ಗೋಹತ್ಯಾ ನಿಷೇಧ ವಿಧೇಯಕದಿಂದ ಚರ್ಮೋದ್ಯಮದಲ್ಲಿ ಭಾರೀ ಉದ್ಯೋಗ ನಷ್ಟವಾಗಿದೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಗೋಮಾತೆಯ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಅತ್ಯಂತ ಉತ್ಸಾಹದಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರಿಂದಾಗಿ ರೈತರಿಗೆ, ಜನರಿಗೆ, ಕಾರ್ಮಿಕರಿಗೆ ಹಾಗೂ ಚರ್ಮ ಉದ್ಯಮಕ್ಕೆ ಎಷ್ಟು ಅನುಕೂಲವಾಗಿತ್ತು ಎಂಬುದನ್ನು ಅಧ್ಯಯನ ಮಾಡಿದ್ದಾರಾ?. ಇದೊಂದು ಕ್ರಾಂತಿಕಾರಿ ಬಿಲ್ ಎಂದು ಸಿಎಂ ಹಾಗೂ ಪಶುಸಂಗೋಪನಾ ಸಚಿವರು ಹೇಳಿಕೊಂಡಿದ್ದರು. ಗೋವುಗಳನ್ನು ತಂದು ಪೂಜಿಸಿ ವಿಧೇಯಕಕ್ಕೆ ಚಾಲನೆ ನೀಡಿದ್ದರು. ಆದರೆ ಈ ವಿಧೇಯಕ ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಹಲವು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ಆ ದಾಖಲೆಗಳು ಹಲವು ಆತಂಕಗಳನ್ನು ಸೃಷ್ಟಿಸಿವೆ. ಅವುಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ.

ಚರ್ಮೋದ್ಯಮಕ್ಕೆ ದೊಡ್ಡ ಹೊಡೆತ :  ಈ ಕಾಯ್ದೆಯಿಂದ ರಾಜ್ಯಕ್ಕೆ, ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಇದನ್ನು ಕ್ರಾಂತಿಕಾರಿ ಕಾಯ್ದೆ, ಗುಜರಾತ್ ಮಾಡೆಲ್ ಎಂದರು. ಆದರೆ ಈ ಕಾನೂನು ಯಾವ ದುಸ್ಥಿತಿಯಲ್ಲಿ ಇದೆ ಎಂಬ ಕನಿಷ್ಠ ಪ್ರಜ್ಞೆ ಇವರಿಗೆ ಇದೆಯೇ? ಈ ಕಾನೂನು ರೈತರು, ಚರ್ಮ ಉದ್ಯಮ ಕಾರ್ಮಿಕರು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದೆ.

ಮಂತ್ರಿಗಳು ಕ್ಯಾಬಿನೆಟ್ ಸಭೆಯ ಅಂಶಗಳನ್ನು ಸರಿಯಾಗಿ ಓದುವುದಿಲ್ಲ ಎಂದು ಕಾಣಿಸುತ್ತದೆ. ಹಣಕಾಸು ಇಲಾಖೆಯು ರಾಜ್ಯದ ಮೇಲೆ ಈ ಒತ್ತಡವನ್ನು ಹೇರಬೇಡಿ ಎಂದು ಹೇಳಿದೆ. ಇದರಿಂದ ರಾಜ್ಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ನಾಯಕರು ರಾಜ್ಯದ ಆರ್ಥಿಕ ಪರಿಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆಗಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅವರಿಗೆ ಈ ಕಾಯ್ದೆ ಜಾರಿಗೆ ತರಬೇಕು, ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ. ಸರ್ಕಾರದಲ್ಲಿ ಇರೋರಿಗೆ ಈ ಕಾಯ್ದೆಯ ಉದ್ದೇಶ ಏನಿದೆ ಎಂದು ಗೊತ್ತಿಲ್ಲ. ಈ ಕಾಯ್ದೆ ಬಂದ ನಂತರ ರೈತರಿಗೆ ಮಾರಕವಾಗಿದೆ. ಇಡೀ ವಿಶ್ವದಲ್ಲಿ ಶೇಕಡ 13ರಷ್ಟು ಚರ್ಮ ಉತ್ಪನ್ನಗಳು ಭಾರತದಿಂದ ಉತ್ಪಾದನೆ ಆಗುತ್ತಿದ್ದವು. ಕೋವಿಡ್ ಗೂ ಮುನ್ನ ದೇಶದ ಚರ್ಮ ವ್ಯಾಪಾರ ಉದ್ಯಮ 5.5 ಬಿಲಿಯನ್ ಡಾಲರ್ ಗಳಷ್ಟಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು. ಶೇಕಡಾ 9 ರಷ್ಟು ಪಾದರಕ್ಷೆಗಳು ಭಾರತದಲ್ಲಿ ತಯಾರಾಗುತ್ತಿದ್ದವು.

ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಹಣಕಾಸು ಸಮೀಕ್ಷೆ ಪ್ರಕಾರ, ರಾಜ್ಯದ ಚರ್ಮ ಉತ್ಪನ್ನ ರಫ್ತು 2017-18 ರಲ್ಲಿ 521.81 ಕೋಟಿಯಷ್ಟು ಇತ್ತು. 2018-19 562 ಕೋಟಿ, 2019-20ಯಲ್ಲಿ 502 ಕೋಟಿ, 2020-21 ಸಾಲಿನಲ್ಲಿ 160.84 ಕ್ಕೆ ಕುಸಿದಿದೆ. ಇದ್ಯಾವುದು ಕಾಂಗ್ರೆಸ್ ಮಾಹಿತಿ ಅಲ್ಲ. ರಾಜ್ಯ ಸರ್ಕಾರದ ಪ್ರಕಾರ, ಚರ್ಮಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿದ್ದಾರೆ. ಈ ಉದ್ಯಮದಲ್ಲಿ 3.5 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು ಇವುಗಳಲ್ಲಿ ಬಹುತೇಕ ಬಂದಾಗುವ ಹಂತಕ್ಕೆ ಬಂದಿವೆ. ಎಲ್ಲಾ ಕಾರ್ಮಿಕರು ಬೀದಿಗೆ ಬಂದಿದ್ದು ಈ ಬಗ್ಗೆ ಸರ್ಕಾರ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಒಂದಾದರೂ ಯೋಜನೆ ರೂಪಿಸಿದೆಯೇ? ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆಯೇ? ಆದರೂ ಈ ಕಾಯ್ದೆ ಜಾರಿಯನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ? ಎಂಬ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ.

ಸಂಪುಟ ಸಭೆ ಹೇಳಿಕೆ ಪ್ರಕಾರ, ಆರ್ಥಿಕ ಇಲಾಖೆಯು ಸರ್ಕಾರದ ಈ ನಿರ್ಧಾರದ ಹಿಂದೆ ಹಣಕಾಸಿನ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪರದಾಡುತ್ತಿರುವ ಸಮಯದಲ್ಲಿ ಇಂತಹ ಆರ್ಥಿಕ ಸಂಕಷ್ಟಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ. ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಬಜೆಟ್ ಗಾತ್ರ ಕಡಿಮೆ ಆಗಲಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯ ನಿರ್ಧಾರವನ್ನು ತಡೆ ಹಿಡಿಯುವ ಬಗ್ಗೆ ಆಲೋಚನೆ ನಡೆಸಬೇಕು ಎಂದು ವಿವರಿಸಿತ್ತು. ರಾಜ್ಯ ಹಣಕಾಸು ಇಲಾಖೆ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಮುಖ್ಯಮಂತ್ರಿಗಳು ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಬಹಳ ಅತ್ಯುತ್ತಮವಾಗಿದೆ ಎಂದು ಇತ್ತೀಚಿನ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ : ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಅಸಿಂಧು – ನ್ಯಾ. ವಿ.ಗೋಪಾಲಗೌಡ

ಆರ್ಥಿಕತೆ ಮೇಲೆ ಪರಿಣಾಮ : ಈ ಕಾಯ್ದೆಯಿಂದ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಮೊದಲ ವರ್ಷ ರಾಜ್ಯದಲ್ಲಿ 1,71,672 ಜಾನುವಾರು ನಿರ್ವಹಣೆಗೆ 464.17 ಕೋಟಿ, ಎರಡನೇ ವರ್ಷಕ್ಕೆ 3,05,337 ಜಾನುವಾರುಗಳ ನಿರ್ವಹಣೆಗೆ 170.13 ಕೋಟಿ, ಮೂರನೇ ವರ್ಷಕ್ಕೆ 4,04,269 ಜಾನುವಾರು ನಿರ್ವಹಣೆಗೆ 1032.90 ಕೋಟಿ, ನಾಲ್ಕನೇ ವರ್ಷಕ್ಕೆ 4,73,415 ಜಾನುವಾರು ನಿರ್ವಹಣೆಗೆ 1200.12 ಕೋಟಿ ಹಣ ಬೇಕಾಗುತ್ತದೆ. ಇದು ಕೇವಲ ಮೇವಿನ ಖರ್ಚು. ಇವರು ಪ್ರತಿ ಜಾನುವಾರಿನ ಮೇವಿಗೆ 70 ರೂ. ನಿಗದಿ ಮಾಡಿದ್ದಾರೆ. ಆದರೆ 150 ರೂ.ಗಿಂತ ಕಡಿಮೆ ಮೊತ್ತಕ್ಕೆ ಮೇವು ಸಿಗುತ್ತಿಲ್ಲ. ಒಟ್ಟು ಇವರು ಗೋಶಾಲೆಗಳಲ್ಲಿ ಜಾನುವಾರು ಸಾಕಲು 3512.32 ಕೋಟಿ ಬೇಕು. ಗೋಶಾಲೆ ಮೂಲಭೂತ ಸೌಕರ್ಯಕ್ಕಾಗಿ 1208.50 ಕೋಟಿ ಬೇಕು.

ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ 27,250 ಮೆ. ಟನ್ ಗೋಮಾಂಸ ಉತ್ಪತ್ತಿ ಕಡಿಮೆ ಆಗಲಿದೆ. ಇದನ್ನು ಕುರಿ, ಮೇಕೆ ಮಾಂಸದಿಂದ ಸರದಿಗೊಳಿಸಲು 20+1ರಂತೆ ಘಟಕಗಳನ್ನು 50%ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ. ಇದಕ್ಕೆ 519.36 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಿದೆ. ಇಲ್ಲಿಯವರೆಗೂ ಒಂದಾದರೂ ಘಟಕವನ್ನು ತೆಗೆದಿಲ್ಲ.

ಈ ಕಾಯ್ದೆಯಿಂದ 5280 ಕೋಟಿ ನಷ್ಟ ಆಗುತ್ತಿದೆ. ಈ ಇಲಾಖೆ ಬದುಕಿದೆಯಾ ಸತ್ತಿದೆಯಾ ಗೊತ್ತಿಲ್ಲ. ಮಂತ್ರಿಗಳು ಮಾಧ್ಯಮಗಳ ಮುಂದೆ ಗೋವು ಕರುಗಳಿಗೆ ಮುತ್ತು ನೀಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಇಲಾಖೆಯಲ್ಲಿ 7363 ಹುದ್ದೆಗಳಿದ್ದು, 5366 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಪರಿಷತ್ ನಲ್ಲಿ ಪ್ರಶ್ನೆ ಕೇಳಿದಾಗ, ಅವರು ಇದಕ್ಕೆ ಹಣಕಾಸು ಇಲಾಖೆ ಅನುಮತಿ ಬೇಕಿದೆ ಎಂದು ಹೇಳುತ್ತಾರೆ. ಆದರೆ ಈ ಕಾಯ್ದೆ ಜಾರಿಗೆ ಈ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಉದ್ಯೋಗ ನೀಡಲು ಮಾತ್ರ ಹಣಕಾಸು ಇಲಾಖೆ ಅನುಮತಿ ಬೇಕು ಎನ್ನುವಂತಾಗಿದೆ.

ಸರ್ಕಾರ 275 ಪಶು ಸಂಜೀವಿನಿ ಆಂಬುಲೆನ್ಸ್ ಖರೀದಿ ಮಾಡಿದ್ದು, ನಮ್ಮ 40% ಸರ್ಕಾರ ಎಷ್ಟು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಆಂಬುಲೆನ್ಸ್ ಖರೀದಿ ಮಾಡಿ ಅದಕ್ಕೆ ಚಾಲಕರ ನೇಮಕ ಮಾಡಿಲ್ಲ. ಚಾಲಕರು ಇಲ್ಲದ ಮೇಲೆ ಆಂಬುಲೆನ್ಸ್ ಖರೀದಿ ಮಾಡಿದ್ದು ಯಾಕೆ? ಕಮಿಷನ್ ಪಡೆಯಲಾ? ಈ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಗೋಮಾತೆ ಹೆಸರಲ್ಲೂ ಲೂಟಿ ಮಾಡುತ್ತಿದ್ದಾರೆ. ಗೋಮಾತೆ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ. ಗೋಶಾಲೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ 14-04-2 022ರಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿಗಳು ಹಣ ನೀಡದೆ 8.5% ಕಮಿಷನ್ ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪುಣ್ಯಕೋಟಿ ದತ್ತು ಯೋಜನೆ ಏನಾಯ್ತು?:  5 ಸಾವಿರ ಕೋಟಿ ಭರಿಸಲು ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿಜೆಪಿಯವರಿಗೆ ಅರಿವಾದಾಗ ಗೋವುಗಳನ್ನು ದತ್ತು ನೀಡುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಇದರ ಪ್ರಕಾರ ರಾಜ್ಯದ ಜನ ಗೋಶಾಲೆ ಗಳ ಹಸುಗಳ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಇದುವರೆಗೂ ಅವರ ಪ್ರಕಾರ 6 ಗೋಶಾಲೆ ಆರಂಭ ಮಾಡಿದ್ದು, ನನ್ನ ಪ್ರಕಾರ ಕೇವಲ ಮೂರು ಮಾತ್ರ. ಸಿಎಂ ಹಾಗೂ ಮಂತ್ರಿಗಳ ಕ್ಷೇತ್ರದಲ್ಲಿ ಒಂದೂ ಗೋಶಾಲೆ ಇಲ್ಲ. ಮಂತ್ರಿಗಳ ಕ್ಷೇತ್ರದಲ್ಲಿ 9 ಗೋಶಾಲೆಯಲ್ಲಿ 306 ಗೋವುಗಳಿವೆ. ಇದರಲ್ಲಿ ದತ್ತು ತೆಗೆದುಕೊಂಡಿರುವುದು 10. ಚಿಕ್ಕಬಳ್ಳಾಪುರದಲ್ಲಿ 2 ಗೋಶಾಲೆಯಲ್ಲಿ 4 ಜಾನುವಾರುಗಳಿವೆ. ಧಾರವಾಡ 5 ಗೋಶಾಲೆಯಲ್ಲಿ 22 ಜಾನುವಾರುಗಳಲ್ಲಿ 3 ಮಾತ್ರ ದತ್ತು ಪಡೆಯಲಾಗಿದೆ. ಹಾವೇರಿಯಲ್ಲಿ 2 ಗೋಶಾಲೆ ಇದ್ದು, 108 ಹಸುಗಳ ಪೈಕಿ ಕೇವಲ 4 ದತ್ತು ಪಡೆಯಲಾಗಿದೆ. ಉತ್ತರ ಕನ್ನಡದಲ್ಲಿ 8 ಗೋಶಾಲೆಯಲ್ಲಿ 594 ಜಾನುವಾರು ಪೈಕಿ 6 ಮಾತ್ರ ದತ್ತು ಪಡೆಯಲಾಗಿದೆ. ಮುಖ್ಯಮಂತ್ರಿಗಳಿಗೆ ಗಡವು ನೀಡುವ ಸಂಘಟನೆಗಳು ಎಲ್ಲಿ ಹೋಗಿವೆ? ಜವಾಬ್ದಾರಿ ನಿಭಾಯಿಸುವಾಗ ಓಡಿ ಹೋಗುವುದು ಏಕೆ? ನಮ್ಮ ರಾಜ್ಯದಲ್ಲಿ 177 ಗೋಶಾಲೆಯಲ್ಲಿ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಜಾನುವಾರು ಮಾತ್ರ. ಇದು ಬಿಜೆಪಿ ನಾಯಕರ ಯೋಗ್ಯತೆ. ಬಿಜೆಪಿ ಶಾಸಕರು ಮಂತ್ರಿಗಳು ಎಲ್ಲಿ ಹೋದರು? ಆರ್‌ಎಸ್‌ಎಸ್ ನವರು ಗೋಮಾತೆ ಮೇಲೆ ಪ್ರೀತಿ ತೋರುವವರು ಎಲ್ಲಿ ಹೋದರು?

ಪುಣ್ಯಕೋಟಿ ಯೋಜನೆ ಹಾಗೂ ಗೋಶಾಲೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಸರ್ಕಾರ ಹೇಳಿದ 14 ಕಡೆ ಗೋಶಾಲೆ ಇಲ್ಲ ಎಂದು ಹೇಳಿದೆ. ಗೋಶಾಲೆ ಕಾಗದದ ಮೇಲೆ ಇದ್ದಂತೆ ಇದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸಿಎಂ ಅವರು ತಮ್ಮ ಜನ್ಮದಿನದಂದು 11 ಹಸುಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆ 11 ಹಸುಗಳು ಎಲ್ಲಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಶಾಸಕರಿಗೆ ಗೋವು ದತ್ತು ಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿಎಂ ಮಾತಿಗೆ ಬೆಲೆ ಇಲ್ಲದೇ ಯಾರು ದತ್ತು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿ ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಬೇಕು ಎಂದು ಆದೇಶ ನೀಡುತ್ತಿದ್ದಾರೆ.

ಸರ್ಕಾರಿ ಸಿಬ್ಬಂದಿ ವೇತನದಲ್ಲಿ ಯಾಕೆ ಹಣ ಕಡಿತ ಮಾಡುತ್ತೀರಿ, ಬಿಜೆಪಿ ಶಾಸಕರ ವೇತನದಲ್ಲಿ ಕಡಿತ ಮಾಡಿ. ಬಿಜೆಪಿ ನಾಯಕರಿಗೆ 40% ಕಮಿಷನ್ ಆದಾಯ ಇರುವುದರಿಂದ ಇವರು ತಿಂಗಳ ವೇತನದಲ್ಲಿ 100% ರಷ್ಟು ಮೊತ್ತ ಗೋಶಾಲೆಗೆ ದಾನ ಮಾಡಲಿ. ಈ ಯೋಜನೆ ಯಶಸ್ವಿ ಜಾರಿಗೆ A ವೃಂದದ ಅಧಿಕಾರಿಗಳಿಗೆ ತಿಂಗಳಿಗೆ 11 ಸಾವಿರ, B ವೃಂದದ ಅಧಿಕಾರಿಗಳಿಗೆ ತಿಂಗಳಿಗೆ 4 ಸಾವಿರ, ಸಿ ವೃಂದದ ನೌಕರರಿಗೆ 400 ರೂ. ಹಾಗೂ ಡಿ ವೃಂದದವರಿಗೆ ದೊಡ್ಡ ಮನಸ್ಸು ಮಾಡಿ ವಿನಾಯಿತಿ ನೀಡಲಾಗಿದೆ.

