ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿಲ್ಲಿಸಲು ಕೆಪಿಆರ್‌ಎಸ್ ಆಗ್ರಹ

ಬೆಂಗಳೂರು: ಲೀಸ್ ಹಾಗೂ ಮಾರಾಟ ಒಪ್ಪಂದದ ನೆಪದಲ್ಲಿ ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲ ಪ್ರದೇಶದ 3667 ಎಕರೆ ಸರ್ಕಾರಿ ಭೂಮಿ ಹಸ್ತಾಂತರ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.  ಪ್ರತಿ ಎಕರೆಗೆ ಸುಮಾರು ಮೂರು ಕೋಟಿ ರೂ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಕೇವಲ ಒಂದು ಲಕ್ಷದ ಇಪ್ಪತ್ತೆರಡು ಸಾವಿರ ರೂಗಳಿಗೆ ಮಾರಾಟ ಮಾಡುವ ರಾಜ್ಯ ಸರ್ಕಾರದ ಸಂಪುಟದ ತೀರ್ಮಾನ, ಯಾರೂ ಒಪ್ಪುವಂತಹದ್ದಲ್ಲ ಎಂದು ಕೆಪಿಆರ್‌ಎಸ್  ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ  ಕಳವಳ ವ್ಯಕ್ತಪಡಿಸಿದ್ದಾರೆ.

ಉದ್ಯೋಗ ಸೃಷ್ಟಿಯ ಮಂಕು ಬೂದಿ ಎರಚಿ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಬಹುತೇಕ ಉಚಿತವಾಗಿ ಜಿಂದಾಲ್ ಉಕ್ಕು ಕಾರ್ಖಾನೆಗೆ ನೀಡುತ್ತಿರುವುದು ರಾಜ್ಯದ ಜನತೆಗೆ ಎಸಗುತ್ತಿರುವ ಮಹಾ ವಂಚನೆ. ಹಿಂದಿನ ಬಿಜೆಪಿ ಸರ್ಕಾರ, ಇದೇ ರೀತಿ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಲು ಹೊರಟಾಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಬಲವಾದ ವಿರೋಧ ದಾಖಲಿಸಿತ್ತು ಜನಾಭಿಪ್ರಾಯ ಕ್ಕೆ ಮಣಿದ ಹಿಂದಿನ ಸರ್ಕಾರ ಕೈ ಬಿಟ್ಟಿದ್ದ ಮಾರಾಟ ಪ್ರಕ್ರಿಯೆಯನ್ನು ಹಿಂದೆ ತಾನೂ ವಿರೋದಿಸಿದ್ದೆ ಎಂಬ ಯಾವುದೇ ಮುಜುಗರ ಇಲ್ಲದೇ ಬಹುತೇಕ ಉಚಿತವಾದ ದರದಲ್ಲಿ ಮಾರಲು ಹೊರಟಿರುವುದು ಆತ್ಮವಂಚನೆಯ ಪರಮಾವಧಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ  ಟೀಕಿಸಿದೆ.

ಕಾರ್ಖಾನೆಗೆ ಬೇಕಾದ ಭೂಮಿಯನ್ನು ಅತ್ಯಂತ ಕಡಿಮೆ ದರದ ಲೀಸ್ ನಲ್ಲಿ ಪಡೆದಿದ್ದ ಜಿಂದಾಲ್ ಕಾರ್ಖಾನೆಗೆ ಅತ್ಯಂತ ಅಗ್ಗದ ದರಕ್ಕೆ ಕ್ರಯಕ್ಕೆ ಕೊಡಬೇಕಾದ ಅಗತ್ಯ ಇರಲಿಲ್ಲ. ಪೊಲೀಸ್ ಹಾಗೂ ಕಾನೂನು ಬಲ ಬಳಸಿ ಬಲವಂತವಾಗಿ ಭೂ ಸ್ವಾಧೀನಕ್ಕೆ ಒಳಪಡಿಸಿಕೊಂಡು ,ಕಿತ್ತುಕೊಂಡ ರೈತರ ಭೂಮಿ ಹೇಗೆ ದೈತ್ಯ ಉದ್ದಿಮೆ ಮಾಲೀಕರ ಖಾಸಗಿ ಆಸ್ತಿಯಾಗುತ್ತದೆ ಎಂಬುದಕ್ಕೆ ಜಿಂದಾಲ್ ಭೂಮಿ ಹಗರಣ ಸಾಕ್ಷಿಯಾಗಿದೆ. ಯಾವುದೇ ಕಾರ್ಮಿಕ ಕಾನೂನುಗಳನ್ನು ಪಾಲಿಸದೇ ಗುತ್ತಿಗೆ-ಹೊರಗುತ್ತಿಗೆ ಎಂಬ ಆಧುನಿಕ ಜೀತ ಪದ್ದತಿಯ ಮೂಲಕ ವಲಸೆ ಕಾರ್ಮಿಕರನ್ನು ಬಳಸಿ ಗರಿಷ್ಠ ದುಡಿಮೆಗೆ ಒಳಪಡಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಜ್ಬುಲ್ಲಾದಿಂದ ರಾಕೆಟ್ ದಾಳಿ: ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್!

ಸರ್ಕಾರದಿಂದ ಭೂಮಿ, ನೀರು,ವಿದ್ಯುತ್, ಬಂಡವಾಳಕ್ಕೆ ಸಾಲ ,ಬಡ್ಡಿ ವಿನಾಯಿತಿ, ತೆರಿಗೆ ರಿಯಾಯಿತಿ, ಸಾಲಮನ್ನಾ ಅಲ್ಲದೇ ಉತ್ಪಾದನಾ ಆಧಾರಿತ ಸಬ್ಸಿಡಿ ಹೀಗೆ ಪ್ರತಿಯೊಂದನ್ನು ಪಡೆಯುವ ಖಾಸಗಿ ಉದ್ದಿಮೆದಾರರು ಯಾವುದೇ ಅರ್ಥಪೂರ್ಣ ಉದ್ಯೋಗ ಸೃಷ್ಟಿ ಮಾಡದೇ ಸಾರ್ವಜನಿಕ ಸಂಪತ್ತು ಹಾಗೂ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ತಮ್ಮ ಖಾಸಗಿ ಆಸ್ತಿ ಮತ್ತು ಸಂಪತ್ತನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿವೆ. ಇಂತಹ ಬಂಡವಾಳಶಾಹಿ ಕೇಂದ್ರಿತ ಅಭಿವೃದ್ಧಿಯಿಂದ ರೈತರು ಮತ್ತು ಕಾರ್ಮಿಕರಿಗೆ ಕಿಂಚಿತ್ತೂ ಪ್ರಯೋಜನ ಇಲ್ಲ. ಬಂಡವಾಳ ಹೂಡಿಕೆ ಹೆಸರಿನಲ್ಲಿ ಭೂಮಿ ಮಾಲೀಕತ್ವವನ್ನು ಹಸ್ತಾಂತರಿಸುವ ಈಗಿನ ನೀತಿಯನ್ನು ಬದಲಿಸಬೇಕು. ಯಾವುದೇ ಕೈಗಾರಿಕೆಗಳಿಗೆ ನೀಡುವ ಭೂಮಿ ಮಾಲೀಕತ್ವ ಸರ್ಕಾರದ ಒಡೆತನದಲ್ಲೇ ಉಳಿಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಗ್ರಹಿಸಿದೆ.

ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ಸಮರ್ಥಿಸಿಕೊಂಡಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ,ಇದೇ ರೀತಿ ಭೂಮಿ ನೀಡುವುದನ್ನು ಮುಂದುವರೆಸುತ್ತೇವೆ. ಮುಂದಿನ ಪೆಬ್ರವರಿ ಯಲ್ಲಿ ಬಂಡವಾಳ ಹೊಡಿಕೆದಾರರ ಸಮಾವೇಶ ಮಾಡಿ ಇದೇ ರೀತಿಯಲ್ಲಿ ಭೂಮಿ ಧಾರೆ ಎರೆಯುತ್ತೇವೆ ಎಂದು ಹೇಳುವ ಮೂಲಕ, ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನದ ಮೂಲಕ ರೈತರ ಭೂಮಿ ಕಿತ್ತುಕೊಳ್ಳುತ್ತೇವೆ ಎಂಬ ಸವಾಲನ್ನು ರೈತ ಸಮುದಾಯಕ್ಕೆ ಹಾಕಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಈಗಾಗಲೇ ರಾಜ್ಯದಾದ್ಯಂತ ಲಕ್ಷಾಂತರ ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಕಿತ್ತುಕೊಂಡು ಉದ್ದಿಮೆಗಳಿಗೆ ಹಂಚಿಕೆ ಮಾಡಿ ಹತ್ತಾರು ವರ್ಷ ಕಳೆದರೂ ಕೈಗಾರಿಕೆಗಳೇ ಬಂದಿಲ್ಲ. ಇದೇ ಬಳ್ಳಾರಿ ಜಿಲ್ಲೆಯ ಕುಡಿತಿನಿ ,ಹರಗಿನ ಡೋಣಿ ಪ್ರದೇಶದ ಸುಮಾರು 13 ಸಾವಿರ ಎಕರೆ ಭೂಮಿ ಮಿತ್ತಲ್ ,ಭ್ರಹ್ಮಿಣಿ ಕಂಪನಿಗಳಿಗೆ ಕೊಟ್ಟು ಹನ್ನೆರಡು ವರ್ಷಗಳೇ ಕಳೆದರೂ ಯಾವುದೇ ಕೈಗಾರಿಕೆಗಳು ಏಕೆ ಸ್ಥಾಪನೆಯಾಗಿಲ್ಲ ಮತ್ತು ಮೋಸ ಹಾಗೂ ಅನ್ಯಾಯದ ಬೆಲೆ ಸರಿಪಡಿಸಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚುವರಿ ಪರಿಹಾರ ಒದಗಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಏಕೆ ಜಾರಿ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ವಿವರಣೆ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.

ಕೈಗಾರಿಕೆಗಳಿಗೆ ಲೀಸ್ ಮೇಲೆ ಭೂಮಿ ನೀಡುವಾಗಲೂ ಪ್ರತಿ ವರ್ಷದ ಲೀಸ್ ಹಣದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪಾಲು ನೀಡಬೇಕು. ನಿರ್ದಿಷ್ಟ ಅವಧಿ ಒಳಗೆ ಕೈಗಾರಿಕೆ ಸ್ಥಾಪಿಸದ ಕಂಪನಿಗಳಿಂದ ಭೂಮಿ ವಾಪಸ್ಸು ಪಡೆದು ಭೂಮಿ ಕಳೆದುಕೊಂಡಿದ್ದ ರೈತರಿಗೆ ವಿತರಿಸಬೇಕು. ಬಂಡವಾಳ ಹೂಡಿಕೆ ಸಮಾವೇಶಗಳಲ್ಲಿ ರೈತರ ಭೂಮಿ ಕೊಳ್ಳೆ ಹೊಡೆದು ರಿಯಲ್ ಎಸ್ಟೇಟ್ ದಂಧೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಪ್ರೊತ್ಸಾಹಿಸಬಾರದು. ಬಿಎಂಐಸಿ ಯೋಜನೆ ಹೆಸರಿನಲ್ಲಿ ಭೂ ಹಗರಣ ನಡೆಸಿರುವ ನೈಸ್ ಕಂಪನಿಯಿಂದ ಭೂಮಿ ವಾಪಸ್ಸು ಪಡೆದು ರೈತರ ಹಿತರಕ್ಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನೂ ನೋಡಿ: ಸರ್ಕಾರದ ರಚನಾತ್ಮಕ ಕೆಲಸಗಳಿಗೆ ಬಿಜೆಪಿ – ಜೆಡಿಎಸ್ ಅಡ್ಡಿ – ಬಿ.ಟಿ ಲಲಿತಾ ನಾಯಕ್Janashakthi Media

Donate Janashakthi Media

Leave a Reply

Your email address will not be published. Required fields are marked *