ಬೆಂಗಳೂರು; ಜ,11: ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ ರೈತರು 47 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳಲಿದೆ, ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಹೋರಾಟ ಹೊಸ ಚರಿತ್ರೆಗೆ ಸಾಕ್ಷಿಯಾಗಲಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಡಾ. ಹೇಮಲತಾ ತಿಳಿಸಿದರು.

ಅವರು ಇಂದು ಬೆಂಗಳೂರಿನ ಸೂರಿಭವನದಲ್ಲಿ ಸಿಐಟಿಯು ರಾಜ್ಯ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರದ ನೀತಿ ಮತ್ತು ದಾಳಿಯ ವಿರುದ್ಧ ಕಾರ್ಮಿಕರನ್ನು ಪರಿಣಾಮಕಾರಿ ಹೋರಾಟಕ್ಕೆ ಅಣಿನೆರೆಸಲು ರೈತ ಚಳುವಳಿ ಬೆಂಬಲಿಸಲು ಜನತೆಯ ಮಧ್ಯೆ ಜಾಗೃತಿ ಮೂಡಿಸಲು ಎರಡನೇ ರಂಗದ ರಚನಾತ್ಮಕ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ಅಪಾಯಗಳನ್ನು ಒಳಗೊಂಡು ಜನತೆಯ ಪ್ರಧಾನ ಹತ್ತು ಬೇಡಿಕೆಗಳಿಗೆ ಕರ್ನಾಟಕದಲ್ಲಿ ಹತ್ತು ದಿನಗಳ ರಾಜ್ಯ ಮಟ್ಟದ ಪ್ರಾದೇಶಿಕ ಜಾಥಾ, ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನವನ್ನು ಕೈಗೊಂಡಿದೆ ಎಂದು ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್ ವರಲಕ್ಷ್ಮಿ ಮಾತನಾಡಿ ಜನವರಿ 26 ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತಿದ್ದಾರೆ. ಅದಕ್ಕೆ ಕಾರ್ಮಿಕರು ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ರೈತಾಪಿ ಜೊತೆಗೆ ದೇಶವನ್ನೇ ಬಾಧಿಸುವ ಕೃಷಿ ಕಾಯ್ದೆ, ಕಾರ್ಮಿಕ ಸಂಹಿತೆ, ವಿದ್ಯುತ್ ಮಸೂದೆ ರದ್ದಾಗಲು, ಸಂವಿಧಾನದ ಆಶಯ ಎತ್ತಿ ಹಿಡಿಯಲು ರೈತ ಕಾರ್ಮಿಕ ವಿದ್ಯಾರ್ಥಿ ಯವಜನ ಮಹಿಳೆಯರಿಂದ ಗಣರಾಜ್ಯೋತ್ಸವ ಆಚರಣೆ ಯಶಸ್ವಿಗೊಳಿಸಲು, ನಿರುದ್ಯೋಗದ ವಿರುದ್ಧ ವಿದ್ಯಾರ್ಥಿ ಯುವಜನರು ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲಿಸಲು ಸಿಐಟಿಯು ಪ್ರಮುಖ ನಿರ್ಣಯ ಅಂಗೀಕರಿಸಿದೆ. ಈ ಸಭೆಯಲ್ಲಿ ಸಿಐಟಿಯು ರಾಜ್ಯ ಮುಖಂಡರಾದ ಕೆ.ಎನ್. ಉಮೇಶ್, ಪರಮೇಶ್ವರ್, ಆರ್.ಎಸ್. ಬಸವರಾಜ, ವಸಂತಾಚಾರಿ, ಬಾಲಕೃಷ್ಣ ಶೆಟ್ಟಿ, ಜಿ. ರಾಮಕೃಷ್ಣ, ಎಚ್.ಎಸ್. ಸುನಂದಾ, ಯಮುನಾ ಗಾಂವ್ಕರ್ ಸೇರಿದಂತೆ ಅನೇಕರಿದ್ದರು.
