ಮೈಸೂರು: ದಸರಾ ಪ್ರಯುಕ್ತ, ವಸ್ತುಪ್ರದರ್ಶನ ಮೈದಾನದ ಬಳಿ ಬಲೂನ್ ಮಾರಾಟ ಮಾಡಲು ಕಲಬುರಗಿ ಮೂಲದ ಕುಟುಂಬದೊಂದಿಗೆ ಬಂದಿದ್ದ ಬಾಲಕಿಯನ್ನು (10) ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಮೃತದೇಹವು ಸಮೀಪದ ಚರಂಡಿಯಲ್ಲಿ ದೊರಕಿದೆ. ವ್ಯಾಪಾರ
ಶಂಕೆಯ ಮೇರೆಗೆ ನಜರಾಬಾದ್ ಠಾಣೆ ಪೊಲೀಸರು ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31) ಎಂಬಾತನನ್ನು ಬಂಧಿಸಿದ್ದಾರೆ. ಪೋಷಕರ ದೂರು ಆಧರಿಸಿ ಕೊಲೆ ಮತ್ತು ಪೋಕ್ಸೊ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಕಲಬುರಗಿಯ ಸೂಕ್ಷ್ಮ ಅಲೆಮಾರಿ ಸಮುದಾಯಕ್ಕೆ ಸೇರಿದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ಡೇರೆ ಹಾಕಿ ತಂಗಿದ್ದರು.
ಇದನ್ನೂ ಓದಿ: ಆಳುವವರ ಹಿಂದಿನ ರಾಜಕೀಯ ಬಯಲುಗೊಳಿಸಲು ಕಾರ್ಮಿಕ-ರೈತಾಪಿ ಸಖ್ಯತೆ ಬಲಗೊಳಿಸೋಣ – ಮೀನಾಕ್ಷಿಸುಂದರಂ
ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ಇವರು ವ್ಯಾಪಾರ ಮಾಡುತ್ತಿದ್ದರು. ಈ ಕುಟುಂಬಗಳಿಗೆ, ದಸರಾ ಹಬ್ಬವು ಕೇವಲ ಹಬ್ಬದ ಸಂಭ್ರಮವಾಗಿರಲಿಲ್ಲ, ದಸರಾದಲ್ಲಿ ಬಲೂನ್ಗಳು, ಆಟಿಕೆಗಳು ಮತ್ತು ಸಣ್ಣ ವಸ್ತುಗಳನ್ನು ಮಾರಾಟ ಮಾಡಿ ಜೀವನೋಪಾಯಕ್ಕಾಗಿ ಹಣ ಸಂಪಾದಿಸುತ್ತಿದ್ದರು.
ಈ ಪೈಕಿ ಒಂದು ಕುಟುಂಬಕ್ಕೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ರಾತ್ರಿ ವೇಳೆ ಕಾಣೆಯಾಗಿದ್ದಾಳೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬ, ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆ ಬಂದಿದೆ. ಆಗ ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಸ್ವಲ್ಪ ಸಮಯದ ನಂತರ ಬಾಲಕಿ ಡೇರೆಯಿಂದ ಸುಮಾರು 50 ಮೀಟರ್ ದೂರದಲ್ಲಿ ನಿರ್ಜೀವವಾಗಿ ಬಿದ್ದಿರುವುದು ನಮಗೆ ತಿಳಿಯಿತು. ಆಕೆಯ ದೇಹವು ಭಾಗಶಃ ಮಣ್ಣಿನ ರಾಶಿಯಲ್ಲಿ ಹೂತುಹೋಗಿತ್ತು ಎಂದು ಸಂತ್ರಸ್ತೆಯ ಸೋದರಸಂಬಂಧಿ ತಿಳಿಸಿದ್ದಾರೆ.
ಮಣ್ಣಿನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು, ಅಪ್ರಾಪ್ತೆ ಮೈ ಮೇಲೆ ಬಟ್ಟೆ ಇರದ ಕಾರಣ ಬಾಲಕಿ ಕುಟುಂಬ ಮತ್ತು ತನಿಖಾ ತಂಡದ ಸದಸ್ಯರು ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದರು. ಡಿಸಿಪಿ ಬಿಂದು ಮಣಿ, ಸುಂದರ್ ರಾಜ್ ಮತ್ತು ವಿಶೇಷ ಪೊಲೀಸ್ ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು.
ಅತ್ಯಾಚಾರ ಎಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಕೊಳ್ಳೇಗಾಲದಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕೃತ್ಯ ಎಸಗಿದ್ದ ವಿಕೃತ ಕಾಮುಕ ಮೈಸೂರಿನ ಖಾಸಗಿ ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಹೋಗಿದ್ದ. ಇತ್ತ ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ತನಿಖೆ ನಡೆಸುತ್ತಿದ್ದ ಪೊಲೀಸರು ಕೊಳ್ಳೇಗಾಲದಲ್ಲಿ ಬಂಧಿಸಿ, ಮೈಸೂರಿಗೆ ಕರೆತಂದಿದ್ದಾರೆ.
ಮದ್ಯದ ಚಟಕ್ಕೆ ಒಳಗಾಗಿರುವ ಕಾರ್ತಿಕ್ 4 ತಿಂಗಳ ಹಿಂದಷ್ಟೇ ಈತ ಜೈಲಿನಿಂದ ಬಿಡುಗಡೆಯಾಗಿದ್ದ. ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿ, 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ನೋಡಿ: ವಕೀಲ ಶೂ ಎಸೆದಿರುವುದು ಆಕಸ್ಮಿಕವಲ್ಲ, ಅದರ ಹಿಂದೆ ವ್ಯವಸ್ಥಿತವಾದ ಪಿತೂರಿಯಿದೆ – ಇಂದೂಧರ ಹೊನ್ನಾಪುರ
