ಗಣರಾಜ್ಯೋತ್ಸವ ಪರೇಡ್‌: ದೇಶದ ಗಮನ ಸೆಳೆದ ಕರ್ನಾಟಕದ ಸ್ತಬ್ದಚಿತ್ರ

ನವದೆಹಲಿ: 73ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ನಡೆದ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಎಲ್ಲರ ಗಮನಸೆಳೆಯಿತು. ಬೆಂಗಳೂರಿನ ಅದಿತಿ ಉರಾಳ್​ ನೇತೃತ್ವದಲ್ಲಿ ಸ್ತಬ್ಧಚಿತ್ರ ಪ್ರದರ್ಶನ ನಡೆದಿದ್ದು, ಅದಿತಿ ಉರಾಳ್​ ಜೊತೆ 12 ಕಲಾವಿದರು ಹೆಜ್ಜೆ ಹಾಕಿದರು.

ಪರೇಡ್‌ನಲ್ಲಿ ಕರ್ನಾಟಕದಿಂದ ಜಾಗತಿಕ ಮಾನ್ಯತೆ ಗಳಿಸಿದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಶಶಿಧರ ಅಡಪ ಅವರ ನೇತೃತ್ವದ ತಂಡದಿಂದ ಈ ಸ್ತಬ್ಧಚಿತ್ರ ಅರಳಿದ್ದು, ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ವಿಷಯವಿಟ್ಟುಕೊಂಡು ಸ್ತಬ್ಧಚಿತ್ರ ರೂಪಿಸಲಾಗಿದೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕೆತ್ತನೆಯ ಕಲಾಕೃತಿ, ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿನ ಕಲಾಕೃತಿ, ಕಿನ್ನಾಳ ಕಲಾ ವಸ್ತುಗಳು, ಕಂಚಿನ ಪ್ರತಿಮೆಗಳು, ಚನ್ನಪಟ್ಟಣದ ಮೆರುಗೆಣ್ಣೆಯ ಆಟಿಕೆಗಳು, ಮರಗೆತ್ತನೆ ಮತ್ತು ಕುಂಬಾರಿಕೆ ಹಾಗೂ ಹಿಂಬದಿಯಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ಜತೆಗೆ ಮಾತೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರತಿಮೆ ಇತ್ತು. ಕಮಲಾ ಅವರು ಒಂದು ಗಂಧದ ಪೆಟ್ಟಿಗೆ, ನವಿಲಿನಾಕೃತಿಯ ಹಣೆಗಳು, ಸಂಡೂರಿನ ಬಾಳೆನಾರಿನ ಚೀಲಗಳನ್ನೊಳಗೊಂಡ ಬಾಗಿನ ನೀಡುತ್ತಿರುವಂತೆ ಚಿತ್ರಿಸಲಾಗಿತ್ತು. ಇವರು ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದವರಾಗಿದ್ದಾರೆ.

ರಾಜಪಥ್‍ನಲ್ಲಿ ಒಂದು ವಿಹಾಂಗಮ ನೋಟವನ್ನು ಪ್ರದರ್ಶಿಸಲಾಯಿತು. ನವ ಭಾರತದ ಮಿಲಿಟರಿ ಶಕ್ತಿ ಇಂದಿನ ಸಮಾರಂಭದಲ್ಲಿ ಅನಾವರಣಗೊಂಡಿತು. ಇದರೊಂದಿಗೆ ಪರೇಡ್‍ನಲ್ಲಿ ಹಲವು ರಾಜ್ಯಗಳ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಗರ ಕಣ್ಮನ ಸೆಳೆಯಿತು.

ಬೆಳಗ್ಗೆ 10:30 ಸುಮಾರಿಗೆ ಆರಂಭಗೊಂಡ ಪರೇಡ್ ಕಾರ್ಯಕ್ರಮ 12:15ಕ್ಕೆ ಮುಕ್ತಾಯಗೊಂಡಿತು. ಪ್ರತಿ ವರ್ಷ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿತ್ತು. ಈ ಬಾರಿ 30 ನಿಮಿಷ ತಡವಾಗಿ ಆರಂಭಗೊಂಡಿತು. ರಾಜಪಥ್‍ನಲ್ಲಿ ಮಂಜು ಆವರಿಸಿಕೊಂಡಿದ್ದ ಕಾರಣ ಈ ಬಾರಿ ಕಾರ್ಯಕ್ರಮವನ್ನು ಪೂರ್ವನಿಗದಿಯಂತೆ 10:30ಕ್ಕೆ ಆರಂಭಿಸಲಾಯಿತು.

ಕೊರೊನಾದಿಂದಾಗಿ ಕಳೆದ ಬಾರಿಯಂತೆ ಈ ವರ್ಷ ಕೂಡಾ ಯಾವುದೇ ವಿದೇಶಿ ಮುಖ್ಯ ಅತಿಥಿಗಳಿಗೆ ಆಹ್ವಾನ ನೀಡಿರಲಿಲ್ಲ. ಈ ಮೂಲಕ ಸತತ 2ನೇ ವರ್ಷ ಯಾವುದೇ ವಿದೇಶಿ ಅತಿಥಿ ಗಣ್ಯರಿಲ್ಲದೆ, ಗಣರಾಜ್ಯೋತ್ಸವದ ಆಚರಣೆ ನಡೆಯಿತು.

ಈ ಸಮಾರಂಭದಲ್ಲಿ ಮೊಟ್ಟ ಮೊದಲ ಬಾರಿಗೆ 75 ವಿಮಾನಗಳು ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ಸ್ಪರ್ಧಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಪ್ರತಿ 75 ಮೀಟರ್ ಅಂತರದಲ್ಲಿ 10 ದೊಡ್ಡ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳದಿಂದ ದೂರ ಕುಳಿತಿರುವವರಿಗೆ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಪರೇಡ್‍ನಲ್ಲಿ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಯಿತು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶಕ್ಕೆ ನೀಡಲಾಗಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿ ವೀಕ್ಷಕರ ಸಂಖ್ಯೆಯನ್ನು 5 ರಿಂದ 8 ಸಾವಿರ ಪ್ರೇಕ್ಷಕರಿಗೆ ಮಾತ್ರ ಮಿತಿಗೊಳಿಸಲಾಗಿತ್ತು. ಕಳೆದ ವರ್ಷ 25 ಸಾವಿರ ಜನರು ಪರೇಡ್ ವೀಕ್ಷಿಸಿದ್ದರು.

ಪರೇಡ್ ನಲ್ಲಿ ಸಾಗಿದ 25 ಸ್ತಬ್ಧಚಿತ್ರಗಳು…

12 ರಾಜ್ಯ, 9 ಕೇಂದ್ರ ಸಚಿವಾಲಯಗಳು, 2 ಡಿಆರ್‌ಡಿಒ, ವಾಯುಪಡೆ ಮತ್ತು ನೌಕಾಪಡೆಯಿಂದ ತಲಾ ಒಂದು ಟ್ಯಾಬ್ಲೋ ಸೇರಿ ಒಟ್ಟು 25 ಟ್ಯಾಬ್ಲೋಗಳು ಪರೇಡ್‍ನಲ್ಲಿ ಸಾಗಿದವು. ಪರೇಡ್‍ನಲ್ಲಿ, ಸಿಆರ್‌ಪಿಎಫ್, ಎಸ್‍ಎಸ್‍ಬಿ ಸಿಬ್ಬಂದಿಯಿಂದ ಶೌರ್ಯ ಪ್ರದರ್ಶನ ನಡೆಯಿತು. ದೆಹಲಿ ಪೊಲೀಸರು, ಎನ್‍ಸಿಸಿ ಸ್ಕ್ವಾಡ್ ಸಹ ಪರೇಡ್ ನಲ್ಲಿ ಭಾಗಿಯಾದರು.

ವಾಯುಪಡೆ, ನೌಕಾಪಡೆ ಮತ್ತು ಸೇನೆಯ 75 ವಿಮಾನಗಳು ಗ್ರ್ಯಾಂಡ್ ಫ್ಲೈಪಾಸ್ಟ್‍ನಲ್ಲಿ ಭಾಗಿಯಾದರು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಅಮೃತಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿ ಎಂಬಂತೆ ಗಣರಾಜ್ಯೋತ್ಸವದಲ್ಲಿ 17 ಜಾಗ್ವಾರ್ ಹೋರಾಟಗಾರರು ಭಾಗವಹಿಸಿದರು. ರಾಜಪಥ್‍ನ ಮೇಲ್ಭಾಗದಲ್ಲಿ 75ರ ಆಕೃತಿ ರಚನೆ ಮಾಡಲಾಗಿತ್ತು.

ಪರೇಡ್ ಮಾರ್ಗವನ್ನೂ ಕಡಿತ

ಪರೇಡ್‌ ಮಾರ್ಗವು ಈ ಹಿಂದೆ 8.3 ಕಿಮೀ ಇದ್ದುದ್ದನ್ನು 3.3 ಕಿಮೀಗೆ ಇಳಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಪರೇಡ್‍ನಲ್ಲಿ 965 ಮತ್ತು 1971 ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು, ಹಳೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳು, ಹಳೆಯ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಸ್ಥಾನದಲ್ಲಿ ಹೊಸ ಹೊಸ ವಿಷಯಗಳನ್ನು ಕೂಡಾ ಪ್ರದರ್ಶನಕ್ಕೆ ಇಡಲಾಗಿತ್ತು. ಹೀಗೆ ಹತ್ತು ಹಲವು ವೈಶಿಷ್ಟ್ಯಗಳ ಸಂಭ್ರಮಕ್ಕೆ ರಾಜಪಥ್ ವೇದಿಕೆಯಾಯಿತು.

Donate Janashakthi Media

Leave a Reply

Your email address will not be published. Required fields are marked *