ಮಂಡ್ಯ: ಪೋಲೀಸರ ವೈಫಲ್ಯವೇ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದ ದಲಿತ ಯುವಕನ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಮದ್ದೂರು ತಾಲೂಕು ಕಛೇರಿ ಎದುರು ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮೇ 31 ಶನಿವಾರದಂದು ಪ್ರತಿಭಟನೆ ನಡೆಸಿದರು.
ಮದ್ದೂರು ಪಟ್ಟಣದ ಪುರಸಭೆ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ತಾಲೂಕು ಕಛೇರಿ ಎದುರು ಜಮಾಯಿಸಿದ ದಲಿತ ಮುಖಂಡರು ಜಿಲ್ಲಾ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಸ್ಕಾಂನ ಹೊಸ ನಿಯಮಗಳಿಂದ ಸಾವಿರಾರು ನಿವಾಸಿಗಳಿಗೆ ಸಂಕಷ್ಟ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಕತ್ತರಘಟ್ಟ ಗ್ರಾಮದ ಯುವಕ ಜಯಕುಮಾರ್ ಸಾವು ವಿದ್ರಾವಕ ಘಟನೆಯಾಗಿದ್ದು, ಜಮೀನಿನ ವಿಚಾರವಾಗಿ ಗಲಾಟೆಯಾಗಿತ್ತು. ಜಯಕುಮಾರ್ ಸಾಯುವ ಮುನ್ನಾ ದಿನ ಪೋಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಲಿಲ್ಲ ಹೀಗಾಗಿ ಈ ಕೃತ್ಯಕ್ಕೆ ಪೋಲಿಸರೇ ನೇರ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಸಂಬಂಧ ಪುಟ್ಟ ಪೋಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮವಾಗಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
* ಮೃತ ಜಯಕುಮಾರನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50 ಲಕ್ಷ ರೂ ಪರಿಹಾರ ನೀಡಬೇಕು.
* ಆತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು.
* ಕೊಲೆ ಮಾಡಿರುವ ವ್ಯಕ್ತಿಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಗಲ್ಲುಶಿಕ್ಷೆ ನೀಡಬೇಕು.
* ಕೊಲೆ ಆರೋಪಿ ರಕ್ಷಿಸಲು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿರುವ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು.
* ಆತ್ಮಹತ್ಯೆ ಪ್ರಕರಣವನ್ನು ಕೈಬಿಟ್ಟು ಕೊಲೆ ಪ್ರಕರಣವನ್ನು ದಾಖಲಿಸಿ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಂಕರ್, ಮಾದೇಶ್, ಅಂಬರೀಷ್, ಮುತ್ತಯ್ಯ, ಬಸವರಾಜು, ವೆಂಕಟೇಶ್, ಶಿವು, ಆನಂದ್, ಅಣ್ಣೂರು ರಾಜಣ್ಣ, ರಂಗಸ್ವಾಮಿ, ಡಿ.ಕೆ.ಕೃಷ್ಣ, ನಗರಕೆರೆ ಜಗದೀಶ್, ಸಣ್ಣಮ್ಮ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80 ವರ್ಷಗಳ ನಂತರ ಈಗ ಅದನ್ನು ಯಾಕೆ ನೆನಪಿಸಿಕೊಳ್ಳಬೇಕು ?