ಪರಿಸರ ಕಾಳಜಿ-ಮನುಜ ಪ್ರಜ್ಞೆ ಮತ್ತು ಸಮಾಜ

 

ನಾ ದಿವಾಕರ

ಪರಿಸರದ ವಿಶಾಲ ಕ್ಯಾನ್ವಾಸ್‌ ಒಳಗೆ  ಮಾನವ ಸಮಾಜದತ್ತ ನೋಡುವುದು ವರ್ತಮಾನದ ತುರ್ತು

 

ಇಡೀ ವಿಶ್ವವನ್ನು ಬಲವಾಗಿ ಆಕ್ರಮಿಸುತ್ತಿರುವ ಹಾಗೂ ತನ್ನ ಅಧೀನಕ್ಕೊಳಪಡಿಸುವ ಮೂಲಕ ನಿಸರ್ಗವನ್ನೂ ಮಾರುಕಟ್ಟೆಯ ವಿನಿಮಯ ಸರಕಿನಂತೆ ಪರಿವರ್ತಿಸಿರುವ 21ನೇ ಶತಮಾನದ ಬಂಡವಾಳಶಾಹಿ ಡಿಜಿಟಲ್‌ ಯುಗದಲ್ಲಿ ಪರಿಸರ ರಕ್ಷಣೆ-ಕಾಳಜಿ ಮತ್ತು ಇದರ ಸುತ್ತ ಹರಡಿಕೊಳ್ಳುವ ಪರಿಸರವಾದ ಎಂಬ ಬೌದ್ಧಿಕ ಚಿಂತನೆಗಳು, ಮಾನವ ಸಮಾಜವನ್ನು ಕಾಡುತ್ತಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ ಹಾಗೂ ತಳಸಮಾಜದಲ್ಲಿ ಅವಕಾಶವಂಚಿತರಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಜನಸಮುದಾಯಗಳ ನಿತ್ಯ ಬದುಕಿನ ನಡುವೆ ಚರ್ಚೆಗೊಳಗಾಗಬೇಕಿದೆ. ತಂತ್ರಜ್ಞಾನದ ನೂತನ ಅವಿಷ್ಕಾರಗಳು ಭಾಷೆಯನ್ನೂ ಒಳಗೊಂಡಂತೆ, ನೈಸರ್ಗಿಕವಾಗಿ ಮಾನವ ಸಮಾಜವು ಅನುಭವಿಸುವ ಎಲ್ಲ ನೈಸರ್ಗಿಕ ಮೂಲ-ಸಂಪನ್ಮೂಲಗಳನ್ನೂ ಸಹ ನವ ಉದಾರವಾದದ ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗೆ ಒಳಪಡಿಸಿದೆ.

ವಸಾಹತುಶಾಹಿ ಎಂಬ ಪರಿಕಲ್ಪನೆಯನ್ನು ಅಭಿಜಾತ ವ್ಯಾಖ್ಯಾನದಿಂದ ಹೊರತಂದು, ಈ ಮರುವಸಾಹತೀಕರಣ ಪ್ರಕ್ರಿಯೆಯನ್ನು ನವ ಉದಾರವಾದಿ ಆರ್ಥಿಕತೆ ಮತ್ತು ನಿಸರ್ಗ ಸಂಪತ್ತಿನ ಮೇಲಿನ ಯಜಮಾನಿಕೆಯ ದೃಷ್ಟಿಯಿಂದ ನಿರ್ವಚಿಸಬೇಕಾಗುತ್ತದೆ. ಆದಿ ಕಾಲದಿಂದಲೂ ಮಾನವ ಸಮಾಜ ನಿಸರ್ಗದ ಒಡಲನ್ನು ಬರಿದು ಮಾಡುತ್ತಲೇ ತನ್ನ ನಾಗರಿಕತೆಯನ್ನು ಪೋಷಿಸುತ್ತಾ ಬಂದಿದೆ. ಇದು ಅನಿವಾರ್ಯ ಎನ್ನಬಹುದು, ಆದರೆ ನಿಸರ್ಗ ನೀಡುವ ನೆಲ, ಜಲ, ಸಸ್ಯ ಹಾಗೂ ವನ್ಯಜೀವಿ ಸಂಪತ್ತನ್ನು ತನ್ನ ಸ್ವಾರ್ಥಕ್ಕಾಗಿ ಬಳಕೆಯಾಗುವ ಕಚ್ಚಾವಸ್ತುಗಳಂತೆ ಭಾವಿಸುವ ಕ್ರೂರ ಸಮಾಜವನ್ನು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನು ಕಳೆದ ಶತಮಾನಗಳಲ್ಲಿ ಅನುಸರಿಸುತ್ತಾ ಬಂದಿದೆ.

ಪರಿಸರ ಮತ್ತು ಮಾರುಕಟ್ಟೆ ಸಂಘರ್ಷ

ಇದರ ಮುಂದುವರಿಕೆಯಾಗಿ ಬಂಡವಾಳದ ಜಾಗತೀಕರಣ ಮತ್ತು ಸರಕು ಮಾರುಕಟ್ಟೆಯ ಕಾರ್ಪೋರೇಟೀಕರಣ ಪ್ರಕ್ರಿಯೆಯು ನಿಸರ್ಗದ ಪ್ರತಿಯೊಂದು ಸ್ವಾಭಾವಿಕ ಉತ್ಪನ್ನವನ್ನೂ ವಿನಿಮಯ ಮಾಡಬಹುದಾದ ಸರಕಿನಂತೆ ಪರಿವರ್ತಿಸಿದ್ದು, ಈ ಸರಕುಗಳ ಮೇಲೆ ಆಧಿಪತ್ಯ ಸಾಧಿಸುವ ಪ್ರಬಲ ಸಮಾಜ ಅಥವಾ ದೇಶಗಳು ಮೂಲ ಫಲಾನುಭವಿಗಳಾಗಿ ಪರಿಣಮಿಸುತ್ತಿವೆ. ಇದಕ್ಕೆ ಸಮಾನಾಂತರವಾಗಿ ಪ್ರತಿಯೊಂದು ದೇಶದಲ್ಲೂ ಆರ್ಥಿಕವಾಗಿ ಸಶಕ್ತರಾಗಿರುವ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿರುವ ಪ್ರಬಲ ಸಮಾಜಗಳು, ವಿಭಿನ್ನ ನೆಲೆಗಳಲ್ಲಿ ತಮ್ಮ ಯಜಮಾನಿಕೆಯನ್ನು ಸಾಧಿಸಲು ಸಾಧ್ಯವಾಗಿದೆ. ಹಾಗಾಗಿಯೇ ಆಧುನಿಕ ನಗರೀಕರಣ ಪ್ರಕ್ರಿಯೆಯಲ್ಲಿ ನಾಶವಾಗುವ ನಿಸರ್ಗ ಸಂಪತ್ತು ಮತ್ತು ಔದ್ಯಮಿಕ ಪ್ರಗತಿಗೆ ಬಂಡವಾಳವಾಗುವ ಪ್ರಾಕೃತಿಕ ಸಂಪನ್ಮೂಲಗಳು, ಮುಖ್ಯವಾಹಿನಿಯ ಸಂಕಥನಗಳಲ್ಲಿ ಚರ್ಚೆಗೊಳಗಾಗುವುದೇ ಇಲ್ಲ.

ಜೂನ್‌ 5ರಂದು ಆಚರಿಸಲಾಗುವ ವಿಶ್ವ ಪರಿಸರ ದಿನದಂದು ಈ ವಿಶಾಲ ನೆಲೆಯಲ್ಲಿ ʼ ಪರಿಸರ ʼ (Environment) ಎಂಬ ದೊಡ್ಡ ಕ್ಯಾನ್ವಾಸನ್ನು ನಿರ್ವಚಿಸುವಾಗ, ಈ ಪರಿಸರದ ಸಮತೋಲನ-ರಕ್ಷಣೆ-ಸಂರಕ್ಷಣೆ ಮತ್ತು ಪಾಲನೆಯಲ್ಲಿ ಪ್ರಧಾನ ಪಾತ್ರ ವಹಿಸುವ ಮಾನವ ಸಮಾಜದ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. 20-21ನೇ ಶತಮಾನದ ಆರ್ಥಿಕ ಅಭಿವೃದ್ಧಿ ಮಾದರಿಗಳಲ್ಲಿ ಮಾನವ ಸಮಾಜದ ಆಧುನಿಕ ನಾಗರಿಕತೆಗೆ ಅನುಗುಣವಾಗಿ ಅಗತ್ಯ ಎನಿಸುವ ಮೂಲ ಸೌಕರ್ಯಗಳು, ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಕಾರ್ಯಗತಗೊಳಿಸುವಾಗ, ಈ ಯೋಜನೆಗಳ ಆರ್ಥಿಕ ವೆಚ್ಚ (Economic Costs)ಮತ್ತು ಪರಿಣಾಮಗಳನ್ನು ಮಾತ್ರ ನೋಡಲಾಗುವುದೇ ಹೊರತು, ಸಾಮಾಜಿಕ ವೆಚ್ಚ (Social Costs) ವನ್ನು ಹೆಚ್ಚು ಗಮನಿಸುವುದಿಲ್ಲ. ಏಕೆಂದರೆ ಈ ಸಾಮಾಜಿಕ ವೆಚ್ಚದಲ್ಲಿ ಸಮತೋಲನ ಸಾಧಿಸಬೇಕಾದರೆ, ಮಾರುಕಟ್ಟೆ ತನ್ನ ವಿಸ್ತರಣೆಯ ಮಾದರಿಯನ್ನೂ ಪರಿಷ್ಕರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಪರಿಸರ ನಾಶದ ಮಾರುಕಟ್ಟೆ ಆಯಾಮ

ಈ ಪರಿಸರ ರಕ್ಷಣೆ ಅಥವಾ ವಿನಾಶವನ್ನು ಎರಡು ನೆಲೆಗಳಲ್ಲಿಟ್ಟು ನೋಡಬೇಕಿದೆ. ಮೊದಲನೆಯದು ಗಣಿಗಾರಿಕೆಯೇ ಮೊದಲಾದ ಔದ್ಯಮಿಕ ಬೆಳವಣಿಗೆಗಾಗಿ ಲಕ್ಷಾಂತರ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಕಾರ್ಪೋರೇಟ್‌ ಉದ್ದಿಮೆಗಳಿಗೆ ಪರಭಾರೆ ಮಾಡುವುದು. ಇತ್ತೀಚಿನ ಮಹಾರಾಷ್ಟ್ರದ ಗಡ್ರಿಚೋಳಿ ಶೇಕಡಾ  70ರಷ್ಟು ಪ್ರದೇಶ ದಟ್ಟ ಅರಣ್ಯಗಳಿಂದ ಕೂಡಿದೆ. ಈ ಅರಣ್ಯಗಳ ಭೂತಳದಲ್ಲಿ ಕಬ್ಬಿಣದ ಅದಿರು, ಲೈಮ್‌ ಸ್ಟೋನ್‌ ಮತ್ತು ವಜ್ರದ ನಿಕ್ಷೇಪಗಳು ಹೇರಳವಾಗಿವೆ. ಈ ಪ್ರದೇಶದ ಸರ್ಜಾಘರ್‌ ವಲಯದಲ್ಲಿ 2005ರಿಂದಲೂ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ದಟ್ಟ ಅರಣ್ಯ ಪ್ರದೇಶದ 937 ಹೆಕ್ಟೇರ್‌ ಭೂಮಿಯನ್ನು ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಮುಕ್ತಗೊಳಿಸಲಾಗಿದೆ. 1 ಲಕ್ಷ 23 ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಅಂತಿಮವಾಗಿ ಅದಾನಿ ಅಥವಾ ಇತರ ಕಾರ್ಪೋರೇಟ್‌ ಉದ್ಯಮಿಗಳ ಪಾಲಾಗುತ್ತದೆ ಎನ್ನುವುದು ನಿಶ್ಚಿತ.

ಇದೇ ರೀತಿಯಲ್ಲಿ ಛತ್ತಿಸ್‌ಘಡದ ಹಸ್‌ದೇವ್‌ ದಟ್ಟಾರಣ್ಯ ಪ್ರದೇಶದಲ್ಲಿ 4,920 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಪರಭಾರೆ ಮಾಡಲಾಗಿದೆ. ಇದೇ ಅರಣ್ಯ ಪ್ರದೇಶದ ಆರಂಡ್‌ ವಲಯದಲ್ಲಿ 137 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಕಲ್ಲಿದ್ದಲು ಗಣಿಗಾರಿಕೆಗಾಗಿ ಒದಗಿಸಲಾಗಿದೆ. ಒಟ್ಟು ಈ ಅರಣ್ಯದಲ್ಲಿ           2,42,670 ಮರಗಳನ್ನು ಈಗಾಗಲೇ ನೆಲಸಮ ಮಾಡಿಯಾಗಿದೆ. ಈ ನೈಸರ್ಗಿಕ ಸಂಪನ್ಮೂಲಗಳು ಮಾನವ ಜಗತ್ತಿನ ಆಧುನಿಕತೆ ಮತ್ತು ಪ್ರಗತಿಗೆ ಅತ್ಯವಶ್ಯವಾಗಿಯೇ ಕಾಣುವುದಾದರೂ, ಇಲ್ಲಿ ನಾಶವಾಗುವ ಅರಣ್ಯ ಸಂಪತ್ತು ಆ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಜನಸಮುದಾಯಗಳ ಪಾಲಿಗೆ ಮಾರಣಾಂತಿಕವಾಗುತ್ತದೆ. ಅರಣ್ಯ ಪ್ರದೇಶಗಳಿಂದ ಮೂಲೋತ್ಪಾಟನೆಯಾಗುವ ಆದಿವಾಸಿ ಸಮುದಾಯಗಳ ಪುನರ್ವಸತಿ, ಪರಿಹಾರ ಇತ್ಯಾದಿ ಯೋಜನೆಗಳ ಹೊರತಾಗಿಯೂ, ಅರಣ್ಯ ನಾಶದಿಂದ ಹವಾಮಾನದ ಮೇಲೆ ಉಂಟಾಗುವ ಭೀಕರ ದುಷ್ಪರಿಣಾಮಗಳ ಬಗ್ಗೆ ಯೋಚಿಸಬೇಕಿದೆ.

ಆರ್ಥಿಕವಾಗಿ ಈ ಗಣಿಗಾರಿಕೆಗಳು ದೇಶದ ಔದ್ಯಮಿಕ ಅಭಿವೃದ್ಧಿಗೆ, ಜಿಡಿಪಿಗೆ ಮತ್ತು ಮಾರುಕಟ್ಟೆಗೆ ಉತ್ತಮ  ಇಂಧನ ಒದಗಿಸುವುದು ವಾಸ್ತವ. ಆದರೆ ಇಲ್ಲಿ ಗಮನಿಸಬೇಕಿರುವುದು ಸಾಮಾಜಿಕ ವೆಚ್ಚ (Social Costş), ಅಂದರೆ ಉಚ್ಚಾಟಿತ ಜನಸಮುದಾಯಗಳ ಭವಿಷ್ಯದ ಬದುಕು, ಹಸಿರು ನಾಶದಿಂದ ಉಂಟಾಗುವ ಹವಾಮಾನ ವೈಪರೀತ್ಯ, ಗಣಿಗಾರಿಕೆಯಲ್ಲಿ ದುಡಿಯುವ ನೂರಾರು ಕಾರ್ಮಿಕರ ಸಾಮಾಜಿಕ-ಆರ್ಥಿಕ ಭದ್ರತೆ ಮತ್ತು ಶತಮಾನಗಳಿಂದ ಬೇರು ಬಿಟ್ಟಿರುವ ಸಾಂಸ್ಕೃತಿಕ ನೆಲೆಗಳ ನಾಶ ಇವೆಲ್ಲವೂ ಸಹ ಸಾಮಾಜಿಕ ವೆಚ್ಚದ ಪರಿಧಿಯಲ್ಲಿ ಬರುತ್ತದೆ. ಈ ವೆಚ್ಚವನ್ನು ಮಾರುಕಟ್ಟೆಯಾಗಲೀ, ಬಂಡವಾಳಿಗರಾಗಲೀ ಪರಿಗಣಿಸುವುದಿಲ್ಲ. ಏಕೆಂದರೆ ಔದ್ಯಮಿಕ ದೃಷ್ಟಿಕೋನದಲ್ಲಿ ನಿಸರ್ಗ ಸಂಪತ್ತು ಸಹ ಒಂದು ವಿನಿಮಯ ಸರಕು, ಭೂಮಿಯ ಒಡಲಿನಿಂದ ಬಗೆಯಲಾಗುವ ಈ ಸಂಪನ್ಮೂಲಗಳ ಮೂಲಕ ಆರ್ಥಿಕತೆಗೆ ಉತ್ತೇಜನ ದೊರೆಯುತ್ತದೆ. ಶಾಶ್ವತವಾಗಿ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು, ಭಿನ್ನ ವಾತಾವರಣದಲ್ಲಿ ಬದುಕುವ ಅನಿವಾರ್ಯತೆ ಎದುರಿಸುವ ಬುಡಕಟ್ಟು ಸಮುದಾಯಗಳು ಮತ್ತು ಗಣಿಗಾರಿಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಶ್ರಮಜೀವಿಗಳು ಇಲ್ಲಿ ನಗಣ್ಯವಾಗಿಬಿಡುತ್ತಾರೆ.

ಇದನ್ನೂ ಓದಿ : ಕನ್ನಡದಲ್ಲಿ ಪರಿಸರ ಸಾಹಿತ್ಯ

ನಗರೀಕರಣ ಎಂಬ ಜೆಸಿಬಿ

ಈ ಔದ್ಯಮಿಕ ಜಗತ್ತಿನಿಂದಾಚೆಗೆ ಪರಿಸರ ನಾಶವನ್ನು ಗುರುತಿಸಬಹುದಾದರೆ, ಅದರು ಆಧುನಿಕ ನಗರೀಕರಣ ಪ್ರಕ್ರಿಯೆಯಲ್ಲಿ ಕಾಣಬಹುದು. ಇತ್ತೀಚೆಗೆ ಮೈಸೂರಿನ ಹೈದರಾಲಿ ರಸ್ತೆಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ರಾತ್ರೋರಾತ್ರಿ 40ಕ್ಕೂ ಹೆಚ್ಚು ಮರಗಳ ಹನನ ಮಾಡಿದ್ದು ಪರಿಸರವಾದಿಗಳನ್ನು ಬಡಿದೆಬ್ಬಿಸಿತ್ತು. ಮಾನಂದವಾಡಿ ರಸ್ತೆಯ ಅಗಲೀಕರಣಕ್ಕೂ ಸಹ 150ಕ್ಕೂ ಹೆಚ್ಚು ಮರಗಳನ್ನು ಗುರುತಿಸಲಾಗಿದ್ದು, ಸದ್ಯಕ್ಕೆ ಸಾರ್ವಜನಿಕರ ಪ್ರತಿಭಟನೆಯ ಪರಿಣಾಮವಾಗಿ ತಡೆಹಿಡಿಯಲಾಗಿದೆ. ಈಗಿರುವ ನಗರಗಳನ್ನು ಬೃಹದೀಕರಣಗೊಳಿಸುವ ಪ್ರಕ್ರಿಯೆಯೊಂದಿಗೆ, ಈಗಾಗಲೇ ಜನಸಂದಣಿ ಹೆಚ್ಚಾಗಿರುವ ನಗರಗಳಲ್ಲಿ ಆಧುನಿಕ ವಾಹನಗಳ ಸಂಚಾರ ಮತ್ತು ಸಮಾಜದ ಮೇಲ್ಪದರದ (Elite) ಹಾಗೂ ಮೇಲ್ವರ್ಗದ ಸಿರಿವಂತ ಸಮಾಜದ ನಿತ್ಯ ಓಡಾಟಕ್ಕೆ ಪೂರಕವಾಗುವಂತೆ ರಸ್ತೆಗಳನ್ನು ಅಗಲೀಕರಣಗೊಳಿಸುವುದು ನವ ಉದಾರವಾದಿ ಆರ್ಥಿಕತೆಯ  ಲಕ್ಷಣ.

ಕರ್ನಾಟಕದ ಬಹುತೇಕ ನಗರಗಳು ಈ ಅಭಿವೃದ್ಧಿ ಮಾದರಿಯ ಪರಿಣಾಮವಾಗಿ ಸಾವಿರಾರು ಮರಗಳನ್ನು ಕಳೆದುಕೊಂಡಿವೆ. ಆಧುನಿಕ ಜೀವನಶೈಲಿಯ ಐಷಾರಾಮಿ ವಾಹನಗಳು, ಮೇಲ್ಮುಖಿ ಬೆಳವಣಿಗೆಯ ನಿಟ್ಟಿನಲ್ಲಿ ಗಗನಚುಂಬಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಈ ವರ್ಗದ ಮನರಂಜನೆಯಾಗಿ ನಿರ್ಮಿಸುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಇತ್ಯಾದಿಗಳು ಈ ಮಾದರಿಯ ಮತ್ತೊಂದು ಕ್ರೂರ ಸ್ವರೂಪ. ರಸ್ತೆ ಅಗಲೀಕರಣದಲ್ಲಿ ನಾಶವಾಗುವುದು ಕೇವಲ ಬೆಳೆದು ನಿಂತ ಮರಗಳಲ್ಲ, ಅದರೊಂದಿಗೆ ಹತ್ತಾರು ವರ್ಷಗಳಿಂದ ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡು ಸುಸ್ಥಿರ ಜೀವನದ ಕನಸು ಕಾಣುತ್ತಿರುವ ಸಾವಿರಾರು ಸಣ್ಣ ವ್ಯಾಪಾರಿಗಳು, ದುಡಿಯುವ ಜನರು ತಮ್ಮ ಮೂಲ ನೆಲೆ ಕಳೆದುಕೊಳ್ಳುತ್ತಾರೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ಇದಕ್ಕೊಂದು ಜ್ವಲಂತ ಸಾಕ್ಷಿ.

ಮೈಸೂರು-ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನ ಸಮೀಪವೂ ಇದೇ ರೀತಿಯ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸಲು ರಾಜ್ಯ ಸರ್ಕಾರ ಯೋಚಿಸುತ್ತಿರುವುದು ದುರಂತ. ಒಂದೆಡೆ ಕಾವೇರಿ ನದಿಗೆ ಭಾವನಾತ್ಮಕ ಸ್ಪರ್ಶ ನೀಡುವ ಮೂಲಕ ʼ ಕಾವೇರಿ ಆರತಿ ʼ ಆಚರಿಸುವ ಸರ್ಕಾರವೇ ಮತ್ತೊಂದೆಡೆ ಈ ಜೀವ ನದಿಯ ಒಡಲಿಗೆ ಕಿಚ್ಚು ಹಚ್ಚುವ ಯೋಜನೆಗಳನ್ನೂ ರೂಪಿಸುವುದು ನಿಸರ್ಗಕ್ಕೆ ಮಾಡುವ ಅಪಚಾರವಲ್ಲವೇ ? ಮೈಸೂರಿನ ನಾಗರಿಕರ ಪ್ರತಿರೋಧ ಇಲ್ಲದೆ ಹೋಗಿದ್ದರೆ ಈ ವೇಳೆಗೆ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಸಹ ಸಿದ್ಧವಾಗಿಬಿಡುತ್ತಿತ್ತು. ಚಾಮುಂಡಿ ಬೆಟ್ಟವೂ ಸಹ ಪಶ್ಚಿಮ ಘಟ್ಟಗಳಂತೆ, ಉತ್ತರದ ಹಿಮಾಲಯ ತಪ್ಪಲಿನ ಚಾರ್‌ಧಾಮ್‌ ಪರ್ವತಗಳ ಹಾಗೆ ಭೂ ಕುಸಿತಕ್ಕೆ ಒಳಗಾಗುತ್ತಿದೆ.  ಕೇರಳದ ವಯನಾಡು ಪ್ರದೇಶದಲ್ಲಿ ಕಳೆದ ವರ್ಷ ಸಂಭವಿಸಿದ ಭೂ ಕುಸಿತ, ನೂರಾರು ಸಾವು ನೋವುಗಳ ಹೊರತಾಗಿಯೂ, ಅಲ್ಲಿ ಸುರಂಗ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಪರಿಸರ ಕಾಳಜಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ನಗರೀಕರಣ ಎಂದರೆ ಸುತ್ತಲಿನ ಹಳ್ಳಿಗಳನ್ನು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ನುಂಗಿ ಬೆಳೆಯುವುದಷ್ಟೇ ಅಲ್ಲದೆ, ಸುತ್ತಮುತ್ತಲಿನ ಕೃಷಿ ಯೋಗ್ಯ ಭೂಮಿ ಮತ್ತು ಸಣ್ಣ ಅರಣ್ಯ ಪ್ರದೇಶಗಳನ್ನೂ ನಾಶಪಡಿಸುವುದೇ ಆಗಿರುತ್ತದೆ. ಆಧುನಿಕತೆಗೆ ತೆರೆದುಕೊಳ್ಳುವ ಹಿತವಲಯದ ಸಿರಿವಂತ ಸಮಾಜಕ್ಕೆ ಅಗತ್ಯವಾದ ವಸತಿ ಸಮುಚ್ಛಯಗಳಿಗಾಗಿ, ಬಡಾವಣೆಗಳಿಗಾಗಿ ನೂರಾರು ಎಕರೆ ಕೃಷಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ. ಅನ್ನ ಬೆಳೆಯುತ್ತಿರುವ ಸ್ವಾವಲಂಬಿ ರೈತ ಮುಂದೊಂದು ದಿನ ಇದೇ ನಗರದ ಪರಾವಲಂಬಿ ಶ್ರಮಜೀವಿಯಾಗಿ ಬದುಕುವುದು ಅನಿವಾರ್ಯವಾಗುತ್ತದೆ. ನಗರೀಕರಣಕ್ಕೊಳಗಾಗುವ ಸಾಂಸ್ಕೃತಿಕ ನೆಲೆಗಳು ತಮ್ಮ ಮೂಲ ಸೆಲೆಯನ್ನು ಕಳೆದುಕೊಂಡು, ತಂತ್ರಜ್ಞಾನದ ಅವಿಷ್ಕಾರಗಳಿಗೆ ಬಲಿಯಾಗುತ್ತದೆ. ಆರ್ಥಿಕ ಅಭಿವೃದ್ಧಿಯ ಸಾಮಾಜಿಕ ವೆಚ್ಚ (Social Costs)ವನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

 ಸೌಂದರ್ಯೀಕರಣದ ಕುರೂಪಿ ಆಯಾಮ

ಈ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಬಲಿಯಾಗುವ ನಿಸರ್ಗ ಸಂಪತ್ತು-ಸಂಪನ್ಮೂಲ ಮತ್ತು ಸೌಂದರ್ಯ, ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ನಗರಗಳ ಸೌಂದರ್ಯೀಕರಣ (Beautification) ನೆಪದಲ್ಲಿ ಬೀದಿಬದಿ ವ್ಯಾಪಾರಿಗಳನ್ನು, ತಳ್ಳುಗಾಡಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ಒಂದು ಪ್ರಕ್ರಿಯೆಯನ್ನೂ ಈ ಸಾಮಾಜಿಕ ವೆಚ್ಚದ ವ್ಯಾಪ್ತಿಯಲ್ಲಿ ಒಳಗೊಳ್ಳಬೇಕಾಗುತ್ತದೆ. ನಗರವಲಯಗಳಿಂದ ಆಚೆಗೆ ದಿನಗೂಲಿ, ಕಟ್ಟಡ ನಿರ್ಮಾಣ ಮತ್ತಿತರ ಅನೌಪಚಾರಿಕ ದುಡಿಮೆಗಳಲ್ಲಿರುವ ಶ್ರಮಜೀವಿಗಳನ್ನು ಹೊರವಲಯದ ಜೋಪಡಿಗಳಲ್ಲಿ ಇರಿಸುವ, ನಗರಗಳನ್ನು ಸುಂದರವಾಗಿ ಕಾಣುವಂತೆ ಮಾಡುವ ಈ ಕ್ರೌರ್ಯ ಪರಿಸರವಾದಿಗಳನ್ನಷ್ಟೇ ಅಲ್ಲದೆ ಪ್ರಜಾಪ್ರಭುತ್ವವಾದಿಗಳನ್ನೂ ಎಚ್ಚರಿಸಬೇಕಿದೆ. ಇಲ್ಲಿ ಬಲಿಯಾಗುವ ಜಲಮೂಲಗಳು ಮತ್ತು ಕಲುಷಿತವಾಗುವ ಸಣ್ಣಪುಟ್ಟ ಜಲಸಂಪನ್ಮೂಲಗಳು ಈ ಶ್ರಮಜೀವಿಗಳಲ್ಲಿ ಅನಾರೋಗ್ಯದ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಭಾರತ ಅನುಸರಿಸುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಯ ಪರಿಣಾಮವಾಗಿ ತೀವ್ರವಾಗುತ್ತಿರುವ ಆರ್ಥಿಕ ಅಸಮಾನತೆಯನ್ನು ಅನಿವಾರ್ಯ ಎಂದೋ ಅಥವಾ ಅಭಿವೃದ್ಧಿಗಾಗಿ ಅಗತ್ಯವಾದ ಬೆಳವಣಿಗೆ ಎಂದೋ ವಿಶ್ಲೇಷಿಸುವ ಅರ್ಥಶಾಸ್ತ್ರಜ್ಞರ ಒಂದು ವಿಶಾಲ ಬೌದ್ಧಿಕ ವಲಯವನ್ನು ಸೃಷ್ಟಿಸಲಾಗಿದೆ. ಅಸಮಾನತೆ ಹೆಚ್ಚಾದಷ್ಟೂ ಮೇಲಿನಿಂದ ಆದಾಯ-ಸಂಪತ್ತು ಕೆಳಹರಿಯುವ ಮಾದರಿಯ ಅನ್ವಯ (Trickle down method) ಅದು ತಳಸಮಾಜದ ಬಡತನವನ್ನು ನಿವಾರಿಸಲು ನೆರವಾಗುತ್ತದೆ ಎಂದು ವಾದಿಸುವ ಈ ತಜ್ಞರು ಪರಿಸರ ನಾಶವನ್ನೂ ಸಹ ಇದೇ ಅರ್ಥದಲ್ಲೇ ಪರಿಭಾವಿಸುವುದು ವರ್ತಮಾನದ ದುರಂತ. ಇಲ್ಲಿ ಬದುಕು ಕಳೆದುಕೊಳ್ಳುವ ಲಕ್ಷಾಂತರ ಶ್ರಮಜೀವಿಗಳು ಶಾಶ್ವತ ಪರಾವಲಂಬಿಗಳಾಗುತ್ತಾ, ಬಂಡವಾಳ ಮತ್ತು ಮಾರುಕಟ್ಟೆಯ ಅಧೀನರಾಗಿ ಜೀವನ ಸವೆಸಬೇಕಾಗುತ್ತದೆ. ಆಧುನಿಕತೆಯ ಸ್ಪರ್ಶವನ್ನೂ ಕಾಣಲಾಗದ ಈ ತಳಸಮಾಜದ ಶ್ರಮಜೀವಿಗಳನ್ನು ಕಾಡುವ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಹಸಿವು, ನಿರ್ವಸತಿಕತೆ ಮತ್ತು ಅನಿಶ್ಚಿತ ಬದುಕು ನವ ಉದಾರವಾದಿ ಆರ್ಥಿಕತೆಯಲ್ಲಿ ಗಣನೆಗೇ ಬರುವುದಿಲ್ಲ.

ಈ ದುರಂತಗಳ ನಡುವೆಯೇ ನಾವು ಜೂನ್‌ 5ರಂದು ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಆಚರಣಾತ್ಮಕ ಭಾವನೆಗಳಿಂದ ಹೊರಬಂದು ನೋಡಿದಾಗ, ಕಣ್ಣೆದುರಿನಲ್ಲೇ ನಡೆಯುತ್ತಿರುವ ಪರಿಸರ ವಿನಾಶಕ್ಕೆ ಮೂಲ ಕಾರಣ ನಾವು ಅನುಸರಿಸುತ್ತಿರುವ ಆರ್ಥಿಕ ಅಭಿವೃದ್ಧಿ ಮಾದರಿಗಳು ಮತ್ತು ಹಣಕಾಸು ನೀತಿಗಳಲ್ಲೇ ಇರುವುದನ್ನು ಕಾಣಬಹುದು. ಪರಿಸರಕ್ಕಾಗಿ ಅಹರ್ನಿಶಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ಶ್ರಮಜೀವಿಗಳಿಗಾಗಿ ನಿರಂತರವಾಗಿ ಹೋರಾಡುತ್ತಿರುವ ಪ್ರಜಾಸತ್ತಾತ್ಮಕ ಸಂಸ್ಥೆ-ಸಂಘಟನೆಗಳು ಇಲ್ಲಿ ಸಮನ್ವಯ ಸಾಧಿಸುವುದು ವರ್ತಮಾನದ ಅವಶ್ಯಕತೆಯಾಗಿದೆ. ಇದು ರಾಜಕೀಯ ಪಕ್ಷಗಳಿಂದ ನಿರೀಕ್ಷಿಸಲಾಗದ ಒಂದು ಹೆಜ್ಜೆ. ಹಾಗಾಗಿ ನಾಗರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಮತ್ತು ಸಾರ್ವಜನಿಕರ ನಡುವೆ ʼ ಪರಿಸರ ʼ ಎಂಬ ಪದವನ್ನು ವಿಶಾಲ ಕ್ಯಾನ್ವಾಸ್‌ನಲ್ಲಿಟ್ಟು ಚರ್ಚೆಗೊಳಪಡಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಆಗಲೇ ವಿಶ್ವ ಪರಿಸರ ದಿನಾಚರಣೆ ಅಲಂಕಾರಿಕ, ಆಡಂಬರವಾಗದೆ ಸಾರ್ಥಕತೆ ಪಡೆದುಕೊಳ್ಳುತ್ತದೆ.

ಇದನ್ನೂ ನೋಡಿಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ‌ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media

Donate Janashakthi Media

Leave a Reply

Your email address will not be published. Required fields are marked *