ಬಾಲಕಿಯ ಸಾವು ಸಂಭವಿಸಿದ್ದು ಹೇಗೆ? ರೈಲ್ವೇ ಅಪಘಾತದಿಂದಲೋ ಅಥವಾ ಕ್ರೂರಹಿಂಸೆಯಿಂದಲೋ?

ಬಿಡದಿ ಸಮೀಪದ ಭದ್ರಾಪುರದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ್ದ ೧೪ ವರ್ಷದ ಬಾಲಕಿಯ ಸಾವಿನ ಕುರಿತು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಗೆ ಒಂದು ಬಹಿರಂಗ ಪತ್ರ ಬರೆಯಲಾಗಿದ್ದು ನಾವೆದ್ದು ನಿಲ್ಲದಿದ್ದರೆ ಕರ್ನಾಟಕ ಎಂಬ ಸಂಘಟನೆ  ಮಹಿಳೆಯರು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಜಂಟಿ ವೇದಿಕೆಯಿಂದ ಸ್ವತಂತ್ರ ಮರು ತನಿಖೆಗೆ ಆಗ್ರಹಿಸಿದೆ.

ಬಹಿರಂಗ ಪತ್ರ ಸಲ್ಲಿಸಿದ ಸಂಘಟನೆ ಪತ್ರದಲ್ಲಿ, ಕಳೆದ ವಾರ ಬೆಂಗಳೂರಿನಲ್ಲಿ, ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ 14 ವರ್ಷದ ಕಿವಿ ಕೇಳದ ಮತ್ತು ಮಾತಾಡಲು ಬಾರದ ಬಾಲಕಿಯ ದುರಂತ ಸಾವಿಗೆ ಸಂಬಂಧಿಸಿದ ಕಥೆಗಳಿಂದ ತುಂಬಿದ್ದವು. ಆಕೆಯ ದೇಹವು ಮೇ 12, 2025 ರ ಮುಂಜಾನೆ ರಾಮನಗರ ಜಿಲ್ಲೆಗೆ ಸೇರಿದ, ಬಿಡದಿ ಸಮೀಪದ ಅವರ ಗ್ರಾಮ ಭದ್ರಾಪುರದ ಬಳಿಯ ರೈಲ್ವೆ ಹಳಿಯ ಬದಿಯಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ:ಬೆಂಗಳೂರು ಮಳೆ: ಆತಂಕಪಡುವ ಅಗತ್ಯವಿಲ್ಲ; ರಕ್ಷಣೆಗೆ ಸರ್ಕಾರ ಬದ್ಧ – ಡಿ.ಕೆ.ಶಿವಕುಮಾರ್

ಮೇಲ್ನೋಟಕ್ಕೆಎಲ್ಲ ಸಂಗತಿಗಳೂ ಈ ಸಾವಿನ ಹಿಂದೆ ಆತಂಕ ಹುಟ್ಟಿಸುವಂತಹ ವಿಚಾರಗಳಿವೆ ಎಂದು ಸೂಚಿಸುತ್ತಿದ್ದವು. ಅವಳು ಹಿಂದಿನ ಸಂಜೆಯಿಂದ ಕಾಣೆಯಾಗಿದ್ದಳು ಎಂಬ ಅಂಶದಿಂದ ಹಿಡಿದು ಆಕೆಯ ದೇಹವು ಪತ್ತೆಯಾದ ನಿರ್ಜನ ಸ್ಥಳ, ಆಕೆಯ ಬಟ್ಟೆಗಳ ಹರಿದ ಸ್ಥಿತಿ, ಗಂಭೀರವಾದ ಏಟು ಬಿದ್ದಿದ್ದ ತಲೆ, ಮುರಿದ ಕಾಲು ಮತ್ತು ಬೆನ್ನು ಸೇರಿದಂತೆ ಆಕೆಯ ದೇಹದ ಮೇಲಿನ ಗಂಭೀರ ಗಾಯಗಳ ಗುರುತುಗಳವರೆಗೆ ಅನೇಕ ವಿಷಯಗಳು ಮೊದಲ ದಿನವೇ ಕುಟುಂಬದ ಸದಸ್ಯರ ಹೇಳಿಕೆಗಳಲ್ಲಿ ಕೇಳಬಂದವು.ಹಾಗೆಯೇ ಅಪರಿಚಿತ ಕಾರೊಂದು ದೇಹ ಸಿಕ್ಕಿದ ಸ್ಥಳದ ಸಮೀಪದವರೆಗೆ ಬಂದು ಹಿಂತಿರುಗಿ ಹೋಗಿದ್ದಕ್ಕೆ ಸಿಸಿಟಿವಿ ದೃಶ್ಯಗಳು ಇದೆ ಎಂಬ ವಿಜಯವಾಣಿ ಪತ್ರಿಕಾ ವರದಿಯವರೆಗೆ ಎಲ್ಲವೂ ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತಿದ್ದವು ಉಲ್ಲೇಖಿಸಿದ್ದಾರೆ

ಪೊಲೀಸರು ಆರಂಭದಲ್ಲಿ ಇದು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಎಂದು ಪರಿಗಣಿಸಿ, ವಿಚಾರಣೆಗಾಗಿ ಕೆಲವರನ್ನು ಠಾಣೆಗೆ ಕರೆಸಿದ್ದರು. ಸಾಮಾಜಿಕ ಮಾಧ್ಯಮ ವರದಿಗಳ ಕಾರಣದಿಂದಾಗಿ ಈ ಪ್ರಕರಣವು ಪಡೆದ ಹೆಚ್ಚಿನ ಗಮನದಿಂದಾಗಿ, ಸರ್ಕಾರದ ಅನೇಕ ಉನ್ನತ ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಜಿಲ್ಲಾಉಸ್ತುವಾರಿಸಚಿವರೂಆಗಿರುವ ಉಪಮುಖ್ಯಮಂತ್ರಿಗಳು ಸೇರಿದಂತೆ ಭೇಟಿ ನೀಡಿ ಹೆಣ್ಣುಮಗುವಿನಸಾವಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ ಈಗ, ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇದು ರೈಲ್ವೇ ಅಪಘಾತ ಎಂದು ಘೋಷಿಸಿದ್ದಾರೆ. ಈ ಇಡೀ ಪ್ರಕ್ರಿಯೆ ಮತ್ತು ಪ್ರಕರಣವನ್ನು ನಿಭಾಯಿಸಿದ ರೀತಿ ನಮ್ಮಲ್ಲಿ ಹಲವು ಪ್ರಶ್ನೆಗಳನ್ನುಹುಟ್ಟಿಸಿದೆ ಎಂದಿದ್ದಾರೆ.

ಹೆಣ್ಣು ಮಕ್ಕಳ ಸಾವಿನ ಸರಣಿಗೆ ಸೇರ್ಪಡೆಯಾದ ಮತ್ತೂ ಒಬ್ಬ ಮುಗ್ಧ ಬಾಲಕಿಯ ಸಂಶಯಾಸ್ಪದವಾದ ಸಾವಿನ ಬಗ್ಗೆ ನಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಲು ನಾವು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇವೆ. ಈ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯು, ಉತ್ತರಗಳನ್ನು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿರುವುದರಿಂದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಾಯಕ ಕಾಳಜಿಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಅಗತ್ಯವಿದೆ.  ಕಳೆದ ವಾರ ಈ ಜಂಟಿ ವೇದಿಕೆಯ ಹಲವಾರು ಸದಸ್ಯರು ಭದ್ರಾಪುರ ಹಕ್ಕಿ ಪಿಕ್ಕಿ ಕಾಲೋನಿಗೆ  ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ತನಿಖೆ ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ಭೇಟಿಯಾದೆವು. ನಮ್ಮಲ್ಲಿ ಕೆಲವರು ಈ ಸಮುದಾಯದೊಂದಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಘನತೆಗೆ ಸಂಬಂಧಿಸಿದ ವಿಷಯಗಳ ಮೇಲೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದು, ಸಮುದಾಯದ ಮುಂದಾಳುಗಳಿಗೆ ಪರಿಚಿತರಾಗಿದ್ದೇವೆ ಎಂದರು.

ದುರದೃಷ್ಟವಶಾತ್  ಪ್ರಕರಣದ ಹಿನ್ನೆಲೆಯಲ್ಲಿ, ಸಮುದಾಯ, ಪೊಲೀಸ್ ಅಧಿಕಾರಿಗಳು ಮತ್ತು ಹಲವಾರು ಇತರ ಸಂಬಂಧಿತ ಸಂಸ್ಥೆಗಳೊಂದಿಗೆ ನಮ್ಮ ಸಂವಾದಗಳ ಸಂದರ್ಭದಲ್ಲಿ, ಆರಂಭಿಕ ಹಂತದಿಂದಲೇ ತನಿಖೆಗಳು ನಡೆಯುತ್ತಿರುವ ರೀತಿಯಲ್ಲಿ ಸಮಸ್ಯೆಗಳಿವೆ ಎಂದು ನಾವು ಕಂಡುಕೊಂಡೆವು. ಎಫ್‌ಐಆರ್ ದಾಖಲಿಸುವಿಕೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಆರಂಭಿಸಿ, ಮರಣೋತ್ತರ ಪರೀಕ್ಷಾ ವರದಿಯನ್ನು ಪಡೆಯುವಲ್ಲಿ ವಿಳಂಬ ಮತ್ತು ತನಿಖೆಯ ಪ್ರಗತಿಯ ಬಗ್ಗೆ ಯಾವುದೇ ಪ್ರಶ್ನೆಗಳಿಗೆ ಸ್ಥಳೀಯ ಪೊಲೀಸರು ಪಾರದರ್ಶಕ ಮಾಹಿತಿ ನೀಡದಿರುವುದು ಮುಂತಾದ ಎಲ್ಲವನ್ನೂ ಈ ಸಮಸ್ಯೆಗಳ ಸರಣಿ ಒಳಗೊಂಡಿತ್ತು. ಅಂತಿಮವಾಗಿ ಮೇ 17 ರಂದು ಅವರ ಆರಂಭಿಕ ತೀರ್ಮಾನಗಳಿಗೆ ವಿರುದ್ಧವಾಗಿ, ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪತ್ರಿಕಾಗೋಷ್ಠಿಯಲ್ಲಿ (1) ದೊರೆತಿರುವ ಎಫ್‌ಎಸ್‌ಎಲ್ ವರದಿಯ ಆಧಾರದ ಮೇಲೆ, ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸ್ಪಷ್ಟವಾಗಿದೆ (2) ರೈಲ್ವೆ ಪೊಲೀಸರಿಂದ ದೊರೆತ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ, ಹಾದುಹೋಗುವ ರೈಲು ರಾತ್ರಿ ಹುಡುಗಿಯನ್ನು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೆ ಕಾರಣವಾಗಿದೆ- ಇದು ಒಂದು ಅಪಘಾತ (3) ನಿಖರವಾದ ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಘೋಷಿಸಲು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಘೋಷಿಸಿದರು.

ಇದನ್ನು ಓದಿ:ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ: ಕೆ. ಎಂ. ಶಿವಲಿಂಗೇಗೌಡ

ಇದೀಗ, ಮರಣೋತ್ತರ ಪರೀಕ್ಷಾ ವರದಿಯೂ ಬಂದಿದ್ದು, ಅದೂ ಕೂಡಾ ಬಾಲಕಿಯು ರೈಲು ಅಪಘಾತದಿಂದಲೇ ಸಾವನ್ನಪ್ಪಿದ್ದಾಗಿ ಖಚಿತಪಡಿಸಿದೆ. ಆದರೆ, ಈ ಒಟ್ಟಾರೆ ಸನ್ನಿವೇಶವು ಅನೇಕ ಪ್ರಶ್ನೆಗಳನ್ನು ಮತ್ತು ಅನುಮಾನಗಳನ್ನು ನಮ್ಮಲ್ಲಿ ಹುಟ್ಟಿಸಿದೆ. ಒಂದು ವೇಳೆ ಬಾಲಕಿಯ ಜೀವವನ್ನು ತೆಗೆದುಕೊಂಡಿದ್ದು ನಿಜಕ್ಕೂ ರೈಲು ಅಪಘಾತ ಎಂಬ ಪೊಲೀಸ್ ವಾದ/ತರ್ಕವನ್ನು ನಾವು ಒಪ್ಪುವುದೇ ಆದರೂ, ಪೊಲೀಸರು ಮತ್ತು ಸರ್ಕಾರವು ಪರಿಹರಿಸಬೇಕಾದ ಮತ್ತು ಉತ್ತರಿಸಬೇಕಾದ ಕೆಲವು ಮೂಲಭೂತ ಪ್ರಶ್ನೆಗಳು ಇನ್ನೂ ಉಳಿದಿವೆ:

1. ಸಾವಿನ ಸ್ಥಳ ಮತ್ತು ಒಟ್ಟು ಸಂದರ್ಭ: ಮಾಧ್ಯಮ ವರದಿಗಳು ಮತ್ತು ನಮ್ಮದೇ ಅವಲೋಕನಗಳಿಂದ ಸ್ಪಷ್ಟವಾದಂತೆ, ದೇಹವು ಪತ್ತೆಯಾದ ಸ್ಥಳವನ್ನು ಅಪರಾಧ ಸ್ಥಳವೆಂದು ಪರಿಗಣಿಸಿ, ಹೊರಗಿನವರು ಪ್ರವೇಶಿಸದಂತೆ ಸಂಚಾರವನ್ನು ನಿರ್ಬಂಧಿಸಲಾಗಿರಲಿಲ್ಲ. ಯಾವುದೇ ಅಡೆತಡೆಗಳಿಲ್ಲದೆ ಸಾರ್ವಜನಿಕರಿಗೆ ಆ ಪ್ರದೇಶದಲ್ಲಿ ಓಡಾಡಲು ಅವಕಾಶ ನೀಡಲಾಯಿತು, ಇದು ಯಾವುದೇ ಸ್ಥಳದ ಸಾಕ್ಷ್ಯವನ್ನು ತಿರುಚುವ ಅಥವಾ ಹಸ್ತಕ್ಷೇಪ ಮಾಡುವ ಸಾಧ್ಯತೆಗೆ ಕಾರಣವಾಗುವಂತಿತ್ತು . ಅದಲ್ಲದೆ, ನಿರ್ಜನವಾಗಿದ್ದ ಆಪ್ರದೇಶ, ಪಕ್ಕದಲ್ಲಿದ್ದ ರೈಲ್ವೇ ಹಳಿ, ಇಂತಹ ಅಪಾಯಕರ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅನೇಕ ಹೆಣ್ಣು ಮಕ್ಕಳ ಅಸಹಜ ಸಾವುಗಳು ಅಥವಾ ಕೊಲೆಗಳು, ಇಂತಹ ಘಟನೆಗಳ ಸಂಧರ್ಭಗಳಲ್ಲಿ ಬಲಿಯಾದ ಹೆಣ್ಣುಮಕ್ಕಳು ಅಲೆಮಾರಿ, ಭಿಕ್ಷುಕ, ಬುದ್ಧಿಮಾಂದ್ಯ ಕಡುಬಡತನದ ಹಿನ್ನೆಲೆಯವರಾಗಿದ್ದಾಗ, ಅವು ಕಣ್ಣಿಗೂ ಕಾಣದೆ ಮರೆಯಾಗುವುದು-ಇವೇ ಮೊದಲಾದ ಕಾರಣಗಳಿಂದಾಗಿ ಸಾಮಾಜಿಕ ಸಂಘಟನೆಗಳು ಮತ್ತು ನಾಗರೀಕರಲ್ಲಿ ಆತಂಕ ಮತ್ತು ಉದ್ವಿಗ್ನತೆ ಸೃಷ್ಟಿಯಾಗಿದ್ದುಸಹಜ.

2. ಘಟನೆ ನಡೆದ ಕ್ಷಣದಿಂದ ಪೊಲೀಸರ ವರ್ತನೆ:ಇಷ್ಟು ಸೂಕ್ಷ್ಮವಾದ ವಿಚಾರದಲ್ಲಿ ಪೊಲೀಸರ ಸಂವೇದನಾರಹಿತತೆ, ವಹಿಸಬೇಕಾದಷ್ಟು ಎಚ್ಚರಿಕೆ ವಹಿಸದಿರುವುದು ಹಲವು ಅನಗತ್ಯ ಬೆಳವಣಿಗೆಗಳಿಗೆ ಕಾರಣವಾಯಿತು. ಪಾರದರ್ಶಕವಾಗಿ ಮತ್ತು ನಾಗರೀಕ ವಿಧಾನಗಳಲ್ಲಿ ಬಂದವರೊಂದಿಗೆ ಸಂವಾದ ನಡೆಸಿ ಆತಂಕಕ್ಕೆ ಕಾರಣವಿಲ್ಲದಂತೆ ಸಮಗ್ರ ಮಾಹಿತಿ ನೀಡುವ ಯಾವ ಪ್ರಯತ್ನವನ್ನೂ ಸ್ಥಳೀಯ ಪೊಲೀಸ್ ವ್ಯವಸ್ಥೆ ಮಾಡಿಲ್ಲ. ಘಟನೆಯ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಮತ್ತು ಭರವಸೆ ದೊರೆಯದ ಸನ್ನಿವೇಶದಲ್ಲಿ, ಇನ್ನೂ ಹೆಚ್ಚಿನ ಆತಂಕ ಈ ವಿಚಾರದಲ್ಲಿಸಮಾಜದಲ್ಲಿಉಂಟಾಯಿತು. ಇದರಿಂದಾಗಿ,ಕೆಲವು ಸಾಮಾಜಿಕ ಜಾಲತಾಣಿಗರು ತಮ್ಮಊಹೆಗೆ ತಕ್ಕಂತೆ ಸುದ್ದಿಗಳನ್ನು ಹರಿಬಿಡುವುದಕ್ಕೂಆಸ್ಪದವಾಯಿತು. ನೇರವಾಗಿ ಪೊಲೀಸರಿಂದಲೇ ಒತ್ತಾಸೆ ದೊರೆಯದಿದ್ದುದೇ, ಈ  ಘಟನೆ ಅತಿಯಾದ ಆತಂಕವನ್ನು ಹುಟ್ಟಿಸಿದ್ದಕ್ಕೆ ಮತ್ತು ಸ್ಪಷ್ಟತೆಗಾಗಿ ಹೆಚ್ಚನ ಸಂಖ್ಯೆಯಲ್ಲಿ ಜನರು ಅಲ್ಲಿಗೆ ಬಂದುದಕ್ಕೆ ಕಾರಣವೆಂದರೆ ತಪ್ಪಾಗಲಾರದು.

ಇದನ್ನು ಓದಿ: ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಪ್ರತಿಭಟಿಸಿದ ಕಾರ್ಮಿಕರು

3. ರೈಲು ಅಪಘಾತದ ತರ್ಕ,ರೈಲಿನ ವೀಡಿಯೊ/ಆರ್‌ಪಿಎಫ್ ಪಾತ್ರ:ಬಾಲಕಿಗೆ ನಿಜವಾಗಿಯೂ ರೈಲು ಡಿಕ್ಕಿ ಹೊಡೆದಿದ್ದರೆ, ಜಾನುವಾರುಗಳಿಗೆ ಡಿಕ್ಕಿ ಹೊಡೆದರೂ ಸಹ ಕೂಡಲೇ ರೈಲು ಚಾಲಕರು ಸಲ್ಲಿಸುವ ಘಟನೆ/ಅಪಘಾತ ವರದಿ ಇದೆಯೇ? ಇಂತಹ ಘಟನೆಗಳ ನಂತರಆರ್‌ಪಿಎಫ್‌ನಿಂದ ನಡೆಯುವಆರಂಭಿಕತನಿಖೆ ಏಕೆ ನಡೆಸಲಾಗಿಲ್ಲ? ಅವರು ಹಂಚಿಕೊಂಡ ಆ ದೃಶ್ಯಾವಳಿಗಳ ಸತ್ಯಾಸತ್ಯತೆ ಏನು – ವಿಧಿವಿಜ್ಞಾನ ಪರೀಕ್ಷೆಯ ಪ್ರಕ್ರಿಯೆಯ ಮೂಲಕ ಅದನ್ನು ಪರಿಶೀಲಿಸಲಾಗಿದೆಯೇ? ಯಾವ ಹಂತದಲ್ಲಿ ಮತ್ತು ಏಕೆ ಈ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು? ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಪೊಲೀಸ್ ವರಿಷ್ಟಾಧಿಕಾರಿಗಳು ಸ್ಥಳೀಯ ಪೊಲೀಸರು ತನಿಖೆ ನಡೆಸಿದರು, ಆರ್‌ಪಿಎಫ್ ಅಲ್ಲ ಎಂದು ಸ್ಪಷ್ಟಪಡಿಸಿದರು, ಏಕೆಂದರೆ ಘಟನೆಯಬಗ್ಗೆಸುದ್ದಿಹರಡಿಅಷ್ಟರಲ್ಲಾಗಲೇಕೊಲೆ ಮತ್ತು ಲೈಂಗಿಕ ದೌರ್ಜನ್ಯ ಎಂದು ಸಾಮಾಜಿಕ ಮಾಧ್ಯಮ ವರದಿಗಳು ಬಂದಿದ್ದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಹಾಗೆ ಮಾಡಿದ್ದೇವೆ ಎಂದು ಹೇಳಿದರು. ಅಂದರೆ ಇದು ಸಾಮಾಜಿಕ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯೇ ಹೊರತು ಅವರು ಸ್ವತಃ ಮನವರಿಕೆ ಮಾಡಿಕೊಂಡಿದ್ದಲ್ಲ. ಈ ಆತುರದ ಪ್ರತಿಕ್ರಿಯೆಯ ಬದಲಿಗೆ, ಅವರು ಆಪಾದಿತ ಅಪರಾಧವೆಂದು ತನಿಖೆ ಮಾಡುವ ಮೊದಲು ರೈಲ್ವೆ ಪೊಲೀಸರು ಅಪಘಾತದ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಲು ಕಾಯುತ್ತಿದ್ದೇವೆ ಎಂದು ಏಕೆ ಹೇಳಬಾರದಿತ್ತು?

4. ಎಫ್‌ಐಆರ್:ಮೊದಲ ಎಫ್‌ಐಆರ್‌ ಮೇ 11ರ ಮಧ್ಯರಾತ್ರಿ 1:00 ಗಂಟೆಗೆ ತಾಯಿ ಮತ್ತು ಕುಟುಂಬದವರು ಬಿಡದಿ ಪೊಲೀಸ್ ಠಾಣೆಗೆ ಹೋಗಿ ಮಗಳು ಕಾಣುತ್ತಿಲ್ಲಎಂದಾಗಲೇ ದಾಖಲಾಗಬೇಕಿತ್ತು, ಅದನ್ನು ಮಾಡದಿರುವುದು ನೋಡಿದರೆ, ಕಿವಿ ಕೇಳದ ಮಾತನಾಡಲು ಬಾರದ ಹದಿಹರೆಯದ ಹೆಣ್ಣು ಮಗುವೊಂದು ಕಾಣೆಯಾಗಿದೆ ಎಂಬ ವಿಚಾರವನ್ನು ತುರ್ತು ಆದ್ಯತೆಯಲ್ಲಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಆ ನಂತರ, 12ರ ಬೆಳಿಗ್ಗೆ ದಾಖಲಿಸಿದ ಎಫ್ಐಆರ್ನಲ್ಲೂ ಕೂಡಾ ಮಗಳು ಅಸಹಜವಾಗಿ ಸಾವನ್ನಪ್ಪಿದ್ದಾಳೆ ಮತ್ತು ಸಾವಿನ ಬಗ್ಗೆ ಶಂಕೆ ಇದೆ ಎಂದು ತಾಯಿ ಹೇಳಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ವಿವರಗಳಿಲ್ಲ. ಹಿಂದಿನ ಸಂಜೆಯಿಂದ ಅವಳು ಕಾಣೆಯಾಗಿದ್ದಳು, ರಾತ್ರಿ ಕುಟುಂಬದವರು ಠಾಣೆಗೆ ಹೋಗಿದ್ದರು, ಬೆಳಿಗ್ಗೆ ದೇಹವು ಪತ್ತೆಯಾದ ಸ್ಥಿತಿ, ಹರಿದ ಬಟ್ಟೆಗಳು, ದೇಹದ ಮೇಲೆ ಕಂಡ ಗಾಯದ ಗುರುತುಗಳು ಇತ್ಯಾದಿ ವಿವರಗಳನ್ನು ಉಲ್ಲೇಖಿಸಲಾಗಿಲ್ಲ. ಇಂತಹ ಲೋಪಗಳು ಏಕೆ ಸಂಭವಿಸಿದವು? ಇದಕ್ಕೆ ಹೊಣೆಗಾರರು ಯಾರು? ನಂತರದಲ್ಲಾದರೂ ಈ ಎಲ್ಲಾ ಅಂಶಗಳನ್ನು ಹೆಚ್ಚುವರಿ ಹೇಳಿಕೆಯಲ್ಲಿ ಅಥವಾ ಹೊಸ ಎಫ್‌ಐಆರ್‌ನಲ್ಲಿ ಕುಟುಂಬದವರು ಮತ್ತುಕಣ್ಣ ಸಾಕ್ಷಿಗಳು ಹೇಳಿದಂತೆ ಸೇರಿಸಲಾಗಿದೆಯೇ?
ಪೊಲೀಸರು ಆರಂಭದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (ಕ್ರೈಮ್ ನಂ. 0109/2025) ದಾಖಲಿಸಿದ್ದರೂ, ಸಂತ್ರಸ್ತರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದರಿಂದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ನೊಂದ ಕುಟುಂಬಕ್ಕೆ ಅಲೆಮಾರಿ ಆದಿವಾಸಿಗಳೆಂಬ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಿದ ನಂತರವಾದರೂ ಪೊಲೀಸರು ತಕ್ಷಣವೇ ಈ ಹೆಚ್ಚುವರಿ ಆರೋಪಗಳನ್ನು ಸಹ ದಾಖಲಿಸಿರಬೇಕಿತ್ತು.

5. ದೇಹವು ಕಂಡುಬಂದ ಪರಿಸ್ಥಿತಿ ಮತ್ತು ಮರಣೋತ್ತರ ಪರೀಕ್ಷಾ ವರದಿ: ದೇಹವು ಕಂಡುಬಂದ ಸ್ಥಿತಿಯ ಬಗ್ಗೆ ಕುಟುಂಬ ಮತ್ತು ಸಾರ್ವಜನಿಕರು ಆರಂಭದಲ್ಲೇ ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ. ಕಚ್ಚಿದ ಗುರುತುಗಳು, ಸಿಗರೇಟ್ ಸುಟ್ಟ ಗುರುತುಗಳು ಸೇರಿದಂತೆ ಕಂಡುಬಂದ ವಿವಿಧ ರೀತಿಯ ಗಾಯಗಳ ಬಗ್ಗೆ ಕಣ್ಣು ಸಾಕ್ಷಿಗಳ ವರದಿಗಳನ್ನು ಹಲವು ವಿಡಿಯೋಗಳಲ್ಲಿ ಗಮನಿಸಬಹುದು. ವಾಸ್ತವವಾಗಿ, ಎಲ್ಲಾ ಛಾಯಾಚಿತ್ರಗಳಲ್ಲಿ ಅವಳ ಖಾಸಗಿ ಭಾಗಗಳು ಭಾಗಶಃ ಬಹಿರಂಗಗೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ, ಅವಳ ಹರಿದ ಶಾರ್ಟ್ಸ್ನೊಂದಿಗೆ ಅವಳ ದೇಹದ ಮೇಲಿನ ಅರ್ಧಭಾಗವನ್ನು ಮುಚ್ಚುವ ಟಿ-ಶರ್ಟ್‌ಗೆ ಪಿನ್ ಹಾಕಲಾಗಿತ್ತು. ಇದನ್ನು ಮರಣೋತ್ತರ ಪರೀಕ್ಷಾ ವರದಿ ಸಂಪೂರ್ಣವಾಗಿ ಪರಿಗಣಿಸಿದೆಯೇ? ಆದರೆ ಈ ವರದಿ ಇದ್ಯಾವುದನ್ನೂಉಲ್ಲೇಖಿಸುವುದಿಲ್ಲ. ಪೊಲೀಸರ ತರ್ಕದಲ್ಲಿ ದೇಹದ ಮೇಲಿರುವ ಗಾಯಗಳು ಮತ್ತು ಗಾಯದ ಗುರುತುಗಳು ಇನ್ನೂ ವಿವರಿಸಲ್ಪಟ್ಟಿಲ್ಲ, ಹಾಗೆಯೇ ಬಟ್ಟೆಗಳು ಅಸ್ತವ್ಯಸ್ತವಾಗಿ ಕಂಡುಬಂದ ದೇಹದ ಸ್ಥಿತಿಗೂ ಕೂಡಾ ಕಾರಣವೇನೆಂಬುದನ್ನುಹೇಳಿಲ್ಲ. ಇದಕ್ಕೆ ಆಳವಾದ ತನಿಖೆ ಅಗತ್ಯವಿದೆ. ಅಥವಾ ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದರೆ, ತನಿಖಾಧಿಕಾರಿ ಮತ್ತು ಸ್ಥಳ ಮಹಜರು ನಡೆಸಿದ ಇತರರು ಈ ಬಗ್ಗೆಏನು ಹೇಳುತ್ತಾರೆ? ಆ ಮಾಹಿತಿಯನ್ನು ಸಾರ್ವಜನಿಕರ ಕಾಳಜಿಗಳನ್ನು ಪರಿಹರಿಸುವಂತೆ ನೀಡಬೇಕಲ್ಲವೇ?

ಇದನ್ನು ಓದಿ:  ತುಮಕೂರಿನ ಅಭಿವೃದ್ಧಿಗೆ ಮೆಟ್ರೋ ರೈಲು ಬೇಕೆಬೇಕು: ಡಾ. ಜಿ.ಪರಮೇಶ್ವರ

6. ಎಫ್ಎಸ್ಎಲ್ ವರದಿ:ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿಯನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗಿದೆ, ಇದು ಪ್ರಕ್ರಿಯೆಯನ್ನು ಆತುರವಾಗಿ ಮತ್ತು ಅವಸರದಿಂದ ಪ್ರಾರಂಭಿಸಲಾಗಿದೆಯೇ ಎಂಬ ಕಳವಳವನ್ನು ಹೆಚ್ಚಿಸುತ್ತದೆ.ಅತ್ಯಾಚಾರ ನಡೆದಿಲ್ಲ ಎಂದು ಹೇಳುವ ಎಫ್‌ಎಸ್‌ಎಲ್ ವರದಿಯನ್ನು ಮರಣೋತ್ತರ ಪರೀಕ್ಷಾ ವರದಿಯೊಂದಿಗೆ ಓದದೆ ಕೂಡಲೇ ಬಿಡುಗಡೆ ಮಾಡಿರುವುದು ಅಸ್ವಾಭಾವಿಕ ಎನಿಸಲು ಅವಕಾಶವಿದೆ, ಈ ಅವಸರ ಏಕೆ? ಎಫ್‌ಎಸ್‌ಎಲ್ ವರದಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆಯೇ? ಪಿಎಂ ವರದಿಗೆ ಮುಂಚಿತವಾಗಿ ಎಫ್‌ಎಸ್‌ಎಲ್ ವರದಿಯನ್ನು ಪಡೆಯಲು ಮತ್ತು ಅದನ್ನಾಧರಿಸಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಲು ಪೊಲೀಸರನ್ನು ಪ್ರೇರೇಪಿಸಿದ ಸಂದರ್ಭಗಳು ಯಾವುವು?

7. ಸಂಘಟನೆಗಳುಮತ್ತುಸಮುದಾಯದ ಮೇಲೆ ಪೊಲೀಸ್ ನಿರ್ಬಂಧ:ಪೊಲೀಸರು ಸಾರ್ವಜನಿಕರು ಮತ್ತು ಸಂಸ್ಥೆಗಳನ್ನು ನಡೆಸಿಕೊಳ್ಳುವಾಗ ಹೆಚ್ಚು ಗೌರವಾನ್ವಿತ ಮತ್ತು ಪ್ರಜಾತಾಂತ್ರಿಕ ವಿಧಾನವನ್ನುಏಕೆ ಅಳವಡಿಸಲಿಲ್ಲ? ಈ ಘಟನೆಯ ಬಗ್ಗೆಆತಂಕ, ಕಾಳಜಿಯಿಂದ ಮಾಹಿತಿ ಪಡೆಯಲು ಬಂದ ಸಂಘ-ಸಂಸ್ಥೆಗಳೊಂದಿಗೆ ಅಗೌರವದಿಂದ ನಡೆದುಕೊಳ್ಳಲಾಗಿದೆ, ಕೆಲವರಿಗೆ ನೀಡಲಾದ ಕಿರುಕುಳ ಅಸಹನೀಯವಾಗಿದೆ. ಪೊಲೀಸರು ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಅಗತ್ಯ ಮಾಹಿತಿಯನ್ನು ಕುಟುಂಬ ಮತ್ತು ಸಾರ್ವಜನಿಕರಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕಲ್ಲವೇ?.
ಹಾಗೆಯೇ, ಬೇಜವಾಬ್ದಾರಿ ಮಾಧ್ಯಮ ವರದಿಗಾರಿಕೆಯನ್ನು ನಿಗ್ರಹಿಸುವ ಹೆಸರಿನಲ್ಲಿ, ಪೊಲೀಸರು ಸಮುದಾಯದ ಮೇಲೆ ನಿರ್ಬಂಧಹೇರಿ, ಸಂಬಂಧಪಟ್ಟ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ಸಾರ್ವಜನಿಕರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ನಮಗೆತಿಳಿದುಬಂದಿದೆ. ಅವರ ಮೂಲಭೂತ ಸ್ವಾತಂತ್ರ್ಯಗಳ ಮೇಲೆ ಈ ಸಂಪೂರ್ಣ ನಿರ್ಬಂಧ ಮತ್ತು ಅವರ ಚಟುವಟಿಕೆಗಳ ಕಣ್ಗಾವಲು ಸ್ವೀಕಾರಾರ್ಹವಲ್ಲ. ಈ ಧೋರಣೆಗಳು ಮತ್ತೇನನ್ನೋ ಮುಚ್ಚಿ ಹಾಕುವ ಪ್ರಯತ್ನವಿದೆ ಎಂಬ ಭಾವನೆಯನ್ನು ಸಹ ಮೂಡಿಸುತ್ತವೆ.
ವಾಸ್ತವವಾಗಿ, ದೌರ್ಜನ್ಯ ತಡೆ ಕಾಯಿದೆ, 1989 ರ ಸೆಕ್ಷನ್ 15ಎ(1) ಹೀಗೆ ಹೇಳುತ್ತದೆ: “ಯಾವುದೇ ರೀತಿಯ ಬೆದರಿಕೆ ಅಥವಾ ಬಲವಂತ ಅಥವಾ ಪ್ರೇರಣೆ ಅಥವಾ ಹಿಂಸೆ ಅಥವಾ ಹಿಂಸಾಚಾರದ ಬೆದರಿಕೆಗಳ ವಿರುದ್ಧ ಸಂತ್ರಸ್ತರು, ಅವರ ಅವಲಂಬಿತರು ಮತ್ತು ಸಾಕ್ಷಿಗಳಿಗೆ ರಕ್ಷಣೆ ನೀಡಲು ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ”.

8. ವಿವಿಧ ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯ:ಹುಡುಗಿ ದೈಹಿಕವಾಗಿ ವಿಕಲಾಂಗ ಮತ್ತು ಬುಡಕಟ್ಟು ಸಮುದಾಯದ ಅಪ್ರಾಪ್ತ ವಯಸ್ಕಳಾಗಿರುವುದರಿಂದ, ಮಕ್ಕಳ ಸಂರಕ್ಷಣಾ ಸಮಿತಿ, ಮಹಿಳಾ ಆಯೋಗ, ಅಲೆಮಾರಿ ಆದಿವಾಸಿಆಯೋಗ ಮತ್ತು ಎಸ್‌ಸಿ/ಎಸ್‌ಟಿ ಆಯೋಗ ಸೇರಿದಂತೆ ವಿವಿಧ ಸಂಬಂಧಿತ ಸಂಸ್ಥೆಗಳಿಂದ ಪ್ರಕರಣದ ಬಗ್ಗೆ ಕೆಲವು ಮೇಲ್ವಿಚಾರಣೆ ಅಗತ್ಯವಿದೆ. ಮಕ್ಕಳ ಸಂರಕ್ಷಣಾ ಸಮಿತಿ ಸದಸ್ಯರು, ಅಲೆಮಾರಿ ಆದಿವಾಸಿ ಆಯೋಗದ ಅಧ್ಯಕ್ಷರು ಈಗಾಗಲೇ ಕಾಲೋನಿಗೆ ಭೇಟಿ ನೀಡಿ ಪೊಲೀಸರನ್ನು ಭೇಟಿಯಾಗಿದ್ದಾರೆ ಎಂದು ನಮಗೆ ತಿಳಿದಿದೆ. ಪೊಲೀಸರು ಇಂತಹ ಪ್ರಮುಖ ಹೇಳಿಕೆಗಳನ್ನು ನೀಡುವ ಸಂದರ್ಭದಲ್ಲಿ ಈ ಆಯೋಗಗಳಿಗೂ ತಮ್ಮ ವರದಿಗಳನ್ನು ಸಲ್ಲಿಸುವುದೂ ಕೂಡಾ ಅಪೇಕ್ಷಣೀಯವಲ್ಲವೇ? ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ ಅವರನ್ನೂ ತೊಡಗಿಸಿಕೊಂಡ ನಂತರ ಬಹಿರಂಗ ಹೇಳಿಕೆ ನೀಡಬೇಕಲ್ಲವೇ?

ಈ ಎಲ್ಲಾ ಲೋಪದೋಷಗಳು ಆಳವಾದ ದೋಷಪೂರಿತ ಮತ್ತು ಅಪಾರದರ್ಶಕ ತನಿಖೆಯನ್ನು ಸೂಚಿಸುತ್ತವೆ. ಕರ್ನಾಟಕದ ನಾಗರಿಕರಾಗಿ, ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತಿರೇಕದ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ, ಹಾಗಾಗಿಯೇನಾವು ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳುತ್ತಿದ್ದೇವೆ, ಇದರಿಂದ ತಪ್ಪಿತಸ್ಥರಿಗೆ ಮತ್ತು ಅಪರಾಧಿಗಳಿಗೆ ದಂಡಮುಕ್ತ ಸಂಸ್ಕೃತಿಯ ಬದಲಿಗೆ ಸಂತ್ರಸ್ತರಿಗೆ ಮತ್ತು ಬದುಕುಳಿದವರಿಗೆ ನ್ಯಾಯದ ಸಂಸ್ಕೃತಿಯನ್ನು ಖಾತ್ರಿಪಡಿಸಲು ಸಾಧ್ಯ. ಈ  ಎಲ್ಲ ಹಿನ್ನೆಲೆಯಲ್ಲಿ ಈ ಇಡೀ ಪ್ರಕರಣದ ಸಂಪೂರ್ಣ ಸ್ವತಂತ್ರ ಮರುತನಿಖೆಯನ್ನು ನಾವು ಆಗ್ರಹಿಸುತ್ತಿದ್ದೇವೆ. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಗೃಹ ಇಲಾಖೆ ಇದನ್ನು ಕೂಡಲೇ ಪರಿಗಣಿಸಿ ಸ್ವತಂತ್ರ ಮರು ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *