ಮಂಗಳೂರು : ಕುಡುಪು ಮಾಬ್ ಲಿಂಚಿಂಗ್, ಹತ್ಯೆ ಪ್ರಕರಣವನ್ನು ಮಂಗಳೂರು ಕಮಿಷನರೇಟ್ ಪೊಲೀಸ್ ಮುಚ್ಚಿಹಾಕಲು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿತ್ತು ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಾಗಿರುವ FIR ಪ್ರಬಲ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಕುಡುಪು ಸಾಮ್ರಾಟ್ ಮೈದಾನದಲ್ಲಿ 27.04.2025 ರ ಸಂಜೆ ಮೂರು ಗಂಟೆಗೆ ಮಾಬ್ ಲಿಂಚಿಂಗ್ ಗೆ ಅಪರಿಚಿತ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ ಎಂಬ ಸುದ್ದಿ ವಾಮಂಜೂರು ಪೊಲೀಸ್ ಠಾಣೆಗೆ ಗಂಟೆಯ ಒಳಗಡೆ ತಲುಪಿತ್ತು. ಅದರಂತೆ ಐದು ಗಂಟೆಯ ಆಸುಪಾಸು ಪೊಲೀಸರು ಹೊಡೆತಗಳಿಂದ ಜರ್ಜರಿತ ಗೊಂಡ ಮೃತ ದೇಹ ಬಿದ್ದದ್ದ ಸ್ಥಳವನ್ನೂ ತಲುಪಿದ್ದಾರೆ.
ಅಷ್ಟು ಹೊತ್ತಿಗೆ ಪೊಲೀಸರಿಗೆ ನಡೆದಿರುವ ಘಟನೆಯ ಪೂರ್ತಿ ವಿವರ ಮನದಟ್ಟಾಗಿದೆ. ವಿಷಯ ಕಮೀಷನರ್ ಅವರಿಗು ಸಹಜವಾಗಿ ತಲುಪಿದೆ. ಆದರೆ, ವಿವಿಧ ಕಾರಣಗಳಿಗೆ( ಹಲ್ಲೆ ಕೋರ ಗುಂಪಿನ ನಾಯಕ, ಬಿಜೆಪಿ ಪ್ರಭಾವಿ ಮುಖಂಡ ರವೀಂದ್ರ ನಾಯಕ್, ಮಂಜುನಾಥ್ ಮತ್ತಿತರರು ಸ್ಥಳೀಯ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು, ಮಾಬ್ ಲಿಂಚಿಂಗ್ ದೊಡ್ಡ ಸುದ್ದಿಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದರೆ ಕಮೀಷನರ್ ಗೆ ಕಳಂಕ ಬರುವುದು.) ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ, ಸಾಧ್ಯ ಆದರೆ ಮುಚ್ಚಿಹಾಕುವ ತೀರ್ಮಾನಕ್ಕೆ ಬಂದಿದ್ದಾರೆ.
ಅದರ ಭಾಗವಾಗಿಯೇ, ಮಾಬ್ ಲಿಂಚಿಂಗ್ ನಲ್ಲಿ ಪ್ರಮಖ ಪಾತ್ರ ವಹಿಸಿದ ಮಂಜುನಾಥ ನಿಂದಲೆ “ಅಪರಿಚಿತ ಶವ ಪತ್ತೆ” ಎಂದು ದೂರು ಬರೆಸಿಕೊಂಡು ಯಡಿಆರ್ ದಾಖಲಿಸಿದ್ದಾರೆ. ಘಟನೆಯ ಪೂರ್ತಿ ವಿವರ ಗೊತ್ತಿದ್ದರೂ “ಯಾವುದೋ ನಶೆ(ಅಮಲು) ಯಿಂದ ಬಿದ್ದು, ಅಥವಾ ಯಾರೊಂದಿಗೊ ಜಗಳ ಆಡಿ, ಉರುಳಿ ಬಿದ್ದು ಮೃತ ಪಟ್ಟಿರಬಹುದು, ಮೈಯಲ್ಲಿ ತರಚಿದ ಸಾಮಾನ್ಯ ಗಾಯಗಳಿವೆ” ಎಂದು ಲುಕ್ ಔಟ್ ಪ್ರಕಟನೆ ಕೊಟ್ಟು ಕೈತೊಳೆದು ಕೊಳ್ಳಲು ಯತ್ನಿಸಿದ್ದಾರೆ.
ಮಾಬ್ ಲಿಂಚಿಂಗ್ ನಡೆದಿರುವ ಕುರಿತು ಮಾಧ್ಯಮಗಳ ಪ್ರತಿನಿಧಿಗಳಿಗೆ ಸುದ್ದಿ ತಲುಪಿ, ಪೊಲೀಸ್ ಕಮೀಷನರ್ ಅವರಲ್ಲಿ ಈ ಕುರಿತು ಮಾಹಿತಿ, ಸ್ಪಷ್ಟೀಕರಣವನ್ನು ಸತತವಾಗಿ ಕೇಳಿದರೂ, “ವದಂತಿಗಳಿಗೆ ಕಿವಿಗೊಡಬೇಡಿ, ಕಾಯಿರಿ” ಎಂಬ ಒಂದು ಲೈನ್ ನ ಒತ್ತರವನ್ನು ನೀಡಿ 36 ತಾಸುಗಳ ಕಾಲ ಮೌನವೃತ ಪಾಲಿಸಿದ್ದಾರೆ. ಮರು ದಿವಸ (28 ಎಪ್ರಿಲ್) ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಈ ಕುರಿತು ಧ್ವನಿ ಎತ್ತಿದ ತರುವಾಯ, ಸಾಮಾಜಿಕ ಜಾಲತಾಣದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆಗಳು ಶುರುವಾದ ಮೇಲೆಯಷ್ಟೆ ಕಮೀಷನರ್ ಅಗ್ರವಾಲ್ ಪೋಸ್ಟ್ ಮಾರ್ಟಂ ನಡೆಸಿ, ಅದರ ವರದಿಯ ಆಧಾರದಲ್ಲಿ ಕೊಲೆ, ಮಾಬ್ ಲಿಂಚಿಂಗ್ ಸೆಕ್ಷನ್ ಅಡಿ FIR ದಾಖಲಿಸಿಕೊಂಡಿದ್ದಾರೆ. ಈ FIR ದಾಖಲಾಗುವಾಗ ಘಟನೆ ನಡೆದು 32 ತಾಸು ದಾಟಿತ್ತು.
ಇದನ್ನು ಓದಿ :-ಸ್ಪೇನ್ ಮತ್ತು ಪೋರ್ಚುಗಲ್ನಲ್ಲಿ ಭಾರೀ ವಿದ್ಯುತ್ ವ್ಯತ್ಯಯ: ಸಾಮಾನ್ಯ ಜೀವನ ಅಸ್ತವ್ಯಸ್ತ, ಇಂಟರ್ನೆಟ್ ಸಂಪರ್ಕ ಕಡಿತ
FIR ದಾಖಲಿಸಲು ಎರಡನೇ ದೂರುದಾರರಾಗಿ ಪೊಲೀಸರು ಆಯ್ಕೆ ಮಾಡಿದ್ದು, ಮಾಬ್ ಲಿಂಚಿಂಗ್ ಮಾಡಿದ ಅದೇ ಕುಖ್ಯಾತ ಕೋಮುವಾದಿ ಗ್ಯಾಂಗ್ ನ ಒಡನಾಟದಲ್ಲಿ ಇರುವ, ಆಪ್ತನೆ ಆಗಿರುವ ಕೇಶವ ಎಂಬಾತನನ್ನು. ಆತ ನೀಡಿದ ದೂರಿನಲ್ಲಿ, ಪೊಲೀಸರು ಮೊದಲು ದೂರು ಬರೆಸಿಕೊಂಡ ಮಂಜುನಾಥ್ ಈ ಗುಂಪು ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದ. (ಈಗ ಬಂಧಿಸಲ್ಪಟ್ಟಿದ್ದಾನೆ)
ಕೇಶವ ನೀಡಿನ ದೂರಿನ ಪ್ರಕಾರ FIR ನಲ್ಲಿ “ಅಪರಿಚಿತ ವ್ಯಕ್ತಿಯೊಬ್ಬ “ಪಾಕಿಸ್ತಾನ, ಪಾಕಿಸ್ತಾನ”(ಜಿಂದಾಬಾದ್ ಹಾಕಿದ್ದಾನೆ ಎಂದು ಇಲ್ಲ) ಎಂದು ಬೊಬ್ಬೆ ಹೊಡೆಯುತ್ತಾ ಮೈದಾನದ ಕಡೆಗೆ ಧಾವಿಸಿ ಬರುತ್ತಿದ್ದ, ಇದನ್ನು ಗಮನಿಸಿದ ಮಂಜುನಾಥ, ಸಚಿನ್ ಮತ್ತಿತರರು ಆತ ಪಾಕಿಸ್ತಾನ… ಎಂದು ಬೊಬ್ಬೆ ಹಾಕುತ್ತಿದ್ದಾನೆ, ಬಿಡಬಾರದು ಎಂದು ನನ್ನಲ್ಲಿ ಹೇಳಿದರು, ಬೆನ್ನಟ್ಟಿ ಹೋಗಿ ಗುಂಪಾಗಿ ಥಳಿಸಿದರು, ಮರದ ತುಂಡಿನಿಂದ, ಕಾಲಿನಿಂದ ಹೊಡೆದು ತುಳಿದು ಸಾಯಿಸಿದರು, ನಾನು ತಡೆಯಲು ಯತ್ನಿಸಿದರೆ, ನನಗೆ ಗದರಿಸಿದರು. ನಾನು ಸ್ಥಳದಿಂದ ತೆರಳಿದೆ. ರಾತ್ರೆ ಮನೆಯಲ್ಲಿ ಇದ್ದಾಗ ಈ ಕುರಿತು ಸ್ವತಹ ಮಂಜುನಾಥ ಶವ ಪತ್ತೆಯಾಗಿರುವ ಕುರಿತು ಪೊಲೀಸ್ ದೂರು ನೀಡಿರುವುದು ನನಗೆ ತಿಳಿದು ಬಂತು” ಎಂದು ದಾಖಲಿಸಲಾಗಿದೆ.
ಗುಂಪು ಹತ್ಯೆ ನಡೆದ ತರುವಾಯದ 32 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಎಲ್ಲಾ ಬೆಳವಣಿಗೆಗಳ ಕುರಿತು ಪ್ರತ್ಯೇಕ ತನಿಖೆ ನಡೆಯಬೇಕಿದೆ. ಗುಂಪು ಹತ್ಯೆ ನಡೆದಿರುವುದು, ಅದರಲ್ಲಿ ಭಾಗಿಯಾಗಿರುವ ಗುಂಪಿನ ಪೂರ್ಣ ಮಾಹಿತಿ ಇದ್ದೂ, ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೆ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ ಔಟ್ ಪ್ರಕಟಟನೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮೀಷನರ್ ಮಾಧ್ಯಮದವರಿಗು ಮಾಹಿತಿ ನೀಡದೆ ಮೌನ ವಹಿಸಿದ್ದು, ಎರಡನೇ ದಿನ ಸಾರ್ವಜನಿಕರು ಬಲವಾಗಿ ಪ್ರಶ್ನಿಸತೊಡಗಿದ ತರುವಾಯವಷ್ಟೆ ಪೋಸ್ಟ್ ಮಾರ್ಟಂ ಮಾಡಿಸಿದ್ದು, ಎರಡನೆಯ ದೂರು ದಾರನಾಗಿ ಗುಂಪು ಹತ್ಯೆಯ ತಂಡದ ಒಡನಾಟದಲ್ಲಿರುವ ಕೇಶವ ಎಂಬಾತನನ್ನು ಆಯ್ಕೆ ಮಾಡಿಕೊಂಡದ್ದು, ಆತ 30 ಗಂಟೆಗಳ ತರುವಾಯ ನೀಡಿದ ದೂರಿನಲ್ಲಿ ಪಾಕಿಸ್ತಾನದ ಉಲ್ಲೇಖ ಇರುವುದು ಪೊಲೀಸ್ ಇಲಾಖೆ ಪ್ರಕರಣವನ್ನು ಮುಚ್ಚಿಹಾಕುವ, ಮಾಬ್ ಲಿಂಚಿಂಗ್ ನ ಕೋಮುವಾದಿ ಗೂಂಡಾ ಪಡೆಯನ್ನು ರಕ್ಷಿಸುವ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಒದಗಿಸುತ್ತದೆ. ಪೊಲೀಸರಿಗೆ ಇಂತಹ ಅತಿ ಗಂಭೀರ ಪ್ರಕರಣದಲ್ಲಿ ದೂರು ಬರೆಸಿಕೊಳ್ಳಲು ಪ್ರಕರಣದಲ್ಲಿ ಭಾಗಿಯಾದ ಗುಂಪಿನ ಸದಸ್ಯರಲ್ಲದೆ ಬೇರೆ ಯಾರೂ ಸಿಗಲಿಲ್ಲವೆ, ಸು ಮಟೊ ದೂರು ದಾಖಲಿಸಿಕೊಳ್ಳುವ ಸಾಧ್ಯತೆಯು ಇರಲಿಲ್ಲವೆ? ಎಂದು ಆಗ್ರಹಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಜಿಲ್ಲೆಯ ಹೊರಗಿನ ಹಿರಿಯ, ಪ್ರಾಮಾಣಿಕ, ವಿಶ್ವಾಸಾರ್ಹ, ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಈ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬೇಕು. ಹಾಗೆಯೆ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಇಲಾಖೆ ನಡೆಸಿರುವ ಪ್ರಯತ್ನಗಳನ್ನು ಬಯಲಿಗೆಳೆಯಲು ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಹಾಗೆಯೆ, ಗಂಭೀರ ಕರ್ತವ್ಯ ಲೋಪ ಎಸಗಿರುವ ವಾಮಂಜೂರು ಠಾಣಾಧಿಕಾರಿ ಶಿವ ಪ್ರಸಾದ್, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅವರನ್ನು ಅಮಾನತುಗಳಿಸಬೇಕು ಎಂದು ಒತ್ತಾಯಿಸಿದ್ದಾರೆ.