ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ನ್ಯಾಯಸಮ್ಮತ ಚುನಾವಣೆಗೆ ಸಜ್ಜಾಗಿ : ರಾಜೀವ್‍ಕುಮಾರ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಜ್ಜಾಗುವಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಚುನಾವಣೆ ಪೂರ್ವ ಸಿದ್ದತೆ ಕುರಿತ ಸಭೆಯಲ್ಲಿ ಜಿಲ್ಲಾವಾರು ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಂದ ಪಡೆದು ಅಗತ್ಯ ಸಲಹೆ ಹಾಗೂ ನಿರ್ದೇಶನಗಳನ್ನು ನೀಡಿದರು.

ಅಧಿಕಾರಿಗಳು ಸಾರ್ವಜನಿಕರ ಸೇವಕರು ಮಾತ್ರ : 
ಕೆಲವು ಅಧಿಕಾರಿಗಳು ನಿರ್ದಿಷ್ಟ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಂದ ದೂರುಗಳು ಬಂದಿವೆ. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸೇವಕರೇ ಹೊರತು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಬಾರದು. ಹಾಗೊಂದು ವೇಳೆ ಕಂಡುಬಂದರೆ ಕಾನೂನು ರೀತಿ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಗಡಿಭಾಗಗಳ ಚೆಕ್‍ ಪೋಸ್ಟ್ ಗಳಲ್ಲಿ ಭದ್ರತೆ :
ಮತದಾರರ ಪಟ್ಟಿಯಿಂದ ಅನಗತ್ಯವಾಗಿ ಹೆಸರುಗಳನ್ನು ತೆಗೆದು ಹಾಕಿರುವುದರ ಬಗ್ಗೆ ದೂರು ಬಂದಿವೆ. ಮತದಾನ ಸಂವಿಧಾನ ನೀಡಿರುವ ಹಕ್ಕು ಇದರಿಂದ ಯಾವ ಪ್ರಜೆಗಳು ಅವಕಾಶ ವಂಚಿತರಾಗಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಗಡಿಭಾಗಗಳ ಚೆಕ್‍ ಪೋಸ್ಟ್ ಗಳಲ್ಲಿ ಭದ್ರತೆ ಹೆಚ್ಚಿಸುವುದು, ಹೊರರಾಜ್ಯಗಳಿಂದ ವಾಹನಗಳನ್ನು ತಪಾಸಣೆ ಮಾಡುವುದು, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಮತ್ತಿತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಹಣ, ಉಡುಗೊರೆ ಬಗೆಗಿನ ದೂರುಗಳ ಬಗ್ಗೆ ವಿಶೇಷ ಗಮನಹರಿಸಿ :
ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರು, ಹಣ, ನಗದು, ಉಡುಗೊರೆ ನೀಡುತ್ತಿರುವುದರ ಬಗ್ಗೆಯೂ ದೂರುಗಳು ಬರುತ್ತಿವೆ. ಈ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು. ಪಕ್ಷಪಾತ ಮಾಡದೆ ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯವನ್ನು ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಯಾಗಿದ್ದು, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕ್ಷೇತ್ರವಾರು ಮತಗಟ್ಟೆ ಸ್ಥಾಪನೆ, ಸೂಕ್ಷ್ಮ,ಅತಿಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ, ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಬೇಕಾದ ಸಿದ್ದತೆ ಮಾಡಿರುವ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ಪಡೆದುಕೊಳ್ಳಲಾಯಿತು.

ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ :
ಚುನಾವಣೆಗೆ ಅಗತ್ಯವಿರುವ ಭದ್ರತೆ ಒದಗಿಸುವ ಬಗ್ಗೆಯೂ ಪೊಲೀಸ್‌  ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಿದರೆ ಹೇಗೆ? ಅಥವಾ ಎರಡು ಹಂತದಲ್ಲಿ ಚುನಾವಣೆ ನಡೆಸಿದರೆ ಸೂಕ್ತವೇ ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆಯಾ ಜಿಲ್ಲೆಯಲ್ಲಿ ಪ್ರಮುಖವಾಗಿ ನಡೆಯುವ ಹಬ್ಬ, ಉತ್ಸವಗಳ ಮಾಹಿತಿಯೂ ಪಡೆಯಲಾಯಿತು. 34 ಜಿಲ್ಲಾ ಚುನಾವಣಾಧಿಕಾರಿಗಳಿಂದಲೂ ಮಾಹಿತಿ ಪಡೆದು ಚುನಾವಣೆ ನಡೆಸಲು ಚುನಾವಣಾ ಸಿಬ್ಬಂದಿಗೆ ಅಗತ್ಯ ತರಬೇತಿ, ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸೇರಿದಂತೆ ಸಮಗ್ರವಾಗಿ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ  : ಮತದಾರರನ್ನು ಸೆಳೆಯಲು ಸಚಿವ ಕೆ.ಸಿ. ನಾರಾಯಣಗೌಡ ಅವರಿಂದ ಭರ್ಜರಿ ಬಾಡೂಟ

ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಿನ್ನೆ ನೀಡಿರುವ ಅಭಿಪ್ರಾಯವನ್ನು ಆಧರಿಸಿ ಚರ್ಚೆ ನಡೆಸಲಾಗಿದೆ. ವಿರೋಧ ಪಕ್ಷದವರು ಮಾಡಿರುವ ಆರೋಪಗಳ ಕುರಿತಂತೆಯೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ಮೂರು ದಿನಗಳ ಭೇಟಿಗಾಗಿ ನಿನ್ನೆ ಆಗಮಿಸಿದ ಈ ತಂಡವು ವಿಧಾನಸಭೆ ಚುನಾವಣೆಗೆ ಸಂಬಂಸಿದಂತೆ ರಾಜಕೀಯ ಪ್ರತಿನಿಗಳೊಂದಿಗೆ ಸಭೆ ನಡೆಸಿ ಅವರ ಸಲಹೆ ಅಭಿಪ್ರಾಯವನ್ನು ಆಲಿಸಲಾಗಿತ್ತು.ಚುನಾವಣಾ ಆಯೋಗದ ಆಯುಕ್ತರಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್, ಉಪಾಯುಕ್ತರು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ ಮತದಾರರಿಗೆ ಆಶ್ವಾಸನೆ ನೀಡುವ ಮುನ್ನ ಈ ಕತೆಯನ್ನು ಒಮ್ಮೆ ಓದಿ

ವಿಧಾಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸುವತ್ತ ಸೀರೆ ಹಂಚವುದು ( ಹಾಸನ), ಬಾಡೂಟ ಮಾಡಿಸುವುದು, ಸೇರಿದಂತೆ ಕುಕ್ಕರ್‌ ಹಂಚಿರುವುದು ಹಾಸನ, ಮಂಡ್ಯ, ಕೊಡಗು, ಬೆಂಗಳೂರು ಮುಂತಾದ ಕಡೆಗಳಲ್ಲಿ ಕಂಡು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *