ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆದ ಸರ್ಕಾರ: ಎಎಪಿ ಆಕ್ರೋಶ

ಬೆಂಗಳೂರು:ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ₹3 ಮತ್ತು ₹3.5 ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಭೀಕರ ಬರೆ ಎಳೆದಿದೆ. ಇದು ಸರ್ಕಾರದ ಬೊಕ್ಕಸ ಖಾಲಿಯಾಗಿರುವುದನ್ನು ಸೂಚಿಸುತ್ತದೆ. ಅಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಭಾರವನ್ನು ಹೊರಿಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಜಗದೀಶ್ ವಿ. ಸದಂ ಕಿಡಿಕಾರಿದ್ದಾರೆ.

ದಿಢೀರ್ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನಪ್ರಿಯ ಯೋಜನೆಗಳನ್ನು ನಕಲು ಮಾಡಿದ ಸಿದ್ದರಾಮಯ್ಯನವರು ಅಧ್ಯಯನ ರಹಿತವಾಗಿ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ, ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯುವಲ್ಲಿ ವಿಫಲಗೊಂಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹಾಗಾಗಿ ಮದ್ಯ ಮತ್ತು ಪೆಟ್ರೋಲ್, ಡೀಸೆಲ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಇನ್ನೊಂದು ಕೈಯಲ್ಲಿ ದುಪ್ಪಟ್ಟು ಹಣವನ್ನು ಕಸಿದುಕೊಳ್ಳುತ್ತಿದೆ. ಸದಾ ಬಡವರ, ಮಧ್ಯಮ ವರ್ಗದವರ ಪರ ಸರ್ಕಾರ ಎಂದು ಹೇಳುತ್ತಲೇ ಅವರ ಬೆನ್ನಿಗೆ ಚೂರಿ ಇರಿಯುತ್ತಿದೆ. ತನ್ನ ಆಡಳಿತ ವೈಫಲ್ಯವನ್ನು ಜನಸಾಮಾನ್ಯರ ಹೊರೆಯನ್ನಾಗಿಸಿ ಪರಿವರ್ತಿಸುತ್ತಿದೆ. ಜನರ ಮೇಲೆ ಸರ್ಕಾರದ ನಷ್ಟವನ್ನು ಹೊರಿಸುತ್ತೀರಿ ಎಂದಾದರೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಇತ್ಯಾದಿ ಯೋಜನೆಗಳು ಅಲಂಕಾರಕ್ಕೆಂದು ಮಾಡಿದ್ದೀರಾ? ಎಂದು ಪ್ರಶ್ನಿಸಿದರು.

ದೆಹಲಿ ಸರ್ಕಾರದ ಸಮರ್ಪಕ ಆಡಳಿತದಿಂದ ಹಾಗೂ ಸಂಪನ್ಮೂಲಗಳ ಕ್ರೋಡೀಕರಣದಿಂದ ಉಚಿತ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಆದರೆ ಸಾಲದ ಹಣದಲ್ಲಿ ಉಚಿತ ಯೋಜನೆಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ ನಷ್ಟದ ಹಾದಿಯಲ್ಲಿ ಸಾಗದೆ ಇರಲು ಹೇಗೆ ಸಾಧ್ಯ? ಲೋಕಸಭೆ ಚುನಾವಣೆಯ ಸೋಲಿನ ನೆಪವೊಡ್ಡಿ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಲು ಯತ್ನಿಸುತ್ತಿದೆ. ಆದರೆ ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯನವರು ಜನರಿಂದಲೇ ತೆರಿಗೆ ಮೂಲಕ ಬೊಕ್ಕಸ ತುಂಬಿಸಿಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೀಗ ಪೆಟ್ರೋಲ್ ದರ ಮತ್ತೆ ನೂರರ ಗಡಿ ದಾಟಿದೆ. ಡೀಸೆಲ್ ದರ 90ರ ಸಮೀಪಕ್ಕೆ ಬಂದಿದೆ. ಇವೆರಡರ ದರ ಜಾಸ್ತಿಯಾಗುತ್ತಿದ್ದಂತೆ ಆಹಾರ ಪದಾರ್ಥಗಳ ದರ ಹೆಚ್ಚಾಗುತ್ತದೆ. ಜನಸಾಮಾನ್ಯರ ದೈನಂದಿನ ಖರ್ಚುವೆಚ್ಚಗಳು ಏರಿಕೆಯಾಗುತ್ತವೆ. ಈಗಾಗಲೇ ಹಣದುಬ್ಬರ, ನಿರುದ್ಯೋಗ, ಏರುತ್ತಿರುವ ಅನಾರೋಗ್ಯ ಪ್ರಮಾಣ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಬದುಕಿನ ಜೊತೆ ಆಟವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇಂತಹ ಜನವಿರೋಧಿ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಜಗದೀಶ್ ಸದಂ ಬೇಸರ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *