ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ವಲಯದ ₹1.62 ಲಕ್ಷ ಕೋಟಿ ಮೌಲ್ಯದ ಆಸ್ತಿ ನಗದೀಕರಣ: ಕೇಂದ್ರ ಸರ್ಕಾರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ, ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವುದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ಸಂಬಂಧಿಸಿದ ಸ್ವತ್ತುಗಳ ಮಾರಾಟ, ಸರ್ಕಾರಿ–ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ವಿಮಾನ ನಿಲ್ದಾಣಗಳ ಗುತ್ತಿಗೆ, ಟವರ್‌ ಮತ್ತು ಗಣಿಗಾರಿಕೆ ಸ್ವತ್ತುಗಳ ನಗದೀಕರಣ ಸೇರಿದಂತೆ ಹಲವು ಸ್ವತ್ತುಗಳನ್ನು ನಗದೀಕರಿಸುವ ಉದ್ದೇಶ ಇದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಹೇಳಿದ್ದಾರೆ.

ಈ ಕುರಿತು ಸಂಸತ್‌ ಅಧಿವೇಶದ ವೇಳೆಯಲ್ಲಿ ಲೋಕಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ಮೂಲಸೌಕರ್ಯ ವಲಯದ ₹ 1.62 ಲಕ್ಷ ಕೋಟಿ ಮೌಲ್ಯದ ಆಸ್ತಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ನಗದೀಕರಿಸಲಾಗುವುದು’ ಎಂದು ತಿಳಿಸಿದ್ದಾರೆ.

2021–22ನೆಯ ಹಣಕಾಸು ವರ್ಷದಲ್ಲಿ ₹ 97 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ನಗದೀಕರಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ನಗದೀಕರಣ ಯೋಜನೆಯ ಅಡಿ ಗುರುತಿಸಿರುವ ವಲಯಗಳೆಂದರೆ; ಬಂದರು, ವಿಮಾನ ನಿಲ್ದಾಣ, ರೈಲ್ವೆ, ಗೋದಾಮು, ಅನಿಲ ಮತ್ತು ಕೊಳವೆ ಮಾರ್ಗ, ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು, ಗಣಿಗಾರಿಕೆ, ದೂರಸಂಪರ್ಕ, ಕ್ರೀಡಾಂಗಣ, ನಗರದ ರಿಯಲ್‌ ಎಸ್ಟೇಟ್‌ ಒಳಗೊಂಡಿದೆ.

ದೇಶದ ಮೂಲಸೌಕರ್ಯ ವಲಯದ ಯೋಜನೆಗಳಿಗೆ ಅನುದಾನ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ‌₹ 6 ಲಕ್ಷ ಕೋಟಿ ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯನ್ನು (ಎನ್‌ಎಂಪಿ) ಘೋಷಣೆ ಮಾಡಿತು.

Donate Janashakthi Media

Leave a Reply

Your email address will not be published. Required fields are marked *