49ನೇ ವಯಸ್ಸಿನಲ್ಲಿ ವಿಶ್ವದ ಎತ್ತರದ ಶಿಖರ ಏರಿದ ಕರ್ನಾಟಕದ ಮೊದಲಿಗ ಸುನಿಲ್ ಕೊರಟಗೆರೆ ನಟರಾಜ್

ಜ್ಯೋತಿ ಶಾಂತರಾಜು

ಇವರೊಬ್ಬ ಅಪರೂಪದ ಸಾಧಕ. ಕೆಲಸ ಹೆಂಡತಿ ಮಕ್ಕಳು ಮನೆ ಎಂದು ಇರಬಹುದಾದ ವಯಸ್ಸಿನಲ್ಲಿ ಬೆಟ್ಟ ಹತ್ತುವುದಂದರೆ ಸಾಮಾನ್ಯವಲ್ಲ. ಇವರು ಹತ್ತಿದ್ದೂ ಸಾಮಾನ್ಯ ಬೆಟ್ಟವಲ್ಲ. ಸಮುದ್ರ ಮಟ್ಟದಿಂದ ಬರೋಬ್ಬರಿ 29029 ಮೀಟರ್ ಎತ್ತರವಿರುವ ಜಗತ್ತಿನ ಅತ್ಯಂತ ಎತ್ತರದ ಶಿಖರವೆಂದೇ ಹೆಸರಾದ ದೈತ್ಯ ಪರ್ವತ ಮೌಂಟ್ ಎವರೆಸ್ಟ್. ಇಂತಹ ವಿರಳ ಸಾಧಕರ ಹಾದಿ ಅವರ ಮಾತಿನಲ್ಲಿ ಇವತ್ತಿನ ನಿಮ್ಮ ಓದಿಗೆ.

ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಮಂಗಳ, ತಂದೆ ನಟರಾಜ್. ನಮ್ಮ ತಂದೆ ತಾಯಿಗೆ ನಾನೊಬ್ಬನೇ ಮಗ. ನಾನು ಜಿಂದಾಲ್ ಪಬ್ಲಿಕ್ ಶಾಲೆಯಲ್ಲಿ ಹೈಸ್ಕೂಲಿನವರೆಗೆ ಓದಿದೆ. ನನ್ನ ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ನಮ್ಮ ತಂದೆ ಅಪಘಾತದಲ್ಲಿ ತೀರಿಕೊಳ್ಳುತ್ತಾರೆ. ನಂತರದಲ್ಲಿ ನನ್ನನ್ನು ಸಾಕಿ ಸಲಹಿದ್ದು ನಮ್ಮ ತಾಯಿ ಮತ್ತು ತಾತ ಅಜ್ಜಿ. ನಂತರ ಮೈಸೂರಿನಲ್ಲಿದ್ದುಕೊಂಡು ಚಿಕ್ಕಪ್ಪ ಚಿಕ್ಕಮ್ಮನ ಆಶ್ರಯದಲ್ಲಿ ಪಿ.ಯು.ಸಿ. ಮುಗಿಸಿಕೊಂಡು ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1996ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದೇನೆ. ಆಗಲೇ ಕೆಲಸಕ್ಕೆ ಸೇರಿಕೊಂಡು ನಿಧಾನವಾಗಿ ಒಳ್ಳೊಳ್ಳೆ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡೆ. ಎರಡು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಮತ್ತೆ ಭಾರತಕ್ಕೆ ಮರಳಿ ಬಂದೆ. 2001ರಲ್ಲಿ ದಿವ್ಯ ಎಂಬುವವರ ಜೊತೆಗೆ ಮದುವೆಯಾಯಿತು. ನಮಗೆ ದರ್ಪಣ್, ರಕ್ಷಿತಾ ಎಂಬ ಇಬ್ಬರು ಮಕ್ಕಳಿದ್ದಾರೆ. 2007ರಲ್ಲಿ ಸದ್ಗುರುಗಳನ್ನು ಅನುಸರಿಸಲು ಪ್ರಾರಂಭಮಾಡಿದೆ. ಅವರು ಈಶಾ ಫೌಂಡೇಶನ್ ನಿಂದ ಮಾಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅವರು ಹೇಳಿಕೊಟ್ಟ ಶಾಂಭವಿ ಮಹಾಮುದ್ರ ಕಲಿತುಕೊಂಡೆ. ಅದನ್ನು ನಾನು ಆಗಿನಿಂದಲೂ ಇಲ್ಲಿಯವರೆಗೆ ಅಭ್ಯಾಸ ಮಾಡುತ್ತಿದ್ದೇನೆ. ಒಮ್ಮೆ ಸದ್ಗುರುಗಳ ಜೊತೆ 2011ರಲ್ಲಿ ಕೈಲಾಸ ಮಾನಸ ಸರೋವರಕ್ಕೆ ಹೋಗಿದ್ದೆವು. ಕಾಠ್ಮಂಡುವಿನಲ್ಲಿ ಎರಡು ದಿನ ಉಳಿದುಕೊಂಡೆವು. ಆಗ ಸುದ್ಗುರುಗಳು ಇಲ್ಲೊಂದು ಮೌಂಟೈನ್ ಫ್ಲೈಟ್ ಇದೆ ಆ ಫ್ಲೈಟ್ ಬುಕ್ ಮಾಡಿದ್ರೆ ಎವರೆಸ್ಟ್ ಸುತ್ತ ತೋರಿಸಿಕೊಂಡು ಬರುತ್ತಾರೆ. ಅದನ್ನು  ನೋಡಲು ತುಂಬ ಚೆನ್ನಾಗಿರುತ್ತದೆ.  ನೋಡಿ, ಸಮಯ ಇದ್ರೆ ಹೋಗಿ ಬನ್ನಿ ಅಂದಿದ್ರು. ನಾವೆಲ್ಲ ಇಂಟರೆಸ್ಟ್ ಆಗಿದೆ ಅಂತ ಫ್ಲೈಟ್ ಟಿಕೆಟ್ ತಗೊಂಡು ಮಾರನೇ ದಿನ ಬೆಳಗ್ಗೆ 6 ಗಂಟೆಗೆಲ್ಲ ವಿಮಾನ ನಿಲ್ದಾಣಕ್ಕೆ ಹೋದೆವು. ಎವರೆಸ್ಟ್ ಮೇಲೆ ತುಂಬಾ ಗಾಳಿ, ಹವಾಮಾನ ವೈಪರೀತ್ಯದಿಂದಾಗಿ ಫ್ಲೈಟ್ ಕ್ಯಾನ್ಸಲ್ ಆಗಿತ್ತು. ಆಗ ನನಗೆ ಬಂದ ಮೊದಲ ಯೋಚನೆ ಎಂದರೆ ನಾನು ಫ್ಲೈಟ್ ನಿಂದ ಯಾಕೆ ನೋಡಬೇಕು. ಎವರೆಸ್ಟ್ ಹತ್ತಿ ಅದರ ಮೇಲಿಂದಲೇ ಪ್ರಪಂಚ ನೋಡೋಣ ಎಂಬ ಆಲೋಚನೆ ಬಂತು. ಆಗ ನನಗೆ ಬಂದ  ಪ್ರತಿಯೊಂದು ಆಲೋಚನೆಗಳಲ್ಲಿ, ಪದಗಳಲ್ಲಿ ತುಂಬಾ ಶಕ್ತಿ ಇತ್ತು. ನನಗೆ ಬಂದ ಆ ಆಲೋಚನೆಯ ಬಗ್ಗೆ ಯಾವತ್ತೂ ಅನುಮಾನಿಸಲಿಲ್ಲ. ಆ ಕ್ಷಣಗಳೇ ನಾನು ಮೌಂಟ್ ಎವರೆಸ್ಟ್ ಹತ್ತಲು ಸ್ಫೂರ್ತಿ.

ನಮ್ಮಲ್ಲಿ ಎಷ್ಟೋ ಜನರು ದೊಡ್ಡ ದೊಡ್ಡ ಕನಸು ಕಾಣುತ್ತೇವೆ. ಮರುಕ್ಷಣವೇ ಋಣಾತ್ಮಕವಾಗಿ ಯೋಚಿಸುತ್ತೇವೆ. ಆದರೆ ನಾನು ಹಾಗೆ ಮಾಡಲಿಲ್ಲ. ಸುಪ್ತ ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡರೆ ಖಂಡಿತ ಯಾವುದೂ ಅಸಾಧ್ಯವಲ್ಲ. 2011ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನೇರಲು ನಿರ್ಧಾರ ಮಾಡಿದೆ. ನನಗಾಗ ಮೂವತ್ತೆಂಟು ವರ್ಷಗಳು. ನನ್ನ ಕನಸು ನನಸಾಗಲು ಹನ್ನೊಂದು ವರ್ಷಗಳಾಯ್ತು. ಎಷ್ಟೋ ಜನರು ಒಳ್ಳೊಳ್ಳೆ ಕನಸ್ಸು ಕಾಣುತ್ತಾರೆ. ಅದಕ್ಕೆ ತುಂಬ ಕಷ್ಟನೂ ಪಡುತ್ತಾರೆ. ಕೆಲವೊಮ್ಮೆ ತುಂಬ ಸಮಯ ತೆಗೆದುಕೊಂಡು ಕೈ ಚೆಲ್ಲುತ್ತಾರೆ. ಈಗಿನ ಕಾಲದವರಿಗೆ ತಾಳ್ಮೆ ಇಲ್ಲ. ಇವತ್ತು ಕನಸು ಕಂಡು ನಾಳೆಯೇ ನನಸಾಗಬೇಕು ಅಂದಾಗ ಅದು ಸಾಧ್ಯವಾಗುವುದಿಲ್ಲ.

ದೊಡ್ಡ ಕನಸಿನೊಂದಿಗೆ ಕೈಲಾಸ ಮಾನಸ ಸರೋವರ ಟ್ರಿಪ್ ಮುಗಿಸಿಕೊಂಡು ಮನೆಗೆ ಬಂದೆ. ಒಂದೆರಡು ವರ್ಷ ಮೌಂಟ್ ಎವರೆಸ್ಟ್ ಬಗ್ಗೆ ನಾನು ಯೋಚನೆ ಮಾಡಲಿಲ್ಲ. ಆಮೇಲೆ ಯೋಚನೆ ಬರಲು ಶುರುವಾಯ್ತು. ಒಮ್ಮೆ ನಮ್ಮ ಸುಪ್ತ ಮನಸ್ಸಿನಲ್ಲಿ ಸ್ಟ್ರಾಂಗ್ ಆಗಿ ಕುಳಿತುಕೊಂಡರೆ ಅದು ತಂತಾನೆ ಕೆಲಸ ಮಾಡಲು ಪ್ರೆರೇಪಿಸುತ್ತಿರುತ್ತದೆ. 2013ರಲ್ಲಿ ಮೌಂಟ್ ಎವರೆಸ್ಟ್ ಶಿಖರದ ಬಗ್ಗೆ ಹುಡುಕಾಟ, ಮಾಹಿತಿ ಸಂಗ್ರಹಣೆ ಮಾಡಿದಾಗ ತಿಳಿದದ್ದು ಇದು ತುಂಬಾನೇ ಖರ್ಚುದಾಯಕ. 25 ರಿಂದ 35 ಲಕ್ಷ ಹಣ ಬೇಕಿತ್ತು. ಹಾಗಿದ್ದರೆ, ಈಗ ನಾನು ಎವರೆಸ್ಟ್ ಹತ್ತಬೇಕಾದರೆ ಮೊದಲ ಹಂತ ಏನು? ಆರೋಗ್ಯವಾಗಿರಬೇಕು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರಬೇಕು. ಇದೆಲ್ಲ ಆಗಿ ಆರ್ಥಿಕವಾಗಿ ಸಬಲವಾಗಿಲ್ಲವಾದರೆ  ನಿರಾಸೆಯಾಗುತ್ತದೆ. ಎಂದು, ಮೊದಲು ನಾನು ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದೆ. ಆಗ ನಾನಿದ್ದದ್ದು ಮ್ಯಾನೇಜರ್ ಹಂತದಲ್ಲಿ. ನನಗೆ ಬರುತ್ತಿದ್ದ ಸಂಬಳ ಕಡಿಮೆಯಿತ್ತು. ಕುಟುಂಬ ನಿರ್ವಹಣೆಯ ಜೊತೆಗೆ ನನ್ನ ಕನಸಿಗಾಗಿ ದುಡಿಯಬೇಕಿತ್ತು.  ಹಾಗಾಗಿ ಮುಂದಿನ ಹಂತಕ್ಕೆ ಹೋಗಲು ಹೆಚ್ಚಿನ ಕೌಶಲ್ಯವನ್ನು ಬೆಳೆಸಿಕೊಂಡು ಕೆಲಸ ಬದಲಾಯಿಸಿದೆ. ಅಲ್ಲಿಂದ ನನ್ನ ಆದಾಯ ಹೆಚ್ಚಾಯ್ತು. ನನ್ನದು ಓಡಾಟದ ಕೆಲಸವಾಗಿತ್ತು. ಹಾಗಾಗಿ ಪ್ರಪಂಚ ಸುತ್ತಿದೆ. ಎಲ್ಲದಕ್ಕೂ ಯೋಜನೆಯೊಂದನ್ನು ಮಾಡಿ,  ಅದರಂತೆ ತಯಾರಿ ಮಾಡಿಕೊಂಡು ನನ್ನ ನಿವೃತ್ತಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ನನ್ನ ಉಳಿತಾಯ ಪ್ರಾರಂಭ ಮಾಡಿದೆ. ವೀಸಾಗೆ  ಅರ್ಜಿ ಹಾಕಿದೆ. 2020ರ ವೇಳೆಗೆ ಆರ್ಥಿಕವಾಗಿ ಸದೃಢವಾಗಿದ್ದೆ. ಜೊತೆಗೆ ಇನ್ಶೂರೆನ್ಸ್ ಮಾಡಿಸಿದೆ. ಅದಕ್ಕೆ ಬೇಕಾದ ಬಟ್ಟೆಗಳು, ಬೂಟುಗಳು, ಸುರಕ್ಷಿತ ಸಲಕರಣೆಗಳನ್ನು ತೆಗೆದುಕೊಂಡೆ.

ಬೇಕಾದ ಹಣ ಹೊಂದಿಸಿಕೊಂಡ ನಂತರ ದೈಹಿಕವಾಗಿ ಗಟ್ಟಿಯಾಗಬೇಕಿತ್ತು. ಏಕೆಂದರೆ 95ಕೆಜಿ ದೇಹದ ತೂಕವಿತ್ತು. ಟ್ರಾವೆಲ್ ಜಾಬ್ ನನ್ನದಾಗಿದ್ದರಿಂದ ದೈಹಿಕ ವ್ಯಾಯಾಮ ಮಾಡೋಕೂ ಆಗುತ್ತಿರಲಿಲ್ಲ. 2018ರಿಂದ ನಿರಂತರವಾಗಿ ಆರೋಗ್ಯದ ಕಡೆಗೆ ಗಮನ ಹರಿಸಿದೆ. ಸುಮಾರು ಒಂದೂವರೆ ವರ್ಷದಲ್ಲಿ ದೇಹದ ತೂಕ 65 ರಿಂದ 68 ಕೆಜಿಗೆ ಬಂತು. ಆಗ ಫಿಸಿಶಿಯನ್ ಅವರ ಸಲಹೆಯ ಮೇರೆಗೆ ಬೆಳಗ್ಗೆ ಹೊತ್ತು ಮನೆಯಲ್ಲಿ ಮಾಡಿದ ತಿಂಡಿ, ಮಧ್ಯಾಹ್ನ ಮಿತಿಯಾದ ಊಟ, ರಾತ್ರಿ ಹೊತ್ತು ಹಸಿ ತರಕಾರಿಗಳನ್ನು ತಿನ್ನುತ್ತಿದ್ದೆ. ಸ್ವಲ್ಪ ದಿನ ಕಷ್ಟವಾಯ್ತು. ದಿನಗಳೆದಂತೆ ಅಭ್ಯಾಸವಾಯ್ತು. ತುಂಬ ಜನ ಹೇಳಿದ್ರು ರಾತ್ರಿ ಹೊತ್ತು ತರಕಾರಿ ತಿಂದ್ರೆ ಬೆಳಗ್ಗೆ ಶಕ್ತಿ ಇರೋದಿಲ್ಲ ಅಂತ. ಅವರಿಗೆಲ್ಲ ನನ್ನ ಉತ್ತರ ರಾತ್ರಿ ತರಕಾರಿ ತಿಂದು ಬೆಳಗ್ಗೆ 40 ಕಿ.ಮೀ. ಓಡಬಲ್ಲೆ ಎಂಬುದು.

ಡಯಟ್ ಜೊತೆಗೆ ವ್ಯಾಯಾಮ, ರನ್ನಿಂಗ್, ಜಿಮ್ ಗೆ ಹೋಗಲು ಪ್ರಾರಂಭ ಮಾಡಿದೆ. ರನ್ನಿಂಗ್ ಮಾಡಲು ಆಗುತ್ತಿರಲಿಲ್ಲ. ದೇಹದ ತೂಕದಿಂದ ಕಾಲು ನೋವು ಬರುತ್ತಿತ್ತು. ಹಾಗಾಗಿ ಎರಡು ವರ್ಷ ರನ್ನಿಂಗ್ ಮಾಡಲಿಲ್ಲ. ಆದ್ದರಿಂದ ದೇಹದ ತೂಕ ಕಡಿಮೆ ಮಾಡಿಕೊಂಡು ರನ್ನಿಂಗ್ ಸ್ಟಾರ್ಟ್ ಮಾಡಿದೆ. ಇದರಿಂದ ಹೃದಯ ಮತ್ತು ಶ್ವಾಸಕೋಶದ ಕ್ಷಮತೆ ಹೆಚ್ಚಾಯ್ತು. 2021ರಲ್ಲಿ ನನಗೆ ಕೋವಿಡ್ ಬಂದು ನನ್ನ ಟ್ರಾವೆಲ್ ಕೆಲಸ ಎಲ್ಲ ನಿಂತು ಹೋಯ್ತು. ಅದರಿಂದ ಬೇಗ ಚೇತರಿಸಿಕೊಂಡೆ. ಆ ಸಮಯದಲ್ಲಿ ನನ್ನ ದೈಹಿಕ ಕ್ಷಮತೆಯ ಬಗ್ಗೆ ಹೆಚ್ಚು ಗಮನ, ಸಮಯ ಕೊಡಲು ಸಾಧ್ಯವಾಯ್ತು. ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದೆ. ನನ್ನ 30ನೇ ವಯಸ್ಸಿನಲ್ಲೂ ಇಲ್ಲದ ಫಿಟ್ನೆಸ್ 48ರ ವಯಸ್ಸಿನಲ್ಲಿ ಇತ್ತು. ಸೂಪರ್ ಫಿಟ್ ಅನ್ನಿಸ್ತಿತ್ತು. 2021ರಲ್ಲಿ ಹಿಮಾಚಲ ಪ್ರದೇಶ ನೋಡಬೇಕು ಅಂತ ಮೊದಲ ಸಲ ಟ್ರೆಕ್ಕಿಂಗ್ ಹೋದೆ. ಯುವಕರ ಜೊತೆಗೆ ಹೋದರೆ ನನ್ನ ಅವರೊಂದಿಗೆ ಹೋಲಿಸಿಕೊಳ್ಳಬಹುದು. ನನ್ನ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಹುದು ಎಂದು 24-25ರ ವಯಸ್ಸಿನವರ ಜೊತೆಗೆ ಹೋದೆ. ಆಗಲೂ ನಾನು ಅವರಿಗಿಂತಲೂ  ಗಟ್ಟಿಯಾಗಿದ್ದೆ ಮತ್ತು ಸಾಮರ್ಥ್ಯವುಳ್ಳವನಾಗಿದ್ದೆ. ಆ ನಂತರ ಮಾನಸಿಕ ಆರೋಗ್ಯ ಬಲಪಡಿಸಿಕೊಳ್ಳಬೇಕಿತ್ತು. ದೈಹಿಕ ಸಾಮರ್ಥ್ಯ 30% ಆದರೆ, ಉಳಿದ 70% ನಮ್ಮ ಮನಸ್ಸಿನ ಶಕ್ತಿಗೆ ಸಂಬಂಧಿಸಿದ್ದು. ನಾವು ಧನಾತ್ಮಕವಾಗಿ ಚಿಂತನೆ ಮಾಡಬೇಕು. ಮನಸ್ಸು ಖಾಲಿ ಎನಿಸಿದಾಗ ಧೈರ್ಯ ಮಾಡಿ ಇನ್ನೂ ಎರಡು ಹೆಜ್ಜೆ ಹಾಕುವುದು ತುಂಬಾ ಮುಖ್ಯ.

ನಂತರ ಬೆಂಗಳೂರಿನ Randonars Club ಅಲ್ಲಿ ಸೈಕ್ಲಿಂಗ್ ಮಾಡಲು ಹೋಗುತ್ತಿದ್ದೆ. 600 ಕಿ.ಮೀ. ದೂರವನ್ನು 40 ಗಂಟೆಯೊಳಗೆ ಮುಗಿಸಬೇಕಿರುತ್ತದೆ. ಅದರಲ್ಲಿ ಗೆದ್ದರೆ ಒಂದೊಳ್ಳೆ ಮೆಡಲ್ ಕೊಡುತ್ತಾರೆ. ಈ ತರಹದ ಈವೆಂಟ್ಗಳನ್ನು ಆಗಾಗ ಮಾಡುತ್ತಿದ್ದರು. ಅದರಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ನನಗೆ ಮಾನಸಿಕ ಸಹಿಷ್ಣುತೆ ಬೆಳೆಯಿತು. ಲಡಾಖ್ ಗೆ ಹೋಗಿ ಸೋಲೋ ರೈಡ್ ಮಾಡಬೇಕು ಅಂದುಕೊಂಡೆ. ಮನಸ್ಸನ್ನು ಧೃಡವಾಗಿ ಇಟ್ಟುಕೊಂಡು ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ನಾಲ್ಕು ದಿನಗಳಲ್ಲಿ ಸೋಲೋ ರೈಡ್ ಮುಗಿಸಿದೆ.

ಈಗ ನಾನು ಪೂರ್ತಿ ಫಿಟ್ ಆಗಿದ್ದೆ. ತದನಂತರ ಬೇಕಾಗಿದ್ದು ಪರ್ವತ ಏರುವ ಕೌಶಲಗಳು. ಬೆಟ್ಟ ಹತ್ತಲು ಹಗ್ಗ ಹೇಗೆ ಉಪಯೋಗಿಸುವುದು, ಯಾವ ಯಾವ ತರಹದ ಸಲಕರಣೆಗಳನ್ನು ಬಳಕೆ ಮಾಡಬೇಕು ಏನೂ ಗೊತ್ತಿರಲಿಲ್ಲ. ಇದನ್ನೆಲ್ಲಾ ಕಲಿಸಲು ನಮ್ಮ ದೇಶದಲ್ಲಿ ಸುಮಾರು ಸಂಸ್ಥೆಗಳಿವೆ. ಅಲ್ಲಿ ಬೇಸಿಕ್ ಕೋರ್ಸ್, ಅಡ್ವಾನ್ಸ್ ಕೋರ್ಸ್ ಮಾಡಬಹುದು. ಆದರೆ ಅದಕ್ಕೆ ವಯಸ್ಸಿನ ನಿರ್ಭಂಧವಿದೆ. ಒಂದೊಂದು ಕಾಲೇಜಿನಲ್ಲಿ 35 ವರ್ಷ. ಇನ್ನೊಂದು ಕಾಲೇಜಿನಲ್ಲಿ 40 ವರ್ಷ. ಇದು 28 ದಿನಗಳ ಕಾಲ ನಡೆಯುವ ಕೋರ್ಸ್. ಆಗ ನನಗೆ 48 ವರ್ಷವಾದ್ದರಿಂದ ಅಡ್ಮಿಶನ್ ಸಿಗಲಿಲ್ಲ . ಇದನ್ನು ಕಲಿಯದೆ ಮುಂದಕ್ಕೆ ಹೋಗುವುದು ತುಂಬ ಕಷ್ಟ. ಆಗ ನೇಪಾಳದಲ್ಲಿದ್ದ ನನ್ನ ಪರಿಚಿತರು ಲಕ್ಪಾ ಎಂಬ ಸರ್ಪವನ್ನು ಪರಿಚಯ ಮಾಡಿಕೊಟ್ಟರು. ಸರ್ಪ ಎನ್ನುವುದು ಒಂದು ಸಮುದಾಯ. ಅವರು ಪರ್ವತಾರೋಹಿಗಳು ಅವರು ಬೆಟ್ಟ ಹತ್ತಿ ಹತ್ತಿ ಮಾರ್ಗದರ್ಶಿಗಳಾಗಿರುತ್ತಾರೆ. ಅಂತಹವರನ್ನು ಸರ್ಪ ಎನ್ನುತ್ತಾರೆ. ಇವರು ಮೌಂಟ್ ಎವರೆಸ್ಟ್ ಕೂಡ ಹತ್ತಿದ್ದಾರೆ. ಅವರೊಲ್ಲಬ್ಬ ತುಂಬಾ ಅನುಭವಸ್ತ ಪರ್ವತಾರೋಹಿ. ಅವರ ಜೊತೆಗೆ ಮಾತನಾಡಿದಾಗ ಅವರ ಮಾತುಗಳಲ್ಲಿದ್ದ ಧನಾತ್ಮಕ ಶಕ್ತಿ ನನಗಿಷ್ಟವಾಯ್ತು. ಇವರೇ ನನಗೆ ಮೌಂಟ್ ಎವರೆಸ್ಟ್ ಹತ್ತಲು ಸರಿಯಾದ ಗುರುಗಳು ಎಂದುಕೊಂಡೆ. 2021 ಸೆಪ್ಟೆಂಬರ್ ನಲ್ಲಿ ನೇಪಾಳಕ್ಕೆ ಹೋಗಿ ಅವರನ್ನು ಭೇಟಿಯಾಗಿ ಒಂದು ಯೋಜನೆ ಹಾಕಿಕೊಂಡೆವು. ಈಗ ಎರಡು ಚಿಕ್ಕ ಬೆಟ್ಟಗಳನ್ನು ಹತ್ತೋಣ. ಒಂದು 6120 ಮೀ ಇರುವ ಲಬೂಚೆ, ಇನ್ನೊಂದು 7136 ಮೀ ಇರುವ ಹಿಮ್ ಲಂಗ್. ನಾನು ಯಾವ ಕ್ಲಾಸ್ ರೂಮಿನಲ್ಲಿ ಕೂರಿಸಿಕೊಂಡು ನಿಮಗೆ ಪಾಠ ಮಾಡುವುದಿಲ್ಲ. ಈ ಬೆಟ್ಟಗಳನ್ನು ಹತ್ತುವಾಗಲೇ ನಾನು ನಿಮಗೆ ತರಬೇತಿ ಕೊಡುತ್ತೇನೆ ಎಂದರು. ಒಂದು ವಾರದೊಳಗೆ ಅದೆಷ್ಟೋ ವರ್ಷಗಳಲ್ಲಿ ಆಗುವ ಅನುಭವಗಳನ್ನು ನನಗೆ ಕಲಿಸಿದರು.

ಬೆಟ್ಟಗಳನ್ನು ಹತ್ತುವುದು ತುಂಬ ಕಷ್ಟವಿದೆ. ವಾತಾವರಣ, ನಮ್ಮ ಫಿಟ್ನೆಸ್ ಸರಿಯಾಗಿರಬೇಕು. ನಾನು ಮೊದಲ ಬಾರಿಗೆ ಅಷ್ಟು ದೊಡ್ಡ ಬೂಟ್ಸ್, ದೊಡ್ಡ ಜಾಕೆಟ್ ಹಾಕಿಕೊಂಡಿದ್ದೆ. ಕೈ ಕಾಲು ಎತ್ತಲು ಕೂಡ ಆಗ್ತಾ ಇರಲಿಲ್ಲ . ಮೂಗು ಏನಾದರೂ ನೆವೆ ಆಗುತ್ತಿದೆ ಅಂದರೂ ಕೆರೆದುಕೊಳ್ಳಲು ಆಗುವುದಿಲ್ಲ. ನೀವು ನಿಮ್ಮ ಮನಸ್ಸನ್ನು, ಭಾವನೆಗಳನ್ನು ನಿಗ್ರಹಿಸಿಕೊಂಡು ಮುಂದೆ ಹೋಗುತ್ತಿರಬೇಕು. ಅವರು ಹೇಳಿದಂತೆ ಏರಿದೆ. ಬೆಟ್ಟದ ತುದಿಗೆ ಹೋದಾಗ ಮನಸ್ಸು ಮೂರ್ನಾಲ್ಕು ಸೆಕೆಂಡುಗಳ ಕಾಲ ಮೌನವಾಗಿಬಿಟ್ಟಿತು. ಆ ಮೌನ ನನಗೆ ಸ್ವರ್ಗ ಅನ್ನಿಸುವಂತಿತ್ತು. ಆ ಲಬೂಚಿ  ಬೆಟ್ಟ ನನಗೆ ತುಂಬ ತಾಳ್ಮೆಯಿಂದ ಇರುವುದನ್ನು ಕಲಿಸಿತು. ಇದು ನನಗೆ ಒಂದು ರೀತಿಯ ಮ್ಯಾಜಿಕಲ್ ಮೌಂಟೇನ್ ಅನ್ನಿಸ್ತು. ಆಗ ನನಗೆ ನನ್ನ ಮೇಲೆ ಭರವಸೆ ಬಂತು. ಈ ಬೆಟ್ಟದಿಂದ ಕೆಳಗಿಳಿದು ವಿಶ್ರಾಂತಿ ತೆಗೆದುಕೊಂಡು ನಂತರ 1, ನವೆಂಬರ್, 2021ರಲ್ಲಿ 7136 ಕಿ. ಮೀ ಇರುವ ಹಿಮ್ ಲಂಗ್ ಬೆಟ್ಟಕ್ಕೆ ಹೋದ್ವಿ. ಇನ್ನೇನು 136 ಮೀ. ಹೋದರೆ ಬೆಟ್ಟದ ತುದಿ ತಲುಪುತ್ತಿದ್ದೆ. ಅಷ್ಟರಲ್ಲಿ ಹವಾಮಾನ -40° ಆಗಿ ಹೋಯ್ತು. ಹತ್ತತ್ರ 7000 ಮೀ. ಹತ್ತಿದ್ದೇನೆ. ಇನ್ನು 136 ಮೀ. ಹೋಗಬೇಕು. ಗಾಳಿಯ ವೇಗವೂ ಹೆಚ್ಚಾಗಿ ಮುಂದಕ್ಕೆ ಒಂದು ಹೆಜ್ಜೆ ನಡೆಯೋಕೆ ಆಗ್ತಿಲ್ಲ. ಹಾಕಿಕೊಂಡಿರುವ ಬಟ್ಟೆಗಳೆಲ್ಲ ತುಂಬ ತಣ್ಣಗಾಗುತ್ತಿದೆ. ಬೀಳುತ್ತಿದ್ದ ಮಂಜು ನನ್ನ ಗಡ್ಡದಲ್ಲಿ ಐಸ್ ತರ ಕಟ್ಟಿಕೊಂಡು ಚುಚ್ಚುತ್ತಿತ್ತು. ಅದನ್ನು ತೆಗೆಯೋಣ ಅಂತ 10 ಸೆಕೆಂಡ್ ಮಾಸ್ಕ್ ತೆಗೆದರೆ ನಾನು ಉಸಿರಾಡಿದ್ದೆಲ್ಲ ಐಸ್ ಆಗುತ್ತಿದೆ ಅಷ್ಟು ಚಳಿ. ಗಡ್ಡ ಕೊಡವಿಕೊಂಡು ಮತ್ತೆ ಮಾಸ್ಕ್ ಹಾಕಿಕೊಳ್ಳುವಷ್ಟರಲ್ಲಿ ನನಗೆ ಮೂಗು ಇದೆಯಂತಲೇ ಫೀಲ್ ಆಗುತ್ತಿರಲಿಲ್ಲ. ಚಳಿ ಹೆಚ್ಚಾಗಿ ಉಸಿರಾಡುವುದು ಕಷ್ಟವಾಯ್ತು, ಮೈಯೆಲ್ಲ ಮರಗಟ್ಟಿ ಜೀವ ಹೋದಂತಾಗಿತ್ತು. ಇದು ನನ್ನ ಮೆಂಟರ್ ಗೆ ಗೊತ್ತಾಗಿ ಇವತ್ತು ಈ ಬೆಟ್ಟ ಹತ್ತುವುದು ಬೇಡ ಮುಂದಿನ ವರ್ಷ ಬರೋಣ ಅಂತ ಹೇಳಿದ್ರು. ಇನ್ನು 136 ಮೀ. ಹತ್ತಿದ್ದಿದ್ದರೆ ಇದನ್ನು ಹತ್ತಿದ ಮೊದಲ ಭಾರತೀಯ ನಾನೇ ಆಗುತ್ತಿದ್ದೆ. ಆಗ ನನ್ನ ಮೆಂಟರ್ ಹೇಳಿದ್ದು ಇವತ್ತು ನೀನು ಹತ್ತುತ್ತೇನೆಂದರೆ ನಿನ್ನ ಕುಟುಂಬಕ್ಕೆ ನಿನ್ನ ದೇಹದ ಒಂದು ತುಂಡು ಕೂಡಾ ಹೋಗುವುದಿಲ್ಲ. ಆದ್ದರಿಂದ ಸುಮ್ಮನೆ ಕೆಳಗೆ ಹೋಗಿ ಬಿಡೋಣ ಅಂದರು. ಅದೊಂದು ಮರೆಯಲಾರದ ಅನುಭವ.

ಕಡಿಮೆ ಸಮಯದಲ್ಲಿ ಹೆಚ್ಚು ಪಾಠ ಕಲಿತೆ. ಸ್ವಲ್ಪ ಟ್ರೀಟ್ಮೆಂಟ್ ತೆಗೆದುಕೊಂಡು ವಾಪಾಸ್ ಬೆಂಗಳೂರಿಗೆ ಬಂದೆ. ಹೀಗೆ ಕಷ್ಟವಾದಾಗ ನೀವು ವಾಪಾಸ್ ಬಂದುಬಿಡಬೇಕು. ಕಷ್ಟವಾದಾಗಲೂ ಹತ್ತುತ್ತೇನೆ ಅಂತ ಮುಂದೆ ಹೋದಾಗ ಪ್ರಾಣಾಪಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟೋ ಜನ ಇಲ್ಲಿ ತೀರಿಕೊಂಡವರೆಲ್ಲ ಮಾಡಿರುವ ತಪ್ಪು ಇದೇ. ಈ ಸರ್ಪಗಳು ಕೆಳಗೆ ಹೋಗೋಣ ಅಂದಾಗ ಅವರ ಮಾತನ್ನು ನಿರ್ಲಕ್ಷಿಸಿ ಮತ್ತೆ ವಾಪಾಸ್ ಬರುವಾಗ ಎಷ್ಟೋ ಜನರಿಗೆ ಆಮ್ಲಜನಕದ ತೊಂದರೆ ಆಗುತ್ತದೆ. ಜೀವ ಕಳೆದುಕೊಳ್ಳುತ್ತಾರೆ.

ಫೆಬ್ರವರಿಯಲ್ಲಿ ಲೇ ಲಡಾಖ್ ನಲ್ಲಿ ಐಸ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್ ಮಾಡಿದೆ. ಮುಂದಿನ ವರ್ಷ ನನಗೆ ಐವತ್ತು ವರ್ಷ ಆಗತ್ತೆ. ಆಗ ಎವರೆಸ್ಟ್ ಹತ್ತಬೇಕು ಎನ್ನುವ ಯೋಜನೆ ಇದ್ದದ್ದು. ಲೋತ್ಸೆ ಎಂಬ ಬೆಟ್ಟ 8536 ಮೀ. ಇದೆ. ಅದು ಪ್ರಪಂಚದಲ್ಲೇ 4ನೇ ಎತ್ತರವಾದ ಪರ್ವತ. ಈ ಬೆಟ್ಟ ಹತ್ತಬೇಕು ಅಂತ ಕಾಟ್ಮಂಡುವಿಗೆ ಹೋಗಿ ಅನುಮತಿ ಎಲ್ಲ ತಗೆದುಕೊಂಡೆವು. ಆದರೆ ಆಗ ಹತ್ತಲಿಲ್ಲ. ಮುಂದಿನ ವರ್ಷ ಹತ್ತುತ್ತೇನೆ. ಅಲ್ಲಿ ಲುಕ್ಲ ಎಂಬ ಊರಿನಿಂದ 54 ಕಿ.ಮೀ. ನಡೆದುಕೊಂಡು ಹೋದರೆ ಎವರೆಸ್ಟ್ ಬೇಸ್ ಕ್ಯಾಂಪ್ ಸಿಗುತ್ತದೆ. ಅಲ್ಲಿಗೆ ನಡೆದುಕೊಂಡು ಹೋಗಲು 12 ದಿನ ಆಗುತ್ತದೆ. ಫೆಬ್ರವರಿ ತಿಂಗಳಲ್ಲಿ ಯಾರೋ ಒಬ್ಬರು ಸಿಕಂದರಾಬಾದಿನವರು ಈ ಟ್ರೆಕ್ಕಿಂಗನ್ನು 4 ದಿನದಲ್ಲಿ ಮುಗಿಸಿದ್ದಾರೆ ಅಂತ ಕೇಳಿ ಆಶ್ಚರ್ಯವಾಯಿತು. 4 ದಿನ ಅಂದರೆ ತುಂಬ ಸಾಮರ್ಥ್ಯ ಬೇಕು. ನಾನು ಯಾಕೆ ಈ ಪ್ರಯತ್ನ ಮಾಡಬಾರದು ಅಂತ 3 ದಿನದಲ್ಲಿ ಮಾಡೋಣ ಎಂದುಕೊಂಡು ಹೋದೆ. ನೇಪಾಳಕ್ಕೆ ಹೋದಮೇಲೆ 3 ದಿನ ಬೇಡ 30 ಗಂಟೆಯಲ್ಲಿ ಮಾಡಿದ್ರೆ ಹೇಗಿರತ್ತೆ ಅಂತ ಅಂದುಕೊಂಡು ಮಾರ್ಚ್ 4ನೇ ತಾರೀಖು ಕಾಟ್ಮಂಡುವಿಗೆ ಹೋಗಿ ಮಾರ್ಚ್ 5ಕ್ಕೆ ಲುಕ್ಲ ಸ್ಟಾರ್ಟಿಂಗ್ ಪಾಯಿಂಟ್ ರೀಚ್ ಆಗಿ ಅಲ್ಲೇ ಒಂದು ದಿನ ಉಳಿದುಕೊಂಡಾಗ 30 ಗಂಟೆ ಬದಲು ಒಂದು ದಿನದಲ್ಲಿ ಈ ಟ್ರೆಕ್ಕಿಂಗ್ ಮುಗಿಸೋಣ ಎಂದುಕೊಂಡೆ. 6ನೇ ತಾರೀಖು ಬೆಳಗ್ಗೆ ಬಿಟ್ಟು 7ನೇ ತಾರೀಖು ಬೆಳಗ್ಗೆ ಅಲ್ಲಿರಬೇಕು. ತುಂಬಾನೇ ರಿಸ್ಕ್ ಇದೆ ಎತ್ತರ ಇದೆ. ರಾತ್ರಿ ಎಲ್ಲ ನಡೆದುಕೊಂಡು ಹೋಗಬೇಕು ಅಂತ 23 ವರ್ಷದ ತಾಶೀಪೆಂಬ ಎಂಬ ಗೈಡ್ ಒಬ್ಬರನ್ನು ಮಾರ್ಗದರ್ಶನ ಮಾಡಲು ಕರೆದುಕೊಂಡೆ. ಅವರ ಜೊತೆಗೆ ಮಾತಾಡಿ ಸಾಧ್ಯವಿರುವಲ್ಲಿ ಬೇಗ ಹೋಗಬಹುದು ಎಂದು, ರಾತ್ರಿ ನಿಧಾನವಾಗಿ ಹೋಗೋಣ ಎಂದು ಮಾತನಾಡಿಕೊಂಡೆವು. ಮಾರ್ಚ್ 6ನೇ ತಾರೀಖು ಬೆಳಗ್ಗೆ 5 ಗಂಟೆಗೆ ಲುಕ್ಲದಿಂದ ಪ್ರಾರಂಭಿಸಿ 7ನೇ ತಾರೀಖು ಬೆಳಗ್ಗೆ 5ಗಂಟೆ 4 ನಿಮಿಷಕ್ಕೆ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಇದ್ದೆವು. ಒಟ್ಟು 24 ಗಂಟೆ 4 ನಿಮಿಷ ಸಮಯದಲ್ಲಿ ತಲುಪಿದ್ದೆ. ಇದು ಭಾರತದಲ್ಲೇ ದಾಖಲೆ. ಇದಾದ ನಂತರ ನನ್ನಲ್ಲಿ ಎಷ್ಟು ಭರವಸೆ ಬಂತು ಎಂದರೆ ಏನು ಬೇಕಾದರೂ ಮಾಡಬಲ್ಲೆ, ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ನಂತರ ಎವರೆಸ್ಟ್ ಏರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಕಾಟ್ಮಂಡುವಿಗೆ ಹೋದೆ. ಮೇ 16 ಬುದ್ಧ ಪೂರ್ಣಿಮೆಯ ದಿನ ಎವರೆಸ್ಟ್ ಏರೋಣ ಅಂದುಕೊಂಡಿದ್ದೆ. 12ನೇ ತಾರೀಖು ಬೆಳಗ್ಗೆ 2ಗಂಟೆಗೆ ಏರಲು ಪ್ರಾರಂಭಿಸಿ 15ನೇ ತಾರೀಖು 8ಗಂಟೆ 4 ನಿಮಿಷಕ್ಕೆ ಎವರೆಸ್ಟ್ ತುದಿಯಲ್ಲಿ ನಿಂತಿದ್ದೆ. ಮೊದಲು ನನ್ನ ಮೆಂಟರನ್ನು ತಬ್ಬಿಕೊಂಡು ಅವರಿಗೊಂದು ಥ್ಯಾಂಕ್ಸ್ ಹೇಳಿದೆ. ನಾನು ಮನೆ ಬಿಟ್ಟು ಬರುವಾಗ ವಾಪಾಸ್ ಹೋಗುತ್ತೇನೆ ಎಂಬ ಗ್ಯಾರಂಟಿ ಇರಲಿಲ್ಲ. ಆದರೂ ನನ್ನ ನಗುತ್ತ ಕಳುಹಿಸಿ ಕೊಟ್ಟ ನನ್ನ ಕುಟುಂಬದವರಿಗೊಂದು ಮೆಸೇಜ್ ರೆಕಾರ್ಡ್ ಮಾಡಿ ಕಳುಹಿಸಿದೆ. ನಂತರ ಖುಷಿಯಿಂದ ಒಂದು ಹನಿ ಕಣ್ಣೀರು ಬಂತು. ಎವರೆಸ್ಟ್ ಮೇಲೆ ಒಂದು ಬುದ್ಧನ ವಿಗ್ರಹ, ನೀಲಿ ಆಕಾಶ ನೋಡಿ ಮನಸ್ಸಿಗೆ ತುಂಬ ಸಂತೋಷವಾಯಿತು. ಏನನ್ನೋ ಗೆದ್ದ ಭಾವ. ಇಷ್ಟೊಂದು ಜನಸಂಖ್ಯೆಯಲ್ಲಿ ಅಂದಾಜು 5500 ಜನರು ಎವರೆಸ್ಟ್ ಹತ್ತಿದ್ದಾರೆ ಅದರಲ್ಲಿ ನಾನು ಒಬ್ಬನಾಗಿದ್ದೇನೆ ಅಂತ ತುಂಬಾ ಖುಷಿಯಾಯ್ತು. ಮೂವತ್ತು ನಿಮಿಷ ಮೇಲೆ ಇದ್ದೆ. ಫೋಟೋ ಎಲ್ಲ ತೆಗೆದುಕೊಂಡ ಮೇಲೆ ನಾನು ಬಂದಿರುವುದು 50% ಮಾತ್ರ, ನಾನು ಮತ್ತೆ ಹೋಗಿ ನನ್ನ ಕುಟುಂಬವನ್ನು ಸೇರುತ್ತೇನಲ್ಲ ಆಗ ನನ್ನ ಗುರಿ ಮುಕ್ತಾಯವಾಗುತ್ತದೆ ಎಂದೆನಿಸಿತು.

ಹತ್ತುವುದು ಸ್ವಲ್ಪ ಸುಲಭ. ಇಳಿಯುವುದು ಬಲು ಕಷ್ಟ. ಏಕೆಂದರೆ ನಾವು ಮೇಲುಗಡೆ ಹೋಗುವಾಗ ಹಿಂದಿರುಗಿ ನೋಡುವುದಿಲ್ಲ. ಕೆಳಗೆ ಬರುತ್ತಾ ವಿಧಿ ಇಲ್ಲ ನಾವು ನೋಡಲೇಬೇಕು. ಇಷ್ಟು ಎತ್ತರಕ್ಕೆ ಬಂದಿದ್ದೇನೆ ಎಂದು ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಉಲ್ಬಣವಾಗುತ್ತಿತ್ತು. ಕೆಳಗೆ ನೋಡಿದರೆ ಒಂದೊಂದು ಹೆಜ್ಜೆ ಇಡಲೂ ಭಯವಾಗುತ್ತಿತ್ತು. ಇಳಿಯುವಾಗ ಒಂದು ಮೃತ ದೇಹ ಕಂಡಿತು. ಅದನ್ನು ನೋಡಿದ ತಕ್ಷಣ ಯಾರೋ ಮಲಗಿದ್ದಾರೆ ಅನ್ನಿಸಿಬಿಡ್ತು. ಒಂದು ಕ್ಷಣ ಯಾರಪ್ಪ ಇಲ್ಲಿ ಮಲಗಿರೋದು ಎಂದು ಭಯದಿಂದ ಮೆಂಟರನ್ನು ವಿಚಾರಿಸಿದಾಗ 12ವರ್ಷದಿಂದ ಅದು ಅಲ್ಲೇ ಇದೆಯಂತೆ. ನಾವು ಅದರ ಪಕ್ಕದಲ್ಲೇ ನಡೆದು ಹೋಗಬೇಕು. ಮುಖ ಮುಚ್ಚಿದ್ದಾರೆ. ಬಟ್ಟೆ ಒಂದೆರಡು ಕಡೆ ಹರಿದು ಹೋಗಿದೆ. ನಾನು ಗಮನಿಸಿದಾಗ ಚರ್ಮ ಕಾಣುತ್ತಿತ್ತು. ಒಮ್ಮೊಮ್ಮೆ ಮಂಜಿನಲ್ಲಿ ಮುಚ್ಚಿ ಹೋಗಿರುತ್ತದೆ. ಈ ವರ್ಷ ವಾತಾವರಣ ಚೆನ್ನಾಗಿ ಇದ್ದು ಸೂರ್ಯ ಕಾಣಿಸುತ್ತಿದ್ದ. ಹಾಗಾಗಿ ಹಿಮ ಕರಗಿ ಆ ದೇಹ ಕಾಣಿಸುತ್ತಿತ್ತು. ಹಾಗೆ ಸ್ವಲ್ಪ ಮುಂದೆ ಹೋಗ್ತಾ ನಾಲ್ಕು ವರ್ಷದ ಹಿಂದೆ ಒಬ್ಬರು ಹಳ್ಳದಲ್ಲಿ ಬಿದ್ದು ತೀರಿಕೊಂಡಿದ್ದರಂತೆ. ಆ ದೇಹವನ್ನು ಇನ್ನೂ ತೆಗೆಯಲು ಸಾಧ್ಯವಾಗಿಲ್ಲ. ಅದನ್ನು ನೋಡಿದರೆ ಯಾರೋ ಕುಳಿತುಕೊಂಡು ಯೋಚನೆ ಮಾಡ್ತಾ ಇದ್ದಾರೆ ಎನ್ನಿಸುತ್ತದೆ. ಚರ್ಮ, ಕೂದಲು ಎಲ್ಲ ಕಾಣಿಸುತ್ತಿತ್ತು. ಆಗ ಮನಸ್ಸಿನಲ್ಲಿ ಒಂಥರಾ ಹುಚ್ಚು ಹಿಡಿಯುವಂತ ಭಾವ ಕಾಡಲು ಶುರುವಾಯಿತು. ಉಸಿರು ಬಿಗಿಹಿಡಿದು ಮುಂದೆ ಬಂದೆ. ಎಂಟು ವರ್ಷದ ನನ್ನ ಪ್ರಯತ್ನ, ಅನುಭವ ನನ್ನನ್ನು ಅಲ್ಲಿಗೇ ನಿಲ್ಲಿಸದೆ ಮುನ್ನಡೆಸಿತು. ನಾವು ಎಷ್ಟೇ ಎಚ್ಚರಿಕೆಯಿಂದಿದ್ದರೂ ಕಡಿಮೆ. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಿಮಪಾತವಾಗುತ್ತದೆ, ಇಲ್ಲವೇ ನಮ್ಮ ದೇಹ ಹೊಂದಿಕೊಳ್ಳದೆ ಏನೋ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಜೀವವೂ ಹೋಗಬಹುದು. ಏನೋ ಒಳ್ಳೆಯ ಮೆಂಟರ್ ಸಿಕ್ಕು ಸರಿಯಾಗಿ ಅಭ್ಯಾಸ ಮಾಡಿಸಿ ಜೊತೆಯಿದ್ದು ಮಾರ್ಗದರ್ಶನ ಮಾಡಿದರು. ಅಂತೂ ಜೀವ ಕೈಯಲ್ಲಿ ಹಿಡಿದೇ ಎವರೆಸ್ಟ್ ನ ಪಾದ ಮುಟ್ಟಿದೆ. ಎವರೆಸ್ಟ್ ಹತ್ತುವಾಗ 69ಕೆಜಿ ಇದ್ದ ನನ್ನ ದೇಹದ ತೂಕ, ನಾನು ಇಳಿಯುವ ಹೊತ್ತಿಗೆ 60 ಕೆಜಿ ಆಗಿತ್ತು. ಹೆಚ್ಚು ಊಟ ಮಾಡೋಕೆ ಆಗುತ್ತಿರಲಿಲ್ಲ. ಮುಖ ಎಲ್ಲ ಕಪ್ಪಾದಂತೆ ಆಗಿತ್ತು. ಮತ್ತೆ ಕುಟುಂಬಕ್ಕೆ ಬಂದು ಸೇರಿಕೊಂಡಾಗ ಎಲ್ಲರೂ ತುಂಬ ಪ್ರೀತಿಯಿಂದ ಸ್ವಾಗತಿಸಿದರು.

ಈ ವರ್ಷ ಸೆಪ್ಟೆಂಬರ್ ನಲ್ಲಿ ಇನ್ನೂ ಎರಡು ಪರ್ವತಗಳನ್ನು ಹತ್ತುತ್ತಿದ್ದೇನೆ. 3*8k ಎಂದು ನಾನೊಂದು ಯೋಜನೆಯನ್ನು ಹಾಕಿಕೊಂಡಿದ್ದೇನೆ. ಅಂದರೆ 8000 ಮೀ.ಗಿಂತಲೂ ಹೆಚ್ಚಿರುವ ಮೂರು ಪರ್ವತಗಳನ್ನು ಹತ್ತುವುದು. ಮುಂದಿನ ವರ್ಷ ಪುಸ್ತಕ ಬರೆಯುವ ಕನಸು ಇದೆ. ಹಾಗೆಯೇ ಕಾಲೇಜು, ಯೂನಿವರ್ಸಿಟಿಗಳಿಗೆ ಹೋಗಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕು ಎಲ್ಲರಲ್ಲೂ ಸಾಧಿಸುವ  ಶಕ್ತಿ ಇದೆ ಎನ್ನುತ್ತಾರೆ. ನಮ್ಮ ಎಲ್ಲ ಯುವಕರು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ, ಮೊದಲ ಹೆಜ್ಜೆಯನ್ನೇ ಇಡುವುದಿಲ್ಲ. ನಾನು ಎಲ್ಲರಿಗೂ ಹೇಳುವುದು… ‘Take that first step your destination is will be there in sometime’ ಯಾರು ಏನೇ ಹೇಳಿದರೂ ನಿಮ್ಮ ಶಕ್ತಿ ಸಾಮರ್ಥ್ಯದ ಮೇಲೆ ಅನುಮಾನ ಪಡಬೇಡಿ. ನಿಮ್ಮ ಶಕ್ತಿ ನಿಮ್ಮದು. ಯಾರು ನಿಮಗೆ ಧನಾತ್ಮಕ ಶಕ್ತಿ ತುಂಬುತ್ತಾರೋ ಅವರ ಸುತ್ತ ಇರಿ. ಯಾರು ನಿಮ್ಮನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೋ  ಅವರಿಂದ ದೂರವಿರಿ. ನಿಮ್ಮ ಕನಸು ನಿಮ್ಮದು ಎಂದು ಹೇಳಿ ಮಾತು ಮುಗಿಸುತ್ತಾರೆ. ಐವತ್ತರ ವಯಸ್ಸಿನಲ್ಲಿ ಮಾಡಿದ ಈ ಸಾಹಸ ಎಂಥವರಿಗೂ ಸ್ಫೂರ್ತಿ. ನಟರಾಜ್ ರವರ ಕನಸುಗಳೆಲ್ಲ ಕೈಗೂಡಲಿ. ಸುರಕ್ಷಿತವಾಗಿ ಅವರ ಎಲ್ಲ ಚಾರಣ ಆರೋಹಣ ಅವರೋಹಣಗಳನ್ನು ಮುಗಿಸಿಕೊಂಡು ಬರಲಿ.

Donate Janashakthi Media

2 thoughts on “49ನೇ ವಯಸ್ಸಿನಲ್ಲಿ ವಿಶ್ವದ ಎತ್ತರದ ಶಿಖರ ಏರಿದ ಕರ್ನಾಟಕದ ಮೊದಲಿಗ ಸುನಿಲ್ ಕೊರಟಗೆರೆ ನಟರಾಜ್

  1. ಉತ್ತಮ ಹಾಗೂ ರೋಮಾಂಚಕಾರಿ ಲೇಖನ.ಧನ್ಯವಾದಗಳು ಮೇಡಂ

  2. ಸುನಿಲ್ ಕೊರಟಗೆರೆ ನಟರಾಜ್ ಅವರ ಸಾಹಸ ಅತ್ಯದ್ಬುತ. ನಿಜಕ್ಕೂ ಅವರು ಛಲವಂತ. ಅವರ ಅನುಭವ ಕಥನವೂ ರೋಮಾಂಚನ.ಅವರ ಎಲ್ಲಾ ಕನಸುಗಳೂ ಈಡೇರಲಿ

Leave a Reply

Your email address will not be published. Required fields are marked *