ಇರಾನ್ ಮೇಲೆ ಇಸ್ರೇಲ್ ದಾಳಿ: ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಸರಕಾರ ಸಕ್ರಿಯವಾಗಿ ಒತ್ತಾಯಿಸಬೇಕು – ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ: ಇಸ್ರೇಲ್ ಇರಾನ್ ವಿರುದ್ಧ ಸರಣಿ ದಾಳಿಗಳನ್ನು ನಡೆಸಿದೆ, ಇದರ ಪರಿಣಾಮವಾಗಿ ಹಿರಿಯ ಪರಮಾಣು ವಿಜ್ಞಾನಿಗಳು, ಸೇನಾಪತಿಗಳು ಮತ್ತು ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ. ಇದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ. ಈಗ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸಬೇಕೆಂದು ಅದು ಒತ್ತಾಯಿಸಿದೆ.

ಈ ಕೃತ್ಯವು ಇಸ್ರೇಲ್ ಒಂದು ಪುಂಡ ಪ್ರಭುತ್ವದಂತೆ ವರ್ತಿಸುತ್ತಿದೆ, ಪಶ್ಚಿಮ ಏಷ್ಯಾದ ದೇಶಗಳ ಮೇಲೆ ತಮ್ಮಮನಬಂದಂತೆ ದಾಳಿಗಳನ್ನು ನಡೆಸುತ್ತಿದೆ ಮತ್ತು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದೆ ಎಂಬುದನ್ನು ಮತ್ತೊಮ್ಮೆ ಪ್ರದರ್ಶಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇಸ್ರೇಲ್ ಅಧಿಕಾರಿಗಳ ಹೇಳಿಕೆಗಳು ಈ ದಾಳಿಯನ್ನು ತಿಂಗಳುಗಳ ಮುಂಚಿತವಾಗಿ ಯೋಜಿಸಲಾಗಿತ್ತು ಎಂದು ಸೂಚಿಸುತ್ತವೆ. ಇಡೀ ಪಶ್ಚಿಮ ಏಷ್ಯಾ ಪ್ರದೇಶದ ಮೇಲೆ ಇಸ್ರೇಲ್‌ನ ಪ್ರಾಬಲ್ಯದ ಪ್ರತಿಪಾದನೆಯೇ ಇದರ ಉದ್ದೇಶವಾಗಿದೆ.

ಇದನ್ನೂ ಓದಿ: ಕೇಂದ್ರ ಸ್ಥಾನದಲ್ಲಿ ಇರದಿದ್ದಕ್ಕೆ ಪಿಡಿಒ ರವಿಕುಮಾರ ಎಚ್ ಅಮಾನತು

ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧಿಕೃತ ಘೋಷಣೆಗಳು ಏನೇ ಹೇಳಿದರೂ, ಅದರ ಪರೋಕ್ಷ ಅಥವ ನೇರ ಬೆಂಬಲವಿಲ್ಲದೆ ಇಂತಹ ಕಾರ್ಯಾಚರಣೆ ಸಾಧ್ಯವಾಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬೆಂಬಲವಿಲ್ಲದೆ, ಇಸ್ರೇಲ್‌ಗೆ ಅಂತಹ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆ ನಡೆಸುವ ವಿಶ್ವಾಸ ಅಥವಾ ಸಾಮರ್ಥ್ಯ ಇಲ್ಲ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಮತ್ತು ಈ ಪ್ರದೇಶದ ಇತರ ದೇಶಗಳು ಶಾಂತಿಯುತ ಉದ್ದೇಶಗಳಿಗಾಗಿಯೂ ಸಹ ಪರಮಾಣು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಪರಮಾಣು ಪ್ರಶ್ನೆಗಳ ಕುರಿತು ಇರಾನ್‌ನೊಂದಿಗೆ ಮಾತುಕತೆಗಳು ನಡೆಯುತ್ತಿರುವ ಮಧ್ಯೆಯೇ ನಡೆಯುತ್ತಿರುವ ಈ ದಾಳಿಯು, ವಿಶಾಲವಾದ ಪ್ರಾದೇಶಿಕ ಸಂಘರ್ಷವನ್ನು ಹುಟ್ಟುಹಾಕುವ ಮತ್ತು ಪಶ್ಚಿಮ ಏಷ್ಯಾವನ್ನು ಆಳವಾದ ಅಸ್ಥಿರತೆಗೆ ತಳ್ಳುವ ಸಾಧ್ಯತೆಯಿದೆ. ಕಳೆದ 20 ತಿಂಗಳುಗಳಿಂದ, ಇಸ್ರೇಲ್ ಪ್ಯಾಲೆಸ್ಟೈನ್ ವಿರುದ್ಧ ನರಮೇಧದ ಯುದ್ಧವನ್ನು ನಡೆಸುತ್ತಿದೆ. ಈಗ, ಇರಾನ್ ಮೇಲಿನ ಈ ದಾಳಿಯೊಂದಿಗೆ, ಇಸ್ರೇಲ್ ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯಕ್ಕೆ ಯಾವುದೇ ಸಂಭಾವ್ಯ ಸವಾಲು ಇಲ್ಲದಂತೆ ಮಾಡಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ವಿಶ್ವಸಂಸ್ಥೆಯ ನೇತೃತ್ವದ ಅಂತರರಾಷ್ಟ್ರೀಯ ಸಮುದಾಯವು ಇಸ್ರೇಲ್‌ನ ಆಕ್ರಮಣವನ್ನು ತಡೆಯಲು ವಿಳಂಬ ಮಾಡದೆ ಮಧ್ಯಪ್ರವೇಶಿಸಬೇಕು. ಈ ದಾಳಿಯ ಜಾಗತಿಕ ಖಂಡನೆಗೆ ಭಾರತ ಸರ್ಕಾರವು ತನ್ನ ಧ್ವನಿಯನ್ನು ಸೇರಿಸಬೇಕು ಮತ್ತು ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಕ್ರಿಯವಾಗಿ ಒತ್ತಾಯಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.

ಜೂನ್‍ 12ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಪ್ಯಾಲೆಸ್ಟೈನ್‌ಗೆ ಬೆಂಬಲವಾಗಿ ಮತ ಚಲಾಯಿಸದೆ ಗೈರು ಹಾಜರಾಗುವುದನ್ನು ಆರಿಸಿಕೊಂಡದ್ದು ಅತ್ಯಂತ ಶೋಚನೀಯವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಇಂತಹ ಕ್ರಿಯೆಗಳು ಇಸ್ರೇಲ್ ಮತ್ತಷ್ಟು ಭಂಡತನದಿಂದ ವರ್ತಿಸಲು ಮತ್ತು ಈ ಪ್ರದೇಶದಲ್ಲಿ ತನ್ನ ಆಕ್ರಮಣವನ್ನು ಮುಂದುವರೆಸಲು ಸಹಾಯ ಮಾಡುತ್ತದಷ್ಟೇ ಎಂದು ಎಚ್ಚರಿಸಿದೆ.

ಭಾರತವು ಇರಾನ್ ಮತ್ತು ಪ್ಯಾಲೆಸ್ಟೈನ್ ಎರಡರೊಂದಿಗೂ ದೀರ್ಘಕಾಲದ ಸಂಬಂಧಗಳನ್ನು ಹೊಂದಿದೆ, ಇದನ್ನು ಗೌರವಿಸಬೇಕು ಮತ್ತು ಬಲಪಡಿಸಬೇಕು. ಬಿಜೆಪಿ ನೇತೃತ್ವದ ಸರ್ಕಾರವು ಇಸ್ರೇಲ್‌ಗೆ ತನ್ನ ಮೌನ ಬೆಂಬಲವನ್ನು ಕೊನೆಗೊಳಿಸಬೇಕು ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ನ್ಯಾಯಕ್ಕಾಗಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಇದನ್ನೂ ನೋಡಿ: ಹಲ್ಮಿಡಿ ಶಾಸನದಿಂದ ಬೂಕರ್‌ವರೆಗೆ ಹಾಸನದ ಕೊಡುಗೆ: ಬರಗೂರುJanashakthi Media

Donate Janashakthi Media

Leave a Reply

Your email address will not be published. Required fields are marked *