ಚೆಕ್‌ ಬೌನ್ಸ್ ಪ್ರಕರಣ: ಎಂ.ಪಿ. ಕುಮಾರಸ್ವಾಮಿ ವಿರುದ್ಧದ ತೀರ್ಪು ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮೂಡಿಗೆರೆಯ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ರನ್ನು ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಾರ್ಚ್‌ 4ರಂದು ಎತ್ತಿ ಹಿಡಿದಿದೆ.

ಚಿಕ್ಕಮಗಳೂರಿನ ಎಚ್‌ ಆರ್‌ ಹೂವಪ್ಪ ಗೌಡ ಅವರು ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್‌ 138ರ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎತ್ತಿ ಹಿಡಿದಿದ್ದನ್ನು ಪ್ರಶ್ನಿಸಿ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.  ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟಾರೆ ₹1.38 ಕೋಟಿಯನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 13.02.2023ರಂದು ತೀರ್ಪು ನೀಡಿತ್ತು.

ಇದನ್ನೂ ಓದಿ: ಅವರು “ಅಸ್ಪೃಶ್ಯರು” ಎಂದು ಕರೆದವರು ನಿಜವಾಗಲೂ “ಅಸ್ಪೃಶ್ಯರೇ”…?

ಪ್ರತ್ಯೇಕ ಆದೇಶದಲ್ಲಿ ₹47.30 ಲಕ್ಷ, ₹2.75 ಲಕ್ಷ, ₹2.25 ಲಕ್ಷ, ₹2.75 ಲಕ್ಷ ₹30.25 ಲಕ್ಷ, ₹2.75 ಲಕ್ಷ, ₹2.30 ಲಕ್ಷ, ₹48.30 ಲಕ್ಷ ಪಾವತಿಸುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕುಮಾರಸ್ವಾಮಿ ಅವರಿಗೆ ಆದೇಶಿಸಿತ್ತು.

ಈ ಪೈಕಿ ಪ್ರತಿ ಪ್ರಕರಣದಲ್ಲಿ ತಲಾ ₹5 ಸಾವಿರ ರೂಪಾಯಿಯಂತೆ ಸರ್ಕಾರಕ್ಕೆ ವೆಚ್ಚದ ರೂಪದಲ್ಲಿ ಒಟ್ಟು ₹40 ಸಾವಿರ ರೂಪಾಯಿ ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿತ್ತು. ಇದರಲ್ಲಿ ಹೂವಪ್ಪ ಗೌಡರಿಗೆ ₹1,38,25,000 ಪಾವತಿಸಬೇಕಿದೆ. ಈ ತೀರ್ಪನ್ನು ಜನಪ್ರತಿನಿಧಿಗಳ ಸತ್ರ ನ್ಯಾಯಾಲಯವು 2023ರ ಜುಲೈ 19ರಂದು ಖಾತರಿಪಡಿಸಿತ್ತು.

ಪ್ರಕರಣದ ಹಿನ್ನೆಲೆ:

ದೂರುದಾರ ಹೂವಪ್ಪ ಗೌಡ ಮತ್ತು ಕುಮಾರಸ್ವಾಮಿ ಪರಿಚಿತರಾಗಿದ್ದು, ವಿಭಿನ್ನ ದಿನಾಂಕದಂದು ಕುಮಾರಸ್ವಾಮಿ ಅವರು ವೈಯಕ್ತಿಕ ತುರ್ತಿಗಾಗಿ ₹1,66,70,000 ಸಾಲ ಪಡೆದಿದ್ದರು. ಇದಕ್ಕಾಗಿ 08.09.2017 (₹80 ಲಕ್ಷ), 12.09. 2017 (₹85 ಲಕ್ಷ) ಮತ್ತು 15.09.2017 (₹1.7 ಲಕ್ಷ) ಚೆಕ್‌ಗಳನ್ನು ಹೂವಪ್ಪ ಗೌಡರಿಗೆ ನೀಡಿದ್ದರು. ನಿರ್ದಿಷ್ಟ ದಿನಾಂಕದಂದು ನಗದು ಮಾಡಲು ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿದಾಗ ಅವು ಬೌನ್ಸ್‌ ಆಗಿದ್ದವು.

ಹೀಗಾಗಿ, ಹೂವಪ್ಪ ಗೌಡರು ಕುಮಾರಸ್ವಾಮಿ ಅವರಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಿದ್ದರು. ಆದರೆ, ಹಣ ಹಿಂದಿರುಗಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಆದರೆ, ಹಣ ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಹೂವಪ್ಪಗೌಡರು ಕುಮಾರಸ್ವಾಮಿ ಅವರ ವಿರುದ್ಧ ಮೂರು ಖಾಸಗಿ ದೂರು ದಾಖಲಿಸಿದ್ದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾಜಿ ಶಾಸಕರಾಗಿದ್ದರು. ಇದೇ ವೇಳೆಗೆ 2018ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿ, ಸದ್ಯ ₹1,40,00,000 ಪಾವತಿಸಲಾಗುವುದು. ಉಳಿದ ಹಣವನ್ನು ಬಳಿಕ ನೀಡುವುದಾಗಿ ಹೇಳಿ ಹಣ ಪಾವತಿ ಮಾಡಿದ್ದರು. ಹೀಗಾಗಿ, ಹೂವಪ್ಪ ಗೌಡರು ತಾವು ಹೂಡಿದ್ದ ದಾವೆಗಳನ್ನು ಹಿಂಪಡೆದಿದ್ದರು.

ಆನಂತರ, ಕುಮಾರಸ್ವಾಮಿ ಅವರು ಹೂವಪ್ಪ ಗೌಡರನ್ನು ಸಂಪರ್ಕಿಸಿ, ತನಗೆ ತುರ್ತಿದ್ದು ₹68,00,000 ಸಾಲ ನೀಡುವಂತೆ ಇದಕ್ಕೆ ಮಾಸಿಕ ಶೇ. 2ರಷ್ಟು ಬಡ್ಡಿ ಪಾವತಿಸುವುದಾಗಿ ಕೋರಿದ್ದರು. ಅಲ್ಲದೇ, ಹಿಂದಿನ ಬಾಕಿ ₹26,70,000 ಪಾವತಿಸುವುದಾಗಿ ತಿಳಿಸಿದ್ದರು.

ಇದನ್ನು ನಂಬಿದ ಹೂವಪ್ಪ ಗೌಡರು ₹68,00,000 ಚೆಕ್‌ ಮೂಲಕ ಕುಮಾರಸ್ವಾಮಿಗೆ ಸಂದಾಯ ಮಾಡಿದ್ದರು. ಎರಡು ಬಾಕಿಗಳನ್ನು ಪಾವತಿ ಮಾಡುವಂತೆ ಕುಮಾರಸ್ವಾಮಿಗೆ ಹೂವಪ್ಪ ಗೌಡ ಸೂಚಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಕುಮಾರಸ್ವಾಮಿ ಅವರು ₹47 ಲಕ್ಷ, ₹2.50 ಲಕ್ಷ, ₹2 ಲಕ್ಷ, ₹2.50 ಲಕ್ಷ, ₹30 ಲಕ್ಷ, ₹2.5 ಲಕ್ಷ, ₹2 ಲಕ್ಷ, ₹48 ಲಕ್ಷ ಮೊತ್ತ ಉಲ್ಲೇಖಿಸಿ ಪ್ರತ್ಯೇಕವಾಗಿ ಎಂಟು ಚೆಕ್‌ಗಳನ್ನು ವಿಭಿನ್ನ ದಿನಾಂಕ ಉಲ್ಲೇಖಿಸಿ ನೀಡಿದ್ದರು.

ಕುಮಾರಸ್ವಾಮಿ ಖಾತೆಯಲ್ಲಿ ಹಣದ ಕೊರತೆಯಾಗಿ ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೂವಪ್ಪ ಗೌಡರು ಪ್ರತ್ಯೇಕವಾಗಿ ಎಂಟು ಪ್ರಕರಣ ದಾಖಲಿಸಿದ್ದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 168 | ವಯಸ್ಕರಿಗೂ ಪ್ರಿಯವಾಗುವ ಮಕ್ಕಳ ಕಿರುಚಿತ್ರ `ದಿ ರೆಡ್‌ ಬಲೂನ್‌’ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *