ದಾಂಧಲೆಕೋರರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಬಂಗಾಳದ ಬುದ್ದಿಜೀವಿಗಳಿಂದ ಬಾಂಗ್ಲಾ ಪ್ರಧಾನಿಗೆ ಪತ್ರ

ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ದೇವಸ್ಥಾನ ಮತ್ತು ದುರ್ಗಾಪೂಜೆ ಚಪ್ಪರಗಳಲ್ಲಿ ನಡೆದ ಹಿಂಸಾತ್ಮಕ ದಾಂದಲೆ ಕೃತ್ಯಗಳಿಗೆ ಕಾರಣಕರ್ತರಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಶಿಕ್ಷಣ ತಜ್ಞರು, ರಂಗಭೂಮಿ, ಚಲನಚಿತ್ರ ಕ್ಷೇತ್ರದ ಪ್ರಮುಖರು ಆಗ್ರಹಿಸಿದ್ದಾರೆ.

ಬಂಗಾಳದ ಖ್ಯಾತ ಶಿಕ್ಷಣ ತಜ್ಞರು, ರಂಗಭೂಮಿ ಕಲಾವಿದರು, ಲೇಖಕರು, ಸಿನಿಮಾ ನಟರು, ನಿರ್ದೇಶಕರು, ರಾಜಕಾರಣಿಗಳು ಸೇರಿದಂತೆ 60ಕ್ಕೂ ಹೆಚ್ಚು ಬುದ್ಧಿಜೀವಿಗಳು ಬಾಂಗ್ಲಾ ಪ್ರಧಾನಮಂತ್ರಿ ಶೇಖ್ ಹಸಿನಾ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿ: ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಬಹಳ ಆತಂಕಕಾರಿ: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಕೆಲ ದುಷ್ಕರ್ಮಿಗಳು ದುರ್ಗಾ ದೇವಾಲಯದ ಮೇಲೆ ದಾಳಿ ಮಾಡಿ ಶಿಥಿಲಗೊಳಿಸಿರುವುದರಿಂದ ಬಾಂಗ್ಲಾದಲ್ಲಿರುವ ನೂರಾರು ಹಿಂದೂಗಳು ನವರಾತ್ರಿ ಸಂದರ್ಭದಲ್ಲಿ ದೇವಿ ಆರಾಧನೆ ಮಾಡಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಕೂಡಲೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸಬೇಕು ಎಂದು ಬುದ್ಧಿಜೀವಿಗಳು ಮನವಿ ಮಾಡಿಕೊಂಡಿದ್ದಾರೆ.

ಯಾವುದೇ ಒಂದು ದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ರಕ್ಷಣೆ ಆಯಾ ಸರ್ಕಾರಗಳ ಹೊಣೆ. ಆಚರಣಗೆ ಅಡ್ಡಿಪಡಿಸುವ ಕೃತ್ಯಗಳಿಂದಾಗಿ ಬಾಂಗ್ಲಾದೇಶದ ಹಿಂದೂ ಸಮುದಾಯದವರು ದುರ್ಗಾಪೂಜೆ ಆಚರಣೆಯನ್ನು ಸುಲಲಿತವಾಗಿ ಆಚರಿಸಲು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿ ನೆಲೆಸಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಹತ್ತಿಕ್ಕಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

60 ಮಂದಿ ಪ್ರಮುಖರ ಸಹಿಯುಳ್ಳ ಮನವಿಯನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸಿನಾ ಅವರಿಗೆ ಕಳುಹಿಸಿದ್ದಾರೆ.

ಬಾಂಗ್ಲಾದೇಶ ಸರ್ಕಾರ ಮತ್ತು ಪೊಲೀಸರ ಸಕಾಲಿಕ ಕ್ರಮದಿಂದಾಗಿ ಖಂಡಿತವಾಗಿ ದೊಡ್ಡಮಟ್ಟದ ಅವಘಡ ತಪ್ಪಿದೆ. ಆದರೆ, ನಡೆದಿರುವ ದಾಂದಲೆ ಘಟನೆಗಳು ಮಾನವೀಯತೆಯ ಮೇಲೆ ನಂಬಿಕೆಯನ್ನು ಹೊಂದಿದ್ದವರ ಪ್ರಜ್ಞೆಗೆ ಘಾಸಿ ಉಂಟುಮಾಡಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಸಹಿ ಹಾಕಿರುವ ಪ್ರಮುಖರಲ್ಲಿ ಶಿಕ್ಷಣ ತಜ್ಞರಾದ ಪವಿತ್ರಾ ಸರ್ಕಾರ್, ಸಿಪಿಐ(ಎಂ) ಪಾಲಿಟ್ಬ್ಯೂರೊ ಸದಸ್ಯ ಮೊಹಮ್ಮದ್ಸಲೀಂ, ಕೋಲ್ಕತ್ತದ ಮಾಜಿ ಮೇಯರ್ ಬಿಲ್ಕಶ್ಭಟ್ಟಾಚಾರ್ಯ, ರಂಗಭೂಮಿಯ ದೇವ್ ಶಂಕರ್ಹಲ್ದರ್, ಲೇಖಕ ನಬಕುಮಾರ್ ಬಸು, ರಂಗಭೂಮಿ ನಟ ಕೌಶಿಕ್ ಸೇನ್, ಚಿತ್ರ ನಿರ್ಮಾಪಕ ಕಮಲೇಶ್ವರ ಮುಖ್ಯೋಪಾಧ್ಯಾಯ, ನಟರಾದ ಪರಂಬ್ರತಾ ಚಟರ್ಜಿ, ರಿದ್ಧಿ ಸೇನ್‌, ರಿತ್ವಿಕ್ಚಕ್ರವರ್ತಿ ಅವರು ಪ್ರಮುಖರು ಆಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *