂಗಳೂರು, ಮುಂಬೈ ಮುಂತಾದ ಕಡಲತೀರದ ನಗರಗಳಲ್ಲಿ ಜಾಗತಿಕ-ದೇಸೀ ಬಂಡವಾಳ ಜಗತ್ತು ಸೃಷ್ಟಿಸುವ ಮಾಫಿಯಾಗಳು ಮರಳು ಗಣಿಗಾರಿಕೆ, ಮಾದಕ ದ್ರವ್ಯಗಳು, ಜೂಜುಕೋರತನ, ಕಳ್ಳಸಾಗಾಣಿಕೆ, ಅಕ್ರಮ ಹಣಕಾಸು ವ್ಯವಹಾರ, ರಿಯಲ್‌ ಎಸ್ಟೇಟ್‌ ಮತ್ತು ಇತರ ವಾಣಿಜ್ಯ ಚಟುವಟಿಕೆಗಳಿಗೆ ಈ ಅಪರಾಧಿಗಳು ಬೆಂಗಾವಲು ಪಡೆಗಳಾಗಿ ಪರಿಣಮಿಸುತ್ತಾರೆ. ಸಾಂಸ್ಥೀಕರಣಗೊಂಡ ಧಾರ್ಮಿಕ ನೆಲೆಗಳನ್ನೂ ಇದೇ ಜಗತ್ತು ಪೋಷಿಸುವುದರಿಂದ, ಈ ಅಪರಾಧಿಕ ಸಮುದಾಯ, ಧಾರ್ಮಿಕ ಧೃವೀಕರಣದ ಕಾರ್ಯಪಡೆಗಳಾಗಿ ರೂಪುಗೊಳ್ಳುತ್ತವೆ. ಇಲ್ಲಿ ಉತ್ಪಾದಿತವಾಗುವ ʼ ತುಡುಗು ಪಡೆಗಳೇ ʼ (Fringe Elements)  ಸಮಕಾಲೀನ ಭಾರತದ ಚುನಾವಣೆಗಳು , ಕೋಮುವಾದ, ಮತಾಂಧತೆ ಮತ್ತು ಸಾಂಸ್ಕೃತಿಕ ರಾಜಕಾರಣದ ತಳಮಟ್ಟದ ರಾಯಭಾರಿತ್ವ/ಮುಂದಾಳತ್ವ ವಹಿಸಿಕೊಳ್ಳುತ್ತವೆ. ಅಪರಾಧ/ಅಪರಾಧಿ ತಯಾರಾಗುವುದು ಇಲ್ಲಿ.

ಸಮಾಜಶಾಸ್ತ್ರೀಯ ಚೌಕಟ್ಟಿನೊಳಗೆ

ಹಾಗಾಗಿಯೇ ಈ ಬೆಳವಣಿಗೆಯನ್ನು ʼಸಮಾಜಶಾಸ್ತ್ರೀಯʼ (Sociological) ನೆಲೆಯಲ್ಲಿ ಸಾಮಾಜಿಕ ವ್ಯಾಧಿ (Social Malaise) ಎಂದೇ ಪರಿಗಣಿಸಬೇಕಾಗುತ್ತದೆ. ಇದನ್ನು ನಿಗ್ರಹಿಸುವ ಅಥವಾ ನಿಯಂತ್ರಿಸುವ ಕಾನೂನು ಕಟ್ಟಳೆಗಳು ʼ ಸಂಭವಿಸಿದ ಅಥವಾ ಸಂಭವಿಸಬಹುದಾದ ʼ ಅಪರಾಧಗಳ ಸುತ್ತಲಿರುವ ವ್ಯಕ್ತಿ-ಸಂಘಟನೆಗಳನ್ನು ಗುರುತಿಸಿ, ಕಾನೂನಾತ್ಮಕವಾಗಿ ದಂಡನೆಗೊಳಪಡಿಸುತ್ತವೆ. ಆದರೆ ಈ ಕಣ್ಗಾವಲನ್ನು ದಾಟಿ ಆಂತರಿಕವಾಗಿ ನಡೆಯುವ ದುಷ್ಕೃತ್ಯಗಳು ಅನಿರ್ಬಂಧಿತವಾಗಿ ನಡೆಯುತ್ತಲೇ ಇರುತ್ತವೆ. ಇಲ್ಲಿ ʼ ಧರ್ಮಸ್ಥಳದ ಸೌಜನ್ಯ ʼ ಚಾರಿತ್ರಿಕ ಸಾಕ್ಷಿಯಾಗಿ ಕಂಡರೆ, ಸುಹಾಸ್‌ ಶೆಟ್ಟಿ, ರಹಮಾನ್‌ ಸಮಕಾಲೀನ ವಾಸ್ತವವಾಗಿ ಕಂಡುಬರುತ್ತಾರೆ. ಈ ದುರ್ಘಟನೆಗಳ ಬಗ್ಗೆ ಸಾಂಸ್ಥಿಕ ಧರ್ಮದ ವಾರಸುದಾರರ ಮೌನ ಮತ್ತು ರಾಜಕೀಯ ಪಕ್ಷಗಳ ಸಾಪೇಕ್ಷ ಪ್ರತಿಕ್ರಿಯೆ (Relative Reaction) , ಈ ವ್ಯಾಧಿಯನ್ನು ಸರಿಪಡಿಸುವ ಯಾವುದೇ ಪ್ರಯತ್ನಗಳನ್ನು ಮಾಡಿರುವ ದಾಖಲೆಗಳಿಲ್ಲ.

ಸಂವಿಧಾನ ರಕ್ಷಣೆಯ ಕೂಗು ಅಥವಾ ಸೌಹಾರ್ದ ಸಮಾಜದ ಆಶಯಗಳು ಇಲ್ಲಿ ಕೇವಲ ಅಲಂಕಾರಿಕವಾಗಿಬಿಡುತ್ತವೆ. ಈ ದೌರ್ಜನ್ಯಗಳ ವಿರುದ್ದ ನಿರಂತರ ಹೋರಾಟಗಳಲ್ಲಿ ತೊಡಗಿರುವ ಸಂಘಟನೆಗಳೂ ಸಹ (ಪ್ರಗತಿಪರ- ಎಡಪಂಥೀಯ- ಅಲ್ಪಸಂಖ್ಯಾತ-ದಲಿತ ಸಂಘಟನಗಳು) , ಈ ಘಟನೆಗಳನ್ನು ಜಾತಿ-ಮತಗಳ ಸಾಪೇಕ್ಷ ನೆಲೆಯಲ್ಲಿ ನೋಡದೆ, ಭಾರತದ ಬಂಡವಾಳಾಹಿ-ಪಿತೃಪ್ರಧಾನ-ಊಳಿಗಮಾನ್ಯ ಸಮಾಜಕ್ಕೆ ಅಂಟಿರುವ (ಆಳವಾಗಿ ಬೇರೂರಿರುವ) ʼ ಸಾಮಾಜಿಕ ವ್ಯಾಧಿ ʼ ಯ ರೂಪದಲ್ಲಿ ನಿರ್ವಚಿಸುವುದರ ಮೂಲಕ ತಮ್ಮ ಹೋರಾಟದ ಭೂಮಿಕೆಗಳನ್ನು ವಿಸ್ತರಿಸಿ ಮುನ್ನಡೆಯಬೇಕಿದೆ. ಸರ್ಕಾರಗಳ ಕಾನೂನಾತ್ಮಕ ಕ್ರಮಗಳನ್ನು ಸ್ವಾಗತಿಸುತ್ತಲೇ , ಭವಿಷ್ಯ ತಲೆಮಾರಿನ ಹಿತದೃಷ್ಟಿಯಿಂದ ನಮ್ಮ ನಡುವೆಯೇ ಸ್ಥಿರೀಕರಣಗೊಂಡಿರುವ (Stabilised ) ಹಾಗೂ ಸಾಂಸ್ಥೀಕರಣಕ್ಕೊಳಗಾಗಿರುವ ಧಾರ್ಮಿಕ ಮೂಲಭೂತವಾದ, ಮತಾಂಧತೆ, ಜಾತಿ ಶ್ರೇಷ್ಠತೆ ಮತ್ತು ಪುರುಷಾಹಮಿಕೆಯ ನೆಲೆಗಳನ್ನು ಭೇದಿಸಿ ಭಂಗಗೊಳಿಸಬೇಕಿದೆ.

ಈ ನಿಟ್ಟಿನಲ್ಲಿ ಅತ್ಯವಶ್ಯವಾದ ಚಿಕಿತ್ಸಕ ಚಿಂತನಾ ವಿಧಾನಗಳನ್ನು (Curative Thoughts) ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌, ಫುಲೆ, ಠಾಗೋರ್‌, ನಾರಾಯಣಗುರು, ಕುವೆಂಪು ಮೊದಲಾದ ದಾರ್ಶನಿಕರು ಗ್ರಾಂಥಿಕ ರೂಪದಲ್ಲೇ ಬಿಟ್ಟುಹೋಗಿದ್ದಾರೆ. ಅಂಬೇಡ್ಕರ್‌ ಕನಸಿನ ಸಮ ಸಮಾಜದ, ಬಹುಸಾಂಸ್ಕೃತಿಕ , ಸಮನ್ವಯ ರಾಷ್ಟ್ರವನ್ನು ಸಾಕಾರಗೊಳಿಸಬೇಕಾದರೆ ನಮ್ಮ ಆಲೋಚನಾ ಕ್ರಮಗಳಲ್ಲಿ ಈ ಬೌದ್ಧಿಕ ಸುಧಾರಣೆ, ಪರಿಷ್ಕರಣೆ ಮತ್ತು ಪರಾಮರ್ಶೆ ವರ್ತಮಾನದ ತುರ್ತು. ಮಿಲೆನಿಯಂ ಸಮಾಜ ನಮ್ಮತ್ತ ನೋಡುತ್ತಿದೆ. ನಮ್ಮ ವೈಫಲ್ಯವನ್ನು ಇತಿಹಾಸ ಕ್ಷಮಿಸಿದರೂ, ಈ ತಲೆಮಾರು ಮತ್ತು ಭವಿಷ್ಯದ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಈ ಜವಾಬ್ದಾರಿಯನ್ನರಿತು ಅಪರಾಧಿಕ ಜಗತ್ತನ್ನು ʼಸಾಮಾಜಿಕ ವ್ಯಾಧಿʼ ಯ ನೆಲೆಯಲ್ಲಿ ನಿರ್ವಚಿಸುತ್ತಾ, ಸಮಾಜದಲ್ಲಿ ಜಾಗೃತಿ ಮೂಡಿಸುವ ದಾರಿ ನಮ್ಮದಾಗಬೇಕಿದೆ.

ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media

Donate Janashakthi Media

Leave a Reply

Your email address will not be published. Required fields are marked *