ಕಳೆದ ಆರು ತಿಂಗಳಲ್ಲಿ 20 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ಸೋಂಕು ತಗುಲಿದೆ. ಇದರಲ್ಲಿ 11 ಸಾವಿರ ಜಾನುವಾರು ಸತ್ತಿರುವ ವರದಿ ಆಗಿದೆ. ಇದಕ್ಕೆ ಲಸಿಕೆ ಎಲ್ಲಿದೆ? ಈ ರೋಗದಿಂದ ಹಾಲು ಉತ್ಪಾದನೆಯಲ್ಲಿ 10%-12% ಕುಸಿತ ಆಗಿದೆ. ರಾಜ್ಯದಲ್ಲಿ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಈಗ 90 ಲಕ್ಷ ಲೀಟರ್ ಗೆ ಕುಸಿದಿದೆ. ಪ್ರತಿ ನಿತ್ಯ 4 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ ಆಗಿದೆ. ಈ ಮಧ್ಯೆ ಹಾಲಿನ ದರ ಏರಿಕೆ ಮಾಡಲಾಗಿದ್ದು ಇದು ರೈತರಿಗೆ ಸಿಗುತ್ತಿದೆಯೇ?

ಈ ಕಾಯಿಲೆಯಿಂದ ಪೊಲೀಸರು, ತಹಶೀಲ್ದಾರರು, ಸಂಘಟನೆಗಳಿಗೆ ಲಾಭ ಆಗಿದೆ. ಕಾರ್ಮಿಕರು, ಕೈಗಾರಿಕೆ, ರೈತರಿಗೆ ಲಾಭ ಇಲ್ಲ. ಹಾಗಾದರೆ ಈ ಕಾಯ್ದೆ ಜಾರಿಗೆ ತಂದಿದ್ದು ಯಾಕೆ? ನಿಮ್ಮ ಸರ್ಕಾರದ ಅಂಕಿ ಅಂಶ ನೀಡುತ್ತಿದ್ದೇನೆ. ಗೋಹತ್ಯೆ ನಿಷೇಧ ಕಾಯ್ದೆ ರೈತರು ಹಾಗೂ ಗೋಮಾತೆ ಉದ್ಧಾರಕ್ಕೆ ಜಾರಿ ಮಾಡಿಲ್ಲ. ಗೋಮತಕ್ಕಾಗಿ ಜಾರಿ ತಂದಿದ್ದೀರಿ. ಈ ಅಂಕಿ ಅಂಶಗಳು ಈ ಕಾಯ್ದೆ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

2.5 ಲಕ್ಷ ಉದ್ಯೋಗ ಖಾಲಿ ಇದೆ. ಅದನ್ನು ತುಂಬಲು, ಶಾಲೆ ಕಟ್ಟಡ, ಕುಡಿಯುವ ನೀರು ಪೂರೈಕೆ, ಅಂಗನವಾಡಿ ಕಟ್ಟಡ, ಶಾಲೆ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಾಗ ಸ್ಪೀಕರ್ ಅವರ ಬಳಿ ಒಂದೇ ಉತ್ತರ ಇರುತ್ತದೆ. ಅದು ಹಣಕಾಸು ಆಯೋಗದ ಅನುಮತಿ ಬೇಕು. ಅವರ ಜತೆ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಸರ್ಕಾರ ಈ ಕಾಯ್ದೆ ಹಿಂಪಡೆದು ರೈತರು, ಕಾರ್ಮಿಕರು ಬದುಕಲು ಬಿಟ್ಟು, ಕರ್ನಾಟಕ ರಾಜ್ಯದ ಸ್ಥಿತಿ ಸುಧಾರಣೆಗೆ ಒತ್ತು ನೀಡಿ ಎಂದು ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